ಕಲಬುರಗಿ: ಬೀದಿ ತುಂಬಾ ನೀಲಿ ರಂಗು. ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸುತ್ತಿರೋ ಯುವಕರು. ಇಡೀ ಊರಿಗೆ ಊರೇ ಹಬ್ಬದ ಸಂಭ್ರಮದಲ್ಲಿ ತೇಲಾಡ್ತಿದೆ. ಅಂಬೇಡ್ಕರ್ (Dr. BR Ambedkar) ಪ್ರತಿಮೆಗೆ ವಿಶೇಷ ಪುಷ್ಪ ನಮನ ಜೊತೆಗೆ ನಾಡಹಬ್ಬದ ವಾತಾವರಣ. ಏನಿದು ಆಚರಣೆ ಅಂತೀರಾ? ಈ ಸ್ಟೋರಿ ನೋಡಿ.
ಯೆಸ್, ಅಂಬೇಡ್ಕರ್ ಜಯಂತಿ ಆಚರಣೆಯ ಆಗಿ ಹದಿಮೂರು ದಿನದ ಬಳಿಕ ಕಲಬುರಗಿಯಲ್ಲಿ ಅಂಬೇಡ್ಕರ್ ಹೆಸರಲ್ಲಿ ಭಾರೀ ವಿಜೃಂಭಣೆಯ ಆಚರಣೆ ನಡೆಯುತ್ತೆ. ಅಂದು ಕಲಬುರಗಿಯ ವಾಡಿ ಪಟ್ಟಣವು ಸಂಪೂರ್ಣ ನೀಲಿಮಯದ ಜೊತೆಗೆ, ಪ್ರತೀ ಮನೆ ಮನೆಗಳಲ್ಲಿಯೂ ಹೋಳಿಗೆ ಊಟ ರೆಡಿಯಾಗಿರ್ತವೆ. ಹೀಗೆ ಯುಗಾದಿ, ಸಂಕ್ರಾಂತಿ ಹಬ್ಬದಂತೆ ಅಂಬೇಡ್ಕರ್ ಜಯಂತ್ಯೋತ್ಸವವನ್ನು ಆಚರಿಸಲಾಗುತ್ತೆ.
48 ಗಂಟೆಗಳ ಸಂಭ್ರಮ|
ಪ್ರತಿ ವರ್ಷ ಸತತ 48 ಗಂಟೆಗಳ ಕಾಲ ಈ ಊರಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತೆ. ದಲಿತ ಸಮುದಾಯದ ಓಣಿಯಲ್ಲಿ ಅಂದು ಹಬ್ಬವೇ ನಡೆಯುತ್ತೆ. ಮದುವೆಯಾಗಿ ಗಂಡನ ಮನೆಗೆ ಹೋದ ಹೆಣ್ಣು ಮಕ್ಕಳು ತವರು ಮನೆಗೆ ಬಂದು ಹೋಳಿಗೆ ಊಟ ಸವಿದು ಕುಟುಂಬದವರೊಂದಿಗೆ ಹಾಗೂ ಬಡವಾಣೆಯ ಜನರೊಂದಿಗೆ ಸಂಭ್ರಮಿಸುತ್ತಾರೆ.
ಹಿನ್ನೆಲೆ ಏನು ಗೊತ್ತಾ?
ಇಂತಹದ್ದೊಂದು ಹಬ್ಬ ಆಚರಣೆಗೂ ಕಾರಣವಿದೆ, 1948 ರಲ್ಲಿ ತಮಿಳುನಾಡಿನಲ್ಲಿ ಪೆರಿಯಾರ್ ರಾಮಸ್ವಾಮಿ ಅವರು ಆಯೋಜಿಸಿದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹೋಗುತ್ತಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರು, ಕೆಲ ಸಮಯವಾಡಿ ರೈಲು ನಿಲ್ದಾಣದಲ್ಲಿ ಉಳಿದಿದ್ದರು. ಆಗ ಸುದ್ದಿ ತಿಳಿದು ಇಲ್ಲಿನ 40 ರಿಂದ 50 ಜನ ಸ್ಥಳೀಯರು ಹಾಗೂ ಹಿರಿಯರು ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ಭೇಟಿಯಾಗುತ್ತಾರೆ.
ಇದನ್ನೂ ಓದಿ: Kalaburagi Success Story: ಸಾವಯವ ಬೆಲ್ಲದಿಂದ ಲಕ್ಷಾಧಿಪತಿಗಳಾದ ಅಣ್ಣ ತಮ್ಮಂದಿರು!
ಅಂದಿನಿಂದ ಇಲ್ಲಿನ ಹಿರಿಯರು ಅಂಬೇಡ್ಕರ್ ಜೀವಂತವಿರುವಾಗಲೇ ಸೈಕಲ್ ಮೇಲೆ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾರಂಭಿಸಿದ್ರು. ಅಂದು ಹಿರಿಯರು ಆರಂಭಿಸಿದ ಜಯಂತೋತ್ಸವ ಪದ್ಧತಿಯನ್ನು ಇಂದು ವಾಡಿ ಪಟ್ಟಣದ ದಲಿತ ಸಮುದಾಯದವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಎರಡನೇ ಭೇಟಿ
ಇನ್ನು ಎರಡನೇ ಬಾರಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಹೈದರಾಬಾದ್ನಿಂದ ಹೋಗಬೇಕಾದ್ರೆ ಮತ್ತೊಮ್ಮೆ 1952 ರಲ್ಲಿ ವಾಡಿ ಪಟ್ಟಣಕ್ಕೆ ಭೇಟಿ ಕೊಡ್ತಾರೆ. ಅಂದು ರೈಲ್ವೆ ನಿಲ್ದಾಣದ ಹೊರ ಭಾಗದಲ್ಲಿರುವ ನಿಜಾಮರ ಕಾಲದ ನಾಣ್ಯ ವಿನಿಮಯ ಕಚೇರಿಯಲ್ಲಿ ಕುಳಿತು ಸ್ಥಳೀಯ ದಲಿತ ಮುಖಂಡರೊಂದಿಗೆ ಚರ್ಚೆಯನ್ನು ನಡೆಸುತ್ತಾರೆ.
ಅಂಬೇಡ್ಕರ್ ಕೂತಲ್ಲಿಯೇ ಪ್ರತಿಮೆ
ಅಂದು ಅಂಬೇಡ್ಕರ್ ಅವರು ಕುಳಿತ ಅದೇ ಸ್ಥಳದಲ್ಲಿಯೇ ಇಂದು ಅಂಬೇಡ್ಕರ್ ಅವರ ಸ್ಮಾರಕ ನಿರ್ಮಾಣ ಭವನ ಹಾಗೂ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಜೊತೆಗೆ ಅಂದಿನಿಂದ ಇಂದಿನವರೆಗೂ ಏಪ್ರಿಲ್ 27 ಹಾಗೂ 28 ರಂದು ಪ್ರತಿವರ್ಷ ಎರಡು ದಿನಗಳ ಕಾಲ ಅದ್ದೂರಿಯಾಗಿ ಡಾ. ಬಿಆರ್ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಇದನ್ನೂ ಓದಿ: Free Hostel: ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ಸೌಲಭ್ಯ, ಈಗಲೇ ಹೀಗೆ ಅರ್ಜಿ ಸಲ್ಲಿಸಿ
ಒಟ್ಟಿನಲ್ಲಿ ‘ಧ್ರುವತಾರೆ, ಸಂವಿಧಾನ ಶಿಲ್ಪಿ, ಮಹಾನಾಯಕ ಅಂಬೇಡ್ಕರ್ ಅವರ ಜಯಂತ್ಯೋತ್ಸವವನ್ನು ಈ ಎರಡು ದಿನಗಳ ಕಾಲ ಭಾರೀ ವಿಜೃಂಭಣೆಯೊಂದಿಗೆ ನಡೆಸಿ ಅಂಬೇಡ್ಕರ್ ಅವರಿಗೆ ಪುಷ್ಪಾರ್ಚನೆ ನಡೆಸಿ ಸಂಭ್ರಮಿಸುತ್ತಾರೆ.
ವರದಿ: ಶ್ರೀಕಾಂತ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ