ಮಹೇಂದ್ರ ಸಿಂಗ್ ಧೋನಿ ಭಾರತದ ಅತ್ಯಂತ ಜನಪ್ರಿಯ ಕ್ರಿಕೆಟಿಗರಲ್ಲಿ ಒಬ್ಬರು. ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದರೂ ಜನಪ್ರಿಯತೆ ಕಡಿಮೆ ಆಗಿಲ್ಲ. ಜಾಹೀರಾತುಗಳ ಮೇಲೆ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುವುದೇ ಅದಕ್ಕೆ ಸಾಕ್ಷಿ. ಈಗಲೂ ಅವರನ್ನ ಕಾಣಲು ಅಭಿಮಾನಿಗಳು ಮುಗಿಬೀಳುತ್ತಾರೆ. ಬ್ಯಾಟಿಂಗ್ನಲ್ಲಿ ಮೊದಲಿನಷ್ಟು ಚುರುಕುತನ ಇಲ್ಲದಿದ್ದರೂ ಅವರೇ ಅನೇಕ ಮಂದಿಗೆ ಈಗಲೂ ರೋಲ್ ಮಾಡೆಲ್ ಆಗಿದ್ದಾರೆ. ಅವರ ಬ್ಯಾಟಿಂಗ್ ಕಳೆಗುಂದಿರುವುದರಿಂದ ಅವರಿಗೆ ಇದೇ ಕೊನೆಯ ಐಪಿಎಲ್ ಆಗಿರಬಹುದು ಎಂದು ಹಲವು ಮಾಜಿ ಕ್ರಿಕೆಟಿಗರು ಅಂದಾಜಿಸಿದ್ಧಾರೆ. ಆದರೆ, ಧೋನಿಗೆ ಎಲ್ಲಿಯವರೆಗೆ ಕ್ರಿಕೆಟ್ ಆಡಬೇಕು ಅನಿಸುತ್ತದೋ ಅಲ್ಲಿಯವರೆಗೆ ಐಪಿಎಲ್ನಲ್ಲಿ ಆಡಲು ಸ್ವಾತಂತ್ರ್ಯ ಅವರಿಗಿದೆ ಎಂದು ನಂಬಲಾಗಿದೆ. ಧೋನಿ ಈ ವರ್ಷದ ಐಪಿಎಲ್ ಬಳಿಕ ನಿವೃತ್ತರಾಗುವುದಿಲ್ಲ ಎನ್ನಲಾಗಿದೆ. ಇಂಡಿಯಾ ಸಿಮೆಂಟ್ಸ್ನ 75ನೇ ವಾರ್ಷಿಕೋತ್ಸವದ ವೇಳೆ ಮಂಗಳವಾರ ಸಿಎಸ್ಕೆ ಫ್ಯಾನ್ಸ್ ಜೊತೆಗಿನ ಸಂವಾದದಲ್ಲಿ ಮಾತನಾಡುತ್ತಿದ್ದ ಧೋನಿ, ತಾನು ಚೆನ್ನೈಗೆ ಬಂದು ಅಲ್ಲಿ ಅಭಿಮಾನಿಗಳ ಎದುರು ಕೊನೆಯ ಐಪಿಎಲ್ ಗೇಮ್ ಆಡುವ ಇಚ್ಛೆ ಹೊಂದಿರುವುದಾಗಿ ಹೇಳಿಕೊಂಡಿದ್ಧಾರೆ. ಅಂದರೆ, ಅವರು ಮುಂದಿನ ಋತುವಿನ ಐಪಿಎಲ್ನಲ್ಲಿ ಆಡುವ ಸುಳಿವನ್ನು ನೀಡಿದ್ಧಾರೆ.
ಸಿಎಸ್ಕೆ ಮೂಲಗಳ ಪ್ರಕಾರ ಮುಂದಿನ ಐಪಿಎಲ್ಗೆ ಮೂವರು ಆಟಗಾರರನ್ನ ರೀಟೇನ್ ಮಾಡಲಾಗುತ್ತದೆ. ಎಂ ಎಸ್ ಧೋನಿ, ರವೀಂದ್ರ ಜಡೇಜಾ ಮತ್ತು ಋತುರಾಜ್ ಗಾಯಕ್ವಾಡ್ ಅವರನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯವರು ಉಳಿಸಿಕೊಂಡು ಉಳಿದವರನ್ನ ರಿಲೀವ್ ಮಾಡಬಹುದು ಎನ್ನಲಾಗಿದೆ. ಇನ್ನೂ ಒಂದು ವರದಿ ಪ್ರಕಾರ, ಈ ವರ್ಷದ ಐಪಿಎಲ್ ಯುಎಇಗೆ ಶಿಫ್ಟ್ ಆಗದೇ ಹೋಗಿದ್ದರೆ ಧೋನಿ ಅವರಿಗೆ ಈ ವರ್ಷವೇ ಕೊನೆಯ ಐಪಿಎಲ್ ಟೂರ್ನಿ ಆಗಿರುತ್ತಿತ್ತು. ಅವರಿಗೆ ಚೆನ್ನೈನಲ್ಲಿ ಐಪಿಎಲ್ ಪಂದ್ಯ ಆಡಿ ವಿದಾಯ ಹೇಳುವ ಆಸೆ ಇದೆಯಂತೆ. 2019ರ ನಂತರ ಧೋನಿ ಅವರು ಚೆನ್ನೈನಲ್ಲಿ ಸಿಎಸ್ಕೆ ಜೆರ್ಸಿ ತೊಟ್ಟು ಆಡಿಲ್ಲ. ಕಳೆದ ವರ್ಷದ ಐಪಿಎಲ್ ಟೂರ್ನಿ ಕೋವಿಡ್ ಕಾರಣಕ್ಕೆ ಭಾರತದ ಬದಲು ಯುಎಇಯಲ್ಲೇ ಆಯೋಜಿಸಲಾಗಿತ್ತು. ಈ ವರ್ಷದ ಮೊದಲಾರ್ಧವು ಭಾರತದಲ್ಲಿ ನಡೆದರೂ ಸಿಎಸ್ಕೆ ಪಂದ್ಯಗಳೆಲ್ಲವೂ ಮುಂಬೈನಲ್ಲಿ ನಡೆದಿದ್ದವು. ಹೀಗಾಗಿ ಚೆನ್ನೈನಲ್ಲಿ ಆಡುವ ಅವಕಾಶ ಸಿಎಸ್ಕೆ ಸಿಗಲಿಲ್ಲ.
ಬಾಲಿವುಡ್ಗೆ ಬರುತ್ತಾರಾ ಧೋನಿ?
ಎಂಎಸ್ ಧೋನಿ ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಥರಹೇವಾರಿ ನಟನೆ, ಡ್ಯಾನ್ಸ್ನಿಂದ ಮಿಂಚುತ್ತಿದ್ದಾರೆ. ಅವರಿಗೆ ನಟನೆಯ ಮೇಲೆ ಆಸಕ್ತಿ ಹೆಚ್ಚಾಯಿತೇನೋ ಎಂಬ ಅನುಮಾನವೂ ಹುಟ್ಟಿದೆ. ಈ ಬಗ್ಗೆ ಸಿಎಸ್ಕೆ ಅಭಿಮಾನಿಯೊಬ್ಬರು ಇಂದು ಧೋನಿಯನ್ನ ಕೇಳಿಯೇಬಿಟ್ಟರು. ಕ್ರಿಕೆಟ್ನಿಂದ ನಿವೃತ್ತರಾದ ಬಳಿಕ ಬಾಲಿವುಡ್ನಲ್ಲಿ ಬೀಡು ಬಿಡುತ್ತೀರಾ ಎಂದು ಕೇಳಿದ್ದಕ್ಕೆ ಧೋನಿ, ತನಗೆ ನಟನೆ ಸುಲಭವಲ್ಲ, ಕ್ರಿಕೆಟ್ಟೇ ವಾಸಿ ಎಂದಿದ್ಧಾರೆ.
“ಬಾಲಿವುಡ್ ನನಗೆ ಹೇಳಿ ಮಾಡಿಸಿದ್ದಲ್ಲ. ಜಾಹೀರಾತುಗಳ ವಿಷಯಕ್ಕೆ ಬಂದರೆ ನಾನು ಖುಷಿಯಾಗಿಯೇ ಆ್ಯಡ್ಗಳಲ್ಲಿ ಮಾಡುತ್ತೇನೆ. ಆದರೆ, ಸಿನಿಮಾಗಳಿಗೆ ಬಂದರೆ ಅದು ಬಹಳ ಕಠಿಣ ವೃತ್ತಿ. ಅದನ್ನ ನಿರ್ವಹಿಸುವುದು ಬಹಳ ಕಷ್ಟ.
ಇದನ್ನೂ ಓದಿ: MI vs RR- ರಾಯಲ್ಸ್ ವಿರುದ್ಧ ಮುಂಬೈಗೆ ಭರ್ಜರಿ ಜಯ; ಪ್ಲೇ ಆಫ್ ಕನಸು ಜೀವಂತ
”ನಟಿಸುವ ಕೆಲಸವನ್ನ ಫಿಲಂ ಸ್ಟಾರ್ಗಳಿಗೆ ಬಿಡುತ್ತೇನೆ. ಅದರಲ್ಲಿ ಅವರು ಸಿದ್ಧಹಸ್ತರು. ನನಗೆ ಕ್ರಿಕೆಟ್ ಸರಿ. ನನಗೆ ನಟನೆ ಎಂದರೆ ಅಬ್ಬಬ್ಬಾ ಜಾಹೀರಾತು ಮಾತ್ರ. ಅದಕ್ಕಿಂತ ಹೆಚ್ಚು ನಟನೆ ನನಗೆ ಬರುವುದಿಲ್ಲ” ಎಂದು ಇಂಡಿಯಾ ಸಿಮೆಂಟ್ಸ್ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಧೋನಿ ಹೇಳಿದ್ದಾರೆ.
ಎಂಎಸ್ ಧೋನಿ ಅವರು ಇಂಡಿಯಾ ಸಿಮೆಂಟ್ಸ್ ಕಂಪನಿಯ ಮಾರ್ಕೆಟಿಂಗ್ ವಿಭಾಗದ ವೈಸ್-ಪ್ರೆಸಿಡೆಂಟ್ ಕೂಡ ಆಗಿದ್ದಾರೆ. ಸಿಎಸ್ಕೆ ತಂಡ ರಚನೆ ಆದ ಬಳಿಕ ಇಂಡಿಯಾ ಸಿಮೆಂಟ್ಸ್ ಕಂಪನಿ ಸಾಕಷ್ಟು ಬೆಳವಣಿಗೆ ಸಾಧಿಸಿರುವ ವಿಚಾರವನ್ನು ಸಂಸ್ಥೆಯ ಎಂಡಿ ಹಾಗೂ ಮಾಜಿ ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್ ಈ ಸಂದರ್ಭದಲ್ಲಿ ತಿಳಿಸಿದ್ಧಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ