ಐಎಎಸ್ ಅಧಿಕಾರಿಯಾಗಲು ಕಷ್ಟಪಡುವುದರ ಜೊತೆಗೆ ನಮ್ಮ ಮೇಲೆ ನಂಬಿಕೆ ಇರಿಸಬೇಕು ಎಂಬುದು ಪ್ರಯಾಗ್ರಾಜ್ ಮೂಲದ ಐಎಎಸ್ ಅಧಿಕಾರಿ ಸೌಮ್ಯ ಪಾಂಡೆ (Saumya Pandey) ಅವರ ಮಾತಾಗಿದೆ. ನಮ್ಮ ಮೇಲೆ ನಮಗೇ ನಂಬಿಕೆ (Believe) ಇಲ್ಲದಿದ್ದರೆ ಬೇರೆ ಯಾರ ಮೇಲೂ ಯಾವುದರ ಮೇಲೂ ನಮಗೆ ಭರವಸೆ ಹುಟ್ಟುವುದಿಲ್ಲ ಎಂಬುದು ಐಎಎಸ್ ಅಧಿಕಾರಿ ಸೌಮ್ಯ ಮಾತಾಗಿದೆ. ಸ್ವಯಂ ನಂಬಿಕೆ ಯಶಸ್ಸಿಗೆ ಹಾಗೂ ಪ್ರಗತಿಗೆ (Progress) ಬಹುಮುಖ್ಯವಾಗಿದೆ ಎಂಬುದು ಸೌಮ್ಯ ಹೇಳಿಕೆಯಾಗಿದೆ. ಇದು ಏಕೆ ಎಂಬುದನ್ನು ಆಕೆ ತಮ್ಮದೇ ಉದಾಹರಣೆಯೊಂದಿಗೆ ವಿವರಿಸಿದ್ದಾರೆ.
ತಮ್ಮ ಯುಪಿಎಸ್ಸಿ ಫಲಿತಾಂಶ ಬಂದಾಗ ಒಂದು ರೀತಿಯ ಭಯದಿಂದ ಪಟ್ಟಿಯ ಕೆಳಗಿನಿಂದ ತಮ್ಮ ಹೆಸರನ್ನು ಅವರು ಹುಡುಕಿದ್ದರಂತೆ. ಒಮ್ಮೆಯೂ ಮೇಲಿನಿಂದ ಪಟ್ಟಿಯನ್ನು ಪರಿಶೀಲಿಸುವ ಧೈರ್ಯ ಮಾಡಿರಲಿಲ್ಲ. ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದೇ ಇರುವುದು ನೋಡಿದಾಗ ಬಹುಶಃ ತಾವು ತೇರ್ಗಡೆಯಾಗಿಲ್ಲ ಎಂದೇ ಆಕೆ ಭಾವಿಸಿದ್ದರು.
ಅಖಿಲ ಭಾರತ 4ನೇ ರ್ಯಾಂಕ್ ಪಡೆದ ಗಟ್ಟಿಗಿತ್ತಿ
ತಮ್ಮ ತಾಯಿಯ ಸಲಹೆಯ ಮೇರೆಗೆ ಸೌಮ್ಯ ಪಟ್ಟಿಯನ್ನು ಮೇಲಿನಿಂದ ಪರಿಶೀಲಿಸಿದಾಗ ಸೌಮ್ಯ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ, ಏಕೆಂದರೆ ಪಟ್ಟಿಯಲ್ಲಿ ಅವರ ಹೆಸರಿತ್ತು. ಪರೀಕ್ಷೆಯಲ್ಲಿ ಆಕೆ ಉತ್ತೀರ್ಣಳಾಗಿದ್ದು ಮಾತ್ರವಲ್ಲದೆ ಅಗ್ರಸ್ಥಾನವನ್ನು ಪಡೆದುಕೊಂಡು ಟಾಪರ್ ಎಂದೆನಿಸಿದ್ದರು. ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಅಖಿಲ ಭಾರತ 4ನೇ ರ್ಯಾಂಕ್ ಪಡೆದ ಗಟ್ಟಿಗಿತ್ತಿಯಾಗಿದ್ದರು.
ಇದನ್ನೂ ಓದಿ: Career Tips: ಟೆಕ್ ಉದ್ಯಮದಲ್ಲಿ ವೃತ್ತಿಜೀವನವನ್ನು ಆರಂಭಿಸಲು ಮಹಿಳೆಯರಿಗೆ ಇಲ್ಲಿದೆ ಸಲಹೆ
ಶಾಲಾ ದಿನಗಳಿಂದಲೂ ಸೌಮ್ಯ ಪ್ರತಿಭಾವಂತೆ
ಐಎಎಸ್ ಸೌಮ್ಯ ಪಾಂಡೆ 2016ರ ಬ್ಯಾಚ್ಗೆ ಸೇರಿದವರು. ಆಕೆ ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿಯನ್ನು ಭೇದಿಸಿದ್ದಾರೆ. ಸೌಮ್ಯಾ ಅವರ ಶೈಕ್ಷಣಿಕ ದಾಖಲೆಯ ಬಗ್ಗೆ ಮಾತನಾಡುತ್ತಾ, ಅವರು 10 ನೇ ತರಗತಿಯಲ್ಲಿ 98% ಮತ್ತು ದ್ವಿತೀಯ ಪಿಯುಸಿಯಲ್ಲಿ 97.8% ಅಂಕ ಗಳಿಸಿದ ಪ್ರತಿಭಾವಂತರಾಗಿದ್ದರು. ಇದಲ್ಲದೆ, ಅವರು ಇಂಜಿನಿಯರಿಂಗ್ ಕಾಲೇಜಿನಲ್ಲಿ ಚಿನ್ನದ ಪದಕ ವಿಜೇತರಾಗಿದ್ದರು.
ಹೆಸರು ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಭಯ ಕಾಡಿತ್ತು
IAS ಸೌಮ್ಯಾ ಪಾಂಡೆ ಅವರು 2016 ರಲ್ಲಿ ಪರೀಕ್ಷೆಗೆ ಹಾಜರಾಗಿದ್ದರು. ಈ ಪರೀಕ್ಷೆಯ ಫಲಿತಾಂಶ 2017 ರಲ್ಲಿ ಬಂದಿತು. ಯುಪಿಎಸ್ಸಿ ಪರೀಕ್ಷಾ ಫಲಿತಾಂಶದ ಪಿಡಿಎಫ್ ಅನ್ನು ಸೌಮ್ಯ ಡೌನ್ಲೋಡ್ ಮಾಡಿಕೊಂಡಿದ್ದರು. ಆದರೆ ಇದರಲ್ಲಿ ತಮ್ಮ ಹೆಸರು ಇದೆಯೋ ಇಲ್ಲವೇ ಎಂಬುದನ್ನು ನೋಡುವ ಧೈರ್ಯವಿರಲಿಲ್ಲ ಎಂದು ತಿಳಿಸಿದ್ದಾರೆ. ಹಾಗಾಗಿ ಕೆಳಗಿನಿಂದ ಹೆಸರುಗಳನ್ನು ನೋಡಲಾರಂಭಿಸಿದರು ಎಂದು ಸೌಮ್ಯ ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಆದರೆ ಪಟ್ಟಿಯ ಕೆಳಗಿನ ಭಾಗದಲ್ಲಿ ತಮ್ಮ ಹೆಸರು ಇಲ್ಲದ್ದು ನೋಡಿ ತಾವು ಆಯ್ಕೆಯಾಗಿಲ್ಲ ಎಂದೇ ಸೌಮ್ಯ ಭಾವಿಸಿದ್ದರು ಹಾಗಾಗಿ ಮುಂದಿನ ಬಾರಿ ಪರೀಕ್ಷೆಯಲ್ಲಿ ಚೆನ್ನಾಗಿ ಮಾಡುತ್ತೇನೆ ಎಂದು ತಮ್ಮ ತಾಯಿಗೂ ಹೇಳಿದ್ದರು.
ಪರೀಕ್ಷೆಯಲ್ಲಿ ಅಗ್ರಸ್ಥಾನ ಯಾರು ಗಳಿಸಿದ್ದಾರೆ ಎಂಬುದನ್ನು ಪರಿಶೀಲಿಸುವಂತೆ ಸೌಮ್ಯ ತಾಯಿ ಹೇಳಿದಾಗ ಸೌಮ್ಯ ಹಾಗೂ ಅವರ ತಾಯಿಗೆ ಆಶ್ಚರ್ಯದ ಜೊತೆಗೆ ಖುಷಿ ಕೂಡ ಆಗಿತ್ತು.
ಏಕೆಂದರೆ ಟಾಪರ್ಗಳ ಸ್ಥಾನದಲ್ಲಿ ಸೌಮ್ಯ ಅವರ ಹೆಸರಿತ್ತು. ತಾಯಿ ಮಗಳು ಇದನ್ನು ಮೊದಲಿಗೆ ನಂಬಿರಲಿಲ್ಲ ನಂತರ ಕ್ರಮಸಂಖ್ಯೆ ಹೆಸರು ಮೊದಲಾದ ವಿವರಗಳನ್ನು ಪರಿಶೀಲಿಸಿ ಇದು ತನ್ನದೇ ಅಂಕಗಳು ಎಂಬುದಾಗಿ ಸೌಮ್ಯ ಮನದಟ್ಟು ಮಾಡಿಕೊಂಡರು ಎಂಬುದಾಗಿ ತಿಳಿಸಿದ್ದಾರೆ.
ಸಕಲ ಕಲಾ ವಲ್ಲಭೆ ಈ ಐಎಎಸ್ ಅಧಿಕಾರಿ
ಐಎಎಸ್ ಸೌಮ್ಯಾ ಪಾಂಡೆ ಪ್ರಸ್ತುತ ಉತ್ತರ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಾಥಮಿಕ ಹಂತದಿಂದಲೇ ಪ್ರಿಲಿಮ್ಸ್ ತಯಾರಿ ಆರಂಭವಾಗಬೇಕು ಎನ್ನುತ್ತಾರೆ ಸೌಮ್ಯಾ. ಇದಕ್ಕಾಗಿ, NCERT ಪುಸ್ತಕಗಳಿಗಿಂತ ಉತ್ತಮ ಆಯ್ಕೆ ಬೇರೆ ಯಾವುದೂ ಇಲ್ಲ ಎಂಬುದು ಅವರ ಸಲಹೆಯಾಗಿದೆ.
ಸೌಮ್ಯಾಗೆ ಅಧ್ಯಯನದ ಜೊತೆಗೆ ಕ್ರೀಡೆ, ನೃತ್ಯದಂತಹ ಚಟುವಟಿಕೆಗಳಲ್ಲೂ ಹೆಚ್ಚಿನ ಆಸಕ್ತಿಯಿದೆ. ಶಾಸ್ತ್ರೀಯ ನೃತ್ಯವನ್ನೂ ಕಲಿತಿರುವ ಇವರು ಬಾಸ್ಕೆಟ್ಬಾಲ್ ಆಟಗಾರ್ತಿಯೂ ಹೌದು. ಇದಲ್ಲದೆ, ಅವರು NCC ಬಿ ಮತ್ತು ಸಿ ಪ್ರಮಾಣಪತ್ರವನ್ನು ಹೊಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ