ವ್ಯಕ್ತಿಯ ಜೀವ ಸಾವು ಬದುಕಿನ ನಡುವೆ ಇದ್ದ ವೇಳೆ, ಕಷ್ಟದಲ್ಲಿದ್ದವರ ಬದುಕಿಗಾಗಿ, ಇತ್ತೀಚೆಗೆ ಆರೋಗ್ಯ ಸಂಬಂಧಿತ ಅಂದರೆ ಕೊರೋನಾ ಕಾರಣ ಜೀವಗಳ ಉಳಿವಿಗಾಗಿ ಕ್ರೌಡ್ಫಂಡಿಂಗ್ ಅಭಿಯಾನ ಶುರುಮಾಡುತ್ತಾರೆ. ಇದರಿಂದ ಬಂದ ಮೊತ್ತವನ್ನು ಅವಶ್ಯಕತೆ ಇರುವವರಿಗೆ ತಲುಪಿಸಲಾಗುತ್ತದೆ. ಆದರೆ ಇಲ್ಲೊಬ್ಬ 15 ವರ್ಷದ ಹುಡುಗ ಅಮೃತವಾಹಿನಿಯಾದ ಗಿಡ-ಮರಗಳ ಬೆಳವಣಿಗೆಗೆ ಕ್ರೌಡ್ ಫಂಡಿಂಗ್ ಅಭಿಯಾನ ಶುರುಮಾಡಿದ್ದಾರೆ. ಅದರಲ್ಲೂ ಶುಷ್ಕ ಪ್ರದೇಶದಲ್ಲಿ ನೀರಿನ ಅಭಾವ ನೀಗಿಸಿ ಅಲ್ಲಿನ ಜನರಿಗೆ ಕೊಂಚ ಮಟ್ಟಿಗೆ ಅನುಕೂಲ ಮಾಡಿಕೊಡುವ ಆಲೋಚನೆ ಈ ಬಾಲಕನದ್ದು.
11ನೇ ತರಗತಿಯ ವಿದ್ಯಾರ್ಥಿ ರಾಜಸ್ಥಾನದ ಸಿಕಾರ್ ಜಿಲ್ಲೆಯ (Rajasthan's Sikar District) ಗುರುಗ್ರಾಮದಲ್ಲಿನ ಶುಷ್ಕ ಪ್ರದೇಶಗಳಲ್ಲಿ ಗಿಡಗಳನ್ನು ನೆಡಲು ಕ್ರೌಡ್ಫಂಡಿಂಗ್ ಅಭಿಯಾನ ಆರಂಭಿಸಿದನು. ಈತನ ವಯಸ್ಸು ಕೇವಲ ಹದಿನೈದು ವರ್ಷ. ಈ ಚಿಕ್ಕ ವಯಸ್ಸಿನಲ್ಲಿ ಮರ-ಗಿಡ, ಪರಿಸರದ ಬಗ್ಗೆ ಕಾಳಜಿ ವಹಿಸುತ್ತಿರುವ ಹುಡುಗನೇ ಆದಿ ದೈವ್. ಗುರುಗ್ರಾಮದ ಮೌಲ್ಸರಿಯಲ್ಲಿರುವ ಶ್ರೀ ರಾಮ್ ಶಾಲೆಯ ವಿದ್ಯಾರ್ಥಿ, ಈತ ಕೆಲವು ವಿಧಾನಗಳು ಹಾಗೂ ಹಿರಿಯರ ಸಲಹೆ ಸೂಚನೆ ಮೇರೆಗೆ ಶುಷ್ಕ ಪ್ರದೇಶಗಳಲ್ಲಿ ನೀರಿನ ಕೊರತೆಯನ್ನು ನೀಗಿಸುವ ಸಲುವಾಗಿ ಪ್ರಾಜೆಕ್ಟ್ ಉರ್ವಾರ ಎಂಬ ಹೆಸರಿನಲ್ಲಿ ಈ ಮಹತ್ಕಾರ್ಯ ಆರಂಭಿಸಿದ್ದಾನೆ.
"ಎರಡು ವರ್ಷಗಳ ಹಿಂದೆ ನಾನು ನೀರಿನ ಕೊರತೆ ಮತ್ತು ಶುಷ್ಕ ಪ್ರದೇಶಗಳಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ವ್ಯಾಪಕ ಸಂಶೋಧನೆ ಮಾಡಿದ್ದೇನೆ. ನಾನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಪರಿಸರವಾದಿ ಸುಂದರಂ ವರ್ಮಾ ಜಿ ಅವರೊಂದಿಗೆ ಸಂವಾದ ನಡೆಸಿದ್ದು, ಅವರು ಈಗಾಗಲೇ ಪ್ರಾಯೋಗಿಕವಾಗಿ ಜಾರಿಗೆ ತಂದಿರುವ 'ಒಂದು-ಲೀಟರ್ ನೀರಿನ ತಂತ್ರ'ದೊಂದಿಗೆ ವೈವಿಧ್ಯಮಯ ಸಸ್ಯವರ್ಗ ಬೆಳೆಸುವ ಬಗ್ಗೆ ನನಗೆ ಕಲಿಸಿದರು "ಎಂದು ಆದಿ ಹೇಳಿದರು. ಪಾನಿ (PAANI) ಎಂಬ ಫೌಂಡೇಶನ್ ಆಯೋಜಿಸಿದಂತಹ ಕಾರ್ಯಾಗಾರಗಳಿಗೆ ಹಾಜರಾಗುವುದರಿಂದ ರಾಜಸ್ಥಾನದಂತಹ ರಾಜ್ಯಗಳಲ್ಲಿ ನೀರಿನ ಅಭಾವಕ್ಕೆ ಅರಣ್ಯನಾಶವೇ ಮೂಲ ಕಾರಣ ಎಂದು ಅರ್ಥವಾಯಿತು ಎಂದು ಅವರು ಹೇಳಿದರು.
ಒಂದು-ಲೀಟರ್ ನೀರಿನ ತಂತ್ರವನ್ನು ವಿವರಿಸಿದ ಆದಿ, ಈ ಪ್ರಕ್ರಿಯೆಯು ಆರಂಭಕ್ಕೆ ಐದು ದಿನಗಳ ಮೊದಲು ಮತ್ತು ಮಳೆಗಾಲದ ಮುಕ್ತಾಯದ ನಂತರ 30 ಸೆಂಟಿಮೀಟರ್ ಆಳವಾದ ಮಣ್ಣಿನ ಉಳುಮೆ ಅಗತ್ಯವಿದೆ ಎಂದು ಹೇಳಿದರು. ಈ ಪ್ರಕ್ರಿಯೆಯ ಮೂಲಕ, ಕಳೆಗಳನ್ನು ತೆಗೆದುಹಾಕುವುದು ಮತ್ತು ಮಣ್ಣಿನ ಮೇಲ್ಮೈಯಲ್ಲಿ ಕ್ಯಾಪಿಲರಿ ಕ್ರಿಯೆ ನಿಯಂತ್ರಿಸುವ ಮೂಲಕ ಮಣ್ಣಿನ ತೇವಾಂಶ ಹೀರಿಕೊಳ್ಳಬಹುದು.
"ನಮ್ಮ ಯೋಜನೆಯು ವಿಶೇಷವಾಗಿ ಹಳ್ಳಿ ಮಹಿಳೆಯರಿಗೆ ಉದ್ಯೋಗ ಸೃಷ್ಟಿಸುತ್ತದೆ. ಏಕೆಂದರೆ ಅವರು ತಮ್ಮ ಬಿಡುವಿನ ಸಮಯದಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಬೆಳೆಯಬಹುದು ಮತ್ತು ಅವುಗಳನ್ನು ಮಾರಾಟ ಮಾಡಿ ತಮ್ಮ ಜೀವನ ನಿರ್ವಹಿಸಬಹುದು" ಎಂದು ಅವರು ಹೇಳಿದರು ಮತ್ತು ಉಪ ಉತ್ಪನ್ನವಾಗಿ ಪಡೆದ ಮೇವನ್ನು ಪ್ರಾಣಿಗಳಿಗೆ ಆಹಾರಕ್ಕಾಗಿ ಬಳಸಬಹುದು ಮತ್ತು ಮರಗಳಿಂದ ಹೊರತೆಗೆಯಲಾದ ಕಚ್ಚಾ ವಸ್ತುಗಳನ್ನು ಕುಶಲಕರ್ಮಿಗಳು ಮತ್ತು ಇತರ ಸಣ್ಣ-ಪ್ರಮಾಣದ ಕೈಗಾರಿಕೆಗಳು ಬಳಸಬಹುದು ಎಂದು ಆಗುವ ಪ್ರಯೋಜನಗಳನ್ನು ವಿವರಿಸಿದರು.
ಇತ್ತೀಚಿನ ದಿನಗಳಲ್ಲಿ ಕ್ರೌಡ್ ಫಂಡಿಂಗ್ ಅನ್ನು ಅರ್ಥಪೂರ್ಣವಾಗಿ ಮತ್ತು ಸುಲಲಿತವಾಗಿ ಯುವ ಸಮುದಾಯ ಬಳಸಿಕೊಳ್ಳುತ್ತಿದೆ. ಇದಕ್ಕೆ ಅನುಗುಣವಾಗಿ 15 ವರ್ಷದ ಹುಡುಗ ಆರಂಭಿಸಿರುವ ಕ್ರೌಡ್ ಫಂಡಿಂಗ್ (Crowd Funding) ಕಾರ್ಯಕ್ಕೆ ಉತ್ತಮ ಮೆಚ್ಚುಗೆ ವ್ಯಕ್ತವಾಗಿದೆ. ಶಾಲೆಯಲ್ಲಿ ಓದುವ ಬಾಲಕನಿಗೆ ಪರಿಸರದ ಮೇಲಿರುವ ಕಾಳಜಿಯನ್ನು ಜನ ಶ್ಲಾಘಿಸುತ್ತಿದ್ದಾರೆ. ಹವಾಮಾನ ವೈಪರೀತ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಇಂದಿನ ಸಂದರ್ಭದಲ್ಲಿ ಗ್ರೇಟಾ ಥನ್ಬರ್ಗ್ (Greta Thunberg) ಮತ್ತು ಆದಿ ದೈವ್ ಮಾಡುತ್ತಿರುವ ಕೆಲಸಕ್ಕೆ ಎಲ್ಲರೂ ಸಹಕಾರ ನೀಡಿದಲ್ಲಿ ಮುಂದಿನ ದಿನಗಳಲ್ಲಿ ಪರಿಸರದ ಸಂರಕ್ಷಣೆಗೆ ದೊಡ್ಡ ದಾರಿ ಸೃಷ್ಟಿಯಾದಂತಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ