ದಕ್ಷಿಣ ಕನ್ನಡ: ಎದೆಯೆತ್ತರಕ್ಕೆ ಬೆಳೆದಿರೋ ಪಪ್ಪಾಯಿ ಗಿಡಗಳು, ಗೊಂಚಲು ಗೊಂಚಲು ಆಗಿ ಫಲ ನೀಡಿರೋ ಅಡಿಕೆ ಮರ, ಮಾಗೋದಕ್ಕೆ ರೆಡಿ ಆಗಿರೋ ಸೀತಾಫಲ, ಮರದ ಮರೆಯಿಂದ ಇಣುಕೋ ತೆಂಗು. ಹೀಗೆ ಅದ್ಯಾವ ಕೃಷಿ ತೋಟಕ್ಕೂ ಕಡಿಮೆಯಿಲ್ಲದ ಜಮೀನಿದು. ಹಾಗಿದ್ರೆ ಇದು ಯಾವುದೋ ಕೃಷಿಕನಿಗೆ (Farmer) ಸೇರಿದ ತೋಟ ಅಂದ್ಕೊಂಡ್ರೆ ನಿಮ್ಮ ಊಹೆ ತಪ್ಪು. ಬದಲಿಗೆ ಇದು ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada News) ಶಾಲೆಯೊಂದರ ಕೃಷಿ ತೋಟ ಅಂದ್ರೆ ನೀವು ನಂಬ್ಲೇಬೇಕು.
ಒಂದೆರಡು ಗಿಡಗಳಿಂದ ಆರಂಭ
ಬಂಟ್ವಾಳ ಸಮೀಪದ ಪೆರ್ಲಾಪುವಿನ ಕಡೇಶಿವಾಲಯದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಅಂದ್ರೆ ನೆನಪಿಗೆ ಬರೋದು ಈ ನಳನಳಿಸುವ ಕೃಷಿ ತೋಟ. 201 ವಿದ್ಯಾರ್ಥಿಗಳು, 6 ಶಿಕ್ಷಕರಿರುವ ಈ ಶಾಲೆ ವಿಶಿಷ್ಟ ಕಾರಣವೊಂದಕ್ಕೆ ಭಾರೀ ಫೇಮಸ್. ನಿಜ, ಕೆಲ ವರ್ಷಗಳ ಹಿಂದೆ ಬರೀ ಒಂದೆರಡು ಗಿಡಗಳಿಂದ ಶುರುವಾದ ಕೃಷಿ ಚಟುವಟಿಕೆ ಇದೀಗ ಶಾಲಾ ಆವರಣದ ಕಾಲು ಭಾಗದಷ್ಟು ಆವರಿಸಿಕೊಂಡಿದೆ.
ವಿದ್ಯಾರ್ಥಿಗಳ ಶ್ರಮ
ಈ ಕೈತೋಟವನ್ನ ವಿದ್ಯಾರ್ಥಿಗಳೇ ಪರಿಶ್ರಮ ವಹಿಸಿ ನಿರ್ಮಿಸಿದ್ದು ಇನ್ನೊಂದು ವಿಶೇಷ. ಅಷ್ಟೇ ಅಲ್ದೇ, ಶಾಲಾ ಆವರಣದಲ್ಲಿ ಔಷಧಿ ವನ, ಬಾಳೆಗಿಡ, ಸೀತಾಫಲ, ಮುಳ್ಳುಹಣ್ಣು, ಮಾವು, ಪಪ್ಪಾಯ ಹೀಗೆ ನೂರಕ್ಕೂ ಹೆಚ್ಚು ಸಸ್ಯಗಳು ಇಲ್ಲಿವೆ. ಸುಮಾರು 60 ಅಡಿಕೆ ಮರ ಇಲ್ಲಿದ್ದು ಉತ್ತಮ ಫಲ ಕೊಡುತ್ತಿದೆ.
ದೈಹಿಕ ಶಿಕ್ಷಕರ ಕೃಷಿ ಪಾಠ
ಶಾಲೆಯ ದೈಹಿಕ ಶಿಕ್ಷಕರಾದ ಭಾಸ್ಕರ ನಾಯ್ಕ್ ಅವರ ಆಸಕ್ತಿಯಿಂದ ಶುರುವಾಗಿತ್ತು ಈ ಕೃಷಿ ತೋಟ. ನಂತರದ ದಿನಗಳಲ್ಲಿ ವಿದ್ಯಾರ್ಥಿಗಳ ಸಾಥ್ ಸಿಕ್ಕ ಬಳಿಕ ಕೃಷಿ ಚಟುವಟಿಕೆಗಳು ಹೆಚ್ಚಾಗಿವೆ. ಇದೀಗ ಭಾಸ್ಕರ್ ನಾಯ್ಕ್ ಅವರು ದೈಹಿಕ ಶಿಕ್ಷಣದ ಜೊತೆ ಜೊತೆಗೆ ಕೃಷಿಯನ್ನು ಕಲಿಸಿಕೊಡುತ್ತಿದ್ದಾರೆ.
ಸ್ಥಳೀಯರ ಸಹಕಾರ
ಇದಕ್ಕೆ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರ ಸಹಕಾರವೂ ಇದ್ದು, SDMC ಸೇರಿದಂತೆ ಊರವರ ಸಹಕಾರವೂ ಕಡಿಮೆಯೇನದ್ದಲ್ಲ. ಒಟ್ಟಿನಲ್ಲಿ ನಾಲ್ಕು ಗೋಡೆಗಳ ಸುತ್ತ ಕಲಿಯೋ ಪಾಠದ ಜೊತೆಗೆ ಪರಿಸರದ ಜೊತೆ ಬೆರೆತು ಫಸಲು ತೆಗೆಯುವ ಈ ಸರ್ಕಾರಿ ಶಾಲೆಯ ಪಾಠ ನಿಜಕ್ಕೂ ಮಾದರಿಯಾಗುವಂತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ