ಬಾರ್ಗರ್: ಒಡಿಶಾದಲ್ಲಿ ಕೋರಮಂಡಲ್ ಎಕ್ಸ್ಪ್ರೆಸ್, ಬೆಂಗಳೂರು-ಹೌರಾ ಎಕ್ಸ್ಪ್ರೆಸ್ ಸೇರಿದಂತೆ ಮೂರು ರೈಲುಗಳ ಭೀಕರ ದುರಂತ (Odisha Train Accident) ಸಂಭವಿಸಿ ಇನ್ನೂ ಮೂರು ದಿನಗಳು ಕಳೆದಿಲ್ಲ. ಅದಾಗಲೇ ಮತ್ತೊಂದು ರೈಲು ಹಳಿ ತಪ್ಪಿರುವ (Goods Train Accident) ಘಟನೆ ಒಡಿಶಾದಲ್ಲಿ ನಡೆದಿದೆ.
ಒಡಿಶಾದ ಬಾರ್ಗರ್ ಸಮೀಪ ಚಲಿಸುತ್ತಿದ್ದ ಗೂಡ್ಸ್ ರೈಲಿನ ಐದು ಬೋಗಿಗಳು ಹಳಿ ತಪ್ಪಿದ್ದು, ಘಟನೆಯಲ್ಲಿ ಯಾರಿಗೂ ಯಾವುದೇ ಪ್ರಾಣಾಪಾಯ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಗೂಡ್ಸ್ ರೈಲಿನಲ್ಲಿ ಸುಣ್ಣದ ಕಲ್ಲುಗಳನ್ನು ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Train Accident: 280ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ರೈಲು ದುರಂತ ಸಂಭವಿಸಿದ್ದು ಹೇಗೆ? ಇಲ್ಲಿದೆ ಡೀಟೇಲ್ಸ್
ಈಗಾಗಲೇ ಒಡಿಶಾದಲ್ಲಿ ಮೂರು ದಿನಗಳ ಹಿಂದೆ ಸಂಭವಿಸಿದ ಭೀಕರ ಘಟನೆಯ ತೀವ್ರತೆ ಇನ್ನೂ ಹಚ್ಚ ಹಸಿರಾಗಿರುವ ಹಿನ್ನೆಲೆ ಗೂಡ್ಸ್ ರೈಲು ಹಳಿ ತಪ್ಪಿದ ಘಟನೆಯ ಸುದ್ದಿ ತಿಳಿದ ತಕ್ಷಣ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಈ ದುರ್ಘಟನೆ ಕಾರಣ ಏನು ಅನ್ನೋದನ್ನು ತಿಳಿಯಲು ಪರಿಶೀಲನೆ ನಡೆಸಿದ್ದಾರೆ.
ಘಟನಾ ಸ್ಥಳದಿಂದ ಸಿಕ್ಕಿರುವ ಮಾಹಿತಿಯ ಪ್ರಕಾರ, ಹಳಿ ತಪ್ಪಿದ ಗೂಡ್ಸ್ ರೈಲು ಸುಣ್ಣದ ಕಲ್ಲುಗಳನ್ನು ಹೊತ್ತು ಸಾಗುತ್ತಿತ್ತು. ಚಲಿಸುತ್ತಿದ್ದ ವೇಳೆ ಅದರ ಐದು ಬೋಗಿಗಳು ಬಾರ್ಗರ್ ಪ್ರದೇಶದ ಬಳಿ ಹಳಿ ತಪ್ಪಿದವು. ಕೂಡಲೇ ರೈಲಿನ ಲೋಕೋ ಪೈಲಟ್ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆಯಿಂದ ಇತರ ರೈಲು ಸಂಚಾರಗಳಲ್ಲೂ ವ್ಯತ್ಯಯ ಉಂಟಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಘಟನಾ ಸ್ಥಳಕ್ಕೆ ಆಗಮಿಸಿರುವ ರಕ್ಷಣಾ ಸಿಬ್ಬಂದಿ ಹಳಿ ತಪ್ಪಿದ ರೈಲನ್ನು ನಿಲ್ಲಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದು, ರೈಲನ್ನು ಹಳಿಗೆ ತರಲು ಪ್ರಯತ್ನ ಮುಂದುವರೆಸಲಾಗಿದೆ. ಸಂಜೆ ವೇಳೆಗೆ ರೈಲಿನ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವ ಸಾಧ್ಯತೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ