ದ್ವಿತೀಯ ಪಿಯುಸಿ (2nd PUC) ಹಾಗೂ ಎಸ್ಎಸ್ಎಲ್ಸಿ (SSLC) ಫಲಿತಾಂಶಗಳು ಘೋಷಣೆಯಾದ ಬೆನ್ನಲ್ಲೇ ಮುಂದೇನು ಎಂಬ ಚಿಂತೆ ವಿದ್ಯಾರ್ಥಿಗಳು (Students) ಹಾಗೂ ಅವರ ಪೋಷಕರಲ್ಲಿ (Parents) ಕಾಡುವುದು ಸರ್ವೇಸಾಮಾನ್ಯವಾಗಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಇನ್ನಷ್ಟು ಹೆಚ್ಚುವರಿ ಶೈಕ್ಷಣಿಕ ಅಭ್ಯಾಸಗಳತ್ತ ಮುಂದಡಿ ಇಟ್ಟರೆ ಹತ್ತನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳು ಕೂಡ ತಮ್ಮ ಮುಂದಿನ ಉನ್ನತ ತರಗತಿಗಳತ್ತ ಗಮನಹರಿಸುತ್ತಾರೆ.
ಹೀಗೆ ಯಾವುದೇ ಕೋರ್ಸ್ ಇಲ್ಲವೇ ತರಗತಿಗಳನ್ನು ಆರಿಸಿಕೊಳ್ಳುವ ವಿದ್ಯಾರ್ಥಿಗಳು ಭವಿಷ್ಯದ ಉದ್ಯೋಗ ಕ್ಷೇತ್ರವನ್ನು ಮನದಲ್ಲಿಟ್ಟುಕೊಂಡು ಮುಂದಿನ ತರಗತಿಗಳ ಆಯ್ಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಸಮಯದಲ್ಲಿ ಭಯ ಹಾಗೂ ಗಾಬರಿಯಾಗದೇ ಭವಿಷ್ಯಕ್ಕೆ ಸೂಕ್ತವಾಗಿರುವ ಕೋರ್ಸ್ಗಳನ್ನು ಆಯ್ದುಕೊಳ್ಳಲು ಮುಂದಾಗಿ ಎಂದೇ ಶಿಕ್ಷಣ ತಜ್ಞರು ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತಾರೆ.
ವಿದ್ಯಾರ್ಥಿಗಳಿಗೆ ಕೋರ್ಸ್ಗಳನ್ನು ಆರಿಸಿಕೊಳ್ಳುವಲ್ಲಿ ಹೆಚ್ಚಿನ ನಿರ್ದೇಶನ ಮಾರ್ಗದರ್ಶನ ನೀಡುವವರು ಅಧ್ಯಾಪಕರ ವೃಂದ ಹಾಗೂ ಪೋಷಕ ವರ್ಗದವರಾದ್ದರಿಂದ ಅವರು ಕೂಡ ತಾಳ್ಮೆ ಹಾಗೂ ಧೃತಿಗೆಡದೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕಾಗಿದೆ.
ಸೂಕ್ತ ಕೋರ್ಸ್ಗಳ ಆಯ್ಕೆ
ಸಾಲು ಸಾಲು ಕೋರ್ಸ್ಗಳು ವಿದ್ಯಾರ್ಥಿಗಳ ಮುಂದಿರುವಾಗ ಅವರಿಗೆ ಗೊಂದಲವಾಗುವುದು ಸಹಜವಾಗಿದೆ. ವಿದ್ಯಾರ್ಥಿಗಳಿಗೆ ಇಷ್ಟವಿರುವ ಕೋರ್ಸ್ಗಳನ್ನು ಆರಿಸಿಕೊಳ್ಳಲು ಪೋಷಕರು, ಶಿಕ್ಷಕರು ಅನುಮತಿಸಬೇಕು. ಅವರ ಮುಂದಿನ ಭವಿಷ್ಯದ ಉದ್ದೇಶವೇನು ಎಂಬುದನ್ನು ಅರಿತುಕೊಂಡು ಕೋರ್ಸ್ಗಳ ಆಯ್ಕೆಯಲ್ಲಿ ನೆರವಾಗಿ.
ವಿದ್ಯಾರ್ಥಿಗಳು ಈ ದಿಸೆಯಲ್ಲಿ ಗೊಂದಲಕ್ಕೊಳಗಾಗಿದ್ದರೆ ಅವರಿಗೆ ಹೆಚ್ಚಿನ ಮಾರ್ಗದರ್ಶನ ನೀಡಬೇಕು ಹಾಗೂ ಅವರ ಮನದಾಳದಲ್ಲಿ ಅವರ ಗುರಿ ಏನು ಎಂಬುದನ್ನು ಪೋಷಕರು, ಶಿಕ್ಷಕರು ಅರಿತುಕೊಳ್ಳಬೇಕಾಗುತ್ತದೆ.
ಕುಟುಂಬ, ಸಮಾಜ, ಒತ್ತಡ
ಹೆಚ್ಚಿನ ಕುಟುಂಬಗಳಲ್ಲಿ ಮಕ್ಕಳು, ಪೋಷಕರು ಅಥವಾ ಕುಟುಂಬದವರ ಒತ್ತಾಯಕ್ಕೆ ಮಣಿದು ಕೋರ್ಸ್ಗಳನ್ನು ಆರಿಸಿಕೊಳ್ಳುತ್ತಾರೆ. ಅವರಿಗೆ ಅವರಿಷ್ಟದ ವಿಷಯಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವೇ ಇರುವುದಿಲ್ಲ. ಇದು ಮುಂದೆ ಮಕ್ಕಳಲ್ಲಿ ಒತ್ತಡಕ್ಕೆ ಕಾರಣವಾಗುತ್ತದೆ ಅಂತೆಯೇ ಅಂಕ ಕಡಿಮೆ ಬಂದಾಗ ಅವರು ಸಾಮಾನ್ಯವಾಗಿ ಖಿನ್ನತೆಗೆ ಜಾರುತ್ತಾರೆ.
ಹಾಗಾಗಿ ಭವಿಷ್ಯದ ಅವರ ಉದ್ದೇಶವನ್ನು ಅರಿತುಕೊಂಡು ಅವರು ಏನಾಗ ಬಯಸುತ್ತಾರೋ ಅಂತಹ ಕೋರ್ಸ್ಗಳನ್ನು ಆರಿಸಲು ಅವರಿಗೆ ಅವಕಾಶ ಮಾಡಿಕೊಡಬೇಕು. ಮಕ್ಕಳಿಗೆ ಹೆಚ್ಚಿನ ಒತ್ತಡ ಹೇರದೇ ಅವರಿಗಿಷ್ಟದ ಶಿಕ್ಷಣವನ್ನು ಆಯ್ದುಕೊಳ್ಳಲು ಅವಕಾಶ ನೀಡಿ.
ಮಕ್ಕಳನ್ನು ಬೆಂಬಲಿಸುವಲ್ಲಿ ಪೋಷಕರ ಪಾತ್ರ
ಶಿಕ್ಷಣ ಪರಿಣಿತರಾದ ಜಲೀಲ್ ಹೇಳುವಂತೆ ಸರಿಯಾದ ವೃತ್ತಿಆಯ್ಕೆಯನ್ನು ಆರಿಸಿಕೊಳ್ಳುವಲ್ಲಿ ಪೋಷಕರೇ ಮಕ್ಕಳಿಗೆ ಸರಿಯಾದ ಮಾರ್ಗದರ್ಶಕರಾಗಿದ್ದಾರೆ ಎಂದಾಗಿದೆ. ಅವರ ಮಾತುಗಳನ್ನು ಮುಕ್ತವಾಗಿ ಆಲಿಸುವುದು ಹಾಗೂ ಅವರಿಗೆ ಸೂಕ್ತ ಸಲಹೆಗಳನ್ನು ನೀಡುವುದು ಪ್ರತಿಯೊಬ್ಬ ಪೋಷಕರ ಆದ್ಯ ಕರ್ತವ್ಯವಾಗಿದೆ ಎಂಬುದು ಜಲೀಲ್ ಅಭಿಪ್ರಾಯವಾಗಿದೆ.
ಮಕ್ಕಳು ಕಳೆದ ನಾಲ್ಕೈದು ವರ್ಷಗಳಲ್ಲಿ ಯಾವ ವಿಷಯದಲ್ಲಿ ಅನುಭವ ಹಾಗೂ ಪರಿಣಿತಿ ಪಡೆದುಕೊಂಡಿದ್ದಾರೆ ಎಂಬುದನ್ನು ಪೋಷಕರು ವಿಶ್ಲೇಷಿಸಬೇಕು. ಅವರ ಆಸಕ್ತಿ ಹಾಗೂ ಕೌಶಲ್ಯಗಳನ್ನು ಅರಿತುಕೊಳ್ಳಲು ಕೆಲವೊಂದು ಪರೀಕ್ಷೆಗಳನ್ನು ಪೋಷಕರು ಮಾಡಬಹುದು.
ಇದನ್ನೂ ಓದಿ Student Benefits: ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ; ನೀವೂ ಅಪ್ಲೈ ಮಾಡಿ
ಮಕ್ಕಳ ಪ್ರಗತಿಯನ್ನು ಮುಂದಿಟ್ಟುಕೊಂಡು ಅವರು ತಮ್ಮ ಗುರಿ ಹಾಗೂ ಉದ್ದೇಶವನ್ನು ಈಡೇರಿಸುವಲ್ಲಿ ಸಫಲರಾಗಿದ್ದಾರೆಯೇ ಎಂಬುದನ್ನು ಪೋಷಕರು ಅರಿತುಕೊಳ್ಳಬಹುದು. ಮಕ್ಕಳ ವ್ಯಕ್ತಿತ್ವವನ್ನು ಅರಿತುಕೊಳ್ಳಲು ಪ್ರಯತ್ನಿಸಿ ಹಾಗೂ ಅವರ ಭಾವನಾತ್ಮಕ ಅಂಶವನ್ನು ಪರಿಗಣಿಸುವುದು ಪೋಷಕರ ಕರ್ತವ್ಯವಾಗಿದೆ.
ಮಕ್ಕಳನ್ನು ಚೆನ್ನಾಗಿ ಅರಿತುಕೊಂಡಿರುವವರು ಶಿಕ್ಷಕರು ಮಾತ್ರ
ಮಕ್ಕಳಲ್ಲಿರುವ ಗುರಿ, ಉದ್ದೇಶ, ಕ್ರಿಯಾತ್ಮಕತೆಯನ್ನು ಒಬ್ಬ ಶಿಕ್ಷಕ ಚೆನ್ನಾಗಿ ಅರಿತುಕೊಂಡಿರುತ್ತಾರೆ. ಯಾವ ವಿಷಯವನ್ನು ಆಯ್ದುಕೊಳ್ಳಬೇಕು ಯಾವ ವಿಷಯದಲ್ಲಿ ಮಕ್ಕಳು ಪರಿಣಿತರು ನುರಿತರು ಎಂಬುದನ್ನು ತಿಳಿಸುವಲ್ಲಿ ಶಿಕ್ಷಕರು ಸಿದ್ಧಹಸ್ತರಾಗಿರುತ್ತಾರೆ. ಮಕ್ಕಳು ಮುಂದಿನ ಭವಿಷ್ಯದ ಕುರಿತು ಚಿಂತಾಕ್ರಾಂತರಾಗಿದ್ದರೆ ಶಿಕ್ಷಕರು ಅವರಿಗೆ ಸಹಾಯ ಮಾಡಬಹುದಾಗಿದೆ.
10 ನೇ ತರಗತಿ ನಂತರ ಉದ್ಯೋಗ ಸಂಬಂಧಿತ ಕೋರ್ಸ್ಗಳನ್ನು ಆಯ್ದುಕೊಳ್ಳುವುದು
ಪ್ಲಾಸ್ಟಿಕ್ ಮೌಲ್ಡ್ ತಂತ್ರಜ್ಞಾನ, ಫುಡ್ ಪ್ರಡಕ್ಶನ್, ಗ್ರಾಫಿಕ್ ಡಿಸೈನ್, ಅನಿಮೇಶನ್, ಡಿಜಿಟಲ್ ಮಾರ್ಕೆಟಿಂಗ್, ಅಟೊಮೇಟೀವ್ ಮೆಕಾನಿಕ್ಸ್, ಪಾಲಿಟೆಕ್ನಿಕ್ ಹೀಗೆ ಎಸ್ಎಸ್ಎಲ್ಸಿ ಆದ ನಂತರ ವಿದ್ಯಾರ್ಥಿಗಳ ಉದ್ಯೋಗಿ ಸಂಬಂಧಿತ ಕೋರ್ಸ್ಗಳನ್ನು ಮಾಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ