ಕೊಡಗು ಅಂದ್ರೆನೇ ವಿಶೇಷ. ರಾಜ್ಯದ ಯಾವುದೇ ಜಿಲ್ಲೆಯಲ್ಲೂ ಇರದಂತಹ ವಿಶಿಷ್ಟ ಹವಾಗುಣ ಇರೋ ಕೊಡಗು. ಆಚರಣೆಗಳ ದೃಷ್ಠಿಯಲ್ಲೂ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಮಳೆಗಾಲ ಬಂತೆಂದರೆ ಕೊಡವರಿಗೆ(Kodava Culture) ಕಕ್ಕಡ ಮಾಸದ ಸಂಭ್ರಮ. ಈ ಸಮಯದಲ್ಲಿ ಜಿಲ್ಲೆಯಲ್ಲಿ (Kodagu) ಅತೀ ಹೆಚ್ಚು ಮಳೆಯಾಗುತ್ತೆ. ಅದೇ ವೇಳೆ ಕಕ್ಕಡ ಪದಿನೆಟ್ಟ್ ಅನ್ನೋ ವಿಶೇಷ ಆಚರಣೆಯೂ ನಡೆಯುತ್ತೆ. ವಿಭಿನ್ನ ಆಚರಣೆಗಳೊಂದಿಗೆ ದೇಶದ ಗಮನ ಸೆಳೆದಿರುವ ಪುಟ್ಟ ಜಿಲ್ಲೆ ಕೊಡಗಿನಲ್ಲಿ ಹಬ್ಬ ಹರಿದಿನಗಳಿಗೆ ಕೊರತೆ ಇಲ್ಲ. ಹಾಗಾದ್ರೆ ಅದರ ವಿಶೇಷತೆ ಏನು? ಹಬ್ಬದ ಸಂಭ್ರಮ ( Kodagu Special) ಹೇಗಿರುತ್ತೆ? ಎಲ್ಲವನ್ನೂ ಹೇಳ್ತೀವಿ ಕೇಳಿ..
ಆಟಿ ಪಾಯಸ
ಕಕ್ಕಡ ಮಾಸ ಅನ್ನೋದು ಕೊಡಗಿನವರಿಗೆ ತುಂಬಾನೇ ಸ್ಪೆಷಲ್. ಯಾಕಂದ್ರೆ ಆ ಸಮಯದಲ್ಲಿ ಮದ್ದು ಸೊಪ್ಪಿನ ಪಾಯಸ ಸೇವಿಸುವುದು ರೂಢಿ. ಅಂದ ಹಾಗೆ ಅದರ ಹಿಂದೆ ಒಂದು ವಿಶೇಷ ನಂಬಿಕೆಯೂ ಇದೆ.
ಔಷಧೀಯ ಸಸ್ಯಗಳ ತವರು
ಆಟಿ ಅಥವಾ ಮದ್ದು ಸೊಪ್ಪು ಎಂದು ಕರೆಯಲ್ಪಡುವ ಔಷಧೀಯ ಗಿಡದ ರಸದಿಂದ ತಯಾರಿಸಿದ ಪಾಯಸವನ್ನು ಎಲ್ಲರ ಮನೆಯಲ್ಲಿಯೂ ಮಾಡಿ ಸವಿಯುವುದು ವಾಡಿಕೆ. ಕೊಡಗಿನಲ್ಲಿ ಸಾಕಷ್ಟು ಔಷಧೀಯ ಗುಣಗಳುಳ್ಳ ಸಸ್ಯ ಪ್ರಭೇದಗಳಿವೆ. ಅವುಗಳಲ್ಲಿ ಆಟಿ ಸೊಪ್ಪು ಪ್ರಮುಖವಾದದ್ದು. ತುಳುನಾಡಿನಲ್ಲಿ ಆಟಿ ಹದಿನೆಂಟನ್ನು ಯಾವ ರೀತಿಯಲ್ಲಿ ಆಚರಿಸಲಾಗುವುದೋ ಅದೇ ರೀತಿಯಲ್ಲಿ ಕೊಡಗಿನಲ್ಲಿ ಕೂಡ ಕಕ್ಕಡ ಪದಿನೆಟ್ಟ್ ಒಂದು ವಿಶಿಷ್ಟ ಆಚರಣೆಯಾಗಿದೆ.
ಕಕ್ಕಡ ಪದಿನೆಟ್ಟ್ ಎಂದ್ರೇನು?
ಆಟಿ ಸೊಪ್ಪಿನಿಂದ ತಯಾರಿಸಿದ ಪಾಯಸಕ್ಕೆ ಕಕ್ಕಡ ಪದಿನೆಟ್ಟ್ ಪಾಯಸ ಅಂತಾ ಕರೆಯಲಾಗತ್ತೆ. ಕಕ್ಕಡ ಅಂದ್ರೆ ಆಟಿ ತಿಂಗಳು ಅಥವಾ ಕರ್ಕಾಟಕ ಮಾಸ ಎಂದು ಅರ್ಥ. ಆಟಿ ಸೊಪ್ಪಿಗೆ ಕಕ್ಕಡ ತಿಂಗಳ ಮೊದಲ ದಿನದಿಂದ 18 ದಿನಗಳವರೆಗೆ ನಾನಾ ಔಷಧೀಯ ಗುಣಗಳು ಸೇರುತ್ತವೆ. ಹೀಗಾಗಿ ಆ ಸೊಪ್ಪನ್ನು ಬೇಯಿಸಿ ರಸ ತೆಗೆದು ಪಾಯಸ ಮಾಡಿ ಸೇವಿಸಿದ್ರೆ ದೇಹದಲ್ಲಿನ ನಾನಾ ಕಾಯಿಲೆಗಳು ದೂರವಾಗುತ್ತದೆ ಎಂಬ ನಂಬಿಕೆ ಹಿರಿಯರಲ್ಲಿ ಇದೆ. ಅದು ಇಂದಿಗೂ ಹಾಗೆಯೇ ಮುಂದುವರಿದುಕೊಂಡು ಬಂದಿದೆ.
ಆಟಿ ಪಾಯಸ ಹೀಗ್ ಮಾಡ್ತಾರೆ
ಹಾಗಾದ್ರೆ ಹೆಚ್ಚು ಮಹತ್ವ ಹೊಂದಿರೊ ಮದ್ದು ಪಾಯಸವನ್ನ ತಯಾರಿಸುವ ರೀತಿ ಹೇಗೆ ಅನ್ನೋದನ್ನೂ ತೋರಿಸ್ತೀವಿ ನೋಡಿ.. ಸೊಪ್ಪನ್ನು ಮೊದಲಿಗೆ ತೊಳೆದು ಸ್ವಚ್ಛಗೊಳಿಸಿ ಒಂದು ಪಾತ್ರೆಯಲ್ಲಿ ನೀರಿನೊಂದಿಗೆ ಬೇಯಿಸ್ತಾರೆ. ಬಳಿಕ ಸೊಪ್ಪಿನ ರಸವನ್ನು ಮತ್ತೊಂದು ಪಾತ್ರೆಗೆ ಸೋಸಿಕೊಂಡು, ಮದ್ದಿನ ರಸಕ್ಕೆ ಅಗತ್ಯವಿರುವಷ್ಟು ಅಕ್ಕಿ ಹಾಕಿ ಬೇಯಿಸಬೇಕು. ಬೆಂದ ಬಳಿಕ ಉಪ್ಪು, ಬೆಲ್ಲದ ನೀರು, ತೆಂಗಿನ ತುರಿ, ಬೆಳ್ಳುಳ್ಳಿ ಪೇಸ್ಟ್, ಕರಿಮೆಣಸು, ಏಲಕ್ಕಿ ಹುಡಿ ಹಾಕಿ ಸ್ವಲ್ಪ ಸಮಯದವರೆಗೆ ಸಣ್ಣ ಉರಿಯಲ್ಲಿ ಬೇಯಿಸಲಾಗತ್ತೆ. ರುಚಿಕರ ಪಾಯಸಕ್ಕೆ ತುಪ್ಪ, ಜೇನು ಬೆರೆಸಿ ತಿನ್ನುತ್ತಾರೆ. ಪಾಯಸ ಸೇವಿಸಿದ ಬಳಿಕ ಮೂತ್ರ ಕೂಡ ಕೆಂಬಣ್ಣಕ್ಕೆ ತಿರುಗುತ್ತೆ. ಇನ್ನು ಕೆಂಬಣ್ಣದ ಈ ರಸದಿಂದ ಹಲ್ವ, ಇಡ್ಲಿ ಸೇರಿದಂತೆ ವಿವಿಧ ಖಾದ್ಯಗಳನ್ನೂ ತಯಾರಿಸ್ತಾರೆ.
ಮದ್ದು ಸೊಪ್ಪು ಸಿಗುವುದೆಲ್ಲಿ?
ಕಕ್ಕಡ ಹಿನ್ನೆಲೆ ಮಾರುಕಟ್ಟೆಗೆ ವ್ಯಾಪಾರಿಗಳು ನಾನಾ ಕಡೆಯಿಂದ ಮದ್ದುಸೊಪ್ಪನ್ನು ತಂದು ಮಾರಾಟ ಮಾಡ್ತಾರೆ. ಸಾಕಷ್ಟು ಜನ ತಮ್ಮ ಮನೆಯ ಸುತ್ತಮುತ್ತಲೇ ಇಂದಿಗೂ ಈ ಗಿಡಗಳನ್ನು ಬೆಳೆಸಿಕೊಂಡು ಬರುತ್ತಿದ್ದಾರೆ. ಮದ್ದು ಸೊಪ್ಪುಗಳು ಜಿಲ್ಲೆಯ ಕಾಡುಗಳು ಮಾತ್ರವಲ್ಲದೇ, ಕಾಫಿ ತೋಟದಲ್ಲೂ ಹೇರಳವಾಗಿ ಸಿಗುತ್ತೆ.
ಇದನ್ನೂ ಓದಿ: Kamalapur Red Banana: ಕಮಲಾಪುರದ ಕೆಂಪುಬಾಳೆ! ತಿಂದರೆ ತಿಂತಾನೇ ಇರ್ತೀರಿ, ಅಷ್ಟು ರುಚಿ!
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ..
ಕೊಡಗಿನಲ್ಲಿ ಮಳೆ ಶುರುವಾದರೆ ನಿಲ್ಲುವ ಮಾತೇ ಇಲ್ಲ. ಆಟಿ ತಿಂಗಳಲ್ಲಿ ಮಳೆ ಸುರಿಯುವುದರಿಂದ ಜನರು ಹೆಚ್ಚು ಶೀತಕ್ಕೊಳಗಾಗಿರುತ್ತಾರೆ. ಜತೆಗೆ ಎರಡು ತಿಂಗಳು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುತ್ತದೆ. ಹೀಗಾಗಿ ಈ ಸೊಪ್ಪಿನ ರಸ ಸೇವಿಸುವುದರಿಂದ ದೇಹದ ಉಷ್ಣಾಂಶ ಹೆಚ್ಚಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಅಲ್ಲದೆ ಗದ್ದೆಯಲ್ಲಿ ನಾಟಿ ಮಾಡಿದ ನಂತರ, ಶರೀರದ ಉಷ್ಣತೆ ಹೆಚ್ಚಿಸಿಕೊಳ್ಳಲು ಈ ಪಾಯಸವನ್ನು ಮಾಡಿ ಸೇವಿಸುವುದು ವಾಡಿಕೆ.
ಇದನ್ನೂ ಓದಿ: Kodagu Recipe: ಕೊಡವರ ಆರೋಗ್ಯದ ಗುಟ್ಟು ಆಟಿ ಪಾಯಸ! ಇಲ್ಲಿದೆ ನೋಡಿ ರೆಸಿಪಿ
ಮಳೆಗಾಲ ಕೊಡಗಿನವರಿಗೆ ಸವಾಲಿನ ಸಮಯವಾದ್ರೂ, ಎಂಥದ್ದೇ ಸವಾಲುಗಳನ್ನು ತಂದೊಡ್ಡಿದ್ರೂ, ಆಟಿ ಪಾಯಸದ ಮತ್ತೇರಿಸುವ ಪರಿಮಳ ಎಲ್ಲವನ್ನೂ ಒಂದು ಕ್ಷಣ ಮರೆಸಿ ಬಿಡುತ್ತೆ. ಔಷಧೀಯ ಗುಣ ಹೊಂದಿರುವ ಮದ್ದು ಪಾಯಸ ದೇಹ ಸೇರಿದ್ಮೇಲೆ ಇನ್ನಷ್ಟು ಕ್ರಿಯಾಶೀಲರಾಗೋದು ಕನ್ಫರ್ಮ್.
ವರದಿ: ಸ್ಟ್ಯಾನ್ಲಿ ಡಿ, ಕೊಡಗು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ