ಆಂಧ್ರಪ್ರದೇಶ: ಸಾಮಾನ್ಯವಾಗಿ ನಾವು ನಮ್ಮ ಮನೆಯಲ್ಲಿರುವ ಚಿಕ್ಕ ಮಕ್ಕಳಿಗೆ ಅವರು ಇಷ್ಟಪಡುವ ಬಟ್ಟೆಯನ್ನು (Dress) ಹಾಕೋಬೇಡ, ಇಷ್ಟಪಟ್ಟ ತಿಂಡಿಯನ್ನು ತಿನ್ನಬೇಡ ಅಂತ ಹೇಳಿದರೆ, ಅವರಿಗೆ ಆ ಕ್ಷಣದಲ್ಲಿ ತುಂಬಾನೇ ಕೋಪ ಬರುತ್ತದೆ. ಹೆತ್ತವರ (Parents) ಮೇಲೆ ಕೋಪ ಮಾಡಿಕೊಂಡು ಮಾತು ಬಿಡೋದನ್ನು ಮತ್ತು ಆ ಕೋಪವನ್ನು ಊಟದ ಮೇಲೆ ತೀರಿಸಿಕೊಳ್ಳುವುದನ್ನು ನಾವೆಲ್ಲಾ ನೋಡಿರುತ್ತೇವೆ. ಆದರೆ ಇಲ್ಲೊಬ್ಬ ಪುಟ್ಟ ಹುಡುಗ ಹೀಗೆ ತನ್ನ ಮಲತಾಯಿ (Step Mother) ಇಂತಹ ಬಟ್ಟೆಯನ್ನು ಹಾಕಿಕೊಳ್ಳಬೇಡ ಅಂತ ಹೇಳಿದ್ದಕ್ಕೆ ಆತ ಮಾಡಿರುವ ಕೆಲಸ ಕೇಳಿದರೆ ನೀವು ಅಚ್ಚರಿ ಪಡುತ್ತೀರಾ. ಏಕೆಂದರೆ ಆ ಹುಡುಗ ಪೊಲೀಸ್ ಠಾಣೆ ಮೆಟ್ಟಿಲನ್ನೇ ಹತ್ತಿದ್ದಾನೆ.
ತನ್ನ ಮಲತಾಯಿಯ ಬಗ್ಗೆ ಪೊಲೀಸರಿಗೆ ದೂರು ನೀಡಿದ ಬಾಲಕ
ಆಂಧ್ರಪ್ರದೇಶದಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಬಾಲಕ ತನ್ನ ಮಲತಾಯಿಯನ್ನು ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿಸಿದ್ದಾನೆ. ಪೊಲೀಸರ ಬಳಿ ಹೋಗಿ ತನ್ನ ಮಲತಾಯಿ ತನಗೆ ಇಷ್ಟವಿರುವ ಬಟ್ಟೆಯನ್ನು ಹಾಕಿಕೊಳ್ಳಲು ಬಿಡುತ್ತಿಲ್ಲ ಅಂತ ಹೇಳಿದ್ದಾನೆ. ಅಲ್ಲದೆ ನನ್ನ ಸ್ನೇಹಿತನ ಬರ್ತ್ ಡೇ ಪಾರ್ಟಿಗೆ ಹೋಗುವುದಕ್ಕೂ ಬಿಡುತ್ತಿಲ್ಲ ಎಂದು ಹೇಳಿದ್ದಾನೆ. ಅಲ್ಲದೆ ಮಲತಾಯಿ ಹೊಡೆದಿದ್ದಾಳೆ ಎಂದು ಪೊಲೀಸರ ಮುಂದೆ ಬರೀ ಟವಲ್ನಲ್ಲಿ ಬಂದಿದ್ದ ಬಾಲಕ ದೂರಿದ್ದಾನೆ.
ಹೀಗೆ ಹೇಳಿದ ನಂತರ ಪೊಲೀಸರು ಆ ತಾಯಿಯನ್ನೂ ಕರೆಯಿಸಿ, ಅವರಿಗೆ ಸೂಕ್ತವಾದ ಸಲಹೆ ನೀಡಿ, ಸಾಮರಸ್ಯದ ಸಂಬಂಧವನ್ನು ಕಾಪಾಡಿಕೊಳ್ಳಲು ಹೇಳಿದ್ದಾರೆ. ಈ ಘಟನೆ ಎಲೂರು ಜಿಲ್ಲೆಯ ಕೊತ್ತಪೇಟ್ನಲ್ಲಿ ನಡೆದಿದೆ. ಬಾಲಕ ದಿನೇಶ್ ಎಂಬಾತನ ತಾಯಿ ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದ್ದು, ಆತನ ತಂದೆ ಎರಡನೇ ವಿವಾಹ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ಭಾನುವಾರ ತನ್ನ ಸ್ನೇಹಿತನ ಹುಟ್ಟುಹಬ್ಬದ ಸಂತೋಷಕೂಟದಲ್ಲಿ ಭಾಗವಹಿಸಲು ದಿನೇಶ್ ಸ್ನಾನ ಮಾಡಿ ಬಂದು, ತನ್ನ ಮಲತಾಯಿ ಬಳಿ ಹೊಸ ಬಿಳಿ ಶರ್ಟ್ ಅನ್ನು ಕೇಳಿದ್ದಾನೆ. ಆಗ ಆಕೆ ಅವನಿಗೆ ಶರ್ಟ್ ಕೊಡಲು ನಿರಾಕರಿಸಿದ್ದಲ್ಲದೆ, ಹುಟ್ಟುಹಬ್ಬದ ಆಚರಣೆಗೂ ಸಹ ಹೋಗಬೇಡ ಅಂತ ಎಚ್ಚರಿಕೆ ನೀಡಿದಳಂತೆ. ದಿನೇಶ್ ಆಕೆಯ ಮಾತನ್ನು ಒಪ್ಪದೆ ಇದ್ದಾಗ, ಅವನ ಮಲತಾಯಿ ಅವನಿಗೆ ಒಂದೆರಡು ಏಟು ಹೊಡೆದಿದ್ದಾಳೆ.
ಕೋಪಗೊಂಡ ದಿನೇಶ್, ಕೇವಲ ಟವೆಲ್ ಧರಿಸಿ ಎಲೂರು ಟೌನ್ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ಸಂಪರ್ಕಿಸಿ ತನ್ನ ಮಲತಾಯಿ ವಿರುದ್ಧ ದೂರು ದಾಖಲಿಸಿದ್ದಾನೆ. ದಿನೇಶ್ ಹೇಳಿಕೆಗಳಿಂದ ಆಘಾತಕ್ಕೊಳಗಾದ ಪೊಲೀಸರು ತಕ್ಷಣವೇ ಅವರ ಮಲತಾಯಿ ಮತ್ತು ತಂದೆಯನ್ನು ಠಾಣೆಗೆ ಕರೆಯಿಸಿಕೊಂಡು ಕೌನ್ಸೆಲಿಂಗ್ ಮಾಡಿದ್ದಾರೆ.
ಮಲತಾಯಿ ಮತ್ತು ತಂದೆಯನ್ನು ಕರೆಸಿ ಕೌನ್ಸೆಲಿಂಗ್ ಮಾಡಿದರು ಪೊಲೀಸರು
ಸರ್ಕಲ್ ಇನ್ಸ್ಪೆಪೆಕ್ಟರ್ ಪಿ.ಚಂದ್ರಶೇಖರ್ ಅವರು ಹುಡುಗನ ನೋವನ್ನು ತುಂಬಾನೇ ತಾಳ್ಮೆಯಿಂದ ಆಲಿಸಿದರು ಮತ್ತು ಈ ವಿಷಯವನ್ನು ಕೂಲಂಕಷವಾಗಿ ತನಿಖೆ ಮಾಡಿದರು. ಕೌಟುಂಬಿಕ ಕಲಹವನ್ನು ಬಗೆಹರಿಸುವ ಮಹತ್ವವನ್ನು ಮನಗಂಡ ಅವರು, ದಿನೇಶ್ ಪೋಷಕರನ್ನು ಬುದ್ದಿ ಹೇಳಿದ್ದಾರೆ.
ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಗಮನಾರ್ಹ ಗಮನವನ್ನು ಸೆಳೆಯಿತು, ನಾಲ್ಕನೇ ತರಗತಿಯ ಯುವ ವಿದ್ಯಾರ್ಥಿಯು ತನ್ನ ಮಲತಾಯಿಯ ಬಗ್ಗೆ ದೂರು ನೀಡಲು ಪೊಲೀಸರನ್ನು ಸಂಪರ್ಕಿಸಿದ ಧೈರ್ಯ ಅನೇಕ ನೆಟ್ಟಿಗರನ್ನು ಆಶ್ಚರ್ಯಚಕಿತಗೊಳಿಸಿತು.
ಗಮನಿಸಬೇಕಾದ ಅಂಶವೆಂದರೆ ದಿನೇಶ್ ಪೊಲೀಸರ ಸಹಾಯವನ್ನು ಕೋರಿದ್ದು ಇದೇನು ಮೊದಲನೇ ಬಾರಿ ಅಲ್ಲ. ಹಿಂದೆ ಸಹ ಅವನು ತನ್ನ ಮಲತಾಯಿಯಿಂದ ದೈಹಿಕ ಹಲ್ಲೆಯನ್ನು ಅನುಭವಿಸಿದ ನಂತರ ಪೊಲೀಸರನ್ನು ಸಂಪರ್ಕಿಸಿದ್ದನು. ಆಗ ಬಾಲಕನ ಪೋಷಕರಿಗೆ ಬುದ್ದಿ ಹೇಳಿ ಕಳುಹಿಸಿದ್ದರು. ಜೊತೆಗೆ ಬಾಲಕನಿಗೆ ಮತ್ತೆ ಏನಾದರೂ ತೊಂದರೆ ಆದರೆ ಮತ್ತೆ ತಮ್ಮ ಬಳಿ ಬಂದು ದೂರು ನೀಡುವಂತೆ ಹೇಳಿದ್ದಾರೆ. ಇದು ಬಾಲಕನಿಗೆ ಆತ್ಮ ವಿಶ್ವಾಸ ಹೆಚ್ಚಿಸಿದ್ದು, ಪೊಲೀಸರ ಬಳಿ ಬಂದಿದ್ದಾನೆ.
ಪೋಷಕರಿಗೆ ಎಚ್ಚರಿಕೆ
ಇಂತಹ ಘಟನೆಗಳು ಮರುಕಳಿಸುವುದು ಎಂಬುದನ್ನು ಗಮನದಲ್ಲಿಟ್ಟುಕೊಂಡು, ಭವಿಷ್ಯದಲ್ಲಿ ಇಂತಹ ಕೃತ್ಯಗಳನ್ನು ಪುನರಾವರ್ತಿಸದಂತೆ ಪೊಲೀಸರು ದಿನೇಶ್ ಅವರ ಮಲತಾಯಿಯನ್ನು ಕಟ್ಟುನಿಟ್ಟಾಗಿ ಎಚ್ಚರಿಸಿದ್ದಾರೆ. ಕುಟುಂಬದೊಳಗೆ ಪರಸ್ಪರ ಗೌರವದ ಮಹತ್ವವನ್ನು ಒತ್ತಿ ಹೇಳುತ್ತಾ, ಪೋಷಕರೊಂದಿಗೆ ಸಂವಹನ ನಡೆಸುವಾಗ ಸೂಕ್ತ ನಡವಳಿಕೆಯನ್ನು ಸಹ ಕಾಪಾಡಿಕೊಳ್ಳಲು ಅವರು ದಿನೇಶ್ ಗೂ ಸಹ ಬುದ್ದಿ ಹೇಳಿ ಕಳುಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ