ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ಮಹೇಂದ್ರ ಸಿಂಗ್ ಧೋನಿ ಐಪಿಎಲ್ಗೆ ಸೀಮಿತಗೊಳಿಸಿಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾದ ಧೋನಿ ಈ ಬಾರಿಯ ಐಪಿಎಲ್ನ ತಮ್ಮ ಮೊದಲ ಪಂದ್ಯದಲ್ಲಿ ಸೋತದ್ದೂ ಅಲ್ಲದೆ, ಗಾಯದ ಮೇಲೆ ಬರೆ ಎಳೆದಂತೆ 12 ಲಕ್ಷ ರೂ ದಂಡ ಕೂಡ ತೆತ್ತಿದ್ದಾರೆ. ಸಿಎಸ್ಕೆಯಿಂದ ನಿಧಾನಗತಿ ಬೌಲಿಂಗ್ ಬಂದ ಪರಿಣಾಮ ತಂಡದ ನಾಯಕನಾಗಿ ಎಂಎಸ್ ಧೋನಿ ಅವರಿಂದ 12 ಲಕ್ಷ ರೂ ದಂಡ ವಸೂಲಿ ಮಾಡಲಾಗಿದೆ. ಇನ್ನೂ ಗಮನಾರ್ಹ ವಿಷಯವೆಂದರೆ ಇನ್ನೆರಡು ಪಂದ್ಯಗಳಲ್ಲಿ ಮತ್ತೊಮ್ಮೆ ಇಂಥ ತಪ್ಪು ನಡೆದರೆ ನಾಲ್ಕು ಪಂದ್ಯಗಳವರೆಗೆ ಧೋನಿಯನ್ನು ನಿಷೇಧಿಸುವ ಅವಕಾಶ ಐಪಿಎಲ್ ನಿಯಮಾವಳಿಯಲ್ಲಿದೆ.
ಇವತ್ತು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಎರಡನೇ ಪಂದ್ಯವನ್ನು ಪಂಜಾಬ್ ಕಿಂಗ್ಸ್ ಎದುರು ಆಡುತ್ತಿದೆ. ಏಪ್ರಿಲ್ 19ರಂದು ತನ್ನ ಮೂರನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಇದಿರುಗೊಳ್ಳಲಿದೆ. ಇವೆರಡರಲ್ಲಿ ಯಾವುದಾರೂ ಒಂದು ಪಂದ್ಯದಲ್ಲಿ ಚೆನ್ನೈ ತಂಡ ನಿಧಾನಗತಿ ಬೌಲಿಂಗ್ ಮಾಡಿದರೆ ಧೋನಿಗೆ ಕಂಟಕವಾಗುವ ಸಾಧ್ಯತೆಯೇ ಹೆಚ್ಚಿದೆ. ಕ್ಯಾಪ್ಟನ್ ಆಗಿ ಧೋನಿ ಅವರು ಮೈದಾನದಲ್ಲಿ ತಮ್ಮ ಬೌಲಿಂಗ್ ಪಡೆಯ ಮೇಲೆ ಸದಾ ಕಣ್ಣಿಡುವುದು ಅನಿವಾರ್ಯ.
ಈ ಬಾರಿಯ ಐಪಿಎಲ್ ಪಂದ್ಯಾವಳಿಗೆ ಬಿಸಿಸಿಐ ಬಹಳ ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ. 20 ಓವರ್ಗಳನ್ನ ಬೌಲ್ ಮಾಡಲು ಗರಿಷ್ಠ 90 ನಿಮಿಷ (ಒಂದೂವರೆ ಗಂಟೆ) ಕಾಲಾವಕಾಶ ನೀಡಲಾಗಿದೆ. ಈ ಅವಧಿ ಮೀರಿ ಬೌಲಿಂಗ್ ಮಾಡಿದರೆ ಅದನ್ನ ಓವರ್ ರೇಟ್ ಎಂದು ಲೆಕ್ಕ ಮಾಡಲಾಗುತ್ತದೆ. ಓವರ್ ರೇಟ್ ಅದರೆ ಆ ತಂಡದ ಕ್ಯಾಪ್ಟನ್ಗೆ 12 ಲಕ್ಷ ರೂ ದಂಡ ಹಾಕಲಾಗುತ್ತದೆ. ಮುಂದಿನ ಎರಡು ಗೇಮ್ಗಳಲ್ಲಿ ಈ ತಪ್ಪು ಪುನಾವರ್ತನೆ ಆದರೆ ನಾಯಕನಿಗೆ 2-4 ಪಂದ್ಯಗಳ ನಿಷೇಧ ಆಗಬಹುದು. ಮ್ಯಾಚ್ ರೆಫರೀ ಇದನ್ನು ನಿರ್ಧರಿಸುತ್ತಾರೆ.
ಇದನ್ನೂ ಓದಿ: PBKS vs CSK: ಇಂದು ಪಂಜಾಬ್ ಕಿಂಗ್ಸ್ಗೆ ಸೂಪರ್ ಕಿಂಗ್ಸ್ ಸವಾಲು..!
ಓವರ್ ರೇಟ್ ಲೆಕ್ಕಾಚಾರ:
ಐಪಿಎಲ್ ನಿಯಮಾವಳಿಗಳ ಪ್ರಕಾರ, ಪಂದ್ಯದಲ್ಲಿ ಒಂದು ಇನ್ನಿಂಗ್ಸ್ ಮುಕ್ತಾಯವಾದ ಬಳಿಕ ಓವರ್ ರೇಟ್ ಅನ್ನು ಲೆಕ್ಕ ಮಾಡಲಾಗುತ್ತದೆ. ನಿಯಮಾವಳಿ 12.7.3 ಪ್ರಕಾರ ಅದರ ಲೆಕ್ಕಾಚಾರ ಹೀಗಿದೆ:
1) ಪಂದ್ಯ ಆಡುವಾಗ ಯಾರಿಗಾದರೂ ಆಟಗಾರನಿಗೆ ಗಾಯವಾಗಿ ವೈದ್ಯಕೀಯ ಸಿಬ್ಬಂದಿಯಿಂದ ಚಿಕಿತ್ಸೆ ಆದಾಗ ಕಳೆದುಹೋಗುವ ಸಮಯ.
2) ಗಂಭೀರ ಗಾಯವಾಗಿ ಮೈದಾನದಿಂದ ಆಟಗಾರ ಹೊರಗೆ ಹೋಗುವಾಗ ಕಳೆದುಹೋಗುವ ಸಮಯ.
3) ಥರ್ಡ್ ಅಂಪೈರ್ ಅವರಿಂದ ರಿವ್ಯೂ ಮಾಡಿಸುವ ಪ್ರಕ್ರಿಯೆಗೆ ಕಳೆದುಹೋಗುವ ಸಮಯ.
4) ಬ್ಯಾಟಿಂಗ್ ಮಾಡುವ ತಂಡದಿಂದ ವ್ಯರ್ಥವಾಗುವ ಸಮಯ.
5) ಬೌಲಿಂಗ್ ತಂಡದ ನಿಯಂತ್ರಣ ಮೀರಿದ ಸನ್ನಿವೇಶಗಳಿಂದ ವ್ಯರ್ಥವಾಗಿರಬಹುದಾದ ಸಮಯ.
ಇವಿಷ್ಟೂ ವ್ಯರ್ಥ ಸಮಯವನ್ನು ಒಟ್ಟುಗೂಡಿಸಿ ಓವರ್ ರೇಟ್ ಲೆಕ್ಕ ಹಾಕಲಾಗುತ್ತದೆ. ಒಂದು ಇನ್ನಿಂಗ್ಸ್ನ ಗರಿಷ್ಠ ಅವಧಿ ಒಂದೂವರೆ ಗಂಟೆ (90 ನಿಮಿಷ) ಮತ್ತು ಈ ಓವರ್ ರೇಟ್ ಎರಡೂ ಸೇರಿದ ಅವಧಿಯನ್ನು ಲೆಕ್ಕ ಮಾಡಲಾಗುತ್ತದೆ. ಅದನ್ನೂ ಮೀರಿ ಇನ್ನಿಂಗ್ಸ್ ವಿಳಂಬವಾಗಿದ್ದರೆ ಅದು ನಿಧಾನಗತಿ ಬೌಲಿಂಗ್ ಎಂದು ಪರಿಗಣಿತವಾಗುತ್ತದೆ.
ಇದೀಗ ಇವತ್ತಿನ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರಿಗೆ ಓವರ್ ರೇಟ್ನ ಒತ್ತಡವಂತೂ ಇದ್ದೇ ಇರುತ್ತದೆ. ಆದರೆ, ಚೆನ್ನೈ ತಂಡ ಮತ್ತೆ ಇಂಥ ತಪ್ಪು ಮಾಡುವ ಸಾಧ್ಯತೆ ಕಡಿಮೆಯೇ. ಮೊದಲ ಪಂದ್ಯದಲ್ಲಿ ದಿಲ್ಲಿ ಕ್ಯಾಪಿಟಲ್ಸ್ ಎದುರು ಮುಖಭಂಗಗೊಂಡ ಗಾಯಗೊಂಡ ಹುಲಿಯಂತಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇವತ್ತು ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವಿನ ಹಾದಿಗೆ ಮರಳುವ ಹತಾಶೆಯಲ್ಲಿದ್ದಾರೆ. ಆದರೆ, ಸಿಎಸ್ಕೆ ತಂಡದಲ್ಲಿ ಮೊದಲಿದ್ದ ಮೊನಚು ಈಗ ಉಳಿದಿಲ್ಲವಾದರೂ ಅನುಭವಿಗಳನ್ನ ಒಳಗೊಂಡಿರುವ ಧೋನಿ ಪಡೆಯನ್ನ ಸುಲಭವಾಗಿ ತಳ್ಳಿಹಾಕಲಂತೂ ಆಗುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ