ಕೋವಿಡ್ (Covid) ಬಿಕ್ಕಟ್ಟಿನ ಕಾಲ ಎಂದರೆ ಸಾಕು ಈಗ ಹಲವರಿಗೆ ಆ ಹಿಂದಿನ ಕರಾಳ ಕಥೆಗಳು, ಹತಾಶೆಯ ಅನುಭವಗಳು, ಪರದಾಡಿದ ಸ್ಥಿತಿಗಳು ಒಂದೊಂದಾಗಿ ಕಣ್ಮುಂದೆ ಬರುತ್ತವೆ ಅಂದರೆ ತಪ್ಪಾಗಲಿಕ್ಕಿಲ್ಲ. ಈ ಮಹಾಮಾರಿ ಇಡೀ ವಿಶ್ವಕ್ಕೆ ಉಪದ್ರವ ಉಂಟು ಮಾಡಿರುವುದರಲ್ಲಿ ಸಂಶಯವೇ ಇಲ್ಲ. ಈ ಸಂದರ್ಭದಲ್ಲಿ ಅದೆಷ್ಟೋ ಜನರು ಉದ್ಯೋಗ (Jobs) ಕಳೆದುಕೊಂಡರು, ಮರಳಿ ತಮ್ಮ ಊರಿಗೆ ನಡೆದರು ಹಾಗೂ ಏನೇನೋ ಕೆಲಸ ಪ್ರಾರಂಭಿಸಿದರು. ಇನ್ನೂ ಕೆಲವರು ತಮ್ಮ ಕೋವಿಡ್ ಕಥೆಯ (Covid Story) ನೋವನ್ನು ತೋಡಿಕೊಳ್ಳುತ್ತ ಹೊಸ ಹೊಸ ಉದ್ಯೋಗಗಳಿಗಾಗಿ ಸಂದರ್ಶನಗಳನ್ನೂ ಕೊಟ್ಟರು.
ಈಗಲೂ ಈ ಕಥೆ ಸಂಪೂರ್ಣವಾಗಿ ಮುಗಿದಿಲ್ಲ. ಈಗಲೂ ಕೆಲ ಸಂದರ್ಶನಗಳಲ್ಲಿ ಅಭ್ಯರ್ಥಿಗಳು ತಮ್ಮ ಕೋವಿಡ್ ಕರಾಳ ಕಥೆಯನ್ನು ಹೇಳಿಕೊಳ್ಳುತ್ತಿದ್ದಾರೆ. ಒಮ್ಮೊಮ್ಮೆ ಸಂದರ್ಶನ ತೆಗೆದುಕೊಳ್ಳುವವರಿಗೂ ಅಭ್ಯರ್ಥಿಯ ಕಥೆ ಕೇಳಿದಾಗ ಏನು ಹೇಳಬೇಕೆಂದು ತೋಚದೆ ಇರಬಹುದು. ಏಕೆಂದರೆ ಈ ಸಂದರ್ಭದಲ್ಲಿ ಎಷ್ಟು ಜನರು ನೈಜವಾಗಿ ತಮ್ಮ ಕಥೆ ಹೇಳುತ್ತಿರುವರೋ ಎಂಬುದು ಗೊತ್ತಾಗದು.
ಹಾಗಾಗಿ ಇದೀಗ ಸಂದರ್ಶನಗಳಲ್ಲಿ ಸಂದರ್ಶನಕಾರರು ವಿಭಿನ್ನವಾಗಿ ಕೋವಿಡ್ ಕುರಿತಂತೆ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಮೊದಲಿನಂತೆ ಕೋವಿಡ್ ಸಂದರ್ಭದಲ್ಲಿ ನೀವು ಹೇಗೆ ಕೆಲಸ ಮಾಡಿದಿರಿ, ಹೇಗೆ ಕೆಲಸದ ಪ್ರದರ್ಶನವಿತ್ತು ಎಂಬೆಲ್ಲೆ ಪ್ರಶ್ನೆಗಳ ಬದಲಾಗಿ ಸಂದರ್ಶಕರು ಈಗ ಸರಳವಾಗಿ ನಿಮ್ಮ ಕೋವಿಡ್ ಕಥೆ ಏನು? ಎಂದು ಪ್ರಶ್ನಿಸುತ್ತಿದ್ದಾರೆ.
ಇದೊಂದು ಸರಳ ಪ್ರಶ್ನೆ ಎಂದೇನಿಸಿದರೂ ಸಹ ಸಂದರ್ಶನ ಕೊಡುತ್ತಿರುವವನ ಸಂಪೂರ್ಣ ವೈಯಕ್ತಿಕ ನಿರ್ವಹಣಾ ಸಾಮರ್ಥ್ಯ, ಕುಶಲತೆ, ಕ್ರಿಯಾತ್ಮಕತೆ ಇತ್ಯಾದಿ ಆಯಾಮಗಳನ್ನು ಪರಿಶೀಲಿಸುತ್ತದೆ. ಈ ಸಂದರ್ಭದಲ್ಲಿ ಯಾರಾದರೂ ತಮ್ಮ ಕಷ್ಟದ ಅಥವಾ ದುಖಭರಿತ ಕಥೆಯನ್ನು ಹೇಳಿದರೆ ಇದು ಒಟ್ಟಾರೆಯಾಗಿ ಅವರಲ್ಲಿರುವ ನಕಾರಾತ್ಮಕತೆಯನ್ನು ಎತ್ತಿ ತೋರಿಸಿದಂತಾಗುತ್ತದೆ. ಇದು ಸಂದರ್ಶಕರಿಗೆ ಸರಿಯಾದ ನಿರ್ಧಾರ ಕೈಗೊಳ್ಳಲು ಅನುವು ಮಾಡಿಕೊಟ್ಟಂತಾಗುತ್ತದೆ.
ತಪ್ಪಾದ ಉತ್ತರಗಳು
ಇಂತಹ ಸಂದರ್ಭದಲ್ಲಿ ಸಂದರ್ಶಕರು ಅಭ್ಯರ್ಥಿಗೆ ಕೋವಿಡ್ ಕಥೆ ಏನೆಂದು ಕೇಳಿದಾಗ ಸಹಜವಾಗಿ ಅಭ್ಯರ್ಥಿಗಳು ತಾವು ಪಟ್ಟಂತಹ ಕಷ್ಟ ಅಥವಾ ದುಖದ ಪ್ರಸಂಗಗಳನ್ನು ವಿವರಿಸುತ್ತಾರೆ. ಇಲ್ಲವೇ ಕೆಲವರು ಮೊದ ಮೊದಲು ಸಾಕಷ್ಟು ತೊಂದರೆಯಾದರೂ ತದನಂತರ ಅದಕ್ಕೆ ಹೊಂದಿಕೊಂಡು ಜೀವನದಲ್ಲಿ ಹೊಸ ಆಯಾಮಗಳನ್ನು ಶೋಧಿಸಿರುವುದಾಗಿಯೂ, ಕುಟುಂಬದ ಬೆಲೆ ಕಂಡುಕೊಂಡಾಗಿಯೂ ಸಿನೆಮಾ ಕಥೆಗಳಂತಹ ಉತ್ತರ ನೀಡುತ್ತಾರೆ.
ಇದನ್ನೂ ಓದಿ: Interview Tips-18: ಇಂಟರ್ವ್ಯೂನಲ್ಲಿ ಕೇಳುವ ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದರೆ, ಈ ರೀತಿ ಪರಿಸ್ಥಿತಿಯನ್ನು ನಿಭಾಯಿಸಿ
ಅಭ್ಯರ್ಥಿಗಳು ಇಲ್ಲಿ ಹೇಳಿದ್ದು ಸತ್ಯವಾಗಿದ್ದರೂ ಸಂದರ್ಶಕರು ಆ ಕಥೆಗಳನ್ನು ಅವರಿಂದ ನಿರೀಕ್ಷಿಸುತ್ತಿರುವುದಿಲ್ಲ, ಏಕೆಂದರೆ ಅವರೂ ಸಹ ಅಂತಹ ಪ್ರಸಂಗಗಳನ್ನು ಅನುಭವಿಸಿರಬಹುದು ಅಥವಾ ಪ್ರತಿನಿತ್ಯ ಅವುಗಳ ಬಗ್ಗೆ ಕೇಳುತ್ತಲೂ ಇರಬಹುದು.
ಕೆಲವೊಮ್ಮೆ ಅಭ್ಯರ್ಥಿಗಳು ತಮಗಾದ ದೊಡ್ಡ ವೈಯಕ್ತಿಕ ನಷ್ಟ ಅಂದರೆ ಸಾವು ಅಥವಾ ವಿಚ್ಛೇದನದ ಬಗ್ಗೆಯೂ ಪ್ರಸ್ತಾಪಿಸಬಹುದು. ನಿಮ್ಮ ಕರಿಯರ್ ಜೊತೆ ಇದು ನೇರವಾದ ಸಂಬಂಧ ಹೊಂದಿಲ್ಲದೆ ಇದ್ದಲ್ಲಿ ಇಂತಹ ಪ್ರಸ್ತಾಪಗಳು ನಿಜಕ್ಕೂ ಅಪ್ರಸ್ತುತವಾಗಿರುತ್ತವೆ. ಇದು ಸಂದರ್ಶಕರು ನಿಮ್ಮ ಸಾಮರ್ಥ್ಯ ಪರಿಶೀಲಿಸುವ ಮುಂಚೆಯೇ ಅವರನ್ನು ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿಸುವಂತೆ ಮಾಡುತ್ತದೆ.
ಇನ್ನೂ ಕೆಲವರು ಕ್ವಾರಂಟೈನ್ ಸಮಯದಲ್ಲಿ ಹಲವು ಆನ್ಲೈನ್ ತರಬೇತಿಗಳು, ಪ್ರಮಾಣ ಪತ್ರಗಳನ್ನು ಇಲ್ಲವೇ ಬೇರೆ ಯಾವುದಾದರೂ ಬಿರುದು, ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಅವರು ತಮ್ಮ ಆ ಸಾಧನೆಗಳನ್ನು ಈ ಸಂದರ್ಭದಲ್ಲಿ ಹೇಳಬಯಸುತ್ತಾರೆ. ಇದರಿಂದಲೂ ಸಂದರ್ಶಕರಿಗೆ ಯಾವುದೇ ಲಾಭವಿಲ್ಲ, ಏಕೆಂದರೆ ಆ ಎಲ್ಲ ಸಾಧನೆಗಳನ್ನು ನೀವು ಈಗಾಗಲೇ ನಿಮ್ಮ ಸಿವಿಯಲ್ಲಿ ನಮೂದಿಸಿರುತ್ತೀರಿ.
ಸರಿಯಾದ ಉತ್ತರ ಏನಾಗಬಹುದು?
ಹಾಗಾದರೆ, ಇಂತಹ ಪ್ರಶ್ನೆ ಎದುರಿಸಿದಾಗ ಅಭ್ಯರ್ಥಿಗಳು ಸಂದರ್ಶಕರ ಮೇಲೆ ಪ್ರಭಾವ ಬೀರಲು ಯಾವ ರೀತಿಯ ಉತ್ತರ ನೀಡಬಹುದು ಎಂಬ ಗೊಂದಲ ಉಂಟಾಗುತ್ತದೆ. ಇದಕ್ಕೆ ಸರಳವಾಗಿ ಹೇಳಬೇಕೆಂದರೆ, ನೀವು ಸಾಕಷ್ಟು ಕಷ್ಟ ಪಟ್ಟಿರಬಹುದು. ಆದರೆ ಎಲ್ಲವನ್ನೂ ಎಳೆ ಎಳೆಯಾಗಿ ಬಿಡಿಸಿ ಹೇಳಬೇಕಾಗಿಲ್ಲ. ಸಂದರ್ಶನದ ವಾತಾವರಣ ಗಮನದಲ್ಲಿರಿಸಿಕೊಂಡು ನಿಮ್ಮ ಕೆಲಸದ ಮೇಲೆ ಉಂಟಾಗುತ್ತಿದ್ದ ಪರಿಣಾಮ ಹಾಗೂ ನೀವು ಅದನ್ನು ನಿಭಾಯಿಸಿದ ರೀತಿಯನ್ನು ಒಂದಕ್ಕೊಂದು ಜೊತೆ ಮಾಡಿಕೊಂಡು ಸಂಕ್ಷೀಪ್ತವಾಗಿ ತೆರೆದಿಡಬೇಕು.
ಅಲ್ಲದೆ, ನೀವು ಆ ಬಿಕ್ಕಟ್ಟಿನ ಸಮಯದಲ್ಲಿ ಯಾವುದಾದರೂ ಗುಣವನ್ನು ಬೆಳೆಸಿಕೊಂಡಿದ್ದರೆ ಉದಾಹರಣೆಗೆ, ಧೈರ್ಯ, ನಿಯತ್ತು ಅಥವಾ ದಯಾಮನೋಭಾವ ಯಾವುದಾದರೂ ಆಗಿದ್ದಲ್ಲಿ ಅದು ನಿಮ್ಮ ಮೇಲೆ ಹೇಗೆ ಪ್ರಭಾವ ಬೀರಿತೆಂಬುದನ್ನು ಅದಕ್ಕೂ ಮೂಚಿನ ನಿಮ್ಮ ಜೀವನಶೈಲಿಯೊಂದಿಗೆ ಹೋಲಿಸುತ್ತ ವಿವರಿಸಬಹುದು.
ಅದರಲ್ಲೂ ವಿಶೇಷವಾಗಿ ನಿಮ್ಮ ಕೆಲಸದಲ್ಲಿ ಆ ಯಾವುದಾದರೂ ಗುಣ ಹೇಗೆ ನೆರವು ನೀಡಿತು ಎಂಬುದನ್ನು ನೀವು ವಿವರಿಸಬಹುದು. ಒಟ್ಟಿನಲ್ಲಿ ಡೈನಮಿಕ್ ಆಗಿ ನಿಮ್ಮದೆ ಆದ ಕಥೆಯಲ್ಲಿ ನೀವು ಯಾವ ರೀತಿ ನಾಯಕನ ಹಾಗೆ ಕೆಲಸ ಕಾರ್ಯಗಳನ್ನು ಮುನ್ನಡೆಸಿಕೊಂಡು ಹೋದಿರಿ ಎಂಬುದನ್ನು ಆತ್ಮವಿಶ್ವಾಸದಿಂದ ವಿವರಿಸಬಹುದು.
ಈ ರೀತಿಯ ಉತ್ತರ ನಿಮ್ಮ ಸಂದರ್ಶಕರ ಮನದಲ್ಲಿ ನಿಮ್ಮಲ್ಲಿರುವ ಒಟ್ಟಾರೆ ಸಾಮರ್ಥ್ಯ ಹಾಗೂ ಕಂಪನಿಯು ಕೆಲ ಪರಿಸ್ಥಿತಿಗಳಲ್ಲಿದ್ದಾಗ ನಿಮ್ಮಿಂದ ಏನನ್ನು ನಿರೀಕ್ಷಿಸಬಹುದು ಎಂಬುದರ ಬಗ್ಗೆ ಕಿರು ನೋಟವನ್ನು ನೀಡುವುದಲ್ಲದೆ ಅವರನ್ನು ಪ್ರಭಾವಿತರನ್ನಾಗಿಯೂ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ