news18-kannada Updated:January 27, 2021, 7:26 PM IST
ಜನವರಿ 26 ರಂದು ಕೆಂಪುಕೋಟೆ ಬಳಿ ನಡೆದ ಗಲಭೆ.
ನವ ದೆಹಲಿ (ಜನವರಿ 27); ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿ ದೇಶದ ರೈತರು ಕಳೆದ ಎರಡು ತಿಂಗಳಿನಿಂದ ದೆಹಲಿ ಹೊರ ವಲಯದಲ್ಲಿ ಹೋರಾಟದಲ್ಲಿ ನಿರತರಾಗಿದ್ದಾರೆ. ಅಲ್ಲದೆ, ತಮ್ಮ ಹಕ್ಕೊತ್ತಾಯಕ್ಕಾಗಿ ಜನವರಿ 26ರ ಗಣರಾಜ್ಯ ದಿನದಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿಯನ್ನೂ ಆಯೋಜಿಸಿದ್ದರು. ಆದರೆ, ಶಾಂತಿಯುತವಾಗಿ ನಡೆಯುತ್ತಿದ್ದ ಟ್ರ್ಯಾಕ್ಟರ್ ರ್ಯಾಲಿ ಕೆಲವೆಡೆ ಮಾತ್ರ ಹಿಂಸಾಚಾರಕ್ಕೆ ತಿರುಗಿತ್ತು. ಕೆಲವು ರೈತ ಹೋರಾಟಗಾರರು ಕೆಂಪು ಕೋಟೆಯನ್ನು ವಶಕ್ಕೆ ಪಡೆದು ರೈತರ ಧ್ವಜವನ್ನು ಹಾರಿಸಿದ್ದರು. ಈ ವೇಳೆ ನಡೆದ ಪೊಲೀಸ್ ಲಾಠಿ ಚಾರ್ಚ್ನಲ್ಲಿ ಓರ್ವ ಮೃತಪಟ್ಟರೆ 20 ಜನ ಗಾಯಾಳುಗಳಾಗಿದ್ದರು. ಈ ಘಟನೆಗೆ ಸ್ವತಃ ರೈತ ಮುಖಂಡರು ಸಹ ವಿಷಾಧ ವ್ಯಕ್ತಪಡಿಸಿದ್ದರು. ಇದರ ಬೆನ್ನಿಗೆ ಇದೀಗ ಎರಡು ಪ್ರಮುಖ ರೈತ ಸಂಘಟನೆಗಳಾದ ರಾಷ್ಟ್ರೀಯ ಕಿಸಾನ್ ಮಜ್ದೂರ್ ಸಂಘಟನ್ ಮತ್ತು ಭಾರತೀಯ ಕಿಸಾನ್ ಯೂನಿಯನ್ (ಭನು) ಬುಧವಾರ ಹೊರಬಂದಿದೆ
ಮಂಗಳವಾರ ದೆಹಲಿಯ ರೈತ ಗಣರಾಜ್ಯೋತ್ಸವದಲ್ಲಿ ನಡೆದ ಅಹಿತಕರ ಘಟನೆಯಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಮತ್ತು ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ದೆಹಲಿ ಪೊಲೀಸರು ಸುಮಾರು 200 ಪ್ರತಿಭಟನಾಕಾರರನ್ನು ಬಂಧಿಸಿದ್ದು, ಈವರೆಗೆ 22 ಎಫ್ಐಆರ್ ದಾಖಲಿಸಿದ್ದಾರೆ. ಇದರ ಬೆನ್ನಿಗೆ ಪ್ರಮುಖ ರೈತ ಸಂಘಟನೆಗಳು ಹೋರಾಟದ ಕಣದಿಂದ ವಿಮುಖವಾಗುತ್ತಿರುವ ಸುದ್ದಿಗಳು ಇದೀಗ ಹೊರ ಬೀಳುತ್ತಿವೆ.
ರೈತ ಹೋರಾಟಗಾರ ರಾಕೇಶ್ ಟಿಕಾಯತ್ ಅವರನ್ನು ಉಲ್ಲೇಖಿಸಿ ಕಿಡಿಕಾರಿರುವ ರಾಷ್ಟ್ರೀಯ ಕಿಸಾನ್ ಮಜ್ದೂರ್ ಸಂಘಟನ್ ನಾಯಕ ವಿ. ಎಂ. ಸಿಂಗ್, "ರೈತ ಚಳುವಳಿ ಕನಿಷ್ಠ ಬೆಂಬಲ ಬೆಲೆ ಖಾತರಿಯಾಗುವವರೆಗೂ ಇರುತ್ತದೆ. ಆದರೆ, ಆ ಹೋರಾಟ ಅಹಿಂಸಾತ್ಮಕವಾಗಿರುತ್ತದೆಯೇ ಹೊರತು ಹಿಂಸಾತ್ಮಕವಾಗಿರುವುದಿಲ್ಲ. ನಾವಿಲ್ಲಿ ಜನರನ್ನು ಹುತಾತ್ಮರಾಗಿಸಲು ಮತ್ತು ಅವರಿಗೆ ಪೊಲೀಸರಿಂದ ಹೊಡೆತ ತಿನ್ನಿಸಲು ಬಂದಿಲ್ಲ. ಚಳುವಳಿಯನ್ನು ಬೇರೆ ದಿಕ್ಕಿನಲ್ಲಿ ಕೊಂಡೊಯ್ಯಲು ಬಯಸುವ ಜನರೊಂದಿಗೆ ಮುಂದೆ ಸಾಗುವುದನ್ನು ನಾವು ಬೆಂಬಲಿಸಲು ಸಾಧ್ಯವಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: HD Kumaraswamy: ಅನ್ಯ ಶಕ್ತಿಗಳು ರೈತ ಹೋರಾಟವನ್ನೇ ತಲೆಕೆಳಗು ಮಾಡಲು ಯತ್ನಿಸುತ್ತಿವೆ; ಹೆಚ್.ಡಿ. ಕುಮಾರಸ್ವಾಮಿ
ದೆಹಲಿ ಪೊಲೀಸರು ರೈತ ಹೋರಾಟದ ಮುಂಚೂಣಿಯಲ್ಲಿರುವ, ದರ್ಶನ್ ಪಾಲ್, ರಾಜೀಂದರ್ ಸಿಂಗ್, ಬಲ್ಬೀರ್ ಸಿಂಗ್ ರಾಜೇವಾಲ್, ಬೂಟಾ ಸಿಂಗ್ ಬುರ್ಜ್ಗಿಲ್, ಜೋಗೀಂದರ್ ಸಿಂಗ್, ಯೋಗೇಂದ್ರ ಯಾದವ್, ಮೇಧಾ ಪಾಟ್ಕರ್ ಹಾಗೂ ರಾಕೇಶ್ ಟಿಕಾಯತ್ ಸೇರಿದಂತೆ ಇದುವರೆಗೂ 32 ಮುಖಂಡರನ್ನು ಹೆಸರಿಸಿ ಎಫ್ಐಆರ್ ದಾಖಲಿಸಿದ್ದಾರೆ. ಆದರೆ ಕೆಂಪು ಕೋಟೆಯಲ್ಲಿ ಧ್ವಜ ಹಾರಿಸುವಾಗ ಅಲ್ಲೇ ಇದ್ದ ದೀಪ್ ಸಿಧು ಅವರ ಮೇಲೆ ಯಾವುದೆ ಎಫ್ಐಆರ್ ದಾಖಲಾಗಿಲ್ಲ.
ಕೇಂದ್ರದ ಕಾನೂನಿನ ವಿರುದ್ದ ದೆಹಲಿಯ ಗಡಿಗಳಲ್ಲಿ ಎರಡು ತಿಂಗಳಿನಿಂದ ಶಾಂತಿಯುತ ಪ್ರತಿಭಟನೆ ನಡೆಯುತ್ತಿದ್ದರು. ಕೇಂದ್ರ ಸರ್ಕಾರ ರೈತರೊಂದಿಗೆ ಇರುವರೆಗೂ 11 ಸುತ್ತಿನ ಮಾತುಕತೆ ನಡೆಸಿದೆ. ಆದರೆ, ಈವರೆಗೆ ಯಾವ ಮಾತುಕತೆಯೂ ಫಲ ನೀಡಿಲ್ಲ. ಇದೇ ಕಾರಣಕ್ಕೆ ರೈತರು ಜನವರಿ 26 ರಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿಯನ್ನು ಆಯೋಜಿಸಿದ್ದರು. ಆದರೆ, ಈ ರ್ಯಾಲಿಯಲ್ಲಿ ಘರ್ಷಣೆ ಕಾಣಿಸಿಕೊಳ್ಳುತ್ತದೆ ಎಂದು ಭಾಗಶಃ ಯಾವ ಮುಖಂಡರೂ ಎಣಿಸಿರಲಿಕ್ಕಿಲ್ಲ.
Published by:
MAshok Kumar
First published:
January 27, 2021, 7:26 PM IST