ಮಂಡ್ಯ: ಅವರೆಲ್ಲರೂ ಮದುವೆ ವಯಸ್ಸಿಗೆ ಬಂದಿರೋ ಯುವಕರು. ಹೀಗೆ ದೇವರ ನಾಮ ಸ್ಮರಣೆಯೊಂದಿಗೆ ಪಾದಯಾತ್ರೆ ಹೊರಟಿದ್ದಾರೆ. ಅದ್ಯಾಕೆ ಅಂತೀರ? ಯೆಸ್, ಇವ್ರೇನು ಸರ್ವ ಸಂಗ ಪರಿತ್ಯಾಗಿಯಾಗಲು ಹೊರವಟರಂತೂ ಅಲ್ವೇ ಅಲ್ಲ. ಬದಲಿಗೆ ʼʼವಧು ಬೇಕು ಸ್ವಾಮೀ, ವಧುʼʼ ಅಂತಾ ದೇವರ ಮೊರೆಯಿಟ್ಟು (Unmarried Youth Padayatra) ನಡೆಯುತ್ತಿದ್ದಾರೆ.
ಹೌದು, ಇವರೆಲ್ಲರೂ ಮಂಡ್ಯ ಸುತ್ತಮುತ್ತಲಿನ ಅವಿವಾಹಿತ ಯುವಕರು. ವಯಸ್ಸೇನೋ 30 ದಾಟಿದೆ. ಆದ್ರೆ ವಧು ಸಿಗ್ತಿಲ್ಲ ಅನ್ನೋದು ಇವರ ಕೊರಗು. ಇದಕ್ಕೆಲ್ಲ ಪರಿಹಾರ ತೋರಿಸು ಮಾದಪ್ಪ ಅಂತಾ ಮಹದೇಶ್ವರನ ಬೆಟ್ಟಕ್ಕೆ ಹೊರಟಿದ್ದಾರೆ. ಹೀಗೆ ನೂರಕ್ಕೂ ಅಧಿಕ ಅವಿವಾಹಿತ ಯುವಕರು ಪಾದಯಾತ್ರೆ ಆರಂಭಿಸಿದ್ಧಾರೆ.
ಬ್ರಹ್ಮಚಾರಿಗಳ ನಡೆ ಮಾದಪ್ಪನ ಬೆಟ್ಟದ ಕಡೆ
ಮಂಡ್ಯದ ಕೆ.ಎಂ.ದೊಡ್ಡಿ ಗ್ರಾಮದ ವೆಂಕಟೇಶ್ವರ ದೇವಸ್ಥಾನದಿಂದ ʼʼಬ್ರಹ್ಮಚಾರಿಗಳ ನಡೆ ಮಾದಪ್ಪನ ಬೆಟ್ಟದ ಕಡೆʼʼ ಎಂಬ ಘೋಷ ವಾಕ್ಯದೊಂದಿಗೆ ಕಾಲ್ನಡಿಗೆ ಶುರು ಮಾಡಿದ್ದಾರೆ. ಅವಿವಾಹಿತ ಯುವಕರಿಂದ ಉತ್ತಮ ಸ್ಪಂದನೆಯೂ ವ್ಯಕ್ತವಾಗಿದೆ.
ರೈತ ಯುವಕರಿಗೆ ಹೆಣ್ಣು ಸಿಗಲಿ
ಹೀಗೆ ಪಾದಯಾತ್ರೆ ಹೊರಟವರಲ್ಲಿ ಬಹುತೇಕ ಯುವರೈತರೇ ಜಾಸ್ತಿ. ಎಷ್ಟೇ ಸಂಪಾದನೆ ಇದ್ರೂ ರೈತನಿಗೆ ಹೆಣ್ಣು ಕೊಡಲ್ಲ ಅನ್ನೋ ಮಾತು ಇಲ್ಲಿ ನಿಜವಾಗಿದೆ ಕೂಡಾ. ಹೀಗಾಗಿ ರೈತರಿಗೂ ಹೆಣ್ಣು ಕೊಡೋ ಮನಸ್ಸನ್ನ ಹುಡುಗಿ ಇದ್ದವರ ಮನೆಯವರಿಗೆ ಕೊಡುವ ಮಾದಪ್ಪ ಅನ್ನೋ ಮೊರೆಯನ್ನೂ ಇವರೆಲ್ಲರೂ ಸೇರಿ ದೇವರ ಮುಂದಿಡಲಿದ್ದಾರೆ.
ಇದನ್ನೂ ಓದಿ: Mandya: ಮದುವೆಯಾಗದ ಯುವಕರೇ ಹೆದರಬೇಡಿ, ಹೆಣ್ಣು ಸಿಗದ ಸಮಸ್ಯೆ ನಿವಾರಣೆಗೆ ಹೊಸ ಪ್ರಯತ್ನ!
ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಈ ಷರತ್ತುಗಳಿವೆ!
ಸದ್ಯ ಈ ಪಾದಯಾತ್ರೆಯಲ್ಲಿ ಅವಿವಾಹಿತ ಯುವಕರು ಮಾತ್ರ ಪಾಲ್ಗೊಂಡಿದ್ದಾರೆ. ವಿವಾಹಿತರು, ನಿಶ್ಚಿತಾರ್ಥ ಆದವರು, 30 ವರ್ಷ ಆಗದೇ ಇರೋರಿಗೆ ಈ ಪಾದಯಾತ್ರೆ ನಿರ್ಬಂಧಿಸಲಾಗಿದೆ. ಅದರ ಹೊರತಾಗಿಯೂ ನೂರಾರು ಯುವಕರು ಮೂರು ದಿನಗಳ ಪಾದಯಾತ್ರೆ ಮಾಡಿ ಕೆಎಂ ದೊಡ್ಡಿ, ಮಳವಳ್ಳಿ, ಕೊಳ್ಳೆಗಾಲ, ಹನೂರು ಮಾರ್ಗವಾಗಿ ಮಹದೇಶ್ವರ ಬೆಟ್ಟ ತಲುಪಲಿದ್ಧಾರೆ. ದಾರಿ ಮಧ್ಯೆ ಈ ಅವಿವಾಹಿತ ಭಕ್ತರಿಗೆ ಊಟ, ವಸತಿ, ಪಾನೀಯದ ವ್ಯವಸ್ಥೆಯೂ ಮಾಡಲಾಗಿದೆ.
ಇದನ್ನೂ ಓದಿ: Mandya Viral Video: ನಾಯಿ ಮರಿ ಎಂದು ಚಿರತೆ ಮರಿಯನ್ನು ಮನೆಗೆ ತಂದ ಮಂಡ್ಯದ ಬಾಲಕ!
ಒಟ್ಟಿನಲ್ಲಿ ಬ್ಯಾಚುಲರ್ ಲೈಫ್ನಿಂದ ಮುಕ್ತಿ ಕೊಡಪ್ಪ ಅಂತಾ ಮಾದಪ್ಪನ ಮೊರೆ ಹೋಗಿರುವ ಅವಿವಾಹಿತರಿಗೆ ಶೀಘ್ರವೇ ಕಲ್ಯಾಣ ಭಾಗ್ಯ ಕೂಡಿ ಬರಲಿ ಅನ್ನೋ ಹಾರೈಕೆ ನಮ್ಮದು.
ಮಾಹಿತಿ, ವಿಡಿಯೋ: ಸುನೀಲ್, ನ್ಯೂಸ್ 18 ಮಂಡ್ಯ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ