ಮಂಗಳೂರು: ಜೀವನದಲ್ಲಿ ಕಷ್ಟ ಯಾರಿಗಿಲ್ಲ ಹೇಳಿ? ಆನೆಗೆ ಆನೆಯ ಕಷ್ಟ. ಇರುವೆಗೆ ಇರುವೆಯ ಕಷ್ಟ! ಆದರೆ ಈ ಕಷ್ಟವನ್ನು ಎದುರಿಸಿ (Positive Story) ನಿಂತವರೇ ನಿಜವಾದ ಸಾಧಕ. ಕರಾವಳಿಯ ಅಂತಹ ಛಲಗಾರ ಯುವಕನ ಸಾಧನೆಯ (Success Story Of Mangaluru Parashuram) ಕಥೆ ಇಲ್ಲಿದೆ ನೋಡಿ.
ಬ್ಯಾಗ್ನ್ನು ಹೆಗಲೇರಿಸಿಕೊಂಡು ಕೈಯ ಶಕ್ತಿಯಿಂದಲೇ ನಡೆಯುವ ಈ ಯುವಕನ ಹೆಸರು ಪರಶುರಾಮ. ಅಂದು ಪುರಾಣದ ಪರಶುರಾಮ ದಂಡ-ಕಮಂಡಲವನ್ನು ಬಿಟ್ಟು ಖಂಡ ಪರಶುವನ್ನು ಹಿಡಿದು ರಾಜ ಮಹಾರಾಜರ ರುಂಡ ಚೆಂಡಾಡಿದರೆ, ಇಂದು ಈ ಪರಶುರಾಮ ದೈಹಿಕ ನ್ಯೂನ್ಯತೆಗೆ ಸೆಡ್ಡು ಹೊಡೆದು ಭಿಕ್ಷಾಟನೆ ಬಿಟ್ಟು ಫುಡ್ ಡೆಲಿವರಿ ಬಾಯ್ ಆಗಿ ಜೀವನವನ್ನೇ ಗೆದ್ದಿದ್ದಾರೆ.
ವೈದ್ಯರು ನೀಡಿದ ಇಂಜೆಕ್ಷನ್ನಿಂದ ಕಾಲು ಹೋಯ್ತು!
ಮೂಲತಃ ವಿಜಯಪುರದವರಾದ ಪರಶುರಾಮ ಅವರ ಹೆತ್ತವರು ಕಳೆದ 30 ವರ್ಷಗಳಿಂದ ಮಂಗಳೂರಿನಲ್ಲಿದ್ದಾರೆ. ಹುಟ್ಟಿದ ಒಂದು ವರ್ಷದವರೆಗೆ ಸರಿಯಾಗಿಯೇ ಇದ್ದ ಇವರಿಗೆ ಜ್ವರಕ್ಕೆ ವೈದ್ಯರೊಬ್ಬರು ನೀಡಿದ ಇಂಜೆಕ್ಷನ್ನಿಂದ ಒಂದು ಕಾಲು ಸಂಪೂರ್ಣ ಸ್ವಾಧೀನ ಕಳೆದುಕೊಂಡಿತು. ಮತ್ತೊಂದು ಕಾಲು ಕೊಂಚ ಬಲವಿದ್ದರೂ, ಇವರು ಜೀವನಪರ್ಯಂತದ ಅಂಗವೈಕಲ್ಯಕ್ಕೆ ತುತ್ತಾದರು.
ಬಡತನದಿಂದ ಭಿಕ್ಷಾಟನೆ
9ನೇ ತರಗತಿಯವರೆಗೆ ಶಿಕ್ಷಣ ಪಡೆದ ಪರಶುರಾಮ ಆ ಬಳಿಕ ಮನೆಯಲ್ಲಿ ಬಡತನವಿದ್ದರಿಂದ ಭಿಕ್ಷಾಟನೆಗಿಳಿದರು. ಆದರೆ ಭಿಕ್ಷೆ ಬೇಡುವ ಕಾಯಕ ಇವರಿಗೆ ಹಿಂಸೆಯೆನಿಸಿ ಒಬ್ಬರ ಮನೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ದುಡಿಯಲಾರಂಭಿಸಿದರು.
ಎಲ್ಲ ಸರಿ ಇದ್ದವರನ್ನೂ ಮೀರಿಸಿದ ಸಾಧಕ!
ಸರ್ಕಾರದ ಸ್ಕೀಮ್ ಒಂದರಲ್ಲಿ ದೊರೆತ ದ್ವಿಚಕ್ರ ವಾಹನದಿಂದ ಸ್ವಿಗ್ಗಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಲು ಆರಂಭಿಸಿದರು ಈ ಪರಶುರಾಮ್. ಈಗ ಅಂಗಾಂಗ ಸರಿ ಇದ್ದವರನ್ನೂ ಮೀರಿಸುವಂತೆ ದುಡಿದು ಸಾಧನೆ ಮಾಡುತ್ತಿದ್ದಾರೆ. ಇಂತಹ ಪರಶುರಾಮ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ.
ಇದನ್ನೂ ಓದಿ: Dharmasthala: 1,15,000 ಜನರಿಗೆ ಹೊಸ ಜೀವನ ನೀಡಿದ ಮಂಜುನಾಥ! ಇದು ಧರ್ಮಸ್ಥಳ ಮಹಿಮೆ!
ಒಟ್ಟಿನಲ್ಲಿ ಎಲ್ಲವೂ ಸರಿಯಿದ್ದು,ಏನನ್ನೂ ಸಾಧಿಸದಿದ್ದವರಿಗೆ ಪರಶುರಾಮ ಮಾದರಿಯಾಗಿದ್ದಾರೆ.
ಕ್ಯಾಮರಾಮ್ಯಾನ್ ನಿಖಿಲ್ ಸುವರ್ಣ ಜೊತೆ ಕಿಶನ್ ಶೆಟ್ಟಿ, ನ್ಯೂಸ್18 ಕನ್ನಡ ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ