ಕೊಡಗು: ಇನ್ನೂ ಕಣ್ಣು ಬಿಡದ ಅಮ್ಮನ ಹೊಟ್ಟೆಯನ್ನೇ ಜಗತ್ತಾಗಿಸಿಕೊಂಡ ಮರಿಯಾನೆ, (Baby Elephant) ಹೊರ ಜಗತ್ತಿಗೆ ಕೆಲವೇ ಕೆಲವು ದಿನಗಳಲ್ಲಿ ಕಾಲಿಡುವ ಜೀವನದ ಆಸೆ, ಆದರೆ ಆ ಆಸೆ ಇನ್ನು ಆಸೆಯಾಗಷ್ಟೇ ಉಳಿಯಿತು ಎಂಬುದು ಮಾತ್ರ ಆ ಮರಿಯಾನೆಗೆ, ಅದರ ತಾಯಿಗೆ (Mother Elephant) ತಿಳಿದಿರಲಿಲ್ಲವೇನೋ.
ಹೌದು, ವನ್ಯಜೀವಿ ಹಾಗೂ ಮಾನವನ ನಡುವಿನ ಸಂಘರ್ಷ ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ವರ್ಷಂಪ್ರತಿ ಕಾಡಿನ ಪ್ರಮಾಣ ಕಡಿಮೆಯಾದಂತೆ ಆಹಾರ ಮತ್ತು ನೀರಿನ ಪ್ರಮಾಣ ಕಡಿಮೆಯಾಗಿ ಜನವಸತಿ ಮತ್ತು ರೈತರ ಹೊಲ ಗದ್ದೆಗಳಿಗೆ ಆನೆಗಳು ನುಗ್ಗುವುದು ಸರ್ವೇ ಸಾಮಾನ್ಯ ಎನ್ನುವಂತಾಗಿದೆ.
10 ತಿಂಗಳ ಗರ್ಭಿಣಿ ಇನ್ನಿಲ್ಲ..
ಹೊಟ್ಟೆ ತುಂಬಿಸಿಕೊಂಡು, ಹಸಿವು ನೀಗಿಸಿಕೊಳ್ಳಲು ತೋಟದತ್ತ ನುಗ್ಗಿದ 10 ತಿಂಗಳ ಗರ್ಭಿಣಿ ಹೆಣ್ಣಾನೆಯೊಂದು ದಾರುಣವಾಗಿ ಉಸಿರು ಚೆಲ್ಲಿದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ರಸೂಲ್ ಪುರ ಬಾಳುಗೋಡಿನಲ್ಲಿ ಶನಿವಾರ ತಡರಾತ್ರಿ ನಡೆದಿದೆ.
20 ವರ್ಷದ ಹೆಣ್ಣಾನೆ
ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಈ ಹೆಣ್ಣಾನೆಯನ್ನು ಕಿಡಿಗೇಡಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಅಂದಾಜು 20 ವರ್ಷದ ಹೆಣ್ಣಾನೆಯನ್ನು ಶೂಟ್ ಮಾಡಿ ಹತ್ಯೆ ಮಾಡಲಾಗಿದೆ. ರಸೂಲ್ ಪುರ, ಬಾಳುಗೋಡು ಹಾಗೆ ದುಬಾರೆ ಭಾಗದಲ್ಲಿ ಕಾಡಾನೆಗಳ ಕಾಟ ಹೊಸದೇನೂ ಅಲ್ಲ. ಆ ಭಾಗದಲ್ಲೆಲ್ಲಾ ಸಾಕಷ್ಟು ಅರಣ್ಯ ಪ್ರದೇಶ ಇರುವುದರಿಂದ ಅಲ್ಲಿರುವ ಆನೆಗಳು ಪ್ರತೀ ರಾತ್ರಿ ಕಾಡಿನಿಂದ ನಾಡಿಗೆ ಆಹಾರ ಅರಸಿ ಬಂದೇ ಬರುತ್ತವೆ.
ಸೋಲಾರ್ ಬೇಲಿ ಇದ್ರೂ ಪ್ರಯೋಜನವಿಲ್ಲ
ಇದಕ್ಕಾಗಿ ರೈತರು, ಅರಣ್ಯ ಇಲಾಖೆ ಕಾಡಿನ ಅಂಚಿನಲ್ಲಿ ಸೋಲಾರ್ ವಿದ್ಯುತ್ ಬೇಲಿಯನ್ನು ನಿರ್ಮಿಸಲಾಗಿದೆ. ಆದರೆ ಇವುಗಳು ಸರಿಯಾಗಿ ಕೆಲಸ ಮಾಡದ ಹಿನ್ನೆಲೆಯಲ್ಲಿ ಆನೆಗಳು ಸುಲಭವಾಗಿ ರೈತರ ತೋಟ ಗದ್ದೆಗಳಿಗೆ ನುಗ್ಗುತ್ತವೆ.
ಸ್ಥಳಕ್ಕೆ ಅಧಿಕಾರಿಗಳ ದಂಡು
ಹೀಗೆ ರಾತ್ರಿಯೂ ಕೂಡ ಕಾಫಿ ತೋಟಗಳಿಗೆ ನುಗ್ಗಿದ ಹೆಣ್ಣಾನೆಯೊಂದಕ್ಕೆ ಶೂಟ್ ಮಾಡಿ ಹತ್ಯೆ ಮಾಡಲಾಗಿದೆ. ಶೂಟ್ ಮಾಡುತ್ತಿದ್ದಂತೆ ಆನೆ ಸ್ಥಳದಲ್ಲಿಯೇ ಸತ್ತು ಬಿದ್ದಿದೆ. ಡಿಂಪು ಎಂಬುವವರ ತೋಟದಲ್ಲಿ ಆನೆ ಸತ್ತು ಬಿದ್ದಿದೆ. ವಿಷಯ ತಿಳಿಯುತ್ತಿದ್ದಂತೆ ಬೆಳಿಗ್ಗೆಯೇ ಸ್ಥಳಕ್ಕೆ ಮಡಿಕೇರಿ ಡಿಎಫ್ಓ ಶಿವರಾಮ್ ಬಾಬು, ಕುಶಾಲನಗರ ಆರ್ಎಫ್ಓ ಶಿವರಾಮ್, ದುಬ್ಬಾರೆ ವ್ಯಾಪ್ತಿಯ ಡಿಆರ್ಎಫ್ಓ ಕೆ.ಪಿ. ರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನೆ ಸತ್ತು ಬಿದ್ದಿರುವ ತೋಟದ ಮಾಲೀಕರಾದ ಡಿಂಪು ಮತ್ತು ಅದೇ ಗ್ರಾಮದ ಮತ್ತೋರ್ವ ವ್ಯಕ್ತಿ ದಿನೇಶ್ ಎಂಬುವವರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Mysuru Pak History: ಕಾಕಾಸುರ ಮಾದಪ್ಪ ಭಟ್ಟರ ನಳಪಾಕ!
ತಲೆಮರೆಸಿಕೊಂಡ ಆರೋಪಿಗಳು
ಆನೆ ಸತ್ತು ಬಿದ್ದಿರುವ ಜಾಗದಲ್ಲಿ ಗುಂಡಿನ ಕಾಟ್ರೇಜ್ಗಳು ಕೂಡ ಸಿಕ್ಕಿದ್ದು, ಇದರಿಂದ ಯಾರು ಆನೆಯನ್ನು ಶೂಟ್ ಮಾಡಿ ಹತ್ಯೆ ಮಾಡಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಲು ಸುಲಭವಾಗಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅನುಮಾನ ವ್ಯಕ್ತಪಡಿಸಿರುವ ಇಬ್ಬರು ವ್ಯಕ್ತಿಗಳು ತಲೆಮರೆಸಿಕೊಂಡಿದ್ದಾರೆ. ಅರಣ್ಯ ಇಲಾಖೆ ಪೊಲೀಸರು ಇಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ. ಹತ್ಯೆಯಾಗಿರುವ ಆನೆಯನ್ನು ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆ ಮಾಡಲಾಗಿದೆ.
ಉದ್ದೇಶ ಪೂರ್ವಕವಾಗಿ ಗುಂಡು ಹಾರಿಸಿದ್ರಾ?
ಆನೆಗೆ ಎರಡು ಸುತ್ತಿನ ಗುಂಡು ಹಾರಿಸಲಾಗಿದ್ದು, ಇದು ಉದ್ದೇಶ ಪೂರ್ವಕವಾಗಿಯೇ ಗುಂಡು ಹೊಡೆದು ಹತ್ಯೆ ಮಾಡಿರುವುದು ಎನ್ನಲಾಗಿದೆ. ಒಂದು ಗುಂಡು ಆನೆಯ ತಲೆಗೆ ತಲೆಗೆ ಸರಿಯಾಗಿ ಬಿದ್ದಿದ್ದರೆ, ಮತ್ತೊಂದು ಗುಂಡು ಕುತ್ತಿಗೆಗೆ ಹೊಕ್ಕಿದೆ. ಹೀಗಾಗಿ ಆನೆ ಸ್ಥಳದಲ್ಲಿಯೇ ಮೃತಪಟ್ಟಿದೆ ಎಂದು ಶಿವರಾಮ್ ಬಾಬು ತಿಳಿಸಿದ್ದಾರೆ.
ಇದನ್ನೂ ಓದಿ: Interesting Fact: ಕನ್ನಡಿಗರ ಹೆಮ್ಮೆ KMF ಹುಟ್ಟಲು ಇದೇ ಜಿಲ್ಲೆ ಪ್ರೇರಣೆ!
ಕಣ್ಬಿಡುವ ಮುನ್ನ ಕಣ್ಮುಚ್ಚಿದ ಮರಿ
ಆನೆ 10 ತಿಂಗಳ ಗರ್ಭಿಣಿಯಾಗಿತ್ತು ಎನ್ನುವುದು ಮರಣೋತ್ತರ ಪರೀಕ್ಷೆ ವೇಳೆ ಗೊತ್ತಾಗಿದೆ. ಇನ್ನು ಕೆಲವು ತಿಂಗಳು ಕಳೆದಿದ್ದರೆ ಆನೆ ಮರಿಯೊಂದಕ್ಕೆ ಜೀವ ನೀಡುತಿತ್ತು. ಆನೆ ಮೃತಪಟ್ಟಿದ್ದರಿಂದ ಹೊಟ್ಟೆಯಲ್ಲಿದ್ದ ಮರಿಯೂ ಕಣ್ಬಿಡುವುದಕ್ಕೂ ಮುನ್ನವೇ ಸಾವನ್ನಪ್ಪಿದೆ. ಮರಣೋತ್ತರ ಪರೀಕ್ಷೆ ಬಳಿಕ ಅಲ್ಲಿಯೇ ಆನೆ ಶವ ಸಂಸ್ಕಾರ ಮಾಡಲಾಗಿದೆ.
ವರದಿ: ಸ್ಟ್ಯಾನ್ಲಿ ಡಿ, ಕೊಡಗು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ