Corona 4th Wave: "ಕೊರೋನಾದಿಂದ ಕಾಪಾಡಮ್ಮ" ಅಂತ ಸೋಂಕಿನ ಮಾರಿಯಮ್ಮನಿಗೆ ಪ್ರಾಣಿ ಬಲಿ ಕೊಟ್ಟ ಜನರು!
ಈಗ 4 ನೇ ಅಲೆ ಎದುರಾಗ್ತಿರೋದ್ರಿಂದ ಜನರು ಮತ್ತೆ ಮಾರಮ್ಮನ್ನ ತಂಪು ಮಾಡಲು ಮುಂದಾಗ್ತಿದ್ದಾರೆ. ದೇವಿಯನ್ನು ಪೂಜಿಸಿ, ಕೋವಿಡ್ ತೊಲಗಿಸುವಂತೆ ಜನರು ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಕೋವಿಡ್ (Covid) ಮಹಾಮಾರಿ ಮತ್ತೆ ಅಬ್ಬರಿಸುತ್ತಿದೆ. ಚೀನಾ (Chaina) ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಕೊರೊನಾ ಕೇಸ್ಗಳ (Corona Case) ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಮಹಾಮಾರಿ ಕೊರೊನಾಗೆ ಮೊದಲ ಅಲೆ (1st Wave), ಎರಡನೇ ಅಲೆ (2nd Wave) ಮತ್ತು ಮೂರನೇ ಅಲೆಯಲ್ಲಿ (3rd Wave) ವಿಶ್ವದಲ್ಲಿ ಲಕ್ಷಾಂತರ ಜನರು ಸಾವೀಗೀಡಾಗಿದ್ರು. ಅದ್ರಂತೆ ಮಂಡ್ಯ (Mandya) ಜಿಲ್ಲೆಯಲ್ಲೂ ಕೂಡ ಸಾಕಷ್ಟು ಸಾವು ನೋವುಗಳು ಆಗಿತ್ತು. ಅದರ ನಡುವೆ ಇದೀಗ ನಾಲ್ಕನೆ ಅಲೆಯ (4th Wave) ಭೀತಿ ಕೂಡ ಆವರಿಸಿದೆ. ಹೀಗಾಗಿ ಮಂಡ್ಯ ಜಿಲ್ಲೆಯ ಜನರು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ. ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ (Srirangapattana) ಕೊರೋನಾ 4 ನೇ ಅಲೆಯಿಂದ ತೊಂದರೆ ಆಗದಿರಲಿ ಎಂದು ಸೋಂಕಿನ ಮಾರಿಯಮ್ಮನ ತಂಪು ಮಾಡಿದ್ದಾರೆ.
4 ನೇ ಅಲೆ ಭೀತಿ, ಸೋಂಕಿನ ಮಾರಿಯಮ್ಮನಿಗೆ ಕುರಿ ಬಲಿ
ಹೌದು... ಕೊರೋನಾ ಮಹಾಮಾರಿ ಜಗತ್ತಿನಾದ್ಯಂತ ತನ್ನ ರೌದ್ರ ನರ್ತನದಿಂದ ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ. ಮೊದಲ ಅಲೆ ಅಷ್ಟೇನು ಗಂಭೀರವಾಗಿ ಪರಿಣಾಮ ಕಾಣದೆ ಇದ್ರು ಕೂಡ ಎರಡನೇ ಅಲೆಯ ಆರ್ಭಟಕ್ಕೆ ಜನರು ಭಯದಿಂದ ಖಿನ್ನತೆಗೆ ಒಳಗಾಗಿದ್ರು. ಹಿಗಾಗಿ ಈಗ ನಾಲ್ಕನೇ ಅಲೆ ಬರ್ತಿದೆ ಎಂಬುದು ಎಲ್ಲರ ಆತಂಕಕ್ಕೆ ಕಾರಣವಾಗಿದ್ದು, ಜನರು ದೇವರ ಮೊರೆ ಹೋಗುವಂತಾಗಿದೆ. ಮಾರಿಯಮ್ಮ ಸೇರಿದಂತೆ ಇತರ ಗ್ರಾಮೀಣ ಭಾಗದ ದೇವರಿಗೆ ಕುರಿ, ಕೋಳಿ ಇತ್ಯಾದಿಗಳ ಹರಕೆ ಸಲ್ಲಿಸುತ್ತಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಸೋಂಕಿನ ಮಾರಮ್ಮನ ತಂಪು
ಇದರ ನಡುವೆ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಾಲ್ಕೈದು ಸಮಾನ ಮನಸ್ಕರ ತಂಡ ವೊಂದು ಈ ನಾಲ್ಕನೆ ಕೊರೊನಾ ಅಲೆಯಲ್ಲಿ ದೇಶದಲ್ಲಿ ಯಾವುದೇ ಸಾವು ನೋವು ಸಂಭವಿಸದಂತೆ, ದೇಶದ ಜನರನ್ನು ಕಾಪಾಡುವಂತೆ ಸೋಂಕಿನ ಮಾರಮ್ಮ ದೇವಿಯ ಮೊರೆ ಹೋಗಿದ್ದಾರೆ.
ಪಟ್ಟಣದ ಹೊರವಲಯದ ವೆಲ್ಲೆಸ್ಲಿ ಬಳಿ ಸೋಂಕಿನ ಮಾರಿಯನ್ನು ಪ್ರತಿಷ್ಟಾಪಿಸಿ, ಹಣ್ಣು ಕಾಯಿ ಇಟ್ಟು ಹೊಂಗೆ ಗಿಡದ ಎಲೆಯಿಂದ ಚಪ್ಪರ ಹಾಕಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸುಂಕದ ಮಾರಮ್ಮ ದೇವಿಗೆ ಕುರಿ ಬಲಿ ನೀಡಿ ತಂಪು ಮಾಡಿ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ
ಕಾವೇರಿ ನದಿಯಿಂದ ತಂದ ಕಲ್ಲಿನಲ್ಲಿ ಮಾರಮ್ಮನ ಪ್ರತಿಷ್ಠಾಪನೆ
ಕಾವೇರಿ ನದಿಯಿಂದ ತಂದ ಕಲ್ಲಿನಿಂದ ಸುಂಕದ ಮಾರಿ ದೇವಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ದಲ್ಲದೆ ಜನರಿಗೆ ಮಾಂಸಹಾರ ಊಟ ಬಡಿಸಿದ್ದಾರೆ. ಈ ಹಿಂದೆಯೂ ಕೂಡ ಪಟ್ಟಣದ ಈ ಸಮಾನ ಮನಸ್ಕರರ ತಂಡ ಮೊದಲ, ಹಾಗೂ ಎರಡನೆ ಮತ್ತು ಮೂರನೇ ಅಲೆಯಲ್ಲಿ ಸುಂಕದ ಮಾರಿಯನ್ನು ಪ್ರತಿಷ್ಟಾಪನೆ ಮಾಡಿ ಪೂಜೆ ಸಲ್ಲಿಸಿದ್ದರು. ಈ ರೀತಿ ಜಿಲ್ಲೆಯಲ್ಲಿ ಈ ಹಿಂದೆ ಕೂಡ ನಾಗಮಂಗಲ, ಮಳವಳ್ಳಿ ಮತ್ತು ಮದ್ದೂರಿನಲ್ಲಿ ಕೂಡ ಈ ರೀತಿ ಪ್ರಾಣಿಗಳನ್ನ ಬಲಿ ಕೊಟ್ಟು ಪೂಜೆ ಮಾಡಲಾಗಿತ್ತು.
ಈಗ 4 ನೇ ಅಲೆ ಎದುರಾಗ್ತಿರೋದ್ರಿಂದ ಜನರು ಮತ್ತೆ ಮಾರಮ್ಮನ್ನ ತಂಪು ಮಾಡಲು ಮುಂದಾಗ್ತಿದ್ದಾರೆ. ದೇವಿಯನ್ನು ಪೂಜಿಸಿ, ಕೋವಿಡ್ ತೊಲಗಿಸುವಂತೆ ಜನರು ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.