ಇಂದಿನ ಒತ್ತಡದ ಜೀವನದಲ್ಲಿ ಆರೋಗ್ಯಕರ ಜೀವನಶೈಲಿ (Lifestyle) ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಆಹಾರ, ವಿಹಾರ, ವ್ಯಾಯಾಮ, ವಾಕಿಂಗ್ ಇಂಥ ಚಟುವಟಿಕೆಗಳಿದ್ದರೆ (Activity) ಮಾತ್ರ ಆರೋಗ್ಯವಾಗಿರುತ್ತೇವೆ ಎಂಬುದಾಗಿ ತಜ್ಞರು ಹೇಳುತ್ತಾರೆ. ತಿನ್ನುವ ಆಹಾರದ ಜೊತೆಗೆ ದೈಹಿಕ ಚಟುವಟಿಕೆ ಕೂಡ ಮಹತ್ವದ್ದು ಎಂಬುದನ್ನು ವೈದ್ಯರು ಹೇಳುತ್ತಲೇ ಇರುತ್ತಾರೆ. ಅಂದಹಾಗೆ, ಅತ್ಯುತ್ತಮ ಆರೋಗ್ಯಕ್ಕೆ ಯೋಗ ಸಹಕಾರಿ. ಈ ಯೋಗಾಸನವು (Yogasana) ಅನೇಕ ಅನೇಕ ದೈಹಿಕ ಆರೋಗ್ಯ ಸಮಸ್ಯೆಗಳಿಗೆ ಪರಿಣಾಮಕಾರಿ ಔಷಧದಂತೆ ಕೆಲಸ ಮಾಡುತ್ತದೆ. ದಿನವೂ ಯೋಗ ಮಾಡುತ್ತಿದ್ದರೆ ಅರ್ಧದಷ್ಟು ಸಮಸ್ಯೆಗಳು ಹತ್ತಿರವೂ ಸುಳಿಯುವುದಿಲ್ಲ. ನಿರಂತರವಾಗಿ ಯೋಗ ಮಾಡುವ ಅನೇಕರಲ್ಲಿ ಇದನ್ನು ನೋಡಬಹುದು.
ಅನೇಕ ದೈಹಿಕ ಪ್ರಯೋಜನಗಳ ಹೊರತಾಗಿ, ಮನಸ್ಸಿನ ಆರೋಗ್ಯಕ್ಕೂ ಯೋಗ ಪ್ರಯೋಜನಕಾರಿ. ಮನಸ್ಸಿನ ಗೊಂದಲ, ಏಕಾಗ್ರತೆಯ ಕೊರತೆ, ಆತಂಕ, ಖಿನ್ನತೆ ಮುಂತಾದವುಗಳಿಗೆ ಯೋಗ ಹಾಗೂ ಪ್ರಾಣಾಯಾಮಗಳು ಪರಿಣಾಮಕಾರಿಯಾದ ಪರಿಹಾರವನ್ನು ನೀಡುತ್ತವೆ.
ನೆನಪಿನ ಶಕ್ತಿ ಹೆಚ್ಚಿಸುತ್ತೆ ಯೋಗಾಸನ
ಅಲ್ಲದೇ ಯೋಗವು ನೆನಪಿನ ಶಕ್ತಿ ಹೆಚ್ಚಿನಸಲೂ ಕೂಡ ಸಹಾಯಕವಾಗಿದೆ. ನೆನಪಿನ ಶಕ್ತಿಯ ಜೊತೆಗೆ ಗಮನ, ಅರಿವು, ಆಲೋಚನೆ ಮತ್ತು ಏಕಾಗ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮೆದುಳಿನ ಭಾಗಗಳನ್ನು ಬಲಪಡಿಸಲು ಸಹಾಯ ಯೋಗ ಪ್ರಾಣಾಯಾಮಗಳು ಮಾಡುತ್ತದೆ ಎಂದು ಅನೇಕ ಅಧ್ಯಯನಗಳು ತೋರಿಸಿವೆ.
ಇದನ್ನೂ ಓದಿ: ಬೆಳಗಿನ ತಿಂಡಿಗೆ ಮಾಡಿ ಮೊಸರನ್ನ; ಬೇಸಿಗೆಗೆ ಇದುವೇ ಬೆಸ್ಟ್ ಫುಡ್
ಹಾರ್ವರ್ಡ್ ಮೆಡಿಕಲ್ ರಿವ್ಯೂನಲ್ಲಿ ಪ್ರಕಟವಾದ ಅಧ್ಯಯನಗಳ ಪ್ರಕಾರ, ನೆನಪಿನ ಶಕ್ತಿಗೆ ಮೆದುಳಿನ ಸೆರೆಬ್ರಲ್ ಕಾರ್ಟೆಕ್ಸ್ (ಮಾಹಿತಿ ಸಂಸ್ಕರಣೆ ಆಗುವಂಥ ಮೆದುಳಿನ ಜಾಗ ) ಮತ್ತು ಹಿಪೊಕ್ಯಾಂಪಸ್ (ಕಲಿಕೆ, ಸ್ಮರಣೆಗಾಗಿ ಇರುವಂಥ ಪ್ರದೇಶ)ಪ್ರಮುಖವಾದವುಗಳಾಗಿವೆ. ನಿಮಗೆ ವಯಸ್ಸಾದಂತೆ ಮೆದುಳಿನ ಈ ಪ್ರದೇಶಗಳು ಸಾಮಾನ್ಯವಾಗಿ ಕುಗ್ಗುತ್ತವೆ. ಆದರೆ ಯೋಗ ಮಾಡದೇ ಇರುವವರಿಗಿಂತ ನಿಯಮಿತವಾಗಿ ಯೋಗ ಮಾಡುವವರಲ್ಲಿ ಈ ಕುಗ್ಗುವಿಕೆ ಕಡಿಮೆ ಪ್ರಮಾಣದಲ್ಲಿ ಕಂಡುಬಂದಿದೆ ಎಂದು ಅಧ್ಯಯನ ತೋರಿಸಿದೆ.
ಇನ್ನು, ಸರ್ವ ಯೋಗ ಸ್ಟುಡಿಯೋಸ್ ಸಂಸ್ಥಾಪಕ ಸರ್ವೇಶ್ ಶಶಿ ನೆನಪಿನ ಶಕ್ತಿಯನ್ನು ಸುಧಾರಿಸಲು ಮಾಡಬೇಕಾದ ಮೂರು ಆಸನಗಳ ಬಗ್ಗೆ ಹೇಳಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಅವರು ಈ ಆಸನಗಳನ್ನು ತೋರಿಸಿದ್ದು, ಈ ಮೂರು ಸರಳ ಆಸನಗಳು ಮತ್ತು ಉಸಿರಾಟದ ಅಭ್ಯಾಸಗಳನ್ನು ಪ್ರಯತ್ನಿಸಿ. ಇದು ನಿಮ್ಮ ಸ್ಮರಣ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ ಎಂದು ಹೇಳಿದ್ದಾರೆ.
ನೆನಪಿನ ಶಕ್ತಿಗಾಗಿ ಈ ಆಸನಗಳನ್ನು ಪ್ರಯತ್ನಿಸಿ
1.ಉತ್ಥಿತ ಹಸ್ತಾ ಪದಂಗುಷ್ಠಾಸನ: ಉತ್ತಿತ ಹಸ್ತ ಪಾದಾಂಗುಷ್ಠಾಸನವನ್ನು ಟೋ ಭಂಗಿ ಎಂದೂ ಕರೆಯಲಾಗುತ್ತದೆ. ಇದು ನಿಂತಿರುವ ಆಸನವಾಗಿದ್ದು ಅದು ದೇಹದಲ್ಲಿ ಸಮತೋಲನವನ್ನು ನಿರ್ಮಿಸುತ್ತದೆ. ಏಕಾಗ್ರತೆಯನ್ನು ಸುಧಾರಿಸುತ್ತದೆ ಮತ್ತು ಸ್ಥಿರತೆಯ ಪ್ರಜ್ಞೆಯನ್ನು ಉತ್ತೇಜಿಸುತ್ತದೆ.
ಮಾಡುವ ಹಂತಗಳು
* ಮೊದಲು ಈ ಆಸನವನ್ನು ಮೌಂಟೇನ್ ಭಂಗಿ ಅಥವಾ ತಾಡಾಸಾನಾದಲ್ಲಿ ಪ್ರಾರಂಭಿಸಿ.
* ಗಮನವನ್ನು ಕೇಂದ್ರೀಕರಿಸಲು ಕಣ್ಣಿನ ಮಟ್ಟದಲ್ಲಿ ಒಂದು ಬಿಂದುವನ್ನು ತೆಗೆದುಕೊಳ್ಳಿ.ಅದನ್ನೇ ನೋಡುತ್ತಿರಿ. ಆಗ ಏಕಾಗ್ರತೆಯಿಂದ ಸಮತೋಲನ ಸಾಧಿಸಬಹುದು.
ಇದನ್ನೂ ಓದಿ: ಮೊಣಕೈ ಕಪ್ಪಾಗುವಿಕೆ ಸಮಸ್ಯೆಗೆ ಸಿಂಪಲ್ಲಾಗಿ ಈ 7 ಮನೆಮದ್ದುಗಳನ್ನು ಬಳಸಿ ಸಾಕು
* ಉಸಿರಾಡುವಾಗ, ನಿಮ್ಮ ಎಡ ಪಾದದ ಮೇಲೆ ಭಾರವನ್ನು ತಂದು ನಿಮ್ಮ ಬಲ ಮೊಣಕಾಲು ಮೇಲಕ್ಕೆತ್ತಿ. ಬಲಗೈಯಿಂದ ನಿಮ್ಮ ಕಾಲಿನ ಹೆಬ್ಬೆರಳನ್ನು ತಾಕಿಸಿ.
* ನಿಮ್ಮ ಎಡ ಸೊಂಟವನ್ನು ದೃಢಪಡಿಸಿ. ನಿಮ್ಮ ಬೆನ್ನುಮೂಳೆಯನ್ನು ನೇರವಾಗಿರಿಸಿ.
* ನೀವು ಉಸಿರಾಡುವಾಗ, ಬೆನ್ನುಮೂಳೆಯ ನೇರವಾವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಬಲಗಾಲನ್ನು ಮುಂಭಾಗಕ್ಕೆ ವಿಸ್ತರಿಸಿ.
* ನಂತರದಲ್ಲಿ ಸುಮಾರು 5 ಉಸಿರುಗಳನ್ನು ತೆಗೆದುಕೊಳ್ಳಿ. ನಂತರ, ನೀವು ಉಸಿರಾಡುವಾಗ, ನಿಮ್ಮ ಕಾಲನ್ನು ಬಲಕ್ಕೆ ಹೊರತೆಗೆಯಿರಿ ಮತ್ತು 5 ಉಸಿರಾಟ ಮಾಡಿ.
* ಭಂಗಿಯಿಂದ ಹೊರಬರಲು, ಇನ್ಹಲೇಷನ್ ಮೇಲೆ, ನಿಮ್ಮ ಕಾಲನ್ನು ಮಧ್ಯಕ್ಕೆ ತೆಗೆದುಕೊಂಡು ಬನ್ನಿ. ಉಸಿರಾಡುತ್ತ ಪಾದವನ್ನು ನೆಲಕ್ಕೆ ಇಳಿಸಿ.
* ಇನ್ನೊಂದು ಬದಿಯಲ್ಲೂ ಇದನ್ನೇ ಪುನರಾವರ್ತಿಸಿ.
ಈ ಆಸನವನ್ನು ಯಾರು ಮಾಡಬಾರದು?
ಈ ಭಂಗಿಯು ಅನೇಕ ಪ್ರಯೋಜನಗಳನ್ನು ಹೊಂದಿದೆ ನಿಜ. ಆದರೆ ಕೆಲವೊಂದು ಆರೋಗ್ಯ ಸಮಸ್ಯೆ ಹೊಂದಿರುವವರು ಈ ಆಸನವನ್ನು ಮಾಡಬೇಡಿ ಎಂದು ಸಲಹೆ ನೀಡಲಾಗುತ್ತದೆ.
ಪೌಷ್ಟಿಕಾಂಶ ಮತ್ತು ಫಿಟ್ನೆಸ್ ತರಬೇತುದಾರರಾದ ಜಿಗ್ಯಾಸ ಗುಪ್ತಾ ಅವರು, ಕಡಿಮೆ ರಕ್ತದೊತ್ತಡ ಹೊಂದಿರುವ ಜನರು ಈ ಭಂಗಿಯನ್ನು ಮಾಡುವುದನ್ನು ತಪ್ಪಿಸಿ ಎಂದು ಹೇಳುತ್ತಾರೆ. ಏಕೆಂದರೆ ಇದು ತಲೆನೋವು ಮತ್ತು ತಲೆತಿರುಗುವಿಕೆಗೆ ಕಾರಣವಾಗಬಹುದು. ಅಲ್ಲದೇ ಮೊಣಕಾಲು, ಪಾದ, ಸೊಂಟ, ಕಾಲು, ಭುಜ ಅಥವಾ ಕೆಳ ಬೆನ್ನಿನ ನೋವು ಇರುವಂಥವರು ಈ ಆಸನವನ್ನು ಮಾಡಬಾರದು. ಅಥವಾ ಮಾಡಬೇಕು ಎಂದಾದಲ್ಲಿ ಸರಿಯಾದ ಮಾರ್ಗದರ್ಶನದಲ್ಲಿ ಮಾತ್ರ ಪ್ರಯತ್ನಿಸಿ ಎಂದು ಹೇಳಿದ್ದಾರೆ.
2.ಭ್ರಮರಿ ಪ್ರಾಣಾಯಾಮ: ಭ್ರಮರಿ ಪ್ರಾಣಾಯಾಮವು ಹಿಂದಿ ಪದ 'ಭ್ರಮರ್' (ಜೇನ್ನೊಣ)ನಿಂದ ಹುಟ್ಟಿಕೊಂಡಿದೆ. ಇದರರ್ಥ ಬಂಬಲ್ ಬೀ ಎಂದು. ಪ್ರಾಣಾಯಾಮವು ಉಸಿರಾಟದ ತಂತ್ರವಾಗಿದೆ. ಆದ್ದರಿಂದ ಇದನ್ನು 'ಬೀ ಉಸಿರು' ಎಂದೂ ಕರೆಯಬಹುದು. ಈ ತಂತ್ರದಲ್ಲಿ, ನಿಶ್ವಾಸದ ಶಬ್ದವು ಜೇನುನೊಣದ ಗುನುಗುವ ಶಬ್ದವನ್ನು ಹೋಲುತ್ತದೆ. ಇದು ಆಯಾಸ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಮನಸ್ಸನ್ನು ಶಾಂತಗೊಳಿಸಲು ಸಹಾಯಕವಾಗಿದೆ.
ಭ್ರಮರಿ ಪ್ರಾಣಾಯಾಮ ಮಾಡುವ ಹಂತಗಳು
*ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ನಿಮ್ಮ ಮೂಗಿನ ಮೂಲಕ ಆಳವಾಗಿ ಉಸಿರಾಡಿ.
*ಉಸಿರಾಟದ ಮೇಲೆ ನಿಯಂತ್ರಣವನ್ನು ಇಟ್ಟುಕೊಳ್ಳುತ್ತಾ ನಿಧಾನವಾಗಿ ಉಸಿರನ್ನು ಬಿಡಿ.
*ಜೊತೆಗೆ ಆಳವಾದ ಮತ್ತು ಸ್ಥಿರವಾದ ಝೇಂಕರಿಸುವ ಶಬ್ದವನ್ನು ಮಾಡುತ್ತಾ ಉಸಿರನ್ನು ಬಿಡಿ.
*ಹಾಗೆಯೇ ಸುಮಾರು 10-15 ನಿಮಿಷಗಳವರೆಗೆ ಇದನ್ನು ಮುಂದುವರಿಸಿ.
ಈ ಸಮಸ್ಯೆ ಇರುವವವರು ಭ್ರಮರಿ ಅಭ್ಯಾಸ ಮಾಡಬೇಡಿ
ಜಿಗ್ಯಾಸ ಗುಪ್ತಾ ಅವರು ಹೇಳುವ ಪ್ರಕಾರ, ಈ ಉಸಿರಾಟದ ತಂತ್ರವು ನಮ್ಮನ್ನು ಒತ್ತಡದಿಂದ ಮುಕ್ತಗೊಳಿಸುತ್ತದೆ. ಮನಸ್ಸಿಗೆ ಶಾಂತಿ ನೀಡುತ್ತದೆ. ಹಾಗೆಯೇ ಗರ್ಭಿಣಿ ಅಥವಾ ಮುಟ್ಟಿನ ಮಹಿಳೆಯರು ಮತ್ತು ಅಧಿಕ ರಕ್ತದೊತ್ತಡ,ಎದೆ ನೋವು, ಕಿವಿ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಗಳು ಭ್ರಮರಿಯನ್ನು ಅಭ್ಯಾಸ ಮಾಡಬಾರದು.
3.ವೃಕ್ಷಾಸನ: ವೃಕ್ಷಾಸನವು ಎರಡು ಸಂಸ್ಕೃತ ಪದಗಳ ಸಂಯೋಜನೆಯಾಗಿದೆ. ವೃಕ್ಷ ಎಂದರೆ ಮರ ಮತ್ತು ಆಸನ ಎಂದರೆ ಭಂಗಿ.ಹಾಗಾಗಿ ಇದು ವೃಕ್ಷಾಸನ. ಇದು ಗ್ರೌಂಡಿಂಗ್ ಮತ್ತು ಕೇಂದ್ರೀಕರಿಸುವ ಭಂಗಿಯಾಗಿದ್ದು ಅದು ನಿಮ್ಮ ಶಕ್ತಿಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದು ಕಾಲುಗಳಲ್ಲಿ ಸಮತೋಲನ ಮತ್ತು ಸ್ಥಿರತೆಯನ್ನು ಸುಧಾರಿಸಲು ಸಹ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಬೇಸಿಗೆಯಲ್ಲಿ ಮಡಕೆಯಲ್ಲಿನ ನೀರು ಕುಡಿಯೋದ್ರಿಂದ ಎಷ್ಟೆಲ್ಲಾ ಲಾಭ ಇದೆ ತಿಳಿಯಿರಿ
ಆದಾಗ್ಯೂ, ನಿಮ್ಮ ಕಾಲು, ಸೊಂಟ, ಮಂಡಿಗಳಿಗೆ ನೋವಾಗಿದ್ದಲ್ಲಿ ಈ ಭಂಗಿಯನ್ನು ತಪ್ಪಿಸಲು ಸಲಹೆ ನೀಡಲಾಗುತ್ತದೆ. ವೃಕ್ಷಾಸನವು ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಅಭ್ಯಾಸ ಮಾಡಲು ಉತ್ತಮ ಭಂಗಿಯಾಗಿದೆ. ಏಕೆಂದರೆ ಇದು ಸುಗಮ ಹೆರಿಗೆಗೆ ಸಹಾಯ ಮಾಡುತ್ತದೆ.
ಹಂತಗಳು:
* ಮೊದಲು ಮೌಂಟೇನ್ ಭಂಗಿ ಅಥವಾ ತಾಡಾಸಾನಾದಲ್ಲಿ ಪ್ರಾರಂಭಿಸಿ
* ನಿಮ್ಮ ಬಲಗಾಲನ್ನು ಮೇಲಕ್ಕೆತ್ತಿ ಮತ್ತು ನಿಮ್ಮ ಎಡಗಾಲಿನಲ್ಲಿ ಸ್ಥಿರವಾಗಿ ನಿಲ್ಲಿ.
* ಬಲ ಮೊಣಕಾಲನ್ನು ಬಗ್ಗಿಸಿ ಮತ್ತು ಬಲ ಪಾದವನ್ನು ಎಡ ತೊಡೆಯ ಒಳಭಾಗದ ಮೇಲೆ ಇರಿಸಿ. ಎರ ತೊಡೆಯ ಮೇಲಿಡುವ ಬಲ ಪಾದದ ಬೆರಳುಗಳನ್ನು ಕೆಳಮುಖವಾಗಿ ಇರಿಸಿ.
* ನಮಸ್ತೆಯಂತೆ ನಿಮ್ಮ ಎರಡೂ ಕೈಗಳನ್ನು ಎದೆಯ ಮಟ್ಟದಲ್ಲಿ ಜೋಡಿಸಿ. ಅಲ್ಲದೇ ಕೈಗಳನ್ನು ನಿಮ್ಮ ತಲೆಯ ಮೇಲೂ ಚಾಚಬಹುದು.
* ಆಳವಾದ ಉಸಿರನ್ನು ತೆಗೆದುಕೊಳ್ಳುತ್ತಾ ಆ ಭಂಗಿಯಲ್ಲೆ ಕೆಲ ಸೆಕೆಂಡ್ಗಳ ಕಾಲ ಇರಿ.
* ನಿಮ್ಮ ತೋಳುಗಳನ್ನು ಎದೆಯ ಮಟ್ಟಕ್ಕೆ ಇಳಿಸಿದ ನಂತರ ನಿಮ್ಮ ಅಂಗೈಗಳನ್ನು ಬೇರ್ಪಡಿಸಿ.
* ನಿಮ್ಮ ಬಲಗಾಲನ್ನು ನೆಲಕ್ಕೆ ಇಡಿ.
* ಇನ್ನೊಂದು ಬದಿಯಲ್ಲಿ ಪುನರಾವರ್ತಿಸಿ.
ಈ ಸಮಸ್ಯೆ ಹೊಂದಿರುವವರು ವೃಕ್ಷಾಸನ ಮಾಡಬೇಡಿ
ಮೈಗ್ರೇನ್, ನಿದ್ರಾಹೀನತೆ, ಅಧಿಕ ಅಥವಾ ಕಡಿಮೆ ರಕ್ತದೊತ್ತಡ ಇರುವವರಿಗೆ ಈ ಭಂಗಿಯನ್ನು ತಪ್ಪಿಸಲು ತಜ್ಞರು ಸಲಹೆ ನೀಡುತ್ತಾರೆ. ಹೆಚ್ಚುವರಿಯಾಗಿ, ಮೊಣಕಾಲು, ಪಾದದ, ಸೊಂಟ, ಕಾಲು, ಭುಜ ಅಥವಾ ಕೆಳ ಬೆನ್ನಿನ ಮೇಲೆ ಗಾಯಗೊಂಡ ಯಾರಾದರೂ ಸರಿಯಾದ ಮಾರ್ಗದರ್ಶನವನ್ನು ಬಳಸಬೇಕು.
ದೇಹದಲ್ಲಿ ನೋವು, ಕೆಲವಷ್ಟು ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ಇಂಥ ವ್ಯಾಯಾಮಗಳನ್ನು, ಯೋಗಾಸನಗಳನ್ನು ಮಾಡುವಾಗ ವೈದ್ಯರ ಸಲಹೆ ಪಡೆಯುವುದು ಉತ್ತಮ. ಏಕೆಂದರೆ ಆರೋಗ್ಯ ಸಮಸ್ಯೆಗಳಿದ್ದಲ್ಲಿ ಇಂಥ ಆಸನಗಳನ್ನು ಕೆಲವೊಮ್ಮೆ ನೋವನ್ನು ಹೆಚ್ಚು ಮಾಡಬಹುದು. ಸರಿಯಾದವರ ಮಾರ್ಗದರ್ಶನದಲ್ಲಿ ವೈದ್ಯರ ಸಲಹೆಯ ಮೇರೆಗೆ ಇದನ್ನು ಮಾಡುವುದು ಉತ್ತಮ.
ಆದ್ದರಿಂದ ದೀರ್ಘಕಾಲದವರೆಗೆ ನಿಮ್ಮ ನೆನಪಿನ ಶಕ್ತಿ ಉತ್ತಮವಾಗಿರಬೇಕು ಎಂದಾದಲ್ಲಿ ಮೇಲೆ ಹೇಳಿದ ಉತ್ಥಿತ ಹಸ್ತಾ ಪದಂಗುಷ್ಠಾಸನ, ವೃಕ್ಷಾಸನ ಹಾಗೂ ಭ್ರಮರಿ ಪ್ರಾಣಾಯಾಮಗಳನ್ನು ನಿಯಮಿತವಾಗಿ ಅಭ್ಯಾಸ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ