ಮೂರು ಬಾರಿಯ ಚಾಂಪಿಯನ್, ಐದು ಬಾರಿ ಫೈನಲ್ ಆಡಿದ ತಂಡ, 10 ಬಾರಿ ಪ್ಲೇ ಆಫ್ ಪ್ರವೇಶಿಸಿದ ಟೀಮ್ ಚೆನ್ನೈ ಸೂಪರ್ ಕಿಂಗ್ಸ್...ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇಂತಹದೊಂದು ಸಾಧನೆ ಮಾಡಿದ ಮತ್ತೊಂದು ತಂಡವಿಲ್ಲ. ಈ ಅದ್ಭುತ ಸಾಧನೆಯ ಹಿಂದಿರುವ ಮಾಂತ್ರಿಕ ಮಹೇಂದ್ರ ಸಿಂಗ್ ಧೋನಿ. ಆದರೆ 13ನೇ ಐಪಿಎಲ್ ಆವೃತ್ತಿಯಲ್ಲಿ ಸಿಎಸ್ಕೆ ನಾಯಕ ಧೋನಿಯ ಲೆಕ್ಕಚಾರಗಳು ತಲೆಕೆಳಗಾಗಿವೆ. ಆಡಿರುವ 14 ಪಂದ್ಯಗಳಲ್ಲಿ 8 ರಲ್ಲಿ ಸೋಲನುಭವಿಸಿ ಅಂಕಪಟ್ಟಿಯಲ್ಲಿ 7ನೇ ಸ್ಥಾನದೊಂದಿಗೆ ಐಪಿಎಲ್ ಅಭಿಯಾನ ಅಂತ್ಯಗೊಳಿಸಿದೆ. ಅಷ್ಟೇ ಅಲ್ಲದೆ ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಅತ್ಯಂತ ಹೀನಾಯ ಪ್ರದರ್ಶನದೊಂದಿಗೆ ವಿದಾಯ ಹೇಳಿದೆ.
ಇದೇ ಮೊದಲ ಬಾರಿಗೆ ತಮ್ಮ ತಂಡವು ಪ್ಲೇ ಆಫ್ ಹಂತ ಪ್ರವೇಶಿಸಲು ವಿಫಲವಾದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಮುಂದಿನ ಬಾರಿ ಸಕಲ ಸಿದ್ದತೆಗಳೊಂದಿಗೆ ಮರಳಲಿದೆ ಎಂದು ಸಿಎಸ್ಕೆ ನಾಯಕ ಧೋನಿ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 9 ವಿಕೆಟ್ಗಳ ಗೆಲುವಿನ ಬಳಿಕ ಮಾತನಾಡಿದ ಎಂಎಸ್ಡಿ, "ಇದು ನಮಗೆ ಕಠಿಣ ಅಭಿಯಾನವಾಗಿತ್ತು, ನಾವು ಪೂರ್ಣ ಸಾಮರ್ಥ್ಯದಿಂದ ಆಡಿದ್ದೇವೆ ಎಂದು ನಾನು ಭಾವಿಸುವುದಿಲ್ಲ" ಎಂದು ಹೇಳಿದರು.
ಇದೇ ವೇಳೆ ಧೋನಿಯ ನಿವೃತ್ತಿ ಪ್ರಶ್ನೆಗಳು ಮೂಡಿಬಂದಿದ್ದವು. ಆದರೆ ಅದನ್ನು ಅಲ್ಲೆಗೆಳೆದಿರುವ ಮಾಹೀ, ಇದು ನನ್ನ ಕೊನೆಯ ಪಂದ್ಯವಲ್ಲ. ಮುಂದಿನ ಸೀಸನ್ನಲ್ಲೂ ಇರಲಿದ್ದೇನೆ ಎಂದು ಉತ್ತರಿಸಿದ್ದರು. ಇದರೊಂದಿಗೆ ಮುಂದಿನ ಸೀಸನ್ನಲ್ಲಿ ಸಿಎಸ್ಕೆ ಹೊಸ ತಂಡದೊಂದಿಗೆ ಕಣಕ್ಕಿಳಿಯುವ ಸುಳಿವನ್ನು ಸಹ ನೀಡಿದರು.
ಚೆನ್ನೈ ಸೂಪರ್ ಕಿಂಗ್ಸ್ ಮುಂದಿನ ಸೀಸನ್ನಲ್ಲಿ ಹೇಗಿರಲಿದೆ ಎಂಬುದು ಬಿಸಿಸಿಐನ ಹರಾಜು ಪ್ರಕ್ರಿಯೆಯ ಮೇಲೆ ನಿರ್ಧಾರವಾಗಲಿದೆ. ಏಕೆಂದರೆ ನಾವು ನಮ್ಮ ಬಳಗವನ್ನು ಬದಲಿಸಬೇಕಿದೆ. ಮುಂದಿನ ಹತ್ತು ವರ್ಷಗಳಿಗಾಗಿ ತಂಡವೊಂದನ್ನು ಕಟ್ಟಬೇಕಿದೆ. ಐಪಿಎಲ್ ಪ್ರಾರಂಭದಲ್ಲಿ ನಾವು ತಂಡವನ್ನು ರೂಪಿಸಿದ್ದೆವು. ಅದು ಉತ್ತಮವಾಗಿ ಕಾರ್ಯ ನಿರ್ವಹಿಸಿತು. ಈಗ ಬದಲಿಸಬೇಕಾದ ಸಮಯ ಬಂದಿದೆ. ಇನ್ನು ಮುಂದಿನ ಪೀಳಿಗೆಗೆ ಜವಾಬ್ದಾರಿ ನೀಡಬೇಕಾಗಿದೆ ಎಂದು ಧೋನಿ ಹೇಳಿದರು.
ಸಿಎಸ್ಕೆ ನಾಯಕನ ಈ ಮಾತಿನೊಂದಿಗೆ ಇದೀಗ ಮತ್ತೊಂದು ಚರ್ಚೆ ಹುಟ್ಟಿಕೊಂಡಿದೆ. ಧೋನಿ ಮುಂದಿನ ಸೀಸನ್ನಲ್ಲೂ ಇರಲಿದ್ದು, ಆದರೆ ಅದಕ್ಕೂ ಮುನ್ನ ಹೊಸ ನಾಯಕನನ್ನು ತಂಡ ಕಂಡುಕೊಳ್ಳಲಿದೆ. ಅದರೊಂದಿಗೆ ತಂಡದಲ್ಲಿ ಎಂಎಸ್ಡಿ ಕೋಚ್ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ. ಏಕೆಂದರೆ 2021 ರ ಬಳಿಕ ಐಪಿಎಲ್ಗೆ ನಿವೃತ್ತಿ ನೀಡುವುದಾಗಿ ಧೋನಿ ತಿಳಿಸಿದ್ದರು. ಇದೀಗ ಫಿಟ್ನೆಸ್ ಸಮಸ್ಯೆ ಕೂಡ ಸಿಎಸ್ಕೆ ನಾಯಕನನ್ನು ಕಾಡುತ್ತಿದ್ದು, ಹೀಗಾಗಿ ಮುಂದಿನ ಆವೃತ್ತಿಯಲ್ಲಿ ತಂಡದಲ್ಲಿ ಕಾಣಿಸಿಕೊಂಡರೂ ಹೊಸ ನಾಯಕನನ್ನು ಪರಿಚಯಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಹಾಗೆಯೇ ಯುವ ನಾಯಕನಿಗೆ ಮಾರ್ಗದರ್ಶನ ನೀಡುವ ಜವಾಬ್ದಾರಿ ಧೋನಿ ಮೇಲಿದ್ದು, ಅದರ ಬಳಿಕ ಮಾಹೀ ಸಿಎಸ್ಕೆ ತಂಡದ ಕೋಚ್ ಸ್ಥಾನ ಅಥವಾ ಮಾರ್ಗದರ್ಶಕರಾಗಿ ತಮ್ಮ ಸೇವೆಯನ್ನು ಮುಂದುವರೆಸಲಿದ್ದಾರೆ ಎಂಬ ಮಾತುಗಳು ಜೋರಾಗಿ ಕೇಳಿ ಬರುತ್ತಿದೆ.
ಒಟ್ಟಿನಲ್ಲಿ 11 ವರ್ಷಗಳ ಕಾಲ ತಂಡವನ್ನು ಮುನ್ನಡೆಸಿದ್ದ ಧೋನಿಯೇ ಖುದ್ದು, ಮುಂದಿನ 10 ವರ್ಷಕ್ಕಾಗಿ ತಂಡವನ್ನು ರೂಪಿಸಬೇಕಿದೆ ಎಂದಿರುವುದು, ಹಾಗೂ ಯುವ ಪೀಳಿಗೆಗೆ ಜವಾಬ್ದಾರಿ ನೀಡಬೇಕಿದೆ ಎಂದು ತಿಳಿಸಿರುವುದು ಮಹೇಂದ್ರ ಸಿಂಗ್ ಧೋನಿ ಮುಂದಿನ ಸೀಸನ್ನಲ್ಲಿ ಹೊಸ ಜವಾಬ್ದಾರಿಯೊಂದಿಗೆ ಕಾಣಿಸಿಕೊಳ್ಳುವುದರ ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ.
POINTS TABLE:
SCHEDULE TIME TABLE:
ORANGE CAP:
PURPLE CAP:
RESULT DATA:
MOST SIXES:
ಇದನ್ನೂ ಓದಿ: ಟೀಮ್ ಇಂಡಿಯಾ ವಿರುದ್ಧದ ಸರಣಿಗೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ