ಕರ್ನಾಟಕ ಸರ್ಕಾರವು ಮುಂದಿನ ದಿನಗಳಲ್ಲಿ ನಡೆಸಲಿರುವ ಪೊಲೀಸ್ ಇಲಾಖೆಯಲ್ಲಿನ ಸಾವಿರಕ್ಕೂ ಹೆಚ್ಚು ಸಿವಿಲ್ ಪೊಲೀಸ್ ಸಬ್-ಇನ್ಸ್ಪೆಕ್ಟರ್ (Police Sub inspector) ಹುದ್ದೆಗಳ ನೇಮಕಾತಿ ನಡೆಯಲಿದೆ. ಈ ಪರೀಕ್ಷೆಗೆ ತಯಾರಿ ಅಗತ್ಯವಾಗಿರುವ ಹಿನ್ನಲೆ ಇದಕ್ಕೆ ಅಗತ್ಯ ಮಾರ್ಗದರ್ಶನ ನೀಡಲು ಕೆಎಸ್ಒಯು (KSOU) ಮುಂದಾಗಿದೆ. ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಲಿಖಿತ ಪರೀಕ್ಷೆಗೆ (PSI Caoching) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ವತಿಯಿಂದ ತರಬೇತಿ ನೀಡಲಿದೆ. ಈ ತರಬೇತಿ ಕಾರ್ಯಕ್ರಮದ ಮೂಲಕ ಅಭ್ಯರ್ಥಿಗಳು ಉತ್ತಮ ಮಾರ್ಗದರ್ಶನ ಪಡೆದು, ತಮ್ಮ ಗುರು ಸಾಧಿಸುವ ನಿಟ್ಟಿನತ್ತ ಪಯಣಿಸಬಹುದಾಗಿದೆ. ಈಗಾಗಲೇ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಸೆಪ್ಟೆಂಬರ್ 14 ರೊಳಗಾಗಿ ದಾಖಲಾತಿ ಮಾಡಿಕೊಳ್ಳಬಹುದಾಗಿದೆ.
ಎಲ್ಲಿ ದಾಖಲಾತಿ
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ‘ಮುಕ್ತಗಂಗೋತ್ರಿ’ ಆವರಣದಲ್ಲಿರುವ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ಕಛೇರಿಯಲ್ಲಿ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 4.00 ಗಂಟೆಯೊಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.
ರಾಜ್ಯದಲ್ಲ ಎಲ್ಲಾ ಅಭ್ಯರ್ಥಿಗಳಿಗೂ ಅವಕಾಶ
ಈ ತರಬೇತಿ ಕೇವಲ ಮೈಸೂರಿಗರಿಗೆ ಮಾತ್ರ ಸೀಮಿತವಾಗಿರದೇ, ರಾಜ್ಯದ ಎಲ್ಲಾ ಅಭ್ಯರ್ಥಿಗಳಿಗೂ ಅವಕಾಶ ನೀಡಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು, ಗ್ರಾಮಗಳ ಅಭ್ಯರ್ಥಿಗಳು ಕೂಡ ಈ ಅವಕಾಶವನ್ನು ಪಡೆಯಬಹುದಾಗಿದೆ. ಇನ್ನು ಮೈಸೂರಿನ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಲ್ಲಿ ಹೋಗಿ ದಾಖಲಾತಿ ಮಾಡಿಕೊಳ್ಳಲು ಸಾಧ್ಯವಾಗದವರು, ಹೆಚ್ಚಿನ ವಿವರಗಳಿಗೆ ದೂ.ಸಂಖ್ಯೆ : 0821-2515944 / 9964760090 ನ್ನು ಸಂಪರ್ಕಿಸಬಹುದೆಂದು ಕರಾಮುವಿ ಕುಲಸಚಿವ ಪ್ರೊ. ಆರ್. ರಾಜಣ್ಣ ತಿಳಿಸಿದ್ದಾರೆ.
ಸಾವಿರಕ್ಕೂ ಹೆಚ್ಚು ನೇಮಕಾತಿ
ಅತಿ ಹೆಚ್ಚಿನ ಮಾನವ ಸಂಪನ್ಮೂಲ ಬೇಡುವ ಇಲಾಖೆ ಪೊಲೀಸ್ ಇಲಾಖೆಯಾಗಿದೆ. ಪೊಲೀಸ್ ಇಲಾಖೆಯಲ್ಲಿ ಆಗ್ಗಿಂದಾಗಲೇ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿರುತ್ತದೆ. ಈಗಾಗಲೇ ಮುಂದಿನ ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗುವುದು. ಈ ಹಿನ್ನಲೆ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಈಗಿನಿಂದಲೇ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಮೂಲಕ ಅವರಿಗೆ ನೆರವಾಗುತ್ತಿದೆ.
ಇದನ್ನು ಓದಿ: Udupi Court Job: ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರ ಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ; SSLC ಪಾಸ್ ಆಗಿದ್ರೆ ಸಾಕು
ಹೇಗಿರಲಿದೆ ಸಬ್ ಇನ್ಸ್ಪೆಕ್ಟರ್ ನೇಮಕಾತಿ
ಸಬ್ ಇನ್ಸ್ಪೆಕ್ಟರ್ ನೇಮಕಾತಿ ದೈಹಿಕ ಸಾಮರ್ಥ್ಯದ ಜೊತೆಗೆ ಲಿಖಿತ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ದೈಹಿಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ವಿವಿಧ ಚಟುವಟಿಕೆಯಲ್ಲಿ ಭಾಗಿಯಾಗಿ ಆಯ್ಕೆಯಾಗಬೇಕಾಗುವುದು ಅನಿವಾರ್ಯ. ಇದರ ಜೊತೆಗೆ ಲಿಖಿತ ಪರೀಕ್ಷೆ ಕೂಡ ಒಳಗೊಂಡಿರಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಎಲ್ಲಾ ಪದವೀಧರ ಅಭ್ಯರ್ಥಿಗಳು ಕೂಡ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ತರಬೇತಿಯಿಂದ ಸರಿಯಾದ ರೀತಿ ಮಾರ್ಗದರ್ಶನ
ಅನೇಕ ಜನ ಪದವೀಧರರು ಉತ್ತಮ ತರಬೇತಿ ಪಡೆಯಲು ಸಾಧ್ಯವಾಗದೇ, ಸಂಕಷ್ಟಕ್ಕೆ ಒಳಗಾಗಿರುತ್ತಾರೆ. ಇಂತಹ ಪದವೀಧರರಿಗೆ ಈ ತರಬೇತಿ ಉತ್ತಮ ಮಾರ್ಗದರ್ಶನ ತೋರಲಿದೆ. ಈ ಮೂಲಕ ಪರೀಕ್ಷೆಯನ್ನ ಹೇಗೆ ಎದುರಿಸುವುದು. ಅದಕ್ಕೆ ಪಠ್ಯಗಳ ಆಯ್ಕೆ ಹೇಗಿರಬೇಕು. ಯಾವ ರೀತಿ ಅಭ್ಯಾಸ ಮಾಡಬೇಕು ಎಂಬ ಕುರಿತು ತಿಳಿಸಲಾಗುವುದು. ಈ ಅವಕಾಶವನ್ನು ರಾಜ್ಯದ ಎಲ್ಲಾ ಅಭ್ಯರ್ಥಿಗಳು ಕೂಡ ಸದುಪಯೋಗವನ್ನು ಪಡಿಸಿಕೊಳ್ಳಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ