ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಚೇತನ್ ಸಕರಿಯಾ ಅವರ ತಂದೆ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಕಾರಣದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚೇತನ್ ಅವರ ತಂದೆ ಭಾನುವಾರ ಮೃತಪಟ್ಟಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ಬೆಳಕಿಗೆ ಬಂದ ಪ್ರತಿಭೆಗಳಲ್ಲಿ ಚೇತನ್ ಸಕರಿಯಾ ಕೂಡ ಒಬ್ಬರು. ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿದ್ದ ಯುವ ಎಡಗೈ ವೇಗಿ ಟೂರ್ನಿಯುದ್ದಕ್ಕೂ ಲಯಬದ್ಧ ಬೌಲಿಂಗ್ ಮೂಲಕ ಗಮನ ಸೆಳೆದಿದ್ದರು. ಐಪಿಎಲ್ ಮುಂದೂಡಿಕೆಯಿಂದ ಸಕರಿಯಾ ಮನೆಗೆ ವಾಪಾಸ್ಸಾಗಿದ್ದರು. ಆದರೆ ದುರಾದೃಷ್ಟ ಇತ್ತ ಮನೆಗೆ ತೆರಳುವ ವೇಳೆಗಾಗಲೇ ಚೇತನ್ ಸಕರಿಯಾ ಅವರ ತಂದೆ ಕೊರೋನಾ ಪಾಸಿಟಿವ್ ಆಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ಐಪಿಎಲ್ ಕ್ಯಾಂಪ್ನಿಂದ ಯುವ ಆಟಗಾರ ನೇರವಾಗಿ ಆಸ್ಪತ್ರೆಗೆ ತೆರಳಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ತಂದೆಯ ಆರೋಗ್ಯದ ಬಗ್ಗೆ ಮಾತನಾಡಿದ ಚೇತನ್ ಸಕರಿಯಾ, "ನಾನು ಅದೃಷ್ಟಶಾಲಿಯಾಗಿದ್ದೇನೆ. ಏಕೆಂದರೆ ಕೆಲವು ದಿನಗಳ ಹಿಂದೆ ರಾಜಸ್ಥಾನ್ ರಾಯಲ್ಸ್ ತಂಡದಿಂದ ನನ್ನ ವೇತನವನ್ನು ಸ್ವೀಕರಿಸಿದ್ದೇನೆ. ಆ ಹಣವನ್ನು ಮನೆಗೆ ಕಳುಹಿಸಿದೆ. ಇಂದು ಆ ಹಣದಿಂದ ತಂದೆಯ ಚಿಕಿತ್ಸೆಗೆ ನೆರವಾಗುತ್ತಿದೆ ಎಂದು ಯುವ ಕ್ರಿಕೆಟಿಗ ತಿಳಿಸಿದ್ದ.
ಜನರು ಐಪಿಎಲ್ ನಿಲ್ಲಿಸಿ ಎಂದು ಹೇಳುತ್ತಿದ್ದಾರೆ. ಹೀಗೆ ಹೇಳುವವರು ಈ ಬಗ್ಗೆ ಕೂಡ ಯೋಚಿಸಬೇಕು. ನನ್ನ ಕುಟುಂಬದ ಸಂಪೂರ್ಣ ಜವಾಬ್ದಾರಿ ನನ್ನ ಮೇಲಿದೆ. ನನ್ನ ಗಳಿಕೆಯ ಏಕೈಕ ಮೂಲ ಕ್ರಿಕೆಟ್. ಐಪಿಎಲ್ನಿಂದ ನಾನು ಗಳಿಸಿದ ಹಣದಿಂದಾಗಿ ಇಂದು ನನ್ನ ತಂದೆಗೆ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿದೆ. ಈ ಬಾರಿ ಟೂರ್ನಿ ನಡೆಯದಿದ್ದರೆ ನನ್ನ ಪಾಲಿಗೆ ಕಷ್ಟಕರವಾಗುತ್ತಿತ್ತು. ನಾನು ಬಡ ಕುಟುಂಬದಿಂದ ಬಂದವನು.ಐಪಿಎಲ್ ಕಾರಣದಿಂದಾಗಿ ನನ್ನ ಇಡೀ ಜೀವನವು ಬದಲಾಗಲಿದೆ. ಹೀಗಾಗಿ ಸುಖಾಸುಮ್ಮನೆ ಐಪಿಎಲ್ ರದ್ದುಗೊಳಿಸಿ ಎಂದು ಮಾತನಾಡುವವರು ಈ ಬಗ್ಗೆ ಕೂಡ ಯೋಚಿಸಬೇಕು ಎಂದು ಚೇತನ್ ಸಕರಿಯಾ ತಿಳಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ