ದಕ್ಷಿಣ ಕನ್ನಡ: ದೈವದ ಭಂಡಾರ ಹೊತ್ತ ಪಲ್ಲಕ್ಕಿಯನ್ನ ಹೊತ್ತು ಸಾಗುತ್ತಿರುವ ಪರಿಚಾರಕರು, ಪಲ್ಲಕ್ಕಿ ಹಿಡಿದ ಭಕ್ತರನ್ನೇ ಅತ್ತಿಂದಿತ್ತ ಎಳೆದೊಯ್ಯುತ್ತಿರುವ ನಿಗೂಢ ಶಕ್ತಿ. ದೈವದ ಕಾರ್ಣಿಕವನ್ನು ಕಣ್ತುಂಬಿಕೊಂಡು ಭಕ್ತಿ ಪರವಶತೆಯಲ್ಲಿ ಮುಳುಗಿರುವ ಭಕ್ತ ಸಾಗರ. ಇದು ತುಳುನಾಡಿನ (Tulu Nadu) ಆರಾಧ್ಯದೈವ ಅರಸು ಕುಂಜಿರಾಯ ಉತ್ಸವದ (Arasu Kunjiraya Daiva) ವೇಳೆ ಕಂಡುಬರೋ ಕಾರ್ಣಿಕದ ಸನ್ನಿವೇಶ.
ಸಾಮಾನ್ಯವಾಗಿ ಉತ್ಸವದ ವೇಳೆ ದೈವ ದೇವರುಗಳ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ಹೊತ್ತೊಯ್ಯುವುದು ಸಹಜ. ಆದರೆ ಮಂಗಳೂರಿನ ಕಿನ್ನಿಗೋಳಿ ಸಮೀಪದ ಅತ್ತೂರಿನಲ್ಲಿ ನಡೆಯುವ ಅರಸು ಕುಂಜಿರಾಯ ದೈವದ ಜಾತ್ರಾ ಮಹೋತ್ಸವ ತುಂಬಾನೇ ಡಿಫರೆಂಟ್.
ಪಲ್ಲಕ್ಕಿಯಲ್ಲಿ ಜಾರಂತಾಯ ಬಂಟ ದೈವದ ಮುಖವಾಡ
ಈ ಕ್ಷೇತ್ರಕ್ಕೆ ಸಂಬಂಧಪಟ್ಟ ಜಾರಂತಾಯ ಬಂಟ ದೈವದ ಮುಖವಾಡವನ್ನು ಪಲ್ಲಕ್ಕಿಯಲ್ಲಿಟ್ಟು ಸುಮಾರು ಮೂರು ಕಿಲೋ ಮೀಟರ್ ನಡೆದು ಬರುವ ಸನ್ನಿವೇಶವನ್ನು ನೋಡಲೆಂದೇ ಊರ ಪರವೂರಿನ ಮಂದಿ ಕಿಕ್ಕಿರಿದು ಸೇರುತ್ತಾರೆ. ಇಲ್ಲಿ ಪಲ್ಲಕ್ಕಿಯನ್ನು ಸುಮಾರು ಇಪ್ಪತ್ತರಷ್ಟು ಯುವಕರು ಹೊತ್ತು ಬರುತ್ತಾರೆ. ಆ ವೇಳೆಗೆ ಜಾರಂತಾಯ ದೈವದ ಮುಗ ಹೊತ್ತ ಆ ಪಲ್ಲಕ್ಕಿ ಆವೇಶಕ್ಕೊಳಗಾಗಿ ತನ್ನನ್ನು ಹೊತ್ತಿರೋ ಆಳುಗಳನ್ನೇ ಎಳೆದಾಡಲು ಆರಂಭಿಸುತ್ತದೆ.
ಪಲ್ಲಕ್ಕಿಯಿಂದ ಹೊರಗೆ ಹಾರುತ್ತಂತೆ ಮುಖವಾಡ
ಪಲ್ಲಕ್ಕಿಯನ್ನು ಹೊತ್ತ ಸುಮಾರು 20 ಮಂದಿಗೂ ಆ ಪಲ್ಲಕ್ಕಿಯ ಆರ್ಭಟವನ್ನು ತಡೆಯಲಾಗೋದಿಲ್ಲ. ಮುಂದೆ ಹೋಗಲೆಂದು ತಂಡದ ಯುವಕರು ಪ್ರಯತ್ನಿಸಿದರೆ ಪಲ್ಲಕ್ಕಿ ತನ್ನಿಂದ ತಾನೇ ಹಿಂದಕ್ಕೆ ಹೋಗುತ್ತದೆ. ಬಳಿಕ ಪ್ರಯತ್ನಿಸಿ ಮುಂದೆ ಹೋದರೆ ಮತ್ತೆ ಎಡಕ್ಕೆ, ಬಲಕ್ಕೆ ಪಲ್ಲಕ್ಕಿ ಸಾಗುತ್ತದೆ. ಪಲ್ಲಕ್ಕಿಯ ಒಳಗಿರುವ ಜಾರಂದಾಯ-ಬಂಟ ದೈವದ ಮುಖವಾಡ ಪಲ್ಲಕ್ಕಿಯಿಂದ ಹೊರಗೆ ಹಾರಲು ಯತ್ನಿಸುತ್ತದೆಯಂತೆ. ಈ ವೇಳೆ ಪಲ್ಲಕ್ಕಿಯನ್ನು ಹಿಡಿದಿರುವ ಯುವಕರು ಶತ ಪ್ರಯತ್ನದಿಂದ ಪಲ್ಲಕ್ಕಿಯೊಳಗಿರುವ ಮುಖವಾಡ ಬೀಳದಂತೆ ಮುಂದಕ್ಕೆ ಸಾಗಲು ಪ್ರಯತ್ನಿಸುತ್ತಾರೆ.
ಸತತ 3 ಗಂಟೆಗಳ ಪ್ರಯತ್ನ!
ಸುಮಾರು 3 ಗಂಟೆ ಸತತ ಪ್ರಯತ್ನದ ಬಳಿಕ ಮುಖವಾಡವನ್ನು ಹೊತ್ತು ತಂದ ಪಲ್ಲಕ್ಕಿ ದೈವಸ್ಥಾನದ ಒಳಗೆ ಸೇರುತ್ತದೆ. ಇದನ್ನು ದೈವಸ್ಥಾನದ ಒಳಗೆ ತರೋದೇ ದೈವ ಶಕ್ತಿ ಅನ್ನೋದು ನಂಬಿಕೆ.
ಇದನ್ನೂ ಓದಿ: Dakshina Kannada: 4,33,333 ರೂಪಾಯಿಗೆ ಹರಾಜಾದ ಒಂದು ಹಲಸಿನ ಹಣ್ಣು!
ಈ ಪಲ್ಲಕ್ಕಿಯನ್ನು ಹೊತ್ತು ತರುವ ಯುವಕರ ತಂಡ ಸುಮಾರು 15 ದಿನಗಳ ಕಾಲ ಸಸ್ಯಾಹಾರದಿಂದ ಇರುತ್ತೆ. ಮೂರು ದಿನಗಳ ಕಾಲ ಒಪ್ಪೊತ್ತಿನ ಊಟ ಮಾಡಿ ಶುಚಿಯಾಗಿದ್ದು ಪಲ್ಲಕ್ಕಿ ಹೊರುವ ದಿನ ಸಮುದ್ರ ಸ್ನಾನ ಮಾಡಿ ದೈವಸ್ಥಾನಕ್ಕೆ ಆಗಮಿಸುತ್ತಾರೆ.
ಇಷ್ಟು ಭಾರವಾದ ಹಾಗೂ ಆವೇಶ ಭರಿತ ಪಲ್ಲಕ್ಕಿಯನ್ನು ಹೊರುವವರ ಹೆಗಲಿನ ಸಿಪ್ಪೆಗಳು ಹೋದರೂ ದೈವೀ ಕಾರ್ಣಿಕದಿಂದ ಯಾವುದೇ ನೋವು, ಆಯಾಸ ಆಗೋದಿಲ್ಲ. ಪಲ್ಲಕ್ಕಿ ರಭಸದಿಂದ ಸುತ್ತಾಡಿದರೂ ಇಂದಿಗೂ ಓರ್ವನಿಗೂ ಯಾವುದೇ ಗಾಯಗಳಾಗಿಲ್ಲ ಅನ್ನೋದು ವಿಶೇಷ. ಇದೆಲ್ಲವೂ ದೈವಗಳ ಕಾರಣೀಕ ಅನ್ನೋದು ಪಲ್ಲಕ್ಕಿ ಹೊರುವವರ ಭಕ್ತಿಯ ಮಾತು.
ಇದನ್ನೂ ಓದಿ: Dakshina Kannada: ಶಿವ-ಪಾರ್ವತಿಯರು ಹುಲಿಯಾದ ಕಥೆ, ಕಳಿಯಾಟದ ವೈಭವ!
ಅರಸು ಕುಂಜಿರಾಯ ದೈವವು ತುಳುನಾಡಿನ ಜನರ ಆರಾಧ್ಯ ದೈವ. ಅರಸನಾಗಿ ಮೆರೆದಿದ್ದ ಕುಂಜಿರಾಯನೇ ದೈವವಾಗಿ ಈಗಲೂ ನಮ್ಮೆಲ್ಲರನ್ನು ಹರಸುತ್ತಿದ್ದಾನೆ ಅನ್ನೋದು ಈ ಭಾಗದ ಮಂದಿಯ ನಂಬಿಕೆ. ಹೀಗಾಗಿಯೇ ಅರಸು ದೈವಕ್ಕೆ ಪ್ರಿಯವಾದ ಜಾರಂದಾಯ ದೈವ ಅರಸು ಕ್ಷೇತ್ರಕ್ಕೆ ಬರುವಾಗ ತನ್ನ ಆರ್ಭಟವನ್ನು ತೋರಿಸುತ್ತಾನೆ ಅನ್ನೋದು ಇಲ್ಲಿನ ಜನರ ನಂಬಿಕೆ. ಒಟ್ಟಿನಲ್ಲಿ ವಿಜ್ಞಾನಕ್ಕೆ ಸವಾಲಾಗಿರುವ ಈ ಪಲ್ಲಕ್ಕಿ ಪವಾಡ ಇಂದಿನ ಕಾಲದಲ್ಲೂ ನಡೆಯುತ್ತಲ್ಲ ಅನ್ನೋದೇ ವಿಶೇಷ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ