ಅದು 2004, ಭಾರತ ಮತ್ತು ಪಾಕಿಸ್ತಾನ ನಡುವೆ ರಣ ರೋಚಕ ಪಂದ್ಯ. ಪಾಕ್ಗೆ ಗೆಲ್ಲಲು 8 ಎಸೆತಗಳಲ್ಲಿ 10 ರನ್ಗಳ ಅವಶ್ಯಕತೆಯಿತ್ತು. 49ನೇ ಓವರ್ ಎಸೆಯುತ್ತಿದ್ದದ್ದು ಎಡಗೈ ವೇಗಿ ಜಹೀರ್ ಖಾನ್. ಅತ್ತ ಸ್ಟ್ರೈಕ್ನಲ್ಲಿ ಶೊಯೇಬ್ ಮಲಿಕ್. ಸ್ಟೇಡಿಯಂನಲ್ಲಿ ಪಾಕ್ ಅಭಿಮಾನಿಗಳು ಗೆಲುವು ನಮ್ದೆ ಅನ್ನುವ ಖುಷಿಯಲ್ಲಿದ್ದರು. ಈ ವೇಳೆ ಜಹೀರ್ ಖಾನ್ ಅವರ 5ನೇ ಎಸೆತವನ್ನು ಮಲಿಕ್ ಸಿಕ್ಸರ್ಗೆ ಅಟ್ಟಲು ಯತ್ನಿಸಿದ್ದರು. ಚೆಂಡೆ ಮುಗಿಲೆತ್ತರದಲ್ಲಿ...ಏನಾಗಲಿದೆ ಅನ್ನುವಷ್ಟರಲ್ಲಿ ಬೌಂಡರಿ ಲೈನ್ನಿಂದ ಮಿಂಚಿನಂತೆ ಓಡಿ ಬಂದ ಮೊಹಮ್ಮದ್ ಕೈಫ್ ಹೆಮಾಂಗ್ ಬದಾನಿಯ ಮೇಲಿಂದ ಹಾರಿ ಚೆಂಡನ್ನು ತಮ್ಮ ಕೈಯಲ್ಲಿ ಭದ್ರವಾಗಿಸಿದ್ದರು. ಈ ಅದ್ಭುತ ಕ್ಯಾಚ್ಗೆ ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣ ಸ್ತಬ್ಧವಾಗಿತ್ತು. ಇಂದಿಗೂ ಕ್ರಿಕೆಟ್ ಅಂಗಳದ ಬೆಸ್ಟ್ ಕ್ಯಾಚ್ಗಳಲ್ಲಿ ಇದು ಕೂಡ ಒಂದು.
ಈ ವಿಷಯ ಈಗ ಯಾಕಪ್ಪಾ ಅಂದರೆ...ಬುಧವಾರ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಮೈದಾನ ಅಂತಹದ್ದೆ ಒಂದು ಕ್ಯಾಚ್ಗೆ ಸಾಕ್ಷಿಯಾಗಿತ್ತು. ಕೈಫ್ ಹಿಡಿದ ಅದ್ಭುತ ಕ್ಯಾಚ್ಗೆ ಸರಿಸಾಟಿಯಾಗದಿದ್ದರೂ, ಯುವ ಕ್ರಿಕೆಟಿಗನ ಅತ್ಯುತ್ತಮ ಪ್ರಯತ್ನಕ್ಕೆ ಮೆಚ್ಚುಗೆಗಳ ಮಹಾಪೂರವೇ ಹರಿದು ಬರುತ್ತಿದೆ. ಇದಕ್ಕೂ ಒಂದು ಕಾರಣವಿದೆ. ಏಕೆಂದರೆ ಕಮಲೇಶ್ ನಾಗರ್ಕೋಟಿ ಎಂಬ ಯುವ ವೇಗಿಯ ಹೆಸರು ಮೊದಲು ಕೇಳಿ ಬಂದಿದ್ದು ಅಂಡರ್-19 ಟೀಮ್ ಇಂಡಿಯಾ ತಂಡದಲ್ಲಿ. ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ ಆಟಗಾರನಿಗೆ 2018 ರಲ್ಲೇ ಐಪಿಎಲ್ ಬಾಗಿಲು ತೆರೆದಿತ್ತು. ಕೆಕೆಆರ್ ತಂಡಕ್ಕೆ ಆಯ್ಕೆಯಾದರೂ ಕಮಲೇಶ್ ನಾಗರ್ಕೋಟಿ ಅದೃಷ್ಟ ಕೈಕೊಟ್ಟಿತ್ತು. ಬೆನ್ನು ನೋವಿನಿಂದ ಬಳಲುತ್ತಿದ್ದ ಕ್ರಿಕೆಟಿಗ 1 ವರ್ಷಕ್ಕೂ ಅಧಿಕ ಕಾಲ ಮೈದಾನದಿಂದ ಹೊರಗುಳಿದಿದ್ದರು.
ಆ ಬಳಿಕ ಚೇತರಿಸಿಕೊಂಡ ಕಮಲೇಶ್ ಮತ್ತೆ ದ್ರಾವಿಡ್ ಕ್ಯಾಂಪ್ಗೆ ಮರಳಿದ್ದರು. ಆತ್ಮ ವಿಶ್ವಾಸದೊಂದಿಗೆ ಯುವ ಕ್ರಿಕೆಟಿಗನಲ್ಲಿ ಹೊಸ ಉತ್ಸಾಹ ಮೂಡಿಸಿದ್ದ ದ್ರಾವಿಡ್, ನಾಗರ್ಕೋಟಿ ತಮ್ಮ ಬೌಲಿಂಗ್ನಲ್ಲಿ ಈ ಹಿಂದಿನ ವೇಗ ಪಡೆದುಕೊಳ್ಳುವಂತೆ ಮಾಡಿದ್ದರು. ಇದೇ ಕಾರಣದಿಂದ ಇಂದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಮುಖ ವೇಗಿಯಾಗಿ 20ರ ಹರೆಯದ ಕಮಲೇಶ್ ಗುರುತಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲ ಬುಧವಾರ ನಡೆದ ಪಂದ್ಯದಲ್ಲಿ ಅದ್ಭುತವಾಗಿ ಡೈವಿಂಗ್ ಕ್ಯಾಚ್ ಹಿಡಿದು ಮಿಂಚಿದ್ದಾರೆ. ಪಂದ್ಯದ 15ನೇ ಓವರ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಜೋಫ್ರಾ ಆರ್ಚರ್ ದೊಡ್ಡ ಹೊಡೆತ ಬಾರಿಸಿದ್ದರು. ಆಕಾಶದತ್ತ ಹಾರಿದ ಬಾಲ್ನ್ನು ಹಿಡಿಯಲು ಬೌಂಡರಿ ಲೈನ್ಗಳಿಂದ ಇಬ್ಬರು ಫೀಲ್ಡರ್ಗಳು ಧಾವಿಸಿದ್ದರು. ಇನ್ನೇನು ಚೆಂಡು ಮೈದಾನಕ್ಕೆ ಮುಟ್ಟಲಿದೆ ಅನ್ನುವಾಗ ಕಮಲೇಶ್ ನಾಗರ್ಕೋಟಿ ಜಿಗಿದು ಚೆಂಡನ್ನು ಕೈಯಲ್ಲಿ ಬಂಧಿಸಿದರು. ಈ ಕ್ಯಾಚ್ 2004ರ ಕೈಫ್ ಕ್ಯಾಚ್ನ್ನು ಮತ್ತೊಮ್ಮೆ ನೆನಪಿಸಿದಂತಿತ್ತು.
ಆದರೆ ಅಂದು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಯ್ಕೆ ವೇಳೆ ಕೆಕೆಆರ್ ಸಿಇಒ ವೆಂಕಿ ಮೈಸೂರ್ ಯುವ ಆಟಗಾರರ ತಲಾಷೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ದ್ರಾವಿಡ್ ಅವರಿಂದ ಕೂಡ ಯುವ ಕ್ರಿಕೆಟಿಗರ ಕುರಿತು ಸಲಹೆಗಳನ್ನು ಪಡೆದಿದ್ದರು. ಇದೇ ವೇಳೆ ರಾಹುಲ್ ದ್ರಾವಿಡ್, ಕಮಲೇಶ್ ನಾಗರ್ಕೋಟಿಯನ್ನು ಕೇವಲ ಒಬ್ಬ ಬೌಲರ್ ಎಂದು ಮಾತ್ರ ಪರಿಚಯಿಸಿರಲಿಲ್ಲ. ಬದಲಾಗಿ ನಾಗರಕೋಟಿ ಒಬ್ಬ ಅದ್ಭುತ ಫೀಲ್ಡರ್ಗಳಲ್ಲಿ ಒಬ್ಬರು ಎಂದಿದ್ದರು.
ಟೀಮ್ ಇಂಡಿಯಾ ಆಟಗಾರ ರವೀಂದ್ರ ಜಡೇಜಾ ಜೊತೆ ಸರಿ ಸಮಾನವಾಗಿ ಸ್ಪರ್ಧಿಸಬಲ್ಲ ಕ್ಷೇತ್ರರಕ್ಷಕ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ರಾಹುಲ್ ದ್ರಾವಿಡ್ ಕೆಕೆಆರ್ ಸಿಇಒಗೆ ತಿಳಿಸಿದ್ದರು. ವರ್ಷಗಳ ಹಿಂದೆ ದ್ರಾವಿಡ್ ಹೇಳಿದ ಮಾತನ್ನು ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ನಾಗರ್ಕೋಟಿ ನಿರೂಪಿಸಿದರು. ತಾನು ಕೇವಲ ವೇಗದ ಬೌಲರ್ ಅಲ್ಲ. ಅತ್ಯುತ್ತಮ ಫೀಲ್ಡರ್ಗಳಲ್ಲಿ ಒಬ್ಬ ಎಂಬುದನ್ನು ಅದ್ಬುತ ಕ್ಯಾಚ್ ಮೂಲಕ ತಮ್ಮ ಸಾಮರ್ಥ್ಯವನ್ನು ತೆರೆದಿಟ್ಟರು. ಈ ಮೂಲಕ ಗುರುವಿನ ಮಾತನ್ನು ನಿಜಗೊಳಿಸಿದರು.
Nagar Caught-it! 🤩
A phenomenal catch from the youngster sends Archer back in the dugout.
ucchkoti catch taken by kamlesh nagarkoti...✨🔥#RRvKKR #KKRHaiTaiyaar #Dream11IPL pic.twitter.com/GJdPevEAZw
— Kundan01 (@Kundan018) September 30, 2020
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ: IPL 2020: ಐಪಿಎಲ್ನಲ್ಲಿ ದ್ರಾವಿಡ್ ಗರಡಿ ಹುಡುಗರ ಮಿಂಚಿಂಗ್..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ