ಕಲಬುರಗಿ: ಒಬ್ಬರು, ಇಬ್ಬರಲ್ಲ ಸಾವಿರಾರು ಮಂದಿಯಿಂದ ಕೆಂಡ ಹಾಯೋ ಸಾಹಸ. ಪಲ್ಲಕ್ಕಿ ಹೊತ್ತ ಭಕ್ತರಿಂದಲೂ ಕೆಂಡ ಹಾಯುತ್ತಾ (Kenda Seva) ಭಕ್ತಿ ಪರಕಾಷ್ಠೆಯ ಪ್ರದರ್ಶನ. ಬಸವೇಶ್ವರ ಮಹಾರಾಜ (Basaveshwar Maharaj) ಕೀ ಜೈ ಎನ್ನುತ್ತಾ ಇಡೀ ಬೀದಿಯೇ ಭಕ್ತಿಯ ಕಡಲಲ್ಲಿ ತೇಲಾಡಿತು. ವಿವಿಧ ಬಗೆಯ ಸಂಪ್ರದಾಯ, ಆಚರಣೆಗಳು ಮೇಳೈಸಿತು.
ಈ ಎಲ್ಲ ಸಂಭ್ರಮ ಕಂಡು ಬಂದಿದ್ದು ಕಲಬುರಗಿಯ ಆರಾಧ್ಯ ದೈವ, ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಐತಿಹಾಸಿಕ ಶ್ರೀ ಕೊತ್ತಲ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ.
ಭಕ್ತರು ರೋಮಾಂಚನ!
ವಿಜೃಂಭಣೆಯಿಂದ ನಡೆದ ಜಾತ್ರಾ ಮಹೋತ್ಸವದಲ್ಲಿ ಜನ ಭಾರೀ ಉತ್ಸಾಹದಿಂದ ಪಾಲ್ಗೊಂಡರು. ಇಡೀ ದೇಗುಲದ ಆವರಣವೇ ಜನಸಾಗರದಲ್ಲಿ ತುಂಬಿ ಹೋಗಿತ್ತು. ಸುತ್ತಮುತ್ತಲಿದ್ದ ಕಟ್ಟಡಗಳನ್ನೇರಿ ಜನ ಬಸವೇಶ್ವರ ಜಾತ್ರೆಯ ಸಂಭ್ರಮ ಕಣ್ತುಂಬಿಕೊಂಡರು. ಕೆಂಡ ಹಾಯೋದಕ್ಕಂತೂ ಸಾವಿರಾರು ಜನರು ನೆರೆದಿದ್ದರು. ಇದಂತೂ ನೆರೆದ ಭಕ್ತರನ್ನ ರೋಮಾಂಚನಗೊಳಿಸುವಂತಿತ್ತು..
ಉಚ್ಛಾಯಿ ಮೆರವಣಿಗೆ
ಶ್ರೀ ಕೊತ್ತಲ ಬಸವೇಶ್ವರ ರಥೋತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಪಾಲ್ಗೊಂಡು, ರಥಕ್ಕೆ ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು. ನಗರದ ಹಳೆ ಗಂಜ್ ರಸ್ತೆಯಲ್ಲಿನ ರಥ ಬೀದಿಯಲ್ಲಿ ರಥ ಸಾಗಿತು.
ಇದನ್ನೂ ಓದಿ: Kalaburagi Ganapati Temple: ಬಣ್ಣ ಬದಲಿಸ್ತಾನೆ ಈ ಗಣಪ, ಇವತ್ತಿದ್ದ ಕಲರ್ ನಾಳೆ ಇರಲ್ಲ!
ರಥೋತ್ಸವ ಕಣ್ತುಂಬಿಕೊಳ್ಳಲು ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದರು. ಇದಕ್ಕೂ ಮುನ್ನ ಪಟ್ಟಣದಲ್ಲಿ ಅಹೋರಾತ್ರಿ ಸಂಚರಿಸಿದ ಉಚ್ಛಾಯಿ ಮೆರವಣಿಗೆ ಬೆಳಗ್ಗೆ ಹಳೆ ಗಂಜ್ ಏರಿಯಾದಲ್ಲಿನ ಅಗ್ನಿ ಕಟ್ಟೆಗೆ ತಲುಪಿತು. ಸಾವಿರಾರು ಭಕ್ತರು ಶ್ರೀ ಕೊತ್ತಲ ಬಸವೇಶ್ವರ ಮಹಾರಾಜ ಕೀ ಎನ್ನುವ ಜಯಘೋಷ ಮೊಳಗಿಸಿದರು.
ಅಗ್ನಿ ಪ್ರವೇಶ
ಪರಂಪರಾಗತವಾಗಿ ನಡೆದು ಬಂದ ಪುರವಂತರ ಸೇವೆ ನೆರೆದವರ ಗಮನ ಸೆಳೆಯಿತು. ನೂರಾರು ಅಡಿ ಉದ್ದದ ದಾರವನ್ನು ನಾಲಿಗೆಗೆ ಚುಚ್ಚಿ ಕೊಂಡು ಹೊರತೆಗೆಯುವ ದೃಶ್ಯ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು. ಭಕ್ತರು ಅಗ್ನಿ ಕಟ್ಟೆಗೆ ಪೂಜೆ ಸಲ್ಲಿಸಿದರು. ಅಗ್ನಿಯಲ್ಲಿನ ಭಸ್ಮ ಹಣೆಗೆ ಹಚ್ಚಿಕೊಂಡರು.
ಇದನ್ನೂ ಓದಿ: Kalaburagi: ಕುಸ್ತಿ ಕಾಳಗದಲ್ಲಿ ಗೆದ್ದವರಿಗೆ ಚಿನ್ನದ ಉಂಗುರ!
ಅಗ್ನಿಪ್ರವೇಶ ಕಣ್ತುಂಬಿಕೊಳ್ಳಲು ನಾನಾ ಕಡೆಗಳಿಂದ ಜನ ಆಗಮಿಸಿದ್ದರು. ಒಟ್ಟಿನಲ್ಲಿ ಸೇಡಂ ಕೊತ್ತಲ ಬಸವೇಶ್ವರ ಜಾತ್ರೆಯು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿ, ಭಕ್ತರೆಲ್ಲರೂ ದೇವರ ದರ್ಶನ ಪಡೆದು ಪುನೀತರಾದರು.
ವರದಿ: ಶ್ರೀಕಾಂತ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ