ದಕ್ಷಿಣ ಕನ್ನಡ: ಅಡಿಕೆ, ತೆಂಗು, ಸಿಲ್ವರ್ ಮರ,ಮಾವಿನ ಮರ ಹಲಸಿನ ಮರ ಯಾವ್ದೇ ಇರ್ಲಿ, ಚಕ್ ಚಕಾಂತ ಏರ್ತಾರಿವ್ರು. ಮರ ಏರಿ (Tree Bike In Dakshina Kannada) ಮಾಡುವ ಕೆಲಸ ಏನೇ ಇದ್ರೂ ತಲೆಬಿಸಿಯೇ ಇಲ್ಲ, ಕ್ಷಣಮಾತ್ರದಲ್ಲಿ ಮುಗಿತು ಅಂತರ್ಥ! ಇಂಥದ್ದೊಂದು ಅದ್ಭುತ ಕೃಷಿ ಯಂತ್ರವೊಂದನ್ನು (Tree Bike) ತಯಾರಿಸಿದ್ದಾರೆ ಬಂಟ್ವಾಳದ (Bantwal) ಕೃಷಿಕ.
ಕೊರೊನಾ ನಂತರ ಪೇಟೆಯಲ್ಲಿ ಆಳಾಗಿ ಇರುವ ಬದಲು ಊರಿಗೆ ಹೋಗಿ ಕೃಷಿ ಮಾಡಿ ದೊರೆಯಾಗಿ ಬದುಕುತ್ತೇನೆ ಅಂತಿದ್ದಾರೆ ಯುವಕರು. ಆದರೆ ಕೃಷಿ ಮಾಡಲು ಕೂಲಿಯಾಳುಗಳ ಸಮಸ್ಯೆಯಿಂದ ಮತ್ತೆ ನಗರದ ಕಡೆ ಮುಖ ಮಾಡುತ್ತಾರೆ. ಈ ಸಮಸ್ಯೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೃಷಿಕರೋರ್ವರು ಬಗೆಹರಿಸಿದ್ದಾರೆ.
ಯಾವ ಮರ ಇದ್ರೂ ಸೈ!
ಯಂತ್ರದ ಮೇಲೆ ಕೂತು ಸಲೀಸನೇ ಮರ ಏರುತ್ತಿರುವ ಈ ಕೃಷಿಕನನ್ನೊಮ್ಮೆ ನೋಡಿ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೋಮಲೆ ಗಣಪತಿ ಭಟ್ ಆವಿಷ್ಕರಿಸಿದ ಈ ಯಂತ್ರಕ್ಕೆ ಈಗ ದಕ್ಷಿಣ ಭಾರತದಾದ್ಯಂತ ಬೇಡಿಕೆ ಬಂದಿದೆ. ಮೊದಲು ಅಡಿಕೆ ಮಾತ್ರ ಏರುವ ಯಂತ್ರ ಅವಿಷ್ಕರಿಸಿದ ಗಣಪತಿ ಭಟ್ ಈಗ ಎಲ್ಲಾ ಮರವೇರುವ ವಿನೂತನ ಯಂತ್ರ ಆವಿಷ್ಕಾರ ಮಾಡಿದ್ದಾರೆ. ಅಂಕು-ಡೊಂಕು ಮರವಿದ್ದರೂ ಯಾವುದೇ ಅಡೆತಡೆಯಿಲ್ಲದೇ ಮರದ ತುದಿ ತಲುಪುತ್ತೆ ಈ ಯಂತ್ರ!
ಒಂದು ಲೀಟರ್ ಪೆಟ್ರೋಲ್ ಇದ್ದರೆ 80 ಮರ ಏರಬಹುದು!
ತೆಂಗು, ಅಡಿಕೆ, ಸಿಲ್ವರ್ ಮರ, ಮಾವಿನ ಮರ, ಹಲಸಿನ ಮರ ಸೇರಿದಂತೆ ಎಲ್ಲಾ ಮರಗಳನ್ನು ಈ ಟ್ರೀ ಬೈಕ್ ಬಳಸಿ ಏರಬಹುದಾಗಿದೆ. ಮರದಲ್ಲೇ ಯಂತ್ರ ಸುತ್ತಲೂ ತಿರುಗಲಿದೆ. ಒಂದು ಲೀಟರ್ ಪೆಟ್ರೋಲ್ ಗೆ 80 ಮರಗಳನ್ನು ಈ ಯಂತ್ರದಿಂದ ಏರಬಹುದಾಗಿದೆ. 45 ಕೆಜಿ ಭಾರವಿರುವ ಟ್ರೀ ಬೈಕ್ನ್ನು ಟ್ರಾಲಿ ಮೂಲಕ ಆರಾಮಾಗಿ ಒಯ್ಯಬಹುದಾಗಿದೆ. ತೆಂಗಿನ ಮರದಲ್ಲಿ ಈ ಯಂತ್ರದ ಮೇಲೆ ನಿಂತು ಕಾಯಿ ಕೀಳಬಹುದಾಗಿದೆ. ಸುರಕ್ಷತಾ ಗುಣಮಟ್ಟವನ್ನು ಹೊಂದಿರುವ ಈ ಯಂತ್ರದ ಪರೀಕ್ಷಾ ಪ್ರಯತ್ನವನ್ನು ಸ್ವತಃ ಮರದ ಮೇಲೆ ನಿಂತು ಗಣಪತಿ ಭಟ್ ಅವರೇ ಮಾಡಿ ತೋರಿಸಿದ್ದಾರೆ.
ಈ ಸಖತ್ ಯಂತ್ರದ ದರವೆಷ್ಟು?
ಈ ಟ್ರೀ ಬೈಕ್ಗೆ ಈಗ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಬೇಡಿಕೆ ಬಂದಿದೆ. ಐದರಿಂದ ಹದಿನೈದು ಇಂಚು ದಪ್ಪದ ಮರವನ್ನು ಏರಬಹುದಾಗಿದ್ದು ಸದ್ಯ ಈ ಯಂತ್ರಕ್ಕೆ ಕರ್ನಾಟಕ ಮಾರುಕಟ್ಟೆಯಲ್ಲಿ ಒಂದು ಲಕ್ಷದ ಐವತ್ತೈದು ಸಾವಿರ ರೂಪಾಯಿ ದರವಿದೆ.
ಇದನ್ನೂ ಓದಿ: Dr Veerendra Heggade: ಪುಟ್ಟ ಬಾಲಕನ ಜೊತೆ ವೀರೇಂದ್ರ ಹೆಗ್ಗಡೆಯವರ ಕ್ರಿಕೆಟ್ ಆಟ! ವೈರಲ್ ವಿಡಿಯೋ ನೋಡಿ
ಸರ್ಕಾರದಿಂದ ಸಿಗುತ್ತೆ ಸಬ್ಸಿಡಿ!
ಕರ್ನಾಟಕ ಸರ್ಕಾರದ ಈ ಯಂತ್ರ ಖರೀದಿಸುವ ರೈತರಿಗೆ 43 ಸಾವಿರ ರೂಪಾಯಿ ಸಬ್ಸಿಡಿ ನೀಡಲಿದೆ. ಹೀಗಾಗಿ ಈ ಯಂತ್ರ ಒಂದು ಲಕ್ಷದ ಹನ್ನೆರಡು ಸಾವಿರಕ್ಕೆ ಕೃಷಿಕರ ಕೈ ಸೇರಲಿದೆ. ಈ ಯಂತ್ರ ಬಳಸಿದರೆ ಕೃಷಿ ಕೆಲಸ ನಿರಾತಂಕ ಅಂತಾರೆ ಈ ಯಂತ್ರದ ಮಾರ್ಕೆಟಿಂಗ್ ಮಾಡುತ್ತಿರುವ ಇಂಜಿನಿಯರ್ ಶೆರ್ವಿನ್.
ಇದನ್ನೂ ಓದಿ: Ujire Ajji Hotel: ಧರ್ಮಸ್ಥಳ ಮಂಜುನಾಥನ ದರ್ಶನ ಆದ್ಮೇಲೆ ಭಕ್ತರು ವಿಸಿಟ್ ಹಾಕುವ ಅಜ್ಜಿ ಹೋಟೆಲ್!
ಒಟ್ಟಿನಲ್ಲಿ ಕೃಷಿ ಮಾಡಲು ಕೆಲಸದಾಳು ಸಮಸ್ಯೆ ಎಂದು ಕೃಷಿಯಿಂದ ಹಿಂಜರಿಯುವ ಯುವ ಕೃಷಿಕರಿಗೆ ಈ ಟ್ರೀ ಬೈಕ್ ನೆರವಾಗಲಿದೆ. ಒಬ್ಬ ಸಹಾಯಕನೊಂದಿಗೆ ಇಡೀ ತೋಟದ ಕೆಲಸವನ್ನು ಮಾಲೀಕನೇ ಮಾಡಬಹುದು ಎನ್ನೋದು ಟ್ರೀ ಬೈಕ್ ಬಳಕೆದಾರರ ಮಾತಾಗಿದೆ
ಕ್ಯಾಮೆರಾಮ್ಯಾನ್ ನಿಖಿಲ್ ಸುವರ್ಣ ಜೊತೆ ಕಿಶನ್ ಶೆಟ್ಟಿ, ನ್ಯೂಸ್18 ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ