5 ವರ್ಷಗಳಲ್ಲಿ ಬ್ಯಾಂಕುಗಳು ಉಳಿತಾಯಕ್ಕೆ ದುಪ್ಪಟ್ಟು ಮೊತ್ತವನ್ನು ನೀಡುತ್ತಿದ್ದ ಸಮಯವೊಂದಿತ್ತು. ಆದರೆ ಅದು ಹಳೆಯ ವಿಷಯವಾಗಿದೆ. ಇತ್ತೀಚಿನ ದಿನಗಳಲ್ಲಿ ಯಾವುದೇ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಶೇ. 3 - 4 ಕ್ಕಿಂತ ಹೆಚ್ಚಿನ ಬಡ್ಡಿ ಪಾವತಿಸುವುದಿಲ್ಲ. ಬ್ಯಾಂಕುಗಳನ್ನು ಹೊರತುಪಡಿಸಿ ಇನ್ನೂ ಅನೇಕ ಉಳಿತಾಯ ಯೋಜನೆಗಳಿದ್ದು, ಅದು ನಿಮಗೆ ಹೆಚ್ಚಿನ ಹಣ ಗಳಿಸಲು ಸಹಾಯ ಮಾಡುತ್ತದೆ.
ಅವುಗಳಲ್ಲಿ ಒಂದು ಪೋಸ್ಟ್ ಆಫೀಸ್ ಉಳಿತಾಯ ಯೋಜನೆ. ಅದಕ್ಕಿಂತ ಮುಖ್ಯವಾಗಿ, ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹಣ ಗೋತಾ ಹೊಡೆಯುತ್ತದೆ ಎನ್ನುವ ಬಗ್ಗೆ ಯಾವುದೇ ಚಿಂತೆಯಿಲ್ಲ. ಏಕೆಂದರೆ ಈ ಅಪಾಯ ಆಗುವುದಿಲ್ಲ ಎಂದು ಈ ಬಗ್ಗೆ ಸರ್ಕಾರವು ಶೇ. 100 ರಷ್ಟು ಭರವಸೆ ನೀಡುತ್ತದೆ. ಖಾತರಿಪಡಿಸಿದ ಆದಾಯವಿರುವ ಏಕೈಕ ಆಯ್ಕೆ ಅಂಚೆ ಕಚೇರಿ. ಪೋಸ್ಟ್ ಆಫೀಸ್ ಉಳಿತಾಯ ಯೋಜನೆಯ ಮೂಲಕ ಹೂಡಿಕೆಯ ಉಳಿತಾಯವನ್ನು ಗರಿಷ್ಠಗೊಳಿಸಲು ಉತ್ತಮ ಮಾರ್ಗವಾಗಿದೆ. ಅಂಚೆ ಕಚೇರಿಯ ಮರುಕಳಿಸುವ ಠೇವಣಿ (ಆರ್ಡಿ) ಇದಕ್ಕಾಗಿ ಒಂದು ಆಯ್ಕೆಯಾಗಿದೆ. ಹಣದ ಮೇಲೆ ಸ್ಥಿರ ಬಡ್ಡಿ ಇರುತ್ತದೆ, ಹಾಗೆಯೇ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ.
ಆರ್ಡಿಯಲ್ಲಿ ಶೇ 5.8 ರಷ್ಟು ಬಡ್ಡಿದರ..!
ಅಂಚೆ ಕಚೇರಿ ಠೇವಣಿಗಳ ಮೇಲೆ ಭಾರತ ಸರ್ಕಾರದ ಸಾರ್ವಭೌಮ ಗ್ಯಾರಂಟಿ ಇದ್ದರೆ, ಬ್ಯಾಂಕುಗಳಲ್ಲಿನ ಠೇವಣಿಗಳನ್ನು ಗರಿಷ್ಠ 5 ಲಕ್ಷದವರೆಗೆ ಮಾತ್ರ ರಕ್ಷಿಸಲಾಗುತ್ತದೆ. ಈ ರೀತಿಯಾಗಿ, ಪ್ರತಿ ತಿಂಗಳು ಸಣ್ಣ ಉಳಿತಾಯ ಹೂಡಿಕೆ ಮಾಡುವ ಮೂಲಕ, ನೀವು ಲಕ್ಷಗಟ್ಟಲೆ ಹಣ ಸಂಗ್ರಹ ಮಾಡಬಹುದು. ಪೋಸ್ಟ್ ಆಫೀಸ್ ಠೇವಣಿಗಳು ಸಣ್ಣ ಉಳಿತಾಯವನ್ನು ಪ್ರೋತ್ಸಾಹಿಸುತ್ತವೆ. ಆರ್ಡಿ 5 ವರ್ಷಗಳಲ್ಲಿ ಮೆಚ್ಯೂರ್ ಆಗುತ್ತದೆ, ಆದರೂ, ಇನ್ನೂ 5 ವರ್ಷಗಳವರೆಗೆ ವಿಸ್ತರಿಸಬಹುದು. ಅಂಚೆ ಕಚೇರಿಯ ಆರ್ಡಿಯಲ್ಲಿ ಪ್ರತಿ ತಿಂಗಳು ಕನಿಷ್ಠ 100 ರೂ. ಠೇವಣಿ ಇಡಬೇಕು. ಠೇವಣಿ 10 ರೂ. ನ ಗುಣಕಗಳಲ್ಲಿರಬೇಕು. ಇದರಲ್ಲಿ ಗರಿಷ್ಠ ಹೂಡಿಕೆ ಮಿತಿಯಿಲ್ಲ. ಇನ್ನು, ಆರ್ಡಿ ಮೇಲಿನ ಬಡ್ಡಿದರ ಶೇ 5.8 ರಷ್ಟಿದೆ.
ತಿಂಗಳಿಗೆ ಐದು ಸಾವಿರ ಠೇವಣಿ ಇಟ್ಟರೆ ಈ ರೀತಿ 3.48 ಲಕ್ಷ ರೂ. ಗಳಿಸಬಹುದು
ಒಬ್ಬ ವ್ಯಕ್ತಿಯು ಅಂಚೆ ಕಚೇರಿಯಲ್ಲಿ ಆರ್ಡಿ ಖಾತೆ ತೆರೆದರೆ ಅಂಚೆ ಕಚೇರಿ ಉಳಿತಾಯಕ್ಕೆ ಗರಿಷ್ಠ ಬಡ್ಡಿ ನೀಡುತ್ತದೆ. ಆರ್ಡಿ ಯೋಜನೆಯಡಿ ಅಂಚೆ ಕಚೇರಿ ಆರ್ಡಿ ಮೇಲಿನ ಬಡ್ಡಿಯನ್ನು ಶೇ 5.8 ರಷ್ಟು ಪಾವತಿಸುತ್ತದೆ. ಯಾವುದೇ ಬ್ಯಾಂಕ್ ಈ ಹೆಚ್ಚಿನ ಬಡ್ಡಿಯನ್ನು ನೀಡುವುದಿಲ್ಲ. ತ್ರೈಮಾಸಿಕ ಆಧಾರದ ಮೇಲೆ ಬಡ್ಡಿಯನ್ನು ಸಹ ಲೆಕ್ಕಹಾಕಲಾಗುತ್ತದೆ. ಅದರಂತೆ, ಒಬ್ಬ ವ್ಯಕ್ತಿಯು ಪ್ರತಿ ತಿಂಗಳು 5000 ರೂ. ಗಳನ್ನು ಅಂಚೆ ಕಚೇರಿಯ ಆರ್ಡಿ ಖಾತೆಯಲ್ಲಿ 5 ವರ್ಷಗಳ ಕಾಲ ಹೂಡಿಕೆ ಮಾಡುತ್ತಾರೆ ಎಂದು ಭಾವಿಸೋಣ. ಈ ಮೊತ್ತ 5 ವರ್ಷಗಳಲ್ಲಿ ಮೆಚ್ಯೂರ್ ಆಗುತ್ತದೆ ಮತ್ತು ಬಡ್ಡಿದರ ಶೇಕಡಾ 5.8 ಆಗಿರುತ್ತದೆ. ಆದ್ದರಿಂದ 5 ವರ್ಷಗಳ ನಂತರ ಅವರಿಗೆ ಒಟ್ಟು 3.48 ಲಕ್ಷ ರೂ. ಹಣ ಸಿಗುತ್ತದೆ.
ಹಣ ಹಿಂದಿರುಗಿಸುವ ಖಾತರಿಯನ್ನು ಸರ್ಕಾರ ತೆಗೆದುಕೊಳ್ಳುತ್ತದೆ
ಯಾವುದೇ ಸಂದರ್ಭದಲ್ಲೂ ಹಣವನ್ನು ಹೂಡಿಕೆದಾರರಿಗೆ ಹಿಂದಿರುಗಿಸಲು ಅಂಚೆ ಇಲಾಖೆ ವಿಫಲವಾದರೆ, ನಂತರ ಸರ್ಕಾರ ಹೆಜ್ಜೆ ಇಡುತ್ತದೆ ಮತ್ತು ಹೂಡಿಕೆದಾರರ ಹಣವನ್ನು ಖಾತರಿಪಡಿಸುತ್ತದೆ. ಯಾವುದೇ ಸಂದರ್ಭದಲ್ಲಿ, ಹಣ ಇಲ್ಲಿ ಸಿಲುಕಿಕೊಳ್ಳುವುದಿಲ್ಲ. ಅಂಚೆ ಕಚೇರಿ ಯೋಜನೆಯಲ್ಲಿ ಠೇವಣಿ ಇರಿಸಿದ ಹಣವನ್ನು ಸರ್ಕಾರ ತನ್ನ ಉದ್ದೇಶಗಳಿಗಾಗಿ ಬಳಸುತ್ತದೆ. ಈ ಕಾರಣಕ್ಕಾಗಿ, ಸರ್ಕಾರವು ಈ ಹಣದ ಬಗ್ಗೆ ಗ್ಯಾರಂಟಿ ನೀಡುತ್ತದೆ. ಮತ್ತೊಂದೆಡೆ, ಬ್ಯಾಂಕಿನಲ್ಲಿ ನಿಮ್ಮ ಸಂಪೂರ್ಣ ಹಣ 100% ಸುರಕ್ಷಿತವಲ್ಲ. ಬ್ಯಾಂಕ್ ನಿಮ್ಮ ಹಣ ಕೊಡಲು ವಿಫಲವಾದರೆ, DICGC ಅಂದರೆ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್ ಗ್ರಾಹಕರಿಗೆ ಕೇವಲ 5 ಲಕ್ಷ ರೂ. ವರೆಗೆ ಮಾತ್ರ ಗ್ಯಾರಂಟಿ ನೀಡುತ್ತದೆ. ಈ ನಿಯಮವು ಬ್ಯಾಂಕಿನ ಎಲ್ಲಾ ಶಾಖೆಗಳಿಗೆ ಅನ್ವಯಿಸುತ್ತದೆ. ಇದು ಪ್ರಿನ್ಸಿಪಲ್ ಮೊತ್ತ ಹಾಗೂ ಬಡ್ಡಿ ಮೊತ್ತ ಎರಡನ್ನೂ ಒಳಗೊಂಡಿದೆ. ಅಂದರೆ ಎರಡನ್ನೂ ಸೇರಿಸಿ 5 ಲಕ್ಷ ರೂ. ಗಿಂತ ಹೆಚ್ಚಿದ್ದರೂ, ಕೇವಲ 5 ಲಕ್ಷ ರೂ. ಮಾತ್ರ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ