ಎಸ್ಎಸ್ಎಲ್ಸಿ ಅನ್ನೋದು ಪ್ರತಿಯೊಬ್ಬರ ವಿದ್ಯಾರ್ಥಿ ಜೀವನದ ಪ್ರಮುಖ ಹಂತ. ಅಲ್ಲಿ ಸಾವಿರಾರು ನೆನಪುಗಳು ಇರುತ್ತವೆ. ಸಹಪಾಠಿಗಳ (Students) ಜೊತೆ ಆಟ, ಪಾಠ, ಊಟ, ಜಗಳ, ಸ್ನೇಹ ಮುಂತಾದ ಸವಿನೆನಪುಗಳು ಬಹುಕಾಲ ಅಚ್ಚಳಿಯದೆ ನಮ್ಮ ಸ್ಮೃತಿಪಟಲದಲ್ಲಿ ನೆಲೆಯೂರಿರುತ್ತವೆ. ಜೊತೆ ಎಸ್ಎಸ್ಎಲ್ಸಿ ಪರೀಕ್ಷೆ (SSLC Results) ಅನ್ನೋದು ಕೂಡ ಹಾಗೆನೇ. ಪರೀಕ್ಷೆ ಅಂದಾಗ ಎಷ್ಟು ಭಯ ಆಗುತ್ತೋ, ಪರೀಕ್ಷೆ ಮುಗಿದ ನಂತರ ಹಿಂದೊಮ್ಮೆ ತಿರುಗಿ ನೋಡಿದಾಗ ಎಲ್ಲವೂ ಸವಿ ನೆನಪುಗಳಾಗಿಯೇ ಕಾಡುತ್ತದೆ.
ಇಷ್ಟೆಲ್ಲಾ ನೆನಪುಗಳು ಹಾದು ಹೋಗೋಕೆ ಕಾರಣ, ಇಂದು ಪ್ರಕಟಗೊಂಡ ರಾಜ್ಯ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ. ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆದು ರಿಸಲ್ಟ್ ಯಾವಾಗ ಬರುತ್ತಪ್ಪಾ ಅಂತಾ ಕಾದು ಕುಳಿತಿದ್ದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಬಹುದಿನದ ಆತಂಕ, ಕಾತರ, ಕುತೂಹಲಗಳಿಗೆ ಬ್ರೇಕ್ ಬಿದ್ದಿದೆ. ಲಕ್ಷಾಂತರ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಪಾಸ್ ಆಗಿದ್ದರೆ, ಇನ್ನೂ ಅನೇಕರು ಉತ್ತೀರ್ಣಗೊಂಡಿಲ್ಲ. ಇಂತಹ ಸಂದರ್ಭದಲ್ಲಿ ಕೆಲವೊಂದು ಅಂಶಗಳನ್ನು ಹೇಳಲೇಬೇಕಾಗಿರೋದು ನಮ್ಮ ಜವಾಬ್ದಾರಿಯೂ ಹೌದು.
ಪೋಷಕರು ಎಡವೋದು ಎಲ್ಲಿ?
ಸಾಮಾನ್ಯವಾಗಿ ನಮ್ಮ ಮಕ್ಕಳು ಪ್ರಮುಖ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣಗೊಳ್ಳಬೇಕು ಅನ್ನೋದು ಬಹುತೇಕ ಪೋಷಕರ ಕನಸು. ಇದಕ್ಕಾಗಿಯೇ ಕೆಲವು ಪೋಷಕರಂತೂ ಮಕ್ಕಳ ಆಟ, ತುಂಟಾಟಗಳಿಗೆ ಬ್ರೇಕ್ ಹಾಕಿ ಅವರನ್ನು ಒತ್ತಾಯದಿಂದ ಓದಿಸಲು ಕೂರಿಸುತ್ತಾರೆ. ನಮ್ಮ ಮಕ್ಕಳು ಓದಿ ಉತ್ತಮ ಅಂಕ ಪಡೆದು ಒಂದೊಳ್ಳೆಯ ಉದ್ಯೋಗ ಪಡೆದು ಜೀವನದಲ್ಲಿ ಮುಂದಕ್ಕೆ ಬರಬೇಕು ಅನ್ನುವ ಪೋಷಕರ ಆಕಾಂಕ್ಷೆ ಎಷ್ಟು ಸರಿಯೋ, ತಮ್ಮ ಒತ್ತಾಯಕ್ಕೆ ಮಕ್ಕಳ ಬಾಲ್ಯದ ಕನಸುಗಳನ್ನು ಅದುಮಿಟ್ಟು ಒತ್ತಾಯದಿಂದ ಓದಿಸುವುದು ಕೂಡ ಸರಿಯೋ? ತಪ್ಪೋ ಎನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಳ್ಳುತ್ತಲೇ, ಪರೀಕ್ಷೆಯ ಬಗ್ಗೆ, ಪರೀಕ್ಷೆಯ ಫಲಿತಾಂಶದ ಬಗ್ಗೆ ಮಕ್ಕಳಲ್ಲಿ ಉಂಟಾಗಿರುವ ಗೊಂದಲ, ಭಯದ ಬಗ್ಗೆಯೂ ಪೋಷಕರು ಅರ್ಥ ಮಾಡಿಕೊಳ್ಳಬೇಕಿದೆ.
ಇದನ್ನೂ ಓದಿ: Karnataka SSLC District Wise Result 2023: ಚಿತ್ರದುರ್ಗ ರಾಜ್ಯಕ್ಕೆ ಫಸ್ಟ್, ನಿಮ್ಮ ಜಿಲ್ಲೆಯ ಫಲಿತಾಂಶ ಇಲ್ಲಿದೆ
ವಿದ್ಯಾರ್ಥಿಗಳ ಆತಂಕ ಹೋಗಲಾಡಿಸೋದು ಹೇಗೆ?
ತಮ್ಮ ಮಕ್ಕಳ ಅಮೂಲ್ಯವಾದ ಜೀವಕ್ಕಿಂತ ಯಾವುದೇ ಪರೀಕ್ಷೆಯ ಫಲಿತಾಂಶ, ಮಾರ್ಕ್ಸ್ ಅಥವಾ ಗ್ರೇಡ್ಗಳು ಮಿಗಿಲಲ್ಲ ಅನ್ನೋದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕಿದೆ. ಇಂತಹ ಸಾಮಾನ್ಯವಾದ ತಿಳುವಳಿಕೆ ನಮ್ಮಲ್ಲಿ ಇದ್ದಾಗ ಪರೀಕ್ಷಾ ಸಮಯದಲ್ಲಿ ಮಕ್ಕಳ ಮನಸ್ಸಲ್ಲಿ ಆಗುವಂತಹ ಒತ್ತಡ, ಆತಂಕಗಳನ್ನು ತಿಳಿದುಕೊಳ್ಳಲು ಸಾಧ್ಯವಿದೆ. ಹೀಗಾಗಿ ಪ್ರತಿಯೊಬ್ಬರೂ ಕೂಡ ವಿಶೇಷವಾಗಿ ಮಕ್ಕಳ ಪೋಷಕರು, ತಮ್ಮ ಮಕ್ಕಳು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದುಕೊಂಡಾಗ ಅಥವಾ ಫೇಲ್ ಆದಾಗ ಅವರ ಜೊತೆ ಹೆಚ್ಚು ಹೆಚ್ಚು ಮಾತನಾಡಬೇಕು. ಅವರನ್ನು ಹೀಯಾಳಿಸೋದು ಆಗಲಿ, ಬಯ್ಯೋದು ಆಗಲಿ ಮಾಡಬಾರದು. ಅಥವಾ ಹೆಚ್ಚು ಅಂಕ ಪಡೆದ ಮಕ್ಕಳ ಜೊತೆ ಹೋಲಿಕೆ ಮಾಡೋದನ್ನು ನಿಲ್ಲಿಸಬೇಕು.
ಯಾಕೆಂದರೆ ಎಲ್ಲಾ ಮಕ್ಕಳ ಜ್ಞಾಪಕ ಶಕ್ತಿ ಒಂದೇ ರೀತಿ ಇರೋದಿಲ್ಲ. ಅದಕ್ಕೆ ಬೆಳೆದಿರುವ ವಾತಾವರಣ, ಆಹಾರ ಪದ್ಧತಿ, ಅಥವಾ ಅಭ್ಯಾಸದ ಶೈಲಿ ಸೇರಿದಂತೆ ಬೇರೆ ಬೇರೆ ಕಾರಣಗಳು ಇರುತ್ತವೆ. ಎಲ್ಲರೂ ತಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಇದಕ್ಕಾಗಿ ಈ ಪ್ರಕ್ರಿಯನ್ನು ಪಾಲನೆ ಮಾಡುವುದರಲ್ಲಿ ಶಿಕ್ಷಕರು ಮತ್ತು ಪೋಷಕಾರು ಹೆಚ್ಚು ಪಾತ್ರ ವಹಿಸಬೇಕು.
ಇದನ್ನೂ ಓದಿ: Karnataka SSLC Toppers 2023: ಈ ಬಾರಿಯ SSLC ಟಾಪರ್ಸ್ ಇವರೇ ನೋಡಿ!
ನೀವು ಮಾಡಬೇಕಿರುವುದು ಏನು?
ಕಡಿಮೆನೋ, ಹೆಚ್ಚೋ? ಮಕ್ಕಳು ಎಷ್ಟೇ ಅಂಕ ಗಳಿಸಿದರು ಮೊದಲು ಅವರನ್ನು ಗೌರವಿಸಿ ಮತ್ತು ಅವರಲ್ಲಿ ಆತ್ಮ ವಿಶ್ವಾಸ ತುಂಬುವ ಕೆಲಸ ಮಾಡಿ. ಮಕ್ಕಳು ಅನುತ್ತೀರ್ಣರಾಗಿದ್ದರೆ ಹತ್ತಿರ ಕರೆದು ಪ್ರೀತಿಯಿಂದ ಮಾತನಾಡಿಸಿ. ಮುಂದಿನ ಪರೀಕ್ಷೆಯಲ್ಲಿ ಬರೆದಾರಾಯಿತು ಎಂದು ಧೈರ್ಯ ಹೇಳುವ ಕೆಲಸ ಮಾಡಿ. ಮಕ್ಕಳನ್ನು ಬೈಯುವದರಿಂದ, ಹೊಡೆಯುದರಿಂದ, ಇತರರ ಜತೆ ಹೋಲಿಸುವುದರಿಂದ ಏನು ಪ್ರಯೋಜನವಾಗೋದಿಲ್ಲ. ಹೀಗೆ ಮಾಡೋದ್ರಿಂದ ಅವರು ಹೆಚ್ಚು ಅಂಕವೂ ಪಡೆಯೋದಿಲ್ಲ, ಉತ್ತೀರ್ಣವೂ ಆಗೋದಿಲ್ಲ. ಇದರಿಂದ ನಿಮ್ಮ ಮಕ್ಕಳ ಮನಸ್ಸನ್ನು ಇನ್ನಷ್ಟು ಘಾಸಿಗೊಳಿಸದಂತೆ ಆಗುತ್ತದೆಯೇ ಹೊರತು ಅವರಿಗೆ ಧೈರ್ಯ ತುಂಬಿದಂತಾಗೋದಿಲ್ಲ.
ನೀವು ಮಕ್ಕಳ ನಕರಾತ್ಮಕ ಅಂಶಗಳನ್ನು ಬಿತ್ತುವುದರಿಂದ ಅವರು ಆತ್ಮಹತ್ಯೆ ಮತ್ತು ವ್ಯಸನಗಳಿಗೆ ಒಳಗಾಗಬಹುದು. ಆದ್ದರಿಂದ ಮಕ್ಕಳನ್ನು ಗೌರವಿಸಿ, ಪ್ರೀತಿಸಿ, ಕಾಳಜಿ ವಹಿಸಿ, ಧೈರ್ಯ ಹೇಳುವುದರಿಂದ ಅವರ ಶೈಕ್ಷಣಿಕ ಭವಿಷ್ಯಕ್ಕೆ ಇನ್ನಷ್ಟು ಭರವಸೆ ತುಂಬಿದಂತಾಗುತ್ತದೆ. ಪ್ರತಿಯೊಂದು ಮಗುವಿನಲ್ಲೂ ತನ್ನದೆ ಆದ ವಿಶೇಷ ಕೌಶಲ್ಯವಿರುತ್ತದೆ. ಅದನ್ನು ನಾವು ಪತ್ತೆ ಮಾಡಿ ಬೆಂಬಲಿಸಿದರೆ ಮಕ್ಕಳಲ್ಲಿ ಇನ್ನಷ್ಟು ಚೈತನ್ಯ ಮತ್ತು ಹೊಸ ಚಿಂತನೆಗಳಿಗೆ ದಾರಿ ಮಾಡಿದಂತಾಗುತ್ತದೆ.
ಬರಹ: ಕೌಶಿಕ್, ಮಕ್ಕಳ ಹಕ್ಕುಗಳ ಸಂಸ್ಥೆ ಬೆಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ