ದಕ್ಷಿಣ ಕನ್ನಡ: ಎಲ್ಲಿ ನೋಡಿದ್ರಲ್ಲಿ ಪುಟ್ಟ ಪುಟ್ಟದಾಗಿ ಕಂಗೊಳಿಸೋ ಅಣಬೆ. ಇದನ್ನೇ ನಂಬಿ ಬದುಕು ಕಟ್ಟಿಕೊಂಡ ಕೃಷಿಕ. ಲಾಕ್ಡೌನ್ನಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭಿಸಿದ ಮಶ್ರೂಮ್ ಕೃಷಿಯು (Mushroom Farming) ಇದೀಗ ಕೃಷಿಕನ ಬದುಕನ್ನೇ (Success Story) ಹಸನಾಗಿಸಿದೆ.
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮ ಪಂಚಾಯತ್ನ ನವಗ್ರಾಮದ ಮಹಮ್ಮದ್ ರಝಾಕ್. ಇದ್ದ ಅಲ್ಪಸ್ವಲ್ಪ ಮಾಹಿತಿಯಿಂದ ಆರಂಭವಾದ ಅಣಬೆ ಕೃಷಿ ಇದೀಗ ರಝಾಕ್ ಅವರ ಕುಟುಂಬಕ್ಕೆ ದಾರಿಯಾಗಿದೆ.
ಆಸರೆಯಾಯ್ತು ಪುಟ್ಟ ಅಣಬೆ!
ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಬದುಕು ಸಾಗಿಸುವುದೇ ಕಷ್ಟ ಎಂದು ಕಂಗಾಲಾಗಿದ್ದ ಆ ಕುಟುಂಬಕ್ಕೆ ಜೀವನ ನಿರ್ವಹಣೆಗೆ ಆಸರೆಯಾಗಿದ್ದು ಅಣಬೆ ಬೆಳೆ. ಸಣ್ಣ ಪ್ರಮಾಣದಲ್ಲಿ ಆಯಿಸ್ಟರ್ ಅಣಬೆಯನ್ನು ಆರಂಭಿಸಿದ ಈ ಕುಟುಂಬ ಇದೀಗ ದೊಡ್ಡ ಮಟ್ಟದಲ್ಲಿ ಅಣಬೆ ಬೆಳೆಸುವ ಮೂಲಕ ಉತ್ತಮ ಲಾಭ ಗಳಿಸುತ್ತಿದೆ.
ಯಶಸ್ಸು ಸಿಕ್ಕಿದ್ದು ಹೇಗೆ?
ಮಹಮ್ಮದ್ ರಝಾಕ್ ಮಾಡುತ್ತಿದ್ದ ಸಣ್ಣಪುಟ್ಟ ವ್ಯವಹಾರಗಳು ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಬಂದ್ ಆದಾಗ ಬದುಕು ಕಟ್ಟಿಕೊಳ್ಳಲು ಪರದಾಡಬೇಕಾದ ಸ್ಥಿತಿ ಬಂದಿತ್ತು. ಆ ಸಮಯದಲ್ಲಿ ಅವರಲ್ಲಿ ಅಣಬೆ ಬೆಳೆ ಬೆಳೆಯುವ ಯೋಚನೆ ಮೂಡಿತ್ತು. ಕೃಷಿ ಮತ್ತು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ ಅಣಬೆ ಕೃಷಿಯ ಮಾಹಿತಿ ಪಡೆದುಕೊಂಡ ರಝಾಕ್ಗೆ ಮುಡಿಪುವಿನ ಜನಶಿಕ್ಷಣ ಟ್ರಸ್ಟ್ ಇತರ ಮಾಹಿತಿಗಳನ್ನು ನೀಡುವ ಮೂಲಕ ರಝಾಕ್ರನ್ನು ಓರ್ವ ಯಶಸ್ವಿ ಅಣಬೆ ಕೃಷಿಕನನ್ನಾಗಿ ರೂಪಿಸಿತು.
ರಬ್ಬರ್ ಮರದ ಹುಡಿ ಬಳಸಿ ಅಣಬೆ ಕೃಷಿ!
ಹೆಚ್ಚಾಗಿ ಅಣಬೆಯನ್ನು ಬೈ ಹುಲ್ಲು ಬಳಸಿ ಬೆಳೆಸಲಾಗುತ್ತೆ. ಆದರೆ ರಝಾಕ್ ಅವರು ಮಾತ್ರ ಹಾಲು ಬರುವ ರಬ್ಬರ್ ಮರದ ಹುಡಿಯನ್ನು ಬಳಸಿ ಅಣಬೆ ಕೃಷಿ ಮಾಡುತ್ತಿದ್ದಾರೆ. ಒಮ್ಮೆ ತಯಾರಿಸಿದ ಮರದ ಹುಡಿಯ ಬೆಡ್ನಲ್ಲಿ ಮೂರು ತಿಂಗಳಿಗೂ ಅಧಿಕ ಸಮಯದವರೆಗೆ ಇಳುವರಿ ಪಡೆಯಬಹುದಾಗಿದೆ.
ಅತ್ಯಂತ ಹೆಚ್ಚಿನ ಪ್ರಮಾಣದ ಪೌಷ್ಟಿಕಾಂಶಗಳನ್ನು ಹೊಂದಿರುವ ಅಣಬೆಯನ್ನು ಯಾವುದೇ ರಾಸಾಯನಿಕವನ್ನು ಬಳಸದೆ ರಝಾಕ್ ಅವರ ಕುಟುಂಬ ಬೆಳೆಯುತ್ತಿದೆ. ಸಕ್ಕರೆ ಕಾಯಿಲೆ ಸೇರಿದಂತೆ ಹಲವು ರೋಗಗಳನ್ನು ನಿಯಂತ್ರಣದಲ್ಲಿಡುವ ಸಾಮರ್ಥ್ಯವೂ ಈ ಅಣಬೆಯಲ್ಲಿದೆ. ಹೀಗಾಗಿ ಜನರು ಕೂಡಾ ಮಶ್ರೂಂ ಕಾಣುತ್ತಿದ್ದಂತೆ ಖರೀದಿಗೆ ಮುಂದಾಗುತ್ತಾರೆ.
ಇದನ್ನೂ ಓದಿ: Tree Bike In Dakshina Kannada: ಅಡಿಕೆ, ತೆಂಗು ಮಾತ್ರವಲ್ಲ, ಈ ಯಂತ್ರದಿಂದ ಸಲೀಸಾಗಿ ಎಲ್ಲಾ ಮರ ಏರಬಹುದು!
ಮಾರುಕಟ್ಟೆಯಲ್ಲಿ ಕಿಲೋವೊಂದಕ್ಕೆ 400 ರೂಪಾಯಿಗೆ ದೊರೆಯುವ ಅಣಬೆಯನ್ನು ಒಣಗಿಸಿ ಮಾರಾಟ ಮಾಡಲೂ ಸಾಧ್ಯವಿದೆ. ಹೀಗೆ ಒಣಗಿಸಿದ ಅಣಬೆಗೆ ಹೆಚ್ಚಿನ ಬೆಲೆಯಿದೆ. ಹೀಗಾಗಿ ಮಹಮ್ಮದ್ ರಝಾಕ್ ಹಸಿ ಅಣಬೆಗಳ ಪ್ಯಾಕ್ ಮಾಡಿ 60 ರೂಪಾಯಿಯಂತೆ ಮಾರಾಟ ಮಾಡುತ್ತಿದ್ದಾರೆ.
ಇದನ್ನೂ ಓದಿ: Dakshina Kannada: ಒಂದೇ ಎಕರೆಯಲ್ಲಿ 30 ವಿಧದ 60 ಹಲಸಿನ ಮರಗಳನ್ನು ಬೆಳೆದ ವಿಟ್ಲದ ಕೃಷಿಕ!
ಇಷ್ಟೆ ಅಲ್ಲ, ರಝಾಕ್ ಅವರು ಆಸಕ್ತರಿಗೆ ಅಣಬೆ ಬೆಳೆಯುವ ಕುರಿತು ಮಾಹಿತಿಯನ್ನೂ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಕೊರೊನಾ ಲಾಕ್ಡೌನ್ನಲ್ಲಿ ಆರಂಭವಾದ ಮಶ್ರೂಂ ಕೃಷಿ ಕೃಷಿಕನೋರ್ವನ ಬದುಕು ಬೆಳಗಿದೆ.
ವರದಿ: ನ್ಯೂಸ್ 18,ಪುತ್ತೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ