• ಹೋಂ
  • »
  • ನ್ಯೂಸ್
  • »
  • Jobs
  • »
  • Unemployment: ಭಾರತದಲ್ಲಿ ಉದ್ಯೋಗಿಗಳ ಸಂಖ್ಯೆ ಕುಸಿತ; ದುಡಿಯುವವರನ್ನು ಅವಲಂಬಿಸಿರುವವರೇ ಹೆಚ್ಚು ಏಕೆ?

Unemployment: ಭಾರತದಲ್ಲಿ ಉದ್ಯೋಗಿಗಳ ಸಂಖ್ಯೆ ಕುಸಿತ; ದುಡಿಯುವವರನ್ನು ಅವಲಂಬಿಸಿರುವವರೇ ಹೆಚ್ಚು ಏಕೆ?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

40% ಜನರು ಮಾತ್ರ ದುಡಿಮೆಯತ್ತ ಒಲವು ಹೊಂದಿದ್ದಾರೆ. ಈ 40% ಜನರನ್ನು ಅವಲಂಬಿಸಿರುವ ಶೇ.60ರಷ್ಟು ಜನ ಭಾರತದಲ್ಲಿ ಇದ್ದಾರೆ.

  • Share this:

ಭಾರತದ ನಿರುದ್ಯೋಗ ದರವು (Unemployment Rate) ಮಾರ್ಚ್ 2023 ರಲ್ಲಿ 7.8% ರಿಂದ ಏಪ್ರಿಲ್ ತಿಂಗಳಿನಲ್ಲಿ ಸತತ ನಾಲ್ಕನೇ ತಿಂಗಳಿಗೆ 8.11% ಕ್ಕೆ ಏರಿದೆ ಎಂದು ಭಾರತೀಯ ಆರ್ಥಿಕತೆಯನ್ನು ಮೇಲ್ವಿಚಾರಣೆ ಮಾಡುವ ಕೇಂದ್ರ (CMIE) ಬಿಡುಗಡೆ ಮಾಡಿದ ಡೇಟಾ ಬಹಿರಂಗಪಡಿಸಿದೆ. ಭಾರತದ ನಿರುದ್ಯೋಗ ದರವು ಮಾರ್ಚ್‌ನಲ್ಲಿ 7.8% ನಲ್ಲಿ ಮೂರು ತಿಂಗಳ ಗರಿಷ್ಠ ಮಟ್ಟದಲ್ಲಿತ್ತು. ಇದು ಜನವರಿ ಮತ್ತು ಫೆಬ್ರವರಿಯಲ್ಲಿ 7.45% ಆಗಿತ್ತು. ಡಿಸೆಂಬರ್​ನಲ್ಲಿ ಈ ಪ್ರಮಾಣ 8.3% ಕ್ಕೆ ಏರಿತು ಅಂತೆಯೇ ಕಳೆದ 16 ತಿಂಗಳುಗಳಲ್ಲಿ ಇದು ಗರಿಷ್ಠವಾಗಿದೆ ಎಂದು ಅಂಕಿ ಅಂಶ ತಿಳಿಸಿದೆ.


ಭಾರತದ ಉದ್ಯೋಗಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿಲ್ಲ


ದಿ ವೈರ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, CMIE ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಮಹೇಶ್ ವ್ಯಾಸ್ ಈ ಕುರಿತು ಅನಿಸಿಕೆ ವ್ಯಕ್ತಪಡಿಸಿದ್ದು ಭಾರತದಲ್ಲಿ ಉದ್ಯೋಗಿಗಳ ದರದಲ್ಲಿ ಏರಿಕೆಯಾಗುತ್ತಿಲ್ಲ ಎಂಬ ಮಾಹಿತಿ ನೀಡಿದ್ದಾರೆ. ಭಾರತದ ಜನಸಂಖ್ಯೆ ಹೆಚ್ಚುತ್ತಿದೆ ಜೊತೆಗೆ ದುಡಿಯುವ ವರ್ಗದವರ ಸಂಖ್ಯೆ ಕೂಡ ಗರಿಷ್ಠವಾಗಿದೆ. ಆದರೆ ಉದ್ಯೋಗಿಗಳ ಸಂಖ್ಯೆಯಲ್ಲಿ ಮಾತ್ರ ಏರಿಕೆಯಾಗುತ್ತಿಲ್ಲ ಎಂಬ ಸೂಚನೆ ನೀಡಿದ್ದಾರೆ.


ಈ ಬಗ್ಗೆ ಆರ್ಥಿಕ ತಜ್ಞರು ಮಾಹಿತಿ ನೀಡಿದ್ದು ಕಳೆದ ಐದು ವರ್ಷಗಳಲ್ಲಿ 400 ಮಿಲಿಯನ್‌ಗಿಂತಲೂ ಹೆಚ್ಚು ಪ್ರಮಾಣದಲ್ಲಿ ಹಾಗೆಯೇ ನಿಶ್ಚಲವಾಗಿದೆ ಎಂದು ತಿಳಿಸಿದ್ದಾರೆ. ಭಾರತದ ಜನಸಂಖ್ಯೆ ಮತ್ತು ನಿರ್ದಿಷ್ಟವಾಗಿ ಕೆಲಸ ಮಾಡುವ ವಯಸ್ಸಿನ ಜನಸಂಖ್ಯೆಯು ಏರಿಕೆಯಾಗುತ್ತಿದ್ದರೂ ಉದ್ಯೋಗಿಗಳ ದರದಲ್ಲಿ ಹೆಚ್ಚುವರಿ ಸಂಖ್ಯೆಗಳು ಕಂಡುಬರುತ್ತಿಲ್ಲ ಎಂದಿದ್ದಾರೆ.


ಈ ಅಂಶ ಆರ್ಥಿಕತೆಯಲ್ಲಿ ಹೆಚ್ಚಿನ ಪರಿಣಾಮ ಬೀರಿದ್ದು ಇದು ಎಷ್ಟು ನಿರಂತರವಾಗಿ ಇರುತ್ತದೆ ಎಂಬುದು ಆರ್ಥಿಕ ಕ್ಷೇತ್ರದ ಮೇಲೆ ಹೆಚ್ಚಿನ ಪರಿಣಾಮಗಳನ್ನು ಬೀರುತ್ತದೆ ಎಂದು ತಿಳಿಸಿದ್ದಾರೆ.


ದುಡಿಯುವವರಿಗಿಂತ ಅವಲಂಬಿಸಿರುವವರ ಸಂಖ್ಯೆ ಅಧಿಕವಾಗಿದೆ


CMIE ನಲ್ಲಿನ ವಿಶ್ಲೇಷಕರಾದ ವ್ಯಾಸ್ ಮತ್ತು ನತಾಶಾ ಸೋಮಯ್ಯ ಅವರು ಏಪ್ರಿಲ್‌ನಲ್ಲಿ ನಿರುದ್ಯೋಗ ದರದಲ್ಲಿ ಏರಿಕೆಯಾಗಲು ಕಾರ್ಮಿಕ ಭಾಗವಹಿಸುವಿಕೆಯ ದರದಲ್ಲಿನ ಏರಿಕೆ ಕಾರಣ ಎಂಬ ಸಮರ್ಥನೀಯ ಹೇಳಿಕೆ ನೀಡಿದ್ದಾರೆ.




ಉದ್ಯೋಗ ದರದ ಏರಿಕೆಯನ್ನು ಸೂಚಿಸುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ. ಭಾರತದ ಸ್ಥಿತಿ ಹೇಗಿದೆ ಎಂದರೆ ಇಲ್ಲಿ ಹೆಚ್ಚಿನ ಜನರಿದ್ದಾರೆ ಆದರೆ ಉದ್ಯೋಗಗಳ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿಸುತ್ತಾರೆ.


15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 40% ಜನರು ಮಾತ್ರ ದುಡಿಮೆಯತ್ತ ಒಲವು ಹೊಂದಿದ್ದಾರೆ. ಈ 40% ಜನರನ್ನು ಅವಲಂಬಿಸಿರುವ 60% ಜನರು ಇನ್ನೂ ಭಾರತದಲ್ಲಿ ಇದ್ದಾರೆ ಎಂದು ವ್ಯಾಸ್ ಸಂದರ್ಶನದಲ್ಲಿ ತಿಳಿಸುತ್ತಾರೆ.


ನಿರುದ್ಯೋಗ ಪ್ರಮಾಣವನ್ನು ಹೇಗೆ ಮಾಪನ ಮಾಡಲಾಗುತ್ತದೆ?


ಭಾರತದಲ್ಲಿನ ಅಧಿಕೃತ ವ್ಯವಸ್ಥೆಯ ಪ್ರಕಾರ, ನಿರುದ್ಯೋಗಿಗಳು ಎಂದರೆ ಉದ್ಯೋಗ ಇಲ್ಲದವರು (ಅಥವಾ ಕೆಲಸವಿಲ್ಲದವರು) ಮತ್ತು ಕೆಲಸ ಲಭ್ಯವಿದ್ದರೆ ಕೆಲಸ ಮಾಡಲು ಸಿದ್ಧರಿರುವ ಜನರ ಗುಂಪಾಗಿದೆ.


CMIE ದೇಶದಲ್ಲಿರುವ ನಿರುದ್ಯೋಗಿಗಳ ಪ್ರಮಾಣವನ್ನು ತನ್ನದೇ ಮಾಪನದ ಮೂಲಕ ಅಳೆದಿದ್ದು, ನಿರುದ್ಯೋಗಿಗಳಾಗಿರುವವರು, ಕೆಲಸ ಮಾಡಲು ಸಿದ್ಧರಾಗಿರುವವರು ಹಾಗೂ ಸಕ್ರಿಯವಾಗ ಉದ್ಯೋಗವನ್ನರಸುತ್ತಿರುವವರು ಎಂದು ವ್ಯಾಖ್ಯಾನಿಸುವ ಮೂಲಕ ಲೆಕ್ಕಾಚಾರ ಮಾಡುತ್ತದೆ.


ನಿರುದ್ಯೋಗ ದರವು ನಿರುದ್ಯೋಗಿಗಳ ಕಾರ್ಮಿಕ ಬಲದ ಅನುಪಾತವಾಗಿದೆ, ಅಲ್ಲಿ ಕಾರ್ಮಿಕ ಬಲವು ಉದ್ಯೋಗಿ ಮತ್ತು ನಿರುದ್ಯೋಗಿಗಳ ಮೊತ್ತವಾಗಿದೆ ಎಂದು ವ್ಯಾಸ್ ಇನ್ನಷ್ಟು ಸ್ಪಷ್ಟನೆ ನೀಡುತ್ತಾರೆ.


ಇದನ್ನೂ ಓದಿ: Global Job Cuts: ಇನ್ನು 5 ವರ್ಷಗಳಲ್ಲಿ ಬರೋಬ್ಬರಿ 14 ಮಿಲಿಯನ್ ಉದ್ಯೋಗಗಳು ಕಣ್ಮರೆ; ನಿರುದ್ಯೋಗ ತಾಂಡವ?


ವೇತನವನ್ನು ಅಳೆಯಲು ಸಾಧ್ಯವಾದರೂ ಯಾವುದು ಕಡಿಮೆ (ಸಂಬಳ/ವೇತನ) ಎಂಬುದು ವ್ಯಕ್ತಿನಿಷ್ಠ ಅಂಶವಾಗಿದೆ ಅಂತೆಯೇ ಭಾರತದಲ್ಲಿ ಉದ್ಯೋಗಗಳ ಗುಣಮಟ್ಟ ತುಂಬಾ ಕಡಿಮೆಯಾಗಿದೆ ಎಂದು ವ್ಯಾಸ್ ತಿಳಿಸುತ್ತಾರೆ. ಭಾರತದಲ್ಲಿರುವ ಉದ್ಯೋಗಗಳು ಒಂದಾ ಕಡಿಮೆ ಸಂಬಳವನ್ನು ವಿತರಿಸುತ್ತವೆ ಇಲ್ಲದಿದ್ದರೆ ಏನಾದರೂ ಅನೌಪಚಾರಿಕ ವ್ಯವಸ್ಥೆಗಳನ್ನು ಹೊಂದಿವೆ ಎಂಬುದು ವ್ಯಾಸ್ ಮಾತಾಗಿದೆ.


ಅರ್ಥಶಾಸ್ತ್ರಜ್ಞ ಅಜಿತವ ರಾಯ್‌ಚೌಧರಿ ಹೇಳಿಕೆಯೊಂದನ್ನು ನೀಡಿದ್ದು ಯೋಗ್ಯ ಉದ್ಯೋಗಗಳನ್ನು ಮಾಡುತ್ತಿರುವವರನ್ನು ಮಾತ್ರ ಉದ್ಯೋಗಿ ಎಂದು ಗುರುತಿಸಬೇಕು ಎಂದು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) ಅನ್ನು ಉಲ್ಲೇಖಿಸಿದ್ದರು. CMIE ನಗರ ಮತ್ತು ಗ್ರಾಮೀಣ ಭಾರತದಲ್ಲಿ 44,000 ಕ್ಕೂ ಹೆಚ್ಚು ಮನೆಗಳ ಮಾಸಿಕ ಸಮೀಕ್ಷೆಗಳನ್ನು ನಡೆಸುತ್ತದೆ.


ಅನಧಿಕೃತ ವಲಯದ ಉದ್ಯೋಗಗಳು


ಭಾರತದಲ್ಲಿ 80% ಕ್ಕಿಂತ ಹೆಚ್ಚು ಕಾರ್ಮಿಕರು ಅನಧಿಕೃತ ವಲಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮತ್ತು ಭಾರತೀಯ ಆರ್ಥಿಕತೆಯಲ್ಲಿ ಮೂರು ಪ್ರಮುಖ ರಚನಾತ್ಮಕ ಬದಲಾವಣೆಗಳ ಪ್ರತಿಕೂಲ ಪರಿಣಾಮಗಳನ್ನು ಅನುಭವಿಸಿದ ಅನಧಿಕೃತ ವಲಯಗಳೆಂದರೆ ನೋಟು ಅಮಾನ್ಯೀಕರಣ, ಸರಕು ಮತ್ತು ಸೇವಾ ತೆರಿಗೆಯ ಪರಿಚಯ ಮತ್ತು COVID-19-ಪ್ರೇರಿತ ಲಾಕ್‌ಡೌನ್ ಆಗಿದೆ.


ನಗದು-ಸಂಘಟಿತ ವಲಯಕ್ಕೆ, ಯೋಜಿತವಲ್ಲದ ನೋಟು ಅಮಾನ್ಯೀಕರಣವು ಜನವರಿಯಿಂದ ಏಪ್ರಿಲ್ 2017 ರ ನಡುವೆ ಕನಿಷ್ಠ 95 ಲಕ್ಷ ಉದ್ಯೋಗಗಳನ್ನು ಕಳೆದುಕೊಳ್ಳಲು ಕಾರಣವಾಯಿತು ಎಂದು Scroll.in ವರದಿ ಮಾಡಿದೆ. ಉದ್ಯೋಗ ದರದಲ್ಲಿನ ಇಳಿಕೆಗೆ ಇದು ಕಾರಣವಾಗಿದೆ ಅಂತೆಯೇ ಕಾರ್ಮಿಕ ವಲಯದಲ್ಲಿನ ಕುಸಿತಕ್ಕೆ ಕಾರಣವಾಯಿತು ಎಂದು ವರದಿ ತಿಳಿಸಿದೆ.


ಅಧಿಕೃತ ವಲಯದಲ್ಲಿರುವ ಉದ್ಯೋಗಗಳು


ಸರಕಾರ ನಡೆಸುವ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡುತ್ತಿಲ್ಲ ಎಂದು ವ್ಯಾಸ್ ತಿಳಿಸಿದ್ದಾರೆ. ರೈಲ್ವೇಯಲ್ಲಿ 3.12 ಲಕ್ಷ ಖಾಲಿ ಹುದ್ದೆಗಳಿವೆ ಆದರೆ ಅದನ್ನು ಇನ್ನೂ ಭರ್ತಮಾಡಲಾಗಿಲ್ಲ.


ಇದರಿಂದಾಗಿ ಹೆಚ್ಚಿನವರು ಅಧಿಕಾವಧಿ ಕೆಲಸ ಮಾಡಬೇಕಾಗಿದೆ. ಇದು ರೈಲುಗಳ ಕಾರ್ಯನಿರ್ವಹಣೆ ಮತ್ತು ಹಳಿಗಳ ನಿರ್ವಹಣೆಯ ಮೇಲೂ ಪರಿಣಾಮ ಬೀರುತ್ತಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.


ಈ ಕುರಿತು ರೈಲ್ವೇ ಉದ್ಯೋಗ ಆಕಾಂಕ್ಷಿಗಳು ಪ್ರತಿಭಟನೆ ಕೂಡ ನಡೆಸಿದ್ದರು. ರಕ್ಷಣಾ ಉದ್ಯೋಗ ಆಕಾಂಕ್ಷಿಗಳು ಸರ್ಕಾರದ ಅಗ್ನಿಪಥ್ ಯೋಜನೆ ವಿರುದ್ಧ ಪ್ರತಿಭಟನೆ ನಡೆಸಿದರು. ಈ ಘಟನೆಗಳು ಯುವಕರಲ್ಲಿ ಉದ್ಯೋಗದ ಹತಾಶೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.


ಪ್ರಾತಿನಿಧಿಕ ಚಿತ್ರ


ಆದಾಗ್ಯೂ, ಈ ವರ್ಷದ ಜನವರಿಯಲ್ಲಿ, ಆಡಳಿತಾರೂಢ ಭಾರತೀಯ ಜನತಾ ಪಕ್ಷವು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಮಾಸಿಕ ಡೇಟಾವನ್ನು ಉಲ್ಲೇಖಿಸಿ ಭಾರತದಲ್ಲಿ ಅಧಿಕೃತ ವಲಯದಲ್ಲಿ ಉದ್ಯೋಗದಲ್ಲಿ ಬೆಳವಣಿಗೆಯಾಗುತ್ತಿದೆ ಎಂದು ತಿಳಿಸಿದೆ.


ಸರಕಾರ ಖಾಲಿ ಇರುವ ಹುದ್ದೆಗಳನ್ನು ಏಕೆ ಭರ್ತಿ ಮಾಡುತ್ತಿಲ್ಲ ನೇಮಕಾತಿ ಏಕೆ ನಡೆಸುತ್ತಿಲ್ಲ ಎಂಬ ಅಂಶವನ್ನು ನೋಡುವುದಾದರೆ ಉದ್ಯೋಗವನ್ನು ಒದಗಿಸುವಲ್ಲಿ ಸರಕಾರ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ ಎಂಬ ಅಂಶ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ವ್ಯಾಸ್ ಹೇಳುತ್ತಾರೆ.


ಕೃಷಿ ಕ್ಷೇತ್ರದಲ್ಲಿ ಉದ್ಯೋಗಗಳು


ಕೃಷಿ ವಲಯದಲ್ಲಿ ಉದ್ಯೋಗಗಳಿಗೆ ಬೇಡಿಕೆ ಇದೆ ಎಂದು ಸಂಖ್ಯಾಶಾಸ್ತ್ರಜ್ಞ ಮತ್ತು ರಾಷ್ಟ್ರೀಯ ಅಂಕಿಅಂಶ ಮಂಡಳಿಯ ಮಾಜಿ ಅಧ್ಯಕ್ಷ ಪ್ರೊನಬ್ ಸೇನ್ ತಿಳಿಸುತ್ತಾರೆ. ದೇಶದ ಉದ್ಯೋಗಿ ಕಾರ್ಮಿಕರಲ್ಲಿ ಕೃಷಿ ವಲಯದ ಪಾಲು 45.5% ರಷ್ಟಿದೆ ಎಂದು NSSO ನ ಇತ್ತೀಚಿನ ವಾರ್ಷಿಕ ಆವರ್ತಕ ಕಾರ್ಮಿಕ ಪಡೆ ಸಮೀಕ್ಷೆ ತಿಳಿಸಿದೆ. 2020-21 ರಲ್ಲಿ 46.5% ರಿಂದ ಈ ಪ್ರಮಾಣ ಕಡಿಮೆಯಾಗಿದ್ದರೂ 2018-19 ರಲ್ಲಿ 42.5% ಕ್ಕಿಂತ ಹೆಚ್ಚಾಗಿದೆ ಎಂಬ ಮಾಹಿತಿ ನೀಡಿದೆ.


2011-12 ರಿಂದ, ಉದ್ಯೋಗದಲ್ಲಿ ಕೃಷಿಯ ಪಾಲು ಸಾಕಷ್ಟು ವೇಗವಾಗಿ ಕುಸಿಯುತ್ತಿಲ್ಲ ಎಂಬ ಮಾಹಿತಿ ನೀಡಿದೆ ಅಂತೆಯೇ 2018-19 ರಿಂದ ಏರುತ್ತಿದೆ ಎಂದು ತಿಳಿಸಿದೆ. ಕಾರ್ಮಿಕ ಬಲವನ್ನು ಸಾಕಷ್ಟು ಉತ್ಪಾದಕವಾಗಿ ಅರ್ಥೈಸಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಸೇನ್ ಹೇಳುತ್ತಾರೆ. ಬೆಳವಣಿಗೆಯ ಮೂಲ ಕಾರ್ಯವೆಂದರೆ ಉದ್ಯೋಗವನ್ನು ಒದಗಿಸುವುದು ಎಂಬುದು ಸೇನ್ ಮಾತಾಗಿದೆ.


ಗ್ರಾಮೀಣ ನಿರುದ್ಯೋಗ


COVID-19 ಸಾಂಕ್ರಾಮಿಕ ಸಮಯದಲ್ಲಿ, ಗ್ರಾಮೀಣ ಕುಟುಂಬಗಳ ಆದಾಯವು ನಶಿಸಿ ಹೋಯಿತು. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಗ್ರಾಮೀಣ ಉದ್ಯೋಗಿಗಳಿಗೆ ಉದ್ಯೋಗಗಳನ್ನು ಒದಗಿಸಿದ MGNREGA ಯೋಜನೆಗೆ ಸರ್ಕಾರವು ಬಜೆಟ್ ಹಂಚಿಕೆಯನ್ನು ಕಡಿತಗೊಳಿಸಿತು.


ಹೆಚ್ಚುತ್ತಿರುವ ಗ್ರಾಮೀಣ ನಿರುದ್ಯೋಗವು ಭಾರತದ ಬಡತನದ ಸಂಖ್ಯೆಗಳ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ವ್ಯಾಸ್, ಬಡತನ ನಿರ್ಮೂಲನೆಯಲ್ಲಿ ಗ್ರಾಮೀಣ ಉದ್ಯೋಗಗಳು ಸ್ವಲ್ಪ ಮಟ್ಟಿಗೆ ಪರಿಣಾಮಕಾರಿಯಾಗಿವೆ ಎಂದು ತಿಳಿಸುತ್ತಾರೆ.


ಗ್ರಾಮೀಣ ಉದ್ಯೋಗ ದರವು ಮಾರ್ಚ್‌ನಲ್ಲಿ 37.9% ರಿಂದ ಏಪ್ರಿಲ್‌ನಲ್ಲಿ 40.4% ಕ್ಕೆ ತಲುಪಿದೆ ಎಂದು ವ್ಯಾಸ್ ಹೇಳುತ್ತಾರೆ. ಗ್ರಾಮೀಣ ಭಾರತದಲ್ಲಿ ಈ ಉದ್ಯೋಗ ದರವು ಕಳೆದ ಮೂರು ವರ್ಷಗಳಲ್ಲಿ ಅತ್ಯಧಿಕವಾಗಿದೆ ಎಂಬುದು ಅವರ ಅಭಿಪ್ರಾಯವಾಗಿದೆ. ನಗರ ನಿರುದ್ಯೋಗ ದರವು ಹಿಂದಿನ ತಿಂಗಳಲ್ಲಿ 8.5% ಗೆ ಹೋಲಿಸಿದರೆ [ಏಪ್ರಿಲ್‌ನಲ್ಲಿ] 9.8% ಕ್ಕೆ ಏರಿದೆ ಎಂಬ ಮಾಹಿತಿ ನೀಡಿದ್ದಾರೆ.


ಆರ್ಥಿಕತೆಯ ಮೇಲೆ ವ್ಯಾಪಕವಾದ ಪರಿಣಾಮಗಳು


ಒಂದು ದೇಶದ ನಿರುದ್ಯೋಗ ದರವು ಕೇವಲ ಉದ್ಯೋಗವನ್ನು ಹೊಂದಿರದ ಜನರ ಮೇಲೆ ಪರಿಣಾಮ ಬೀರುವುದಿಲ್ಲ, ವಾಸ್ತವವಾಗಿ, ಅದು ಎಷ್ಟು ನಿರಂತರವಾಗಿರುತ್ತದೆ ಮತ್ತು ನಿರುದ್ಯೋಗದ ಅಂಶಗಳು ಆರ್ಥಿಕತೆಯಾದ್ಯಂತ ವ್ಯಾಪಕ ಪರಿಣಾಮಗಳನ್ನು ಬೀರುತ್ತವೆ ಎಂಬುದು ವ್ಯಾಸ್ ಹೇಳಿಕೆಯಾಗಿದೆ.


ನಿರುದ್ಯೋಗಿ ಕಾರ್ಮಿಕರು ತಮ್ಮ ಖರೀದಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ, ಇದು ಇತರ ಕೆಲಸಗಾರರಿಗೆ ನಿರುದ್ಯೋಗಕ್ಕೆ ಕಾರಣವಾಗಬಹುದು ಎಂದು ವ್ಯಾಸ್ ತಿಳಿಸಿದ್ದಾರೆ. ಈ ರೀತಿಯಾಗಿ, ನಿರುದ್ಯೋಗವು ಇನ್ನೂ ಉದ್ಯೋಗದಲ್ಲಿರುವವರ ಮೇಲೂ ಪರಿಣಾಮ ಬೀರುತ್ತದೆ. ನಿರುದ್ಯೋಗವು ಇನ್ನೂ ಉದ್ಯೋಗದಲ್ಲಿರುವವರ ಮಾನಸಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ದಿ ವೈರ್ ವರದಿ ತಿಳಿಸಿದೆ.

top videos
    First published: