ನೆಲ್ಲೂರು: ಹೊಸ ಅಳಿಯ (Son -in- Law) ಮನೆಗೆ ಆಗಮಿಸಿದರೆ ಮರ್ಯಾದೆ ಹೇಗಿರುತ್ತದೆ ಎನ್ನುವುದನ್ನ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಮದುವೆಯಾದ ಹೊಸದರಲ್ಲಿ ಮನೆಗೆ ಬರುವ ಅಳಿಯನಿಗೆ ರಾಜಮರ್ಯಾದೆ ಇರುತ್ತದೆ. ಇದು ಭಾರತೀಯ ಸಂಪ್ರದಾಯ. ದೇಶದ ಯಾವುದೇ ಭಾಗದಲ್ಲಾದರೂ ಹೀಗೆ ಹೊಸ ಅಳಿಯನಿಗೆ ಮರ್ಯಾದೆ, ಗೌರವ ಸಿಕ್ಕೇ ಸಿಗುತ್ತದೆ. ಅದರಲ್ಲೂ ಹಬ್ಬದ (Festival) ಸಂದರ್ಭಗಳಲ್ಲಂತೂ ಅಳಿಯ ಮನೆಗೆ ಬಂದರಂತೂ ಮನೆಯಲ್ಲಿ ಸಡಗರ ತುಂಬಿ ತುಳುಕುತ್ತಿರುತ್ತದೆ. ವಿಶೇಷವಾದ ಅಡುಗೆ ಮಾಡಿ ಬಡಿಸುತ್ತಾರೆ. ಆದರೆ ಇಲ್ಲೊಂದು ಮನೆಯಲ್ಲಿ ಹೊಸ ಅಳಿಯನಿಗೆ ಆತನ ಅತ್ತೆ ಮನೆಯವರು ಜೀವನದಲ್ಲಿ ಮರೆಯಾಗದಂತಹ ಔತಣಕೂಟ (Dinner) ಏರ್ಪಡಿಸಿ ಸುದ್ದಿಯಾಗಿದ್ದಾರೆ.
ಇತ್ತೀಚೆಗಷ್ಟೇ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಆಂಧ್ರ ಪ್ರದೇಶದ ಮಹಿಳೆಯೊಬ್ಬರು ತಮ್ಮ ಅಳಿಯನಿಗೆ 173 ಬಗೆಯ ಖಾದ್ಯಗಳನ್ನು ಮಾಡಿ ಬಡಿಸಿದ್ದದ್ದು ಭಾರಿ ಸುದ್ದಿಯಾಗಿತ್ತು. ಇದೀಗ ಅದೇ ರೀತಿ ಮತ್ತೊಬ್ಬ ಮಹಿಳೆ ತಮ್ಮ ಹೊಸ ಅಳಿಯನಿಗೆ 108 ಬಗೆಯ ತಿನಿಸುಗಳನ್ನು ತಯಾರಿ ಭರ್ಜರಿ ಭೋಜನ ನೀಡಿದ್ದಾರೆ. ನೆಲ್ಲೂರು ಜಿಲ್ಲೆಯ ಪೊದಲಕೂರು ತಾಲೂಕಿನ ಒಂದು ಗ್ರಾಮವು ಈ ವಿಶೇಷತೆಗೆ ಸಾಕ್ಷಿಯಾಗಿದೆ.
108 ಬಗೆಯ ಖಾದ್ಯಗಳ ಭೋಜನ
ಮೊದಲ ಬಾರಿ ಅತ್ತೆ ಮನೆಗೆ ಬಂದಂತಹ ಆಳಿಯನಿಗೆ ವೆಜ್ ಮತ್ತು ನಾನ್ವೆಜ್ ಸೇರಿದಂತೆ ಬರೋಬ್ಬರಿ 108 ಬಗೆಯ ತಿನಿಸುಗಳನ್ನು ತಯಾರಿಸಿ ತಿನ್ನಿಸಿದ್ದಾರೆ. ಪೊದಲಕೂರು ತಾಲೂಕಿನ ಊಸಪಲ್ಲಿ ನಿವಾಸಿ, ಕಂದಲೇರು ಪೊಲೀಸ್ ಠಾಣೆಯಲ್ಲಿ ಹೋಮ್ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿರುವ ಶಿವಕುಮಾರ್ ಮತ್ತು ಶ್ರೀದೇವಿ ಅವರು ತಮ್ಮ ಪುತ್ರಿ ಶಿವಾನಿ ಮತ್ತು ಅಳಿಯ ಉಮ್ಮಿಡಿಶೆಟ್ಟಿ ಶಿವಕುಮಾರ್ ಅವರಿಗೆ ಏರ್ಪಡಿಸಿದ್ದ ಔತಣಕೂಟದಲ್ಲಿ 108 ಬಗೆಯ ಖಾದ್ಯಗಳು ತಯಾರಿಸಿ ಬಡಿಸಿದ್ದಾರೆ.
ಸಾಮಾಜಿಕ ಜಾಲಾತಾಣದಲ್ಲಿ ವಿಡಿಯೋ ವೈರಲ್
ಮಗಳನ್ನು ಇತ್ತೀಚೆಗಷ್ಟೇ ಮದುವೆ ಮಾಡಿಕೊಟ್ಟಿದ್ದು, ಮದುವೆಯ ಬಳಿಕ ಮೊದಲ ಬಾರಿಗೆ ಮನೆಗೆ ಬಂದ ಅಳಿಯನಿಗೆ 108 ಬಗೆಯ ಭಕ್ಷ್ಯ ಭೋಜನಗಳನ್ನು ತಯಾರಿಸಿ ಉಣಬಡಿಸಿದ್ದಾರೆ. ನವದಂಪತಿಯನ್ನುಒಟ್ಟಿಗೆ ಕೂರಿಸಿ ಡೈನಿಂಗ್ ಟೇಬಲ್ ಮೇಲೆ ಎಲ್ಲಾ ಖಾದ್ಯಗಳನ್ನು ಇರಿಸಿದ್ದಾರೆ. ಔತಣಕೂಟದ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಕುಟುಂಬಸ್ಥರು ಹರಿಬಿಟ್ಟಿದ್ದು, ಇದು ಭಾರಿ ವೈರಲ್ ಆಗುತ್ತಿದೆ.
ಔತಣಕೂಟದಲ್ಲಿ ಇದ್ದ ತಿನಿಸುಗಳಿವು
ಅಳಿಯನಿಗೆ ನೀಡಿದ ಔತಣಕೂಟದಲ್ಲಿ ಮಟನ್, ಚಿಕನ್, ಮೀನು, ಪ್ರಾನ್ಸ್, ಸೀಗಡಿ, ರಸಂ, ಸಾಂಬಾರ್ ಹಾಗೂ ಮೊಸರು ಸೇರಿದಂತೆ ಬಗೆಬಗೆಯ ಸಿಹಿತಿಂಡಿಗಳು ಇದ್ದವು. ಹೀಗೆ ಸಿದ್ಧಪಡಿಸಿದ್ದ ಎಲ್ಲಾ ಖಾದ್ಯಗಳನ್ನು ಒಂದೇ ಟೇಬಲ್ನಲ್ಲಿ ಇಟ್ಟು ಅಳಿಯನಿಗೆ ಬಡಿಸಲಾಗಿದೆ. ಈ ಊಟದ ವೇಳೆ ಸೆರೆಹಿಡಿಯಲಾದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಕ್ಕಪಕ್ಕದ ಗ್ರಾಮಗಳಲ್ಲಿ ಸಿಕ್ಕಾಬಟ್ಟೆ ಚರ್ಚೆಯಾಗುತ್ತಿದೆ.
ಪಶ್ಚಿಮ ಗೋದಾವರಿಯಲ್ಲಿ ಅಳಿಯನಿಗೆ 173 ಬಗೆಯ ಖಾದ್ಯ
ಕಳೆದ ತಿಂಗಳು ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿಯ ಭೀಮಾವರಂನಲ್ಲಿ ಅಳಿಯನಿಗೆ ಅತ್ತೆಮನೆಯವರು 173 ಬಗೆಯ ಖಾದ್ಯಗಳನ್ನ ತಯಾರಿಸಿ ಬಡಿಸಿದ್ದರು. ಭೀಮಾವರಂನ ಉದ್ಯಮಿ ತಟವರ್ತಿ ಬದ್ರಿ ಮತ್ತು ಸಂಧ್ಯಾ ದಂಪತಿ ತಮ್ಮ ಪುತ್ರಿ ಹರಿಕಾ ಮತ್ತು ಅಳಿಯ ಪೃಥ್ವಿ ಗುಪ್ತಾ ಅವರಿಗೆ ಈ ಸಂಕ್ರಾಂತಿ ಹಬ್ಬದಂದು ಈ ಬಾಹುಬಲಿ ಖಾದ್ಯವನ್ನು ಬಡಿಸಿದ್ದರು.
ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಸಂಕ್ರಾಂತಿ ವೇಳೆಗೆ ಮನೆಗೆ ಬರುವ ಅಳಿಯನಿಗೆ ಈ ವಿಶೇಷ ಭೋಜನ ಏರ್ಪಡಿಸುವ ಸಂಪ್ರಾದಾಯವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗುತ್ತಿದ್ದು, ಹೆಚ್ಚು ಖಾದ್ಯಗಳ ತಯಾರಿಸಿ ಬಡಿಸಿ ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್ ಮಾಡುವುದು ಸಾಮಾನ್ಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ