ಬಾಲ್ಯ (Childhood) ಅಂದ್ರೆ ಸಾಕು ನಮಗೆ ನಮ್ಮಲ್ಲಿರುವ ಮುಗ್ಧತೆ, ತಮಾಷೆಯ ಗುಣ ಮತ್ತು ಸದಾ ಹುರುಪಿನಿಂದ ಕೂಡಿರುವ ಮತ್ತು ಸಕಾರಾತ್ಮಕ ಗುಣಗಳು ನೆನಪಿಗೆ ಬರುತ್ತವೆ. ಹೌದು.. ಬಾಲ್ಯ ಎಂದರೆ ಹಾಗೆಯೇ ಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ, ಈ ಸನ್ನಿವೇಶವು ಕರಾಳ ತಿರುವನ್ನು ಪಡೆದುಕೊಂಡಿದೆ ಅಂತ ಹೇಳಿದರೆ ಬಹುಶಃ ತಪ್ಪಾಗಲಿಕ್ಕಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ಖಿನ್ನತೆ (Depression) ಮತ್ತು ಇತರ ಮಾನಸಿಕ ಆರೋಗ್ಯ ಸಮಸ್ಯೆಗಳು (Mental Health Problem) ಮಕ್ಕಳನ್ನು ಈಗ ತುಂಬಾನೇ ಕಾಡುತ್ತಿರುವುದು ಅಂತ ಹೇಳಬಹುದು. ಈ ಸಮಸ್ಯೆಗಳ ವಿರುದ್ಧ ಹೇಗೆ ಹೋರಾಡುವುದು ಅಂತ ಮಕ್ಕಳು (Childrens) ಮತ್ತು ಯುವಕರು (Youth) ತುಂಬಾನೇ ಚಿಂತೀತರಾಗಿದ್ದಾರೆ ಅಂತ ಹೇಳಬಹುದು. ಈ ಮಾನಸಿಕ ಸಮಸ್ಯೆಗಳಿಂದ ಮುಕ್ತರಾಗುವುದಕ್ಕೆ ಪ್ರತಿದಿನದ ವ್ಯಾಯಾಮ ತುಂಬಾನೇ ಸಹಾಯ ಮಾಡುತ್ತೆ ಅಂತ ಹೇಳಲಾಗುತ್ತಿದೆ ನೋಡಿ.
ಖಿನ್ನತೆಯನ್ನು ದೂರ ಮಾಡುತ್ತದೆಯಂತೆ ವ್ಯಾಯಾಮ
ದೈಹಿಕ ಚಟುವಟಿಕೆಯು ಮಾನಸಿಕ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ನಿರ್ಧರಿಸಲು, ನಾರ್ವೇಜಿಯನ್ ಯೂನಿವರ್ಸಿಟಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ (ಎನ್ಟಿಎನ್ಯು) ಆರು ವರ್ಷದ 800 ಮಕ್ಕಳ ಮಾದರಿ ಗಾತ್ರವನ್ನು ತೆಗೆದುಕೊಂಡು ಅವರ ಸೊಂಟದ ಸುತ್ತಲೂ ಏಳು ದಿನಗಳ ಕಾಲ ‘ಆಕ್ಟಿವಿಟಿ ಟ್ರ್ಯಾಕರ್’ ಅನ್ನು ಇರಿಸಿತು. ಅಧ್ಯಯನದ ಪ್ರತಿಯೊಂದು ಹಂತದಲ್ಲೂ, ಪೋಷಕರು ಮತ್ತು ಮಕ್ಕಳು ತಮ್ಮ ಯೋಗಕ್ಷೇಮ ಮತ್ತು ಖಿನ್ನತೆಯ ಸಾಧ್ಯತೆಯನ್ನು ನಿರ್ಣಯಿಸಲು ಮನೋವೈದ್ಯಕೀಯ ವರದಿಯನ್ನು ಪೂರ್ಣಗೊಳಿಸಬೇಕಾಗಿತ್ತು.
6 ರಿಂದ 8 ವರ್ಷಗಳ ನಡುವೆ ಮಧ್ಯಮದಿಂದ ಹೆಚ್ಚಿನ ಮಟ್ಟದ ದೈಹಿಕ ವ್ಯಾಯಾಮವನ್ನು ಮಾಡುವ ಮಕ್ಕಳು ಒಂದೆರಡು ವರ್ಷಗಳ ನಂತರ ಖಿನ್ನತೆಯ ರೋಗಲಕ್ಷಣಗಳನ್ನು ಹೊಂದುವ ಸಾಧ್ಯತೆ ಕಡಿಮೆ ಎಂದು ಅಧ್ಯಯನವು ತೋರಿಸಿದೆ.
ಶಿಶುವಿಹಾರದಿಂದ ಹಿಡಿದು 10ನೇ ತರಗತಿಯವರೆಗಿನ ಮಕ್ಕಳ ವರ್ತನೆಯಲ್ಲಿ ವಿಕಲಚೇತನ ಮಕ್ಕಳೊಂದಿಗೆ ನಡೆಸಿದ ಪ್ರತ್ಯೇಕ ಅಧ್ಯಯನದಲ್ಲಿ, ಆಟಿಸಂ, ಗಮನದ ಕೊರತೆ, ಹೈಪರ್ ಆಕ್ಟಿವಿಟಿ ಅಸ್ವಸ್ಥತೆ, ಆತಂಕ ಮತ್ತು ಖಿನ್ನತೆಯಂತಹ ಅಸ್ವಸ್ಥತೆಗಳಿಗೆ ವ್ಯಾಯಾಮದ ಮೂಲಕ ಸಹಾಯ ಮಾಡಬಹುದು ಎಂದು ಕಂಡುಬಂದಿದೆ. ವಾರಕ್ಕೆ ಎರಡು ಬಾರಿ 30 ರಿಂದ 40 ನಿಮಿಷಗಳ ಕಾಲ ಸೈಕಲ್ ತುಳಿದ ಮಕ್ಕಳು ಯಾವುದೇ ರೀತಿಯ ಮಾನಸಿಕ ಅಸ್ವಸ್ಥತೆಗಳಿಂದ ಬಳಲುತ್ತಿಲ್ಲ ಎಂದು ವರದಿ ಮಾಡಿದ್ದಾರೆ ಅಧ್ಯಯನಕಾರರು.
ವ್ಯಾಯಾಮ ಹೇಗೆ ಸಹಾಯ ಮಾಡುತ್ತದೆ ನೋಡಿ..
ವ್ಯಾಯಾಮದ ಸಮಯದಲ್ಲಿ ಬಿಡುಗಡೆಯಾಗುವ ಎಂಡಾರ್ಫಿನ್ ಗಳು ಅಥವಾ "ಉತ್ತಮ ಭಾವನೆ" ಹಾರ್ಮೋನುಗಳು ಮಕ್ಕಳ ಮನಸ್ಥಿತಿಯನ್ನು ಹೆಚ್ಚಿಸಲು, ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಮತ್ತು ನಿದ್ರೆಯನ್ನು ಸುಧಾರಿಸುತ್ತವೆ ಅಂತ ಅಧ್ಯಯನ ಕಂಡು ಹಿಡಿದಿದೆ.
ಹಾರ್ಮೋನ್ ಉತ್ತಮ ಚಿಂತನೆ ಮತ್ತು ಕಲಿಕೆ, ಸಮಸ್ಯೆಯನ್ನು ಪರಿಹರಿಸುವುದು ಮತ್ತು ಬಲವಾದ ಗಮನದ ಅವಧಿಯಂತಹ ಅಪೇಕ್ಷಣೀಯ ಅರಿವಿನ ಗುಣಗಳನ್ನು ಪ್ರೋತ್ಸಾಹಿಸುತ್ತದೆ ಎನ್ನಲಾಗಿದೆ. ಆತಂಕವನ್ನು ಅನುಭವಿಸುವ ಮಕ್ಕಳು ಸಾಮಾನ್ಯವಾಗಿ ತಮ್ಮ ನಕಾರಾತ್ಮಕ ಆಲೋಚನೆಗಳಿಂದ ಹೊರಗೆ ಬರಲು ಸಾಧ್ಯವಾಗುವುದಿಲ್ಲ. ದೈಹಿಕ ವ್ಯಾಯಾಮವು ಅವರ ಗಮನವನ್ನು ಬೇರೆಡೆ ಕೇಂದ್ರೀಕರಿಸುವಂತೆ ಮಾಡುತ್ತದೆ. ಇದು ಅವರ ಮನಸ್ಸಿನಲ್ಲಿರುವ ತೊಂದರೆಯ ಆಲೋಚನೆಗಳನ್ನು ತೆಗೆದು ಹಾಕಲು ಮತ್ತು ಹೊಸ ಕೌಶಲ್ಯಗಳನ್ನು ಕಲಿಯಲು ಸುಲಭಗೊಳಿಸುತ್ತದೆ.
ಯಾವೆಲ್ಲಾ ಕಾರಣಗಳು ಮಕ್ಕಳಲ್ಲಿ ಖಿನ್ನತೆಗೆ ಕಾರಣವಾಗಬಹುದು?
ಮಕ್ಕಳಲ್ಲಿ ಜಡ ಜೀವನಶೈಲಿ, ಶಾಲೆಯಲ್ಲಿ ದೀರ್ಘ ಸಮಯ ಕಳೆಯುವುದು, ಕಂಪ್ಯೂಟರ್ ಸ್ಕ್ರೀನ್ ಮುಂದೆ ಕುಳಿತು ಕೆಲಸ ಮಾಡುವುದು ಅಥವಾ ಟಿವಿ ಮುಂದೆ ಕುಳಿತು ಗಂಟೆಗಟ್ಟಲೆ ಟಿವಿ ನೋಡುವುದು ಹೆಚ್ಚಿನ ಸಂಖ್ಯೆಯ ಮಕ್ಕಳು ಮತ್ತು ಹದಿಹರೆಯದವರ ಖಿನ್ನತೆಯ ಪ್ರಕರಣಗಳಿಗೆ ಕಾರಣವಾಗಿದೆ. ಬದಲಾಗಿ ಪೋಷಕರು ತಮ್ಮ ಮಕ್ಕಳು ಹೊರಗೆ ಹೋಗಿ ಓಡಲು ಮತ್ತು ಆಟವಾಡಲು ಸಮಯ ಕಳೆಯುವಂತೆ ಪ್ರೇರೇಪಿಸಬೇಕು.
ಬೌನ್ಸಿ ಚೆಂಡುಗಳು, ಟ್ರ್ಯಾಂಪೊಲಿನ್ ಗಳು, ಬೈಸಿಕಲ್ ಗಳು ಮತ್ತು ಹಗ್ಗದಾಟ ಆಡುವುದು ಇವೆಲ್ಲವೂ ಮಕ್ಕಳನ್ನು ಹೊರಗೆ ಹೋಗಿ ಬೆವರುವಂತೆ ಮಾಡುವ ಚಟುವಟಿಕೆಗಳಾಗಿವೆ. ಚಿಕ್ಕ ಮಕ್ಕಳ ಪೋಷಕರು ತಮ್ಮ ಮಕ್ಕಳಿಗೆ ದೈಹಿಕ ವ್ಯಾಯಾಮದ ಅಭ್ಯಾಸವನ್ನು ಪ್ರಾರಂಭದಿಂದಲೇ ಅಭ್ಯಾಸ ಮಾಡಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ