ದಕ್ಷಿಣ ಕನ್ನಡ: ಸರ್ಕಾರಿ ಭೂಮಿ, ಕೆರೆ ಸೇರಿ ಸಾರ್ವಜನಿಕ ಸ್ಥಳಗಳ ಒತ್ತುವರಿ ಆದ ಸುದ್ದಿಗಳನ್ನ ನೀವು ಆಗಾಗ ಕೇಳ್ತಿರ್ತೀರಿ. ಈ ಒತ್ತುವರಿಯ (Lake Occupancy) ಹಿಂದೆ ಸ್ಥಳೀಯ ಪ್ರಭಾವಿಗಳ ಹೆಸರೂ ಕೇಳಿಬರೋದೂ ಇತ್ತೀಚಿಗೆ ಕಾಮನ್. ಆದರೆ ಇಲ್ಲೊಂದು ಪಂಚಾಯತ್ ಆಡಳಿತ (Grama Panchayat) ತನ್ನ ವ್ಯಾಪ್ತಿಯಲ್ಲಿನ ಒತ್ತುವರಿಯನ್ನು ತಡೆಯಲು ಹರಸಾಹಸಪಡುತ್ತಿದೆ.
ಹೌದು, ಇದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರು ಗ್ರಾಮ ಪಂಚಾಯತ್ ಕರೆ ಉಳಿಸುವ ಪ್ರಯತ್ನದ ಕಥೆ. ಪಂಚಾಯತ್ ವ್ಯಾಪ್ತಿಯ ಪೊಸರು ಎನ್ನುವ ಪ್ರದೇಶದಲ್ಲಿ ಸುಮಾರು 3.24 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಸರ್ಕಾರಿ ಕೆರೆಯೊಂದನ್ನು ಸ್ಥಳೀಯ ಕೆಲವು ನಿವಾಸಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಕೆಂಚಿಕಾರ ಕೆರೆ ಎಂದು ಗುರುತಿಸಿಕೊಂಡಿರುವ ಈ ಕರೆಗಾಗಿ ಇದೀಗ ಗ್ರಾಮ ಪಂಚಾಯತ್ನ ಎಲ್ಲಾ ಸದಸ್ಯರು ಪಕ್ಷಬೇಧ ಮರೆತು ಒಟ್ಟಾಗಿದ್ದಾರೆ.
ಸ್ಥಳೀಯರು ವಿರುದ್ಧ ಟೊಂಕ ಕಟ್ಟಿ ನಿಂತ ಸದಸ್ಯರು
21 ಸದಸ್ಯ ಬಲವಿರುವ ಸವಣೂರು ಗ್ರಾಮ ಪಂಚಾಯತ್ನ ಎಲ್ಲಾ ಸದಸ್ಯರು ಈ ಕೆರೆ ಒತ್ತುವರಿಯನ್ನು ತಡೆಯಲು ಟೊಂಕ ಕಟ್ಟಿ ನಿಂತಿದ್ದಾರೆ. ಈ ನಡುವೆ ಕಂದಾಯ ಅಧಿಕಾರಿಗಳು ಕೇವಲ 1.30 ಎಕರೆ ಪ್ರದೇಶದಲ್ಲಿ ಮಾತ್ರ ಕೆರೆ ಇರುವುದು ಎನ್ನುವ ದಾಖಲೆಯನ್ನು ಸಿದ್ಧಪಡಿಸಿದ್ದಾರೆ. ಉಳಿದ ಜಮೀನನ್ನು ಸ್ಥಳೀಯರು ಕಬಳಿಕೆ ಮಾಡಿರುವ ಬಗ್ಗೆ ಮಾಹಿತಿಯನ್ನು ಗ್ರಾಮ ಪಂಚಾಯತ್ ಆಡಳಿತಕ್ಕೆ ನೀಡಿದ್ದಾರೆ.
ಪಂಚಾಯತ್ ಸುಪರ್ದಿಗೆ ನೀಡಲು ಆಗ್ರಹ
ಇದರಿಂದ ಪಂಚಾಯತ್ ಅಧ್ಯಕ್ಷರು ಸೇರಿದಂತೆ ಎಲಾ ಸದಸ್ಯರು ಆಕ್ರೋಶಗೊಂಡಿದ್ದಾರೆ. ಕಡಬ ತಹಶೀಲ್ದಾರರನ್ನು ಸಂಪರ್ಕಿಸಿ ಈ ಹಿಂದೆ ಇದ್ದಂತೆ 3.24 ಎಕರೆ ಪ್ರದೇಶವನ್ನು ಕೆರೆ ಮತ್ತು ಕೆರೆ ಪರಂಬೋಕು ಎಂದು ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ. ಆ ಜಾಗವನ್ನು ಪಂಚಾಯತ್ ಸುಪರ್ದಿಗೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಕ್ರಮವನ್ನು ಅಧಿಕಾರಿಗಳು ಕೈಗೊಳ್ಳದ ಹಿನ್ನಲೆಯಲ್ಲಿ ಪಂಚಾಯತ್ ಸದಸ್ಯರು ತನ್ನದೇ ಆದ ರೀತಿಯಲ್ಲಿ ಅಧಿಕಾರಿಗಳ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದಾರೆ.
ಇದನ್ನು ಓದಿ: Mangaluru Parashuram: ಇವರ ಜೀವನವೇ ಸ್ಪೂರ್ತಿ! ಕಷ್ಟಕ್ಕೆ ಹೆದರದ ಛಲದಂಕಮಲ್ಲ ಸ್ವಿಗ್ಗಿ ಡೆಲಿವರಿ ಬಾಯ್ ಮಂಗಳೂರಿನ ಪರಶುರಾಮ!
ಕೆರೆ ಒತ್ತುವರಿ ವಿಚಾರವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿರುವ ಗ್ರಾಮ ಪಂಚಾಯತ್ ಆಡಳಿತಕ್ಕೆ ಕರೆ ಒತ್ತುವರಿಯನ್ನು ತೆರವುಗೊಳಿಸುವ ಭರವಸೆಯನ್ನು ಜಿಲ್ಲಾಧಿಕಾರಿ ನೀಡಿದ್ದರು. ಆದರೆ ಈ ಒತ್ತುವರಿ ಕೆಲಸ ಮಾತ್ರ ಈವರೆಗೂ ನಡೆದಿಲ್ಲ. ಕೆರೆ ಒತ್ತವರಿ ಮಾಡಿರುವ ವ್ಯಕ್ತಿಗಳು ಕರೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನೂ ಒತ್ತುವರಿ ಮಾಡಿದ್ದು, ಕಂದಾಯ ಇಲಾಖೆ ಗುರುತಿಸಿರುವ ಕೆರೆಗೆ ಸಂಪರ್ಕ ಕಲ್ಪಿಸಲು ಬೇರೆ ದಾರಿಯೂ ಇಲ್ಲದಂತಾಗಿದೆ.
ಹೆಲಿಕಾಪ್ಟರ್ ಮೂಲಕವೇ ಕೆರೆಗೆ ತಲುಪಿ ಅದರ ಅಭಿವೃದ್ಧಿ ಮಾಡಬೇಕಾದ ಹಂತದವರೆಗೆ ಇಲ್ಲಿ ಒತ್ತುವರಿ ನಡೆದಿದೆ ಎನ್ನುವುದು ಗ್ರಾಮ ಪಂಚಾಯತ್ ಸದಸ್ಯರ ಆರೋಪ. ಕೆರೆ ಒತ್ತುವರಿ ವಿರುದ್ಧ ಕ್ರಮ ಆಗದಿದ್ದರೆ ಈ ಪಂಚಾಯತ್ನ ಎಲ್ಲಾ ಸದಸ್ಯರು ತಮ್ಮ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆ ನೀಡಲು ತೀರ್ಮಾನಿದ್ದಾರೆ.
ವರದಿ: ಅಜಿತ್, ನ್ಯೂಸ್ 18 ಪುತ್ತೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ