ದಕ್ಷಿಣ ಕನ್ನಡ: ಶ್ರೀಗಂಧ, ರುದ್ರಾಕ್ಷಿ, ಭದ್ರಾಕ್ಷಿ, ರಕ್ತ ಚಂದನ, ಹೊನ್ನೆ, ದರ್ಬೆ, ಬಜೆ, ಅಂಕೋಲೆ ಹೀಗೆ ಅಪರೂಪದಲ್ಲಿ ಅಪರೂಪ ಅನ್ನೋವಂತಹ ಮರಗಳ ಸಾಲು. ಕರಾವಳಿಯಲ್ಲಿ ಕಷ್ಟಪಟ್ಟರೂ ಬೆಳೆಯದು ಅನ್ನೋ ವೃಕ್ಷಗಳು (Tree). ಔಷಧೀಯ (medicinal) ಗಿಡಗಳಿಂದ (Plants) ಹಿಡಿದು ಆಧ್ಯಾತ್ಮದ ಸೆಳೆತವನ್ನ ಹುಟ್ಟುಹಾಕುವ ಮರಗಳು ಇಲ್ಲಿವೆ.
ಶೋಭೆ ಹೆಚ್ಚಿಸುವ ಶೋಭಾವನ
ಹೌದು, ಇದು ದಕ್ಷಿಣ ಕನ್ನಡದ ಮೂಡುಬಿದಿರೆಯ ಮಿಜಾರಿನ ಶೋಭಾವನ. ಐದು ಎಕರೆ ಜಾಗದಲ್ಲಿರುವ ಈ ವನದಲ್ಲಿ ನೂರಕ್ಕೂ ಅಧಿಕ ತಳಿಗಳು, ಸಾವಿರಕ್ಕೂ ಮಿಕ್ಕ ಮರಗಳಿವೆ. ಆಯುರ್ವೇದದಲ್ಲಿ ಹೇಳಲಾದ ಸಸ್ಯಗಳು, ರಾಶಿಗೆ ಮೀಸಲಿಟ್ಟ ಸಸ್ಯಗಳು, ಪೂಜೆಗೆಂದೇ ಇರುವ ಸಸ್ಯಗಳು ಎಲ್ಲ ಬಗೆಯ ಸಸ್ಯಗಳಿಲ್ಲಿ ಕಾಣ ಸಿಗುತ್ತೆ ಅನ್ನೋದು ಇಲ್ಲಿನ ವಿಶೇಷ.
ಅಪರೂಪದ ಗಿಡಗಳು
ಎಲ್ಲ ಸಸ್ಯಗಳಿಗೂ ಬೊಟಾನಿಕಲ್ ಹೆಸರುಗಳಿದ್ದು ಜೊತೆಗೆ ಸ್ಥಳೀಯ ಹಾಗೂ ಸಂಸ್ಕೃತದ ಹೆಸರುಗಳನ್ನ ಕೂಡ ಬರೆಯಲಾಗಿದೆ. ಇಲ್ಲಿರುವ ಸಸ್ಯಗಳಲ್ಲಿ ಬಹುತೇಕ ಪಶ್ಚಿಮಘಟ್ಟದಲ್ಲಿ ಕಾಣ ಸಿಗಬಲ್ಲ ವಿರಳ, ಅತಿ ವಿರಳ ಸಸ್ಯಗಳಾಗಿವೆ. ಕೆಲ ಸಸ್ಯಗಳು ಹಿಮಾಲಯದಂತಹ ಪರ್ವತ ಪ್ರದೇಶಗಳಲ್ಲಿ ಬೆಳೆಯುವಂತಹ ಸಸ್ಯಗಳಾಗಿವೆ.
ಉತ್ತಮ ಅಧ್ಯಯನ ಕೇಂದ್ರ
ಇನ್ನು ಈ ಶೋಭಾವನವೆಂದರೆ ಆಯುರ್ವೇದ, ಸಸ್ಯಶಾಸ್ತ್ರದ ವಿದ್ಯಾರ್ಥಿಗಳಿಗೆ ಅಧ್ಯಯನದ ವನವೂ ಆಗಿದೆ. ಆಳ್ವಾಸ್ ನ ಮಿಜಾರ್ ಕ್ಯಾಂಪಸ್ನಲ್ಲಿ ಕಂಡು ಬರುವ ಈ ಉದ್ಯಾನವನದಲ್ಲಿ ಆಧ್ಯಾತ್ಮಕ್ಕೆ ಸಂಬಂಧಿಸಿದ ಸಸ್ಯಗಳೂ ಅಧಿಕ ಪ್ರಮಾಣದಲ್ಲಿದ್ದು, ಸತ್ಯನಾರಾಯಣನ ಪೂಜೆ, ನವಗ್ರಹಕ್ಕೆ ಸಂಬಂಧಿಸಿದ್ದಲ್ಲದೇ ಗಣಪತಿ, ಈಶ್ವರನಿಗೆ ಸಂಬಂಧಿಸಿದ ಗಿಡಗಳೂ ಇಲ್ಲಿವೆ. ಒಟ್ಟಿನಲ್ಲಿ ಸಸ್ಯ ಪರಿಚಯದ ಜೊತೆ ಜೊತೆಗೆ ಅಳಿವಿನಂಚಿನಲ್ಲಿರುವ ಸಸ್ಯಗಳ ಉಳಿಸುವ ಪ್ರಯತ್ನವೂ ಈ ಶೋಭಾವನದಲ್ಲಿ ಸಾಗಿ ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ