ದಕ್ಷಿಣ ಕನ್ನಡ: ಅದ್ಭುತವಾದ ಕಾಷ್ಟಶಿಲ್ಪಗಳು, ಕೇರಳ ಮಾದರಿಯನ್ನು ಹೋಲುವ ರಚನೆ, ಕಣ್ಮನ ಸೆಳೆಯುವ ದೇಗುಲದ ವಿನ್ಯಾಸ. ದೇವಸ್ಥಾನ (Dakshina Kannada Temples) ಪ್ರವೇಶಿಸುತ್ತಿದ್ದಂತೆ ಶಾಂತಮಯ ವಾತಾವರಣ, ಭಕ್ತಿ ಭಾವ ಹೆಚ್ಚಿಸಬಲ್ಲ ದೇವರ (Vittla Panchalingeshwara Temple) ಸಾನಿಧ್ಯ. ಹಾಗಿದ್ರೆ ಇಂತಹ ಅದ್ಭುತ ಕ್ಷೇತ್ರ ಇರೋದಾದ್ರೂ ಎಲ್ಲಿ? ಇಲ್ಲಿನ ವಿಶೇಷತೆಯಾದ್ರೂ ಏನು? ಹೇಳ್ತೀವಿ ನೋಡಿ.
ಪಂಚಲಿಂಗೇಶ್ವರ ದೇಗುಲ
ಇದು ದಕ್ಷಿಣ ಕನ್ನಡ ಪುತ್ತೂರಿನ ವಿಟ್ಲ ಪಂಚಲಿಂಗೇಶ್ವರ ದೇಗುಲ. ಈ ದೇಗುಲಕ್ಕೂ ಮಹಾಭಾರತಕ್ಕೂ ಹತ್ತಿರ ಸಂಬಂಧವಿದೆ. ಇಲ್ಲಿ ಗಣಪನ ಜೊತೆ ಶಿವಲಿಂಗಗಳೂ ಕಾಣ ಸಿಗುತ್ತವೆ. ಮಹಾಭಾರತದಲ್ಲಿ ಬರುವ ಭೀಮ ಅದೆಷ್ಟು ಹರಿ ಭಕ್ತನೋ ಅಷ್ಟೇ ಹರ ಭಕ್ತನೂ ಕೂಡ. ಶಿವನನ್ನ ಅಪಾರವಾಗಿ ಪ್ರೀತಿಸಿದ್ದ ಭೀಮನು ಇಲ್ಲಿ ಲಿಂಗವನ್ನು ಪ್ರತಿಷ್ಠಾಪಿಸಿದ್ದ ಅನ್ನೋ ಐತಿಹ್ಯವಿದೆ.
ಬಕಾಸುರನ ವಧೆ
ವಿಶೇಷ ಅಂದ್ರೆ ಪಾಂಡವರು ಅಜ್ಞಾತವಾಸದ ಸಮಯದಲ್ಲಿ ಇದೇ ವಿಟ್ಲದ ಪಂಚಲಿಂಗೇಶ್ವರ ಸಾನಿಧ್ಯದಲ್ಲಿ ಇದ್ದರು ಅನ್ನೋ ನಂಬಿಕೆಯಿದೆ. ಇಂತಹ ಸಮಯದಲ್ಲಿ ಬಕಾಸುರನ ಕಾಟಕ್ಕೆ ಹೆದರಿ ಬದುಕುತ್ತಿದ್ದ ಈ ಭಾಗದ ಜನರು ಭೀಮನ ಮೊರೆ ಹೋಗುತ್ತಾರೆ. ಹೀಗಾಗಿ ಜನರ ಪರ ನಿಂತುಕೊಳ್ಳುವ ಭೀಮನು ಬಕಾಸುರನಿಗೆ ಇರಿಸಿದ್ದ ತಂಗಳನ್ನ ತಿಂದು ಆತನನ್ನು ವಧಿಸುತ್ತಾನೆ. ನಂತರ ಭೀಮನು ಕಾಶಿಯಾತ್ರೆಗೆ ಹೊರಟು ಹೋಗುತ್ತಾನೆ.
ಭೀಮ ಪ್ರತಿಷ್ಠಾಪಿಸಿದ ಶಿವಲಿಂಗ
ಇತ್ತ ಪೂಜೆಗೆ ಏನೂ ಇಲ್ಲದ ಕಾರಣ ಕುಂತಿ ಪುತ್ರರು ಶಿವಲಿಂಗವನ್ನ ವಿಟ್ಲದಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ. ತೀರ್ಥಯಾತ್ರೆಯಿಂದ ಬಂದ ಭೀಮ ರೊಚ್ಚಿಗೆದ್ದು ಆ ಶಿವಲಿಂಗವನ್ನ ಕಿತ್ತೆಸೆದು ತಾನು ತಂದ ಲಿಂಗವನ್ನ ಸ್ಥಾಪಿಸುತ್ತಾನೆ. ಅಲ್ಲಿಂದೀಚೆಗೆ ಪಂಚಲಿಂಗಗಳಿರುವುದರಿಂದ ಪಂಚಲಿಂಗೇಶ್ವರ ಎಂದು ಈ ದೇಗುಲವನ್ನ ಕರೆಯಲಾಗುತ್ತಿದೆ.
ವಿಶಿಷ್ಟ ಶೈಲಿಯ ವಾಸ್ತು ಶಿಲ್ಪ
ಇಲ್ಲಿ ಪ್ರತಿ ಮಕರ ಸಂಕ್ರಾಂತಿಯಂದು ಒಂಬತ್ತು ದಿನಗಳ ವೈಭವದ ಜಾತ್ರೆ ನಡೆಯುತ್ತದೆ. ಪಲ್ಲಕ್ಕಿ ಉತ್ಸವ ಇಲ್ಲಿನ ಪ್ರಮುಖ ವಿಶೇಷತೆಗಳಲ್ಲೊಂದು. ಶಿವ ಆಲಯದ ಸುತ್ತಲೂ ಕಾಷ್ಟ ಶಿಲ್ಪಗಳು, ಮಹಾಭಾರತ ಕಾಲದ ಕಥೆಗಳನ್ನ ಪಾಂಡವರ ನೋವು, ವ್ಯಥೆಗಳನ್ನ ಹೇಳುವಂತಿವೆ.
ಈ ದೇಗುಲಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ದೇಗುಲದಲ್ಲಿ ದೇವರಿಗಾಗಿ ಕಲ್ಲಿನ ದೀವಿಗೆಯಿದ್ದು ದೀಪವನ್ನ ಹಚ್ಚುವ ಪ್ರತೀತಿ ಇಲ್ಲಿದೆ. ಬೇಡಿ ಬಂದ ಭಕ್ತ ಜನರ ಕಷ್ಟಗಳ ಪರಿಹರಿಸುವ ಈ ಪಂಚಲಿಂಗೇಶ್ವರ ಸ್ವಾಮಿ ದೇಗುಲಕ್ಕೆ ಬಂದರೆ ಕಾಶಿಗೆ ಬಂದ ಫಲ ಸಿಗುತ್ತೆ ಎನ್ನುತ್ತದೆ ಸ್ಥಳ ಪುರಾಣ. ಒಟ್ಟಿನಲ್ಲಿ ವಿಟ್ಲದ ಪಂಚಲಿಂಗೇಶ್ವರ ದೇಗುಲವು ಮನಸಿಗೆ ಅತ್ಯಂತ ಪ್ರಸನ್ನತೆಯನ್ನ ನೀಡುವ ಕ್ಷೇತ್ರವೂ ಹೌದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ