ಬೆಳಗ್ಗೆ (Morning) ಎದ್ದಾಗ ನಾವು ಏನು ತಿನ್ನುತ್ತೇವೆ ಮತ್ತು ಕುಡಿಯುತ್ತೇವೆ ಎಂಬುದು ನಿಜವಾಗಿಯೂ ಮುಖ್ಯವಾಗುತ್ತದೆ. ಕೆಲವರು ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಒಂದು ಲೋಟ ಬಿಸಿ ನೀರು ಕುಡಿದರೆ, ಇನ್ನೂ ಕೆಲವು ಮಂದಿ ಟೀ-ಕಾಫಿ ಕುಡಿಯುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ ಅಂತ ಹೇಳಬಹುದು. ಹೆಚ್ಚಿನ ಆರೋಗ್ಯ ತಜ್ಞರು ಮತ್ತು ಪೌಷ್ಟಿಕ ತಜ್ಞರು ದಿನದ ಮೊದಲ ಊಟವು ನಮಗೆ ಹೇಗೆ ದಿನದಲ್ಲಿ ಬೇಕಾದಂತಹ ಶಕ್ತಿಯನ್ನು ನೀಡುತ್ತದೆ ಅಂತ ಆಗಾಗ್ಗೆ ಹೇಳುತ್ತಲೇ ಇರುತ್ತಾರೆ ಅಂತ ಹೇಳಬಹುದು.ಬೆಳ ಬೆಳಗ್ಗೆ ಕೊಬ್ಬು ಮತ್ತು ಪ್ರೋಟೀನ್ (Protein) ಸಮೃದ್ಧವಾಗಿರುವ ಉಪಾಹಾರವನ್ನು ಸೇವಿಸುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (Cholesterol) ಮಟ್ಟವು ಕಡಿಮೆ ಆಗುತ್ತದೆ ಮತ್ತು ದಿನವಿಡೀ ನಿಮ್ಮನ್ನು ಅನಗತ್ಯ ಸಿಹಿ ಕಡುಬಯಕೆಗಳಿಂದ ದೂರವಿರಿಸುತ್ತದೆ ಎಂದು ಅಧ್ಯಯನಗಳು ಸೂಚಿಸಿವೆ.
ಸೆಲೆಬ್ರಿಟಿಗಳಿಗೆ ಸಹಾಯ ಮಾಡಿದ ಪೌಷ್ಟಿಕತಜ್ಞೆ ಹೇಳುವುದೇನು?
ಕೆಲವೊಬ್ಬರು ಈ ಚಹಾ ಅಥವಾ ಕಾಫಿಯೊಂದಿಗೆ ದಿನವನ್ನು ಪ್ರಾರಂಭಿಸುತ್ತಿರುತ್ತಾರೆ. ಆದರೆ ಇದು ಎಷ್ಟರ ಮಟ್ಟಿಗೆ ಆರೋಗ್ಯಕ್ಕೆ ಒಳ್ಳೆಯದು ಅಂತ ಅನೇಕ ಜನರಿಗೆ ಗೊಂದಲವಿರುತ್ತದೆ.
ಬಾಲಿವುಡ್ ನಟಿಯರಾದ ಕರೀನಾ ಕಪೂರ್, ಆಲಿಯಾ ಭಟ್ ಮತ್ತು ಕಂಗನಾ ರಣಾವತ್ ಅವರಂತಹ ಸೆಲೆಬ್ರಿಟಿಗಳಿಗೆ ಸಹಾಯ ಮಾಡಿದ ಪೌಷ್ಟಿಕತಜ್ಞೆ ರುಜುತಾ ದಿವೇಕರ್ ನಿಮ್ಮ ಆರೋಗ್ಯಕ್ಕೆ ಉತ್ತಮವಾದ ಆಯ್ಕೆಗಳನ್ನು ನೀಡಿದ್ದಾರೆ ನೋಡಿ.
ದಿನದ ಪ್ರಾರಂಭ ಯಾವುದರಿಂದ ಆಗಬೇಕು?
ತಮ್ಮ ಇತ್ತೀಚಿನ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಈ ಚಹಾ ಅಥವಾ ಕಾಫಿಯ ಬದಲು ಬಾಳೆಹಣ್ಣು ಅಥವಾ ನೆನೆಸಿದ ಬಾದಾಮಿ ಅಥವಾ ನೆನೆಸಿದ ಒಣದ್ರಾಕ್ಷಿಯೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸುವ ಬಗ್ಗೆ ಅವರು ಮಾತನಾಡಿದ್ದಾರೆ. ಇದರಿಂದಾಗುವ ಆರೋಗ್ಯ ಪ್ರಯೋಜನಗಳನ್ನು ಅವರು ಇಲ್ಲಿ ಹೇಳಿದ್ದಾರೆ ನೋಡಿ.
"ನೀವು ಜೀರ್ಣಕ್ರಿಯೆ, ಗ್ಯಾಸ್, ಹೊಟ್ಟೆ ಉಬ್ಬರದಿಂದ ಬಳಲುತ್ತಿದ್ದರೆ ಅಥವಾ ನೀವು ಕಡಿಮೆ ಶಕ್ತಿಯನ್ನು ಹೊಂದಿದ್ದರೆ ಅಥವಾ ಊಟದ ನಂತರವೂ ಸಹ ಏನಾದರೂ ತಿನ್ನಬೇಕು ಅನ್ನೋ ಕಡುಬಯಕೆಗಳನ್ನು ಹೊಂದಿದ್ದರೆ, ಮಲಬದ್ಧತೆಯನ್ನು ಹೊಂದಿದ್ದರೆ, ಬಾಳೆಹಣ್ಣನ್ನು ತಿನ್ನುವುದರೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ.
ನಿಮಗೆ ಬಾಳೆಹಣ್ಣು ತಿನ್ನಲು ಸಾಧ್ಯವಾಗದಿದ್ದರೆ ಅಥವಾ ಬಾಳೆಹಣ್ಣು ಇಷ್ಟಪಡದಿದ್ದರೆ ಸ್ಥಳೀಯ ಅಥವಾ ಕಾಲೋಚಿತ ಹಣ್ಣನ್ನು ತಿನ್ನಿ" ಎಂದು ಅವರು ಪೋಸ್ಟ್ ನಲ್ಲಿ ಹೇಳಿದ್ದಾರೆ.
ಚಹಾ ಮತ್ತು ಕಾಫಿ ಬದಲಿಗೆ ಬಾಳೆಹಣ್ಣನ್ನು ತಿನ್ನಿ
ಬಾಳೆಹಣ್ಣನ್ನೇ ಏಕೆ ತಿನ್ನಬೇಕು ಅಂತ ಅನೇಕರು ಪ್ರಶ್ನೆಯೊಂದನ್ನು ಕೇಳಬಹುದು. "ಬಾಳೆಹಣ್ಣು ಜೀರ್ಣಕ್ರಿಯೆ ಸಮಸ್ಯೆಗಳಿಗೆ ಉತ್ತಮವಾಗಿದೆ ಹಾಗೂ ಊಟದ ನಂತರ ಸಕ್ಕರೆ ಕಡುಬಯಕೆಯನ್ನು ದೂರ ಮಾಡುತ್ತದೆ. ವಾರಕ್ಕೆ ಕನಿಷ್ಠ 2-3 ಬಾರಿ ಖರೀದಿಸಿ ಮತ್ತು ಅವುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಮನೆಗೆ ತರಬೇಡಿ, ಬದಲಿಗೆ ಬಟ್ಟೆ ಚೀಲವನ್ನು ಬಳಸಿ" ಎಂದು ಅವರು ಬರೆದಿದ್ದಾರೆ.
ನಿಮ್ಮ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿ ಮತ್ತೊಂದು ಆಯ್ಕೆಯೆಂದರೆ ನೆನೆಸಿದ ಒಣದ್ರಾಕ್ಷಿ. "6-7 ನೆನೆಸಿದ ಒಣದ್ರಾಕ್ಷಿಯನ್ನು ಸೇವಿಸಿ. ಇದು ಪಿಎಂಎಸ್ ಹೊಂದಿರುವ ಅಥವಾ ದಿನವಿಡೀ ಕಡಿಮೆ ಶಕ್ತಿಯನ್ನು ಹೊಂದಿರುವ ವ್ಯಕ್ತಿಗಳಿಗೆ ಒಳ್ಳೆಯದು. ಋತುಚಕ್ರಕ್ಕೆ 10 ದಿನಗಳ ಮೊದಲು 1-2 ಕೇಸರಿ ಎಳೆಗಳನ್ನು ಅದಕ್ಕೆ ಸೇರಿಸಿಕೊಳ್ಳಿ" ಎಂದು ಅವರು ಬರೆದಿದ್ದಾರೆ.
ಕಪ್ಪು ಒಣದ್ರಾಕ್ಷಿಯಿಂದ ನೀವು ಪ್ರಾರಂಭಿಸಬಹುದು ಮತ್ತು ಕಂದು ಒಣದ್ರಾಕ್ಷಿಯಿಂದ ಅಲ್ಲ ಎಂದು ದಿವೇಕರ್ ಹೇಳಿದರು. ಆದಾಗ್ಯೂ, ಕಪ್ಪು ಒಣದ್ರಾಕ್ಷಿ ಲಭ್ಯವಿಲ್ಲದಿದ್ದರೆ ಕಂದು ಒಣದ್ರಾಕ್ಷಿಗಳು ಪರ್ಯಾಯವಾಗಿಯೂ ಕಾರ್ಯನಿರ್ವಹಿಸಬಹುದು. ಇದು ಕಡಿಮೆ ಹಿಮೋಗ್ಲೋಬಿನ್, ಸ್ತನ ಮೃದುತ್ವ, ಅನಿಲ, ಕಿರಿಕಿರಿ, ಮನಸ್ಥಿತಿ ಬದಲಾವಣೆಗಳು ಅಥವಾ ಪಿಸಿಒಡಿ (ಪಾಲಿಸಿಸ್ಟಿಕ್ ಅಂಡಾಶಯ ರೋಗ) ಸಮಸ್ಯೆಗಳನ್ನು ಆದಷ್ಟು ದೂರವಿಡುತ್ತದೆ.
ಟೀ-ಕಾಫಿ ಬದಲು ನೆನೆಸಿಟ್ಟ ಬಾದಾಮಿಯನ್ನು ತಿನ್ನಿರಿ
ಟೀ-ಕಾಫಿ ಬದಲು ಬೆಳಗ್ಗೆ ಸೇವಿಸಬೇಕಾದ ಮೂರನೇ ಆಯ್ಕೆಯೆಂದರೆ ನೆನೆಸಿದ ಬಾದಾಮಿ. "4-5 ನೆನೆಸಿದ ಮತ್ತು ಸಿಪ್ಪೆ ಸುಲಿದ ಬಾದಾಮಿ ಸೇವನೆಯು ನಿಮ್ಮ ಇನ್ಸುಲಿನ್ ಪ್ರತಿರೋಧ, ಮಧುಮೇಹ, ಪಿಸಿಒಡಿ ಅಥವಾ ಕಡಿಮೆ ಫಲವತ್ತತೆ ಅಥವಾ ಕಳಪೆ ನಿದ್ರೆಯ ಗುಣಮಟ್ಟವನ್ನು ಹೊಂದಿದ್ದರೆ ಎಲ್ಲವನ್ನೂ ನಿವಾರಿಸುತ್ತದೆ.
ಮಾಮ್ರಾ ಅಥವಾ ಸ್ಥಳೀಯ ಬಾದಾಮ್ ಅನ್ನು ಆರಿಸಿಕೊಳ್ಳಿ, ಇದು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಪಿಸಿಒಡಿಗಾಗಿ, ಋತುಚಕ್ರಕ್ಕೆ 10 ದಿನಗಳ ಮೊದಲು 6-7 ಒಣದ್ರಾಕ್ಷಿ ಮತ್ತು 1-2 ಕೇಸರಿ ಎಳೆಗಳಿಗೆ ಬದಲಿಸಿ" ಎಂದು ದಿವೇಕರ್ ಬರೆದಿದ್ದಾರೆ.
ಇದನ್ನೂ ಓದಿ: ಗರ್ಭಾವಸ್ಥೆಯ ಬಗ್ಗೆ ಯಾವುದನ್ನು ನಂಬಬೇಕು, ಯಾವ ವಿಷಯಗಳನ್ನು ಕಡೆಗಣಿಸಬೇಕು?
ಉತ್ತಮ ಆರೋಗ್ಯಕ್ಕಾಗಿ ಪಾಲಿಸಬೇಕಾದ ಇನ್ನಿತರೆ ಸಲಹೆಗಳು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ