ಚಳಿಗಾಲ ಎಂದರೆ ಜಮ್ಮು ಮತ್ತು ಕಾಶ್ಮೀರದ (Jammu & Kashmir) ಸುತ್ತಮುತ್ತ ಹಿಮಪಾತ ಆರಂಭವಾಗುತ್ತದೆ. ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ್ನಲ್ಲಿ ಕೆಲ ದಿನಗಳ ಹಿಂದೆ ಹೆಚ್ಚಿನ ಪ್ರಮಾಣದಲ್ಲಿ ಹಿಮಪಾತವಾಗುತ್ತಿದೆ. ಬೆಂಬಿಡದೇ ಸುರಿಯುತ್ತಿರುವ ಮಂಜಿನಿಂದಾಗಿ ಕಣಿವೆ ರಾಜ್ಯ ಮಲ್ಲಿಗೆ ಹೂವಿನ ಹಾಸಿಗೆ ಹೊದ್ದುಕೊಂಡಂತೆ ಕಂಡುಬಂದಿದೆ. ಜಮ್ಮು ಮತ್ತು ಕಾಶ್ಮೀರದ ಈ ವಾತಾವರಣ ಇಲ್ಲಿಗೆ ಬರುವ ಪ್ರವಾಸಿಗರಿಗೆ ಸಖತ್ ಖುಷಿ ನೀಡಿದರೆ ಅಲ್ಲಿನ ಸ್ಥಳೀಯರಿಗೆ ಸ್ವಲ್ಪ ಕಷ್ಟದ ದಿನಗಳು ಎನ್ನಬಹುದು. ಈ ಚಳಿಗಾಲದ (Winter) ಸಮಯದಲ್ಲಿ ಇಲ್ಲಿನ ಜನಜೀವನವೇ ಅಸ್ತವ್ಯಸ್ತವಾಗಿರುತ್ತದೆ. ಮೈನಸ್ ಡಿಗ್ರಿ ಸೆಲ್ಸಿಯಸ್ ವಾತವರಣ, ವಿಪರೀತ ಚಳಿ ಹೀಗೆ ಚಳಿಗಾಲವನ್ನು ಕಳೆಯುವುದೇ ಕಷ್ಟಕಷ್ಟ.
ಅಂತೆಯೇ ಮಕ್ಕಳಿಗೆ ಶಾಲೆಗೆ ಹೋಗಲು ಕೂಡ ಸಾಧ್ಯವಾಗುವುದಿಲ್ಲ. ಈ ಪ್ರದೇಶದಲ್ಲಿ ಮಕ್ಕಳಿಗೆ ಚಳಿಗಾಲದ ರಜೆ ನೀಡಲಾಗುತ್ತದೆ. ಆದಾಗ್ಯೂ ಭಾರಿ ಹಿಮಪಾತವಿದ್ದರೆ ರಜೆ ಮುಗಿದರೂ ಶಾಲೆಗಳತ್ತ ಮುಖ ಮಾಡುವುದು ಕಷ್ಟವಾಗಿಬಿಡುತ್ತದೆ. ಇದರಿಂದಾಗಿ ಮಕ್ಕಳಿಗೆ ತರಗತಿಗಳು ತಪ್ಪಿ ಹೋಗುವುದರ ಜೊತೆ ಶಿಕ್ಷಣವನ್ನು ಮುಂದುವರಿಸಲು ಅಡಚಣೆ ಆಗುತ್ತದೆ.
ಗಡಿಯಲ್ಲಿ ಮಕ್ಕಳಿಗೆ ತರಗತಿ ಆರಂಭಿಸಿದ ಭಾರತೀಯ ಸೇನೆ:
ಸದ್ಯ ಇದೇ ಪರಿಸ್ಥಿತಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿದ್ದು, ಅಲ್ಲಿನ ಮಕ್ಕಳು ತರಗತಿಗಳಿಂದ ವಂಚಿತರಾಗುತ್ತಿದ್ದಾರೆ. ಇದಕ್ಕಾಗಿಯೇ ಭಾರತೀಯ ಸೇನೆಯು ಮಕ್ಕಳಿಗೆ ಶಿಕ್ಷಣವನ್ನು ಪೂರೈಸುವ ದೃಷ್ಟಿಯಿಂದ ಹಿಮಪಾತದ ನಡುವೆಯೇ ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಹಾಯ ಮಾಡುವ ಪ್ರಯತ್ನದಲ್ಲಿ ತರಗತಿಗಳನ್ನು ಆಯೋಜಿಸಿದೆ.
ಬೋನಿಯಾರ್ನಲ್ಲಿರುವ ಭಾರತೀಯ ಸೇನೆಯ ಸೈನಿಕರು ಹಳ್ಳಿಗಳಲ್ಲಿ ಸಣ್ಣ ಶಾಲಾ ಮಕ್ಕಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಿಳಿದು ತರಗತಿಗಳನ್ನು ಆಯೋಜಿಸುವ ಯೋಜನೆ ರೂಪಿಸಿದ್ದರು. ಹೀಗಾಗಿ ಮಕ್ಕಳಿಗೆ ಶಿಕ್ಷಣಕ್ಕಾಗಿ ಅನುಕೂಲ ಮಾಡಿಕೊಡಲು ಮುಂದೆಬಂದ ಭಾರತೀಯ ಸೇನೆಯು ತರಗತಿಗಳನ್ನು ಆಯೋಜಿಸಿ ಶಿಕ್ಷಕರನ್ನು ಸಹ ನೇಮಿಸಿದೆ.
ಇದನ್ನೂ ಓದಿ: Education System: ನಂಬ್ತೀರಾ? ಭಾರತದ 1.2 ಲಕ್ಷದಷ್ಟು ಶಾಲೆಗಳು ಕೇವಲ ಒಬ್ಬರೇ ಶಿಕ್ಷಕರನ್ನು ಹೊಂದಿವೆಯಂತೆ..!
ತರಗತಿಗೆ ಬರುತ್ತಿದ್ದಾರೆ 300 ಕ್ಕೂ ಹೆಚ್ಚು ಮಕ್ಕಳು:
ಪ್ರಸ್ತುತ, ಸುಮಾರು 300 ಮಕ್ಕಳು ಈ ತರಗತಿಗಳಿಗೆ ಹಾಜರಾಗುತ್ತಿದ್ದಾರೆ ಎಂದು ಭಾರತೀಯ ಸೇನೆಯು ತಿಳಿಸಿದೆ. ಭಾರತೀಯ ಸೇನೆಯು ತರಗತಿಗೆ ಬರುವ ಈ ಮಕ್ಕಳಿಗೆ ಉಚಿತ ಸ್ಟೇಷನರಿ ವಸ್ತುಗಳನ್ನು ವಿತರಣೆ ಕೂಡ ಮಾಡಿದೆ. ಬಡ ಕುಟುಂಬದ ಹಿನ್ನೆಲೆ ಹೊಂದಿರುವ ಹೆಚ್ಚಿನ ಮಕ್ಕಳು ಈ ತರಗತಿಗಳಿಗೆ ಬರುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಭಾರತೀಯ ಸೇನೆಯ ಪ್ರಯತ್ನಗಳನ್ನು ಶ್ಲಾಘಿಸಿದ ತಹಸಿಲ್ ಬೋನಿಯಾರ್ನ ಚೋಟ್ವಾಲಿ ಗ್ರಾಮದ ಲಮಾಬರ್ದಾರ್ ವಾಲಿ ಮೊಹದ್, ಈ ತರಗತಿಗಳು ಮಕ್ಕಳಿಗೆ ಮುಂದೆ ಉಜ್ವಲ ಭವಿಷ್ಯವನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ಸೇನೆಯ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಪಾತ:
ಹದಿನೈದು ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರದಲ್ಲಿ ಎರಡರಿಂದ ನಾಲ್ಕು ಇಂಚಿನಷ್ಟು ಹಿಮ ಬಿದ್ದತ್ತು. ಪ್ರವಾಸಿಗರ ಹಾಟ್ಸ್ಪಾಟ್ ಪಹಲ್ಗಾಮ್ನಲ್ಲಿ 12 ಇಂಚು, ಗುಲ್ಮಾರ್ಗ್ ನಲ್ಲಿ ಎಂಟು ಇಂಚುಗಳು ಮತ್ತು ಸೋನಾಮಾರ್ಗ್ ಆರು ಇಂಚುಗಳಿಗಿಂತ ಹೆಚ್ಚು ಹಿಮ ಬಿದ್ದಿದೆ.
ಕುಲ್ಗಾಮ್ನ ನಾಡಿಮಾರ್ಗ್ ಮತ್ತು ಬಂಡಿಪೋರಾದ ತುಲೈಲ್ನಲ್ಲಿ ಅತಿ ಹೆಚ್ಚು ಹಿಮ ಬಿದ್ದಿದ್ದು, 18 ಇಂಚುಗಳಷ್ಟು ಹಿಮಪಾತವಾಗಿದೆ ಎಂದು ವರದಿಗಳು ತಿಳಿಸಿದ್ದವು. ಕಣಿವೆ ರಾಜ್ಯದ ಕೆಲವು ಭಾಗಗಳಲ್ಲಿ ಎಡಬಿಡದೇ ಮಂಜು ಸುರಿಯುತ್ತಿರುವ ಕಾರಣ ನಗರದ ಬೀದಿಗಳು ಮತ್ತು ಮರಗಳು ಹಿಮದಿಂದ ಆವೃತವಾಗಿದ್ದವು.
ಇತ್ತ ಉತ್ತರಾಖಂಡ್ನ ಗಂಗೋತ್ರಿ ನಗರದಲ್ಲಿ ಭಾರೀ ಹಿಮಪಾತದಿಂದ ಗಂಗೋತ್ರಿ ದೇವಸ್ಥಾನ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವು ಮಂಜಗಡೆಯಿಂದ ಕೂಡಿತ್ತು. ಇನ್ನು ಕಾಶ್ಮೀರದ ಪೂಂಚ್ ಜಿಲ್ಲೆಯ ಲೋರಾನ್ ಪ್ರದೇಶದಲ್ಲಿ ಭಾರೀ ಹಿಮಪಾತದಿಂದ ಅನೇಕ ಮನೆಗಳು ಮತ್ತು ವಾಹನಗಳು ಸಂಪೂರ್ಣವಾಗಿ ಹಿಮದಿಂದ ಆವೃತವಾಗಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ