ಆರ್ಥಿಕ ಹಿಂಜರಿತ (Economic recession) ಹಾಗೂ ಹಣದುಬ್ಬರವು (Inflation) ಇಂದು ಇಡೀ ಜಗತ್ತನ್ನು ಕಾಡುತ್ತಿರುವ ಜಾಗತಿಕ ಸಮಸ್ಯೆಗಳಾಗಿವೆ ( Global problems). ಇದರಿಂದ ಸಾಕಷ್ಟು ಜನರ ಜೀವನ (Life) ಕಷ್ಟದ ಪರಿಸ್ಥಿತಿಗಳಿಗೆ ನೂಕಲ್ಪಟ್ಟಿದೆ. ಜಾಗತಿಕವಾಗಿ ಅನೇಕ ದೈತ್ಯ ಕಂಪನಿಗಳು ಕೂಡ ಉದ್ಯೋಗಿಗಳನ್ನು ಏಕಾಏಕಿ ಕೆಲಸದಿಂದ (Job) ತೆಗೆದುಹಾಕುತ್ತಿವೆ. ಈ ಮಧ್ಯೆ ಹಣದುಬ್ಬರದ ಕಾರಣದಿಂದಾಗಿ ಬೇರೆ ದೇಶಗಳಲ್ಲಿ ಓದಲು ಹೋಗಿರುವ ವಿದ್ಯಾರ್ಥಿಗಳ (Students) ಪರಿಸ್ಥಿತಿಯೂ ಕಷ್ಟವಾಗಿದೆ. ಬ್ರಿಟನ್ ನಲ್ಲಿ ಹಣದುಬ್ಬರ ಮತ್ತು ಹೆಚ್ಚುತ್ತಿರುವ ವೆಚ್ಚಗಳಿಂದಾಗಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಜೀವನ ಶೋಚನೀಯವಾಗಿದೆ. ಅವರು ತಮ್ಮ ಬಿಲ್ಗಳನ್ನು ಪಾವತಿಸಲು ಮತ್ತು ಎರಡು ಹೊತ್ತಿನ ಊಟಕ್ಕಾಗಿ ಕಾಲೇಜುಗಳಲ್ಲಿ ಉಪನ್ಯಾಸವನ್ನೂ ಬಿಟ್ಟು ಕೆಲಸ ಮಾಡುವ ಪರಿಸ್ಥಿತಿ ಉಂಟಾಗಿದೆ.
ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಪರದಾಟ
ಭಾರತ ಹಾಗೂ ಬೇರೆ ಬೇರೆ ದೇಶಗಳಿಂದ ಇಂಗ್ಲೆಂಡ್ನಲ್ಲಿ ಓದುವುದಕ್ಕೋಸ್ಕರ ಹೋದಂತಹ ವಿದ್ಯಾರ್ಥಿಗಳು ಸದ್ಯ ಪರದಾಡುವ ಪರಿಸ್ಥಿತಿ ಬಂದಿದೆ.
ಹೆಚ್ಚಿನ ಬಾಡಿಗೆಗಳು, ಬೋಧನಾ ಶುಲ್ಕಗಳು, ವಸತಿ ಕೊರತೆಯಿಂದಾಗಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಕೆಲಸ ಮಾಡುವಂತಾಗಿದೆ. ಅಲ್ಲಿನ ಹಣದುಬ್ಬರ ಮತ್ತು ನಿರಂತರವಾಗಿ ಹೆಚ್ಚುತ್ತಿರುವ ವೆಚ್ಚಗಳು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಜೀವನವನ್ನು ಶೋಚನೀಯಗೊಳಿಸಿವೆ.
ಇದರಿಂದಾಗಿಯೇ ಅನೇಕ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ವಾಪಸ್ ತಮ್ಮ ದೇಶಕ್ಕೆ ಮರಳಲು ಬಯಸುತ್ತಿದ್ದಾರೆ. ಆದರೆ ತೆಗೆದುಕೊಂಡಿರುವ ಕೋರ್ಸ್ ಪೂರ್ಣಗೊಂಡಿಲ್ಲವಾದ್ದರಿಂದ ಜೊತೆಗೆ ಅದಕ್ಕೆ ನೀಡಿರುವ ಹಣ, ಸಮಯ ಲಾಕ್ ಆಗಿರುವುದರಿಂದ ಅಲ್ಲಿಯೇ ಸಿಲುಕಿಕೊಂಡಿದ್ದಾರೆ.
ವೆಚ್ಚ ನೀಗಿಸಲು ವಿದ್ಯಾರ್ಥಿಗಳ ಹರಸಾಹಸ
ಲಂಡನ್ ವಿಶ್ವವಿದ್ಯಾನಿಲಯದಿಂದ ಸೈಬರ್ ಸೆಕ್ಯುರಿಟಿಯಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಬಂದಿರುವ ಧರಿನ್ ಪಟೇಲ್, "ನಾನು ಭಾರತಕ್ಕೆ ಹಿಂತಿರುಗಬೇಕು ಎಂದು ಹೇಳುತ್ತಾರೆ. ಬೋಧನಾ ಶುಲ್ಕ ಹಾಗೂ ಆರಂಭಿಕ ಜೀವನ ವೆಚ್ಚ ಸರಿದೂಗಿಸಲು ಸುಮಾರು 32ರಿಂದ 35 ಲಕ್ಷ ರೂ.ವರೆಗೆ ಸಾಲ ಮಾಡಿಕೊಂಡಿದ್ದೇವೆ.
ಇಲ್ಲಿ ಖರ್ಚು ಹೆಚ್ಚಾಗಿದ್ದು ಮನೆಯಿಂದ ಹಣ ಕೇಳಬೇಕಾಯಿತು. ನನ್ನ ಬಾಡಿಗೆ 700 ಪೌಂಡ್ಗಳು. ನಂತರ ಪ್ರಯಾಣ, ಆಹಾರ, ಮೊಬೈಲ್ ಎಲ್ಲದರ ಖರ್ಚೂ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
“ಅಲ್ಲದೇ ಒಂದು ಚಿಕ್ಕ ರೂಂನಲ್ಲಿ ಮತ್ತೊಬ್ಬ ವಿದ್ಯಾರ್ಥಿಯೊಂದಿಗೆ ಇದ್ದೇನೆ. ಹೆಚ್ಚಿನ ಬಾಡಿಗೆಯಿಂದಾಗಿ ಚಿಕ್ಕ ಕೋಣೆಯಲ್ಲೇ ಇಬ್ಬರೂ ಇದ್ದೇವೆ. ಅದು ಎಷ್ಟು ಚಿಕ್ಕದೆಂದರೆ ಡಬಲ್ ಬೆಡ್ ಹಾಕಿದರೆ ಹೊಂದಿಕೆಯಾಗುವುದಿಲ್ಲ.
ಇಲ್ಲಿನ ಶಿಕ್ಷಣ ಹಾಗೂ ವಾತಾವರಣದ ಬಗ್ಗೆ ನಾನು ಸಾಕಷ್ಟು ಕೇಳಿದ್ದೆ. ಇದರಿಂದ ಪ್ರೇರಣೆ ಪಡೆದು ಇಲ್ಲಿ ಓದಲು ಬಂದಿದ್ದೆ. ಇಲ್ಲಿ ಎಲ್ಲವೂ ಸಾಧ್ಯ ಎಂದು ನಾನು ಅಂದುಕೊಂಡಿದ್ದೆ. ಆದರೆ ಇಲ್ಲಿಯ ಪರಿಸ್ಥಿತಿ ನಾನು ಅಂದುಕೊಂಡಿದ್ದಕ್ಕೆ ವಿರುದ್ಧವಾಗಿದೆ” ಎಂದು ಧರಿನ್ ಹೇಳಿದ್ದಾರೆ.
ಧರಿನ್ ಒಬ್ಬರೇ ಅಲ್ಲ, ಅವರಂತೆ ನೂರಾರು ಜನರು ಇಲ್ಲಿ ಉನ್ನತ ಶಿಕ್ಷಣಕ್ಕಾಗಿ ಬಂದಿದ್ದಾರೆ. ಅವರಲ್ಲಿ ಅನೇಕರು ಇಂಥದ್ದೇ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ.
"ಮನೆಗೆ ಹಿಂತಿರುಗಿ ನಾನು ಪ್ರತಿದಿನ ಚೆನ್ನಾಗಿ ಊಟ ಮಾಡುತ್ತಿದ್ದೆ. ಆದರೆ ಈಗ ನಾನು ಒಂದು ಊಟವನ್ನು ಮಾತ್ರ ಖರೀದಿಸಬಲ್ಲೆ" ಎಂದು ವೆಸ್ಟ್ಮಿನಿಸ್ಟರ್ ವಿಶ್ವವಿದ್ಯಾಲಯದಲ್ಲಿ ಡೇಟಾ ಅನಾಲಿಟಿಕ್ಸ್ ಅಧ್ಯಯನ ಮಾಡುತ್ತಿರುವ ಸೋನಾಲ್ ಹೇಳುತ್ತಾರೆ.
ಇದನ್ನೂ ಓದಿ:Education Loan: ವಿದ್ಯಾರ್ಥಿಗಳಿಂದ ಅರಿವು ಎಜುಕೇಶನ್ ಲೋನ್ಗೆ ಅರ್ಜಿ ಆಹ್ವಾನ
ಅಲ್ಲದೇ ತನ್ನ ಬೆಳಗಿನ ಕ್ಲಾಸ್ಗಳ ನಂತರ, ಸೋನಾಲ್ ಕೆಲಸವನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಅಂಗಡಿಗಳು, ರೆಸ್ಟೋರೆಂಟ್, ಹೋಟೆಲ್, ಸೂಪರ್ಮಾರ್ಕೆಟ್ ಹೀಗೆ ಕೆಲಸಕ್ಕಾಗಿ ಬಾಗಿಲು ಬಡಿಯುವುದು ಬಹುತೇಕ ವಿದ್ಯಾರ್ಥಿಗಳ ದಿನಚರಿಯ ಭಾಗವಾಗಿದೆ.
ಅಂದಹಾಗೆ ಸೆಪ್ಟೆಂಬರ್ 2019 ರಲ್ಲಿ ಯುಕೆ "ಪದವೀಧರ ಮಾರ್ಗ" ಎಂಬ ಪೋಸ್ಟ್-ಸ್ಟಡಿ ವರ್ಕ್ ವೀಸಾವನ್ನು ಘೋಷಿಸಿತು. ಇದು ಭಾರತದಿಂದ ಬಂದವರು ಸೇರಿದಂತೆ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ನಂತರ ಯಾವುದೇ ವೃತ್ತಿ ಆಯ್ಕೆ ಮಾಡಲು ಅವಕಾಶ ನೀಡುತ್ತದೆ.
ಒಟ್ಟಾರೆ, ಜಗತ್ತನ್ನು ಕಾಡುತ್ತಿರುವ ಹಣದುಬ್ಬರದಿಂದಾಗಿ ಜನಸಾಮಾನ್ಯರು ತೀವ್ರ ಕಷ್ಟ ಪಡುತ್ತಿದ್ದಾರೆ. ಇದು ದೇಶ ಬಿಟ್ಟು ಬೇರೆ ದೇಶಕ್ಕೆ ಓದಲು ಹೋದ ವಿದ್ಯಾರ್ಥಿಗಳಿಗೆ ಇನ್ನಷ್ಟು ಕಷ್ಟಕರ ಪರಿಸ್ಥಿತಿ ತಂದೊಡ್ಡಿರುವುದು ವಿಪರ್ಯಾಸ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ