ಕೋಲ್ಕತ್ತಾ (ಜೂನ್ 15); ಪಶ್ಚಿಮ ಬಂಗಾಳದ ಚುನಾವಣೆ ಇಡೀ ದೇಶದ ಗಮನ ಸೆಳೆದಿತ್ತು. ಚುನಾವಣಾ ಪೂರ್ವ ಕಾಲದಲ್ಲಿ ಅಧಿಕಾರ ಹಿಡಿಯುವ ಮಹತ್ವಾಕಾಂಕ್ಷೆ ಯಿಂದ ಬಿಜೆಪಿ ಹೈಕಮಾಂಡ್ ಅನೇಕ ಟಿಎಂಸಿ ನಾಯಕರನ್ನು ತನ್ನತ್ತ ಸೆಳೆದಿತ್ತು. ಪರಿಣಾಮ ಟಿಎಂಸಿ ಪಕ್ಷದ ಪ್ರಭಾವಿ ನಾಯಕ ಸುವೆಂದು ಅಧಿಕಾರಿ ಸೇರಿದಂತೆ ಹಿಂಡು ಹಿಂಡು ಟಿಎಂಸಿ ನಾಯಕರು ಹಾಗೂ ಶಾಸಕ-ಸಚಿವರುಗಳು ಬಿಜೆಪಿ ಪಾಲಾಗಿದ್ದರು. ಆದರೂ, ಚುನಾವಣೆಯಲ್ಲಿ ಬಿಜೆಪಿ ಮೂರಂಕಿ ದಾಟಿರಲಿಲ್ಲ. ಪರಿಣಾಮ ಅಭೂತಪೂರ್ವ ಗೆಲುವಿನೊಂದಿಗೆ ಸಿಎಂ ಮಮತಾ ಬ್ಯಾನರ್ಜಿ ಮತ್ತೊಂದು ಅವಧಿಗೆ ಅಧಿಕಾರದ ಗದ್ದುಗೆ ಏರಿದ್ದು ಇದೀಗ ಹಳೆಯ ವಿಚಾರ. ಆದರೆ, ಬಂಗಾಳದಲ್ಲಿ ಪಕ್ಷಾಂತರ ಪರ್ವಕ್ಕೆ ನಾಂದಿ ಹಾಡಿದ್ದ ಬಿಜೆಪಿ ಪಕ್ಷಕ್ಕೆ ಇದೀಗ ಅದೇ ಪಕ್ಷಾಂತರ ಕುತ್ತಾಗಿ ಪರಿಣಮಿಸಿದೆ. 24ಕ್ಕೂ ಅಧಿಕ ಬಿಜೆಪಿ ಶಾಸಕರು ಟಿಎಂಸಿ ಪಕ್ಷಕ್ಕೆ ವಲಸೆ ಹೋಗಲು ಸಿದ್ಧತೆ ನಡೆಸಿದ್ದಾರೆ ಎಂಬುದು ಪ್ರಸ್ತುತ ಹೊಸ ಸುದ್ದಿ. ಇದು ಬಿಜೆಪಿ ನಾಯಕರಲ್ಲಿ ತಲೆನೋವಿಗೆ ಕಾರಣವಾಗಿದೆ.
ನಿನ್ನೆ ಪಕ್ಷದ ಶಾಸಕರೊಂದಿಗೆ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಬಂಗಾಳ ರಾಜ್ಯಪಾಲರನ್ನು ಭೇಟಿಯಾದರು. ಆದರೆ ಮೂರನೇ ಒಂದು ಭಾಗ ಅಂದರೆ 74 ಶಾಸಕರಲ್ಲಿ 24 ಶಾಸಕರು ಸುವೆಂದು ಅಧಿಕಾರಿಯಿಂದ ದೂರವುಳಿದಿದ್ದು, ರಾಜ್ಯಪಾಲರ ಭೇಟಿಗೆ ಗೈರು ಹಾಜರಾಗಿದ್ದಾರೆ. ಇದು ಬಂಗಾಳ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ.
‘ತೋಡ್ನಾ-ಜೋಡ್ನಾ (ಕಳಿಸುವುದು-ಕರೆದುಕೊಳ್ಳುವುದು)’ ಟಿಎಂಸಿಯ ಕೊಳಕು ರಾಜಕೀಯದ ಒಂದು ಭಾಗವಾಗಿದೆ. ಅವರು ಕಳೆದ 10 ವರ್ಷಗಳಿಂದ ಇದನ್ನು ಮಾಡುತ್ತಿದ್ದಾರೆ ಮತ್ತು ಯಾರೂ ಇದನ್ನು ವಿರೋಧಿಸಲಿಲ್ಲ. ಆದರೆ ಇದೀಗ ಇದನ್ನು ವಿರೋಧಿಸಲಾಗುತ್ತಿದೆ ಮತ್ತು ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸುವೆಂದು ಅಧಿಕಾರಿ ಹೇಳಿದ್ದಾರೆ.
ನಾನು ಎಲ್ಲ ಶಾಸಕರಿಗೂ ಕರೆ ಮಾಡಿದ್ದೆ. 50 ಶಾಸಕರು ಇಂದು ನಮ್ಮೊಂದಿಗೆ ಸೇರಿದ್ದಾರೆ. ರಾಜ ಭವನದಲ್ಲಿ ರಾಜ್ಯಪಾಲ ಜಗದೀಪ್ ಧಂಖರ್ ಅವರನ್ನು ಭೇಟಿಯಾಗಿ ಪಕ್ಷಾಂತರ ವಿರೋಧಿ ಕಾನೂನು ಸೇರಿದಂತೆ ಹಲವು ವಿಷಯಗಳ ಕುರಿತು ಮಾತನಾಡಲಿದ್ದೇವೆ. ಉಳಿದ ಶಾಸಕರನ್ನು ಇಂದು ನಮ್ಮನ್ನು ಸೇರಿಕೊಳ್ಳುತ್ತಾರೆ, ಇಲ್ಲದಿದ್ದರೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಿಕ್ಷೆ ಅನುಭವಿಸುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸಭೆಗೆ ಹಾಜರಾಗದ 24 ಶಾಸಕರು ಮರಳಿ ಟಿಎಂಸಿಯೆಡೆಗೆ ಮಹಾವಲಸೆ ನಡೆಸಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡತೊಡಗಿವೆ. ಕೆಲ ಶಾಸಕರು ಬಹಿರಂಗ ಹೇಳಿಕೆಗಳನ್ನು ಸಹ ನೀಡಿರುವುದು ಇದಕ್ಕೆ ಪುಷ್ಠಿ ನೀಡಿದೆ. ಹಲವು ಶಾಸಕರು ಬಿಜೆಪಿಯಲ್ಲಿ ಸುವೆಂದು ಅಧಿಕಾರಿಯ ನಾಯಕತ್ವವನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲ ಎನ್ನಲಾಗಿದೆ.
ಒಂದು ಕಾಲದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆತ್ಮೀಯರಾಗಿದ್ದ ಸುವೇಂಧು ಅಧಿಕಾರಿ, ಈ ಚುನಾವಣೆಗೂ ಮುನ್ನ ಟಿಎಂಸಿ ತೊರೆದು ಬಿಜೆಪಿ ಸೇರಿ ರಾಜ್ಯದ ಅಗ್ರ ನಾಯಕರಾಗಿ ಬೆಳೆದಿರುವುದು ಹಲವರಿಗೆ ಇರಿಸು ಮುರಿಸು ತಂದಿದೆ. ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಲಾಗಿದೆ. ಚಂಡಮಾರುತದಿಂದಾದ ಹಾನಿ ಪರಿಶೀಲನಾ ಸಭೆಯಲ್ಲಿಯೂ ಮೋದಿ ಸುವೆಂದುಗೆ ಆಹ್ವಾನ ನೀಡಿದ್ದರು.
ಈ ಎಲ್ಲಾ ಬೆಳವಣಿಗೆಗಳಿಂದ ಈಗಗಾಲೇ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಮುಕುಲ್ ರಾಯ್ ಪಕ್ಷ ತೊರೆದಿದ್ದಾರೆ. ಬಿಜೆಪಿಯಲ್ಲಿನ ಉಸಿರುಕಟ್ಟಿಸುವ ವಾತಾವರಣದಿಂದಾಗಿ ತನ್ನ ಪುತ್ರನೊಂದಿಗೆ ಪಕ್ಷ ತೊರೆಯುವ ನಿರ್ಧಾರ ಮಾಡಿದ್ದೇನೆ ಎಂದು ಅವರು ಹೇಳಿದ್ದರು. ಅವರು ಟಿಎಂಸಿ ಸೇರಿದ ನಂತರ ರಾಜೀಬ್ ಬ್ಯಾನರ್ಜಿ ಮತ್ತು ದೀಪೇಂಡು ಬಿಸ್ವಾಸ್ ಸೇರಿದಂತೆ ಹಲವಾರು ನಾಯಕರು ಇದನ್ನು ಅನುಸರಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ