ಕೊಪ್ಪಳ: ಪ್ರಕೃತಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅದರಲ್ಲೂ ಆರಾಮದಲ್ಲಿ ಹೋಗಿ ಬರುವಂತಹ ಸ್ಥಳ (Tourist Place) ಆಗಿದ್ದರಂತೂ ಎಲ್ಲರೂ ತಾಮುಂದು ನೀಮುಂದು ಅಂತ ಹೋಗಿ ಸೌಂದರ್ಯ ಸವಿದು ಬರುತ್ತಾರೆ. ಅದರಲ್ಲೂ ಕೊಪ್ಪಳದ ಪ್ರವಾಸಿ ತಾಣ ಈ ಸಾಣಾಪುರ ಕೆರೆ ಹಾಗೂ ಜಲಪಾತ (Sanapur Lake And Falls) ಇವು ನೈಸರ್ಗಿಕವಾಗಿ ನಿರ್ಮಿತಗೊಂಡಿರುವ ಕಾರಣ ಇದರ ಸೊಬಗನ್ನು ಸವಿಯಲೂ ಕೊಪ್ಪಳ ಜಿಲ್ಲೆ (Koppal) ಮಾತ್ರವಲ್ಲದೇ, ರಾಜ್ಯ ಹಾಗೂ ಹೊರ ರಾಜ್ಯ ಅಲ್ಲದೇ ವಿದೇಶಿ ಪ್ರವಾಸಿಗರ (Tourists) ಇಲ್ಲಿಗೆ ನಿತ್ಯ ಬರುತ್ತಾರೆ! ತುಂಗಭದ್ರಾ ಜಲಾಶಯ ಭರ್ತಿಯಾಗಿ ನದಿಗೆ ನೀರು ಹರಿಸುವ ಸಂದರ್ಭದಲ್ಲಿ ಸಾಣಾಪುರ ಫಾಲ್ಸ್ ಹಾಗೂ ಕೆರೆ ಭರ್ತಿಯಾಗುತ್ತದೆ.
ಇಲ್ಲಿನ ಕೆರೆ ಹಾಗೂ ಜಲಪಾತ ನೋಡುಗರ ಮನ ತಣಿಸುವಂತಿವೆ. ತಾಲೂಕಿನ ಸುತ್ತಮುತ್ತಲಿನ ಜನರು ಸೇರಿದಂತೆ ಹೊಸಪೇಟೆ, ಬಳ್ಳಾರಿ, ಕೊಪ್ಪಳ, ಗದಗ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರು, ಮಾನ್ವಿ, ಬೆಂಗಳೂರು, ಹೈದರಾಬಾದ್, ಚೆನ್ನೈ ಮೂಲದ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ನಿತ್ಯ ನೂರಾರು ಜನರು ಕುಟುಂಬ ಸಮೇತರಾಗಿ ಆಗಮಿಸುತ್ತಿದ್ದಾರೆ.
ವಾರಾಂತ್ಯ ಬಂದರೆ ಸಾಕು..!
ವಿವಿಧ ಭಾಗದಿಂದ ಈ ಕೆರೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ವಾರಾಂತ್ಯ ಬಂದರೆ ಸಾಕು ಈ ಕೆರೆಯು ಜನರಿಂದ ತುಂಬಿ ತುಳುಕುತ್ತದೆ.
ಈ ಸಿನಿಮಾಗಳನ್ನು ಶೂಟಿಂಗ್ ಮಾಡಿದ್ದು ಇಲ್ಲೇ
ಇಷ್ಟಲ್ಲದೇ ಅನೇಕ ಪ್ರಸಿದ್ಧ ಕನ್ನಡ ಮತ್ತು ತೆಲುಗು ಚಿತ್ರಗಳ ಚಿತ್ರಿಕರಣವನ್ನೂ ಸಾಣಾಪುರ ಕೆರೆಯ ವಾತಾವರಣದಲ್ಲಿ ಮಾಡಲಾಗಿದೆ. ದಿಗಂತ್ ಹಾಗೂ ಐಂದ್ರಿತಾ ರೈ ನಟನೆಯ ಕನ್ನಡ ಚಲನಚಿತ್ರ 'ಮನಸಾರೆ', ಶಿವಾ ಬಾಲಾಜಿ ಹಾಗೂ ಕಾಜಲ್ ಅಗರ್ವಾಲ್ ನಟನೆಯ ತೆಲುಗಿನ ಚಂದಾಮಾಮ ಸಿನೆಮಾ, ನಿತಿನ್ ಹಾಗೂ ಚಾರ್ಮಿ ಕೌರ್ ನಟನೆಯ ತೆಲುಗಿನ ಶ್ರೀ ಆಂಜನೇಯಮ್ ಸಿನೆಮಾಗಳ ಶೂಟಿಂಗ್ಗೆ ಸಾಣಾಪುರ ಕೆರೆ ಸ್ಥಳ ಒದಗಿಸಿದೆ!
ಇತ್ತೀಚಿಗೆ ಪ್ರೀವೆಡಿಂಗ್ ಶೂಟಿಂಗ್ ಸಹ ಅಧಿಕ ಸಂಖ್ಯೆಯಲ್ಲಿ ಚಿತ್ರಿಸಲಾಗುತ್ತಿದೆ. ಒಂದು ದಿನದ ಪಿಕ್ನಿಕ್ಗೆ ಒಂದೊಳ್ಳೆ ಪ್ರವಾಸಿ ತಾಣವಾಗಿ ರೂಪಗೊಂಡಿದೆ.
ಇದನ್ನೂ ಓದಿ: Anjanadri Hill: ಹನುಮ ಜನ್ಮಭೂಮಿ ಅಂಜನಾದ್ರಿ ಪರ್ವತದ ದರ್ಶನ ಮಾಡಿಬನ್ನಿ! ಬಸ್, ರೈಲು, ವಸತಿ ವ್ಯವಸ್ಥೆಯ ಮಾಹಿತಿ ಇಲ್ಲಿದೆ
ಮೊದಲು ವಿದೇಶಿ ಪ್ರವಾಸಿಗರಿಂದಲೇ ತುಂಬಿರ್ತಿತ್ತು!
ಕೊರೊನಾ ಸೋಂಕಿಗೂ ಮುಂಚೆ ಈ ಸ್ಥಳ ವಿದೇಶಿ ಪ್ರವಾಸಿಗರಿಂದಲೇ ತುಂಬಿ ತುಳುಕುತ್ತಿತ್ತು. ಕೋವಿಡ್ ನಂತರದಲ್ಲಿ ವಿದೇಶಿಗರ ಆಗಮನಕ್ಕೆ ನಿರ್ಬಂಧ ವಿಧಿಸಲಾಗಿದೆ. ಕೊಪ್ಪಳ ಜಿಲ್ಲೆ ಮಾತ್ರವಲ್ಲದೇ ಪಕ್ಕದ ಜಿಲ್ಲೆಗಳೂ ಸೇರಿದಂತೆ ವಿವಿಧ ರಾಜ್ಯದಿಂದ ಪ್ರವಾಸಿಗರು ಇಲ್ಲಿಗೆ ತಂಡೋಪತಂಡವಾಗಿ ಆಗಮಿಸಿ ಪ್ರಕೃತಿಯ ಸವಿ ಮೆಲ್ಲುತ್ತಿದ್ದಾರೆ.
ಇದನ್ನೂ ಓದಿ: Engineering College In Koppal: ಕೊಪ್ಪಳದ ವಿದ್ಯಾರ್ಥಿಗಳಿಗೆ ಖುಷಿ ಸುದ್ದಿ! ಊರಲ್ಲೇ ಇದ್ದು ಇಂಜಿನಿಯರಿಂಗ್ ಓದಬಹುದು!
ಈ ಸುಂದರ ಸ್ಥಳಕ್ಕೆ ಬರೋದು ಹೇಗೆ?
ಕೊಪ್ಪಳದ ಸಾಣಾಪುರ ಕೆರೆ ಬೆಂಗಳೂರಿನಿಂದ ಸರಿ ಸುಮಾರು 350 ರಿಂದ 400 ಕಿ.ಮೀ ಅಂತರದಲ್ಲಿದೆ. ಬಸ್ನಲ್ಲಿ ಬರಬೇಕು ಎನ್ನುವವರರು ಬೆಂಗಳೂರಿನಿಂದ ನೇರವಾಗಿ ಗಂಗಾವತಿಗೆ ಬಂದು ಅಲ್ಲಿಂದ ಹುಲಗಿ ಮಾರ್ಗದಲ್ಲಿರುವ ಸಾಣಾಪೂರ ಗ್ರಾಮದಲ್ಲಿ ಇಳಿದು ನಾಲ್ಕು ಹೆಜ್ಜೆ ಇಟ್ಟರೆ ಸಾಕು, ಈ ಸೌಂದರ್ಯವನ್ನು ನೀವು ಸವಿಯಬಹುದು!
ರೈಲು ಪ್ರಯಾಣಿಕರಾದ್ರೆ?
ರೈಲಿನಲ್ಲಿ ಪ್ರಯಾಣಿಸುವವರು ನೇರವಾಗಿ ಹೊಸಪೇಟೆಗೆ ಬಂದು ಅಲ್ಲಿಂದ 20 ಕಿ.ಮೀ ಸಂಚರಿಸಿದರೆ ನಿಮಗೆ ಸಾಣಾಪುರ ಕೆರೆ ಎದುರಾಗುತ್ತದೆ. ಬನ್ನಿ, ಪ್ರಕೃತಿ ಸೌಂದರ್ಯ ಸವಿದು ಖುಷಿ ಪಡಿ. ಆದರೆ ನೆನಪಿಡಿ, ಸ್ವಚ್ಛತೆಯ ಗಮನವಿರಲಿ. ನೀವೇ ಕೊನೆಯ ಪ್ರವಾಸಿಗರಲ್ಲ ಎಂದು ಅರಿತಿದ್ದರೆ ಸಾಕು!
ವರದಿ: ರಾಘವೇಂದ್ರ ಜಂಗ್ಲಿ, ಕೊಪ್ಪಳ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ