Kalaghatagi: ದೇವಿ ಅಡ್ಡಾಡ್ತಾಳೆ ಎಂದು ಇಡೀ ಊರು ಬಂದ್! ಯುಗಾದಿವರೆಗೂ ಸೂತಕದ ಛಾಯೆ

ಕಲಘಟಗಿಯಲ್ಲಿ ವಿಶಿಷ್ಟ ಆಚರಣೆ

ಕಲಘಟಗಿಯಲ್ಲಿ ವಿಶಿಷ್ಟ ಆಚರಣೆ

ಮೂರು ವರ್ಷಕ್ಕೊಮ್ಮೆ ನಡೆಯೋ ಜಾತ್ರೆಯ ವೇಳೆ ಮಂಗಳವಾರ ಮತ್ತು ಶುಕ್ರವಾರ ಕಲಘಟಗಿ ಮತ್ತು ಸುತ್ತಲಿನ ಗ್ರಾಮಗಳ ಜನ ಊರನ್ನೇ ತೊರೆಯುತ್ತಾರೆ. ಮನೆ, ಅಂಗಡಿ ಇತ್ಯಾದಿಗಳಿಗೆ ಬೀಗ ಜಡಿದು, ಅಡವಿ ಸೇರಿ ಇಡೀ ದಿನ ಅಲ್ಲಿಯೇ ಕಳೆಯುತ್ತಾರೆ.

  • Share this:

    ಹುಬ್ಬಳ್ಳಿ : ಇಲ್ಲಿ ಜಾತ್ರೆ ಬಂತೆಂದರೆ ಊರಿಗೆ ಊರೇ ಖಾಲಿ. ಬೆಳಿಗ್ಗೆ ಊರು ಬಿಟ್ಟವರು ಮತ್ತೆ ವಾಪಸ್ಸಾಗೋದು ಮಾತ್ರ ಸಂಜೆ ವೇಳೆಗೆ. ಮನೆ, ಅಂಗಡಿಗಳಿಗೆ ಬೀಗ. ಊರಲ್ಲಿ ಅಘೋಷಿತ ಬಂದ್ ವಾತಾವರಣ. ನಾಲ್ಕು ಊರುಗಳಲ್ಲಿ ಈ ರೀತಿಯ ವಿಭಿನ್ನ, ವಿಶಿಷ್ಟ ಆಚರಣೆ ನಡೆಯುತ್ತೆ. ಎಲ್ಲಿ ಅಂತೀರಾ? ಈ ಸ್ಟೋರಿ ಓದಿ.
    ಉತ್ತರ ಕರ್ನಾಟಕ ಭಾಗದಲ್ಲಿ ವಿಶಿಷ್ಟ ಮತ್ತು ವಿಭಿನ್ನವಾಗಿ ಜಾತ್ರೆಗಳನ್ನು ಆಚರಿಸಲಾಗುತ್ತೆ. ಧಾರವಾಡ ಜಿಲ್ಲೆಯ (Dharwad News) ಕಲಘಟಗಿ (Kalaghatagi) ಮತ್ತು ಸುತ್ತಲಿನ‌ ಹಳ್ಳಿಗಳಲ್ಲಿ ಮೂರು ವರ್ಷಕ್ಕೊಮ್ಮೆ ಆಚರಿಸುವ ಗ್ರಾಮದೇವಿಯ (Kalaghatagi Devi Jatre) ಜಾತ್ರೆಗೆ ತನ್ನದೇ ಆದ ಮಹತ್ವವಿದೆ.


    ಜಾತ್ರೆಗೋಸ್ಕರ ಇಡೀ ಊರಿಗೆ ಊರೇ ಖಾಲಿಯಾಗುತ್ತೆ. ಮನೆ ಬಾಗಿಲಿಗೆ ಬೀಗ ಹಾಕುವ ಜನರು ಊರನ್ನು ತೊರೆಯುತ್ತಾರೆ. ಹೆಂಡತಿ, ಮಕ್ಕಳನ್ನು ಕರೆದುಕೊಂಡು ಜನ ಊರು ತೊರೆಯುತ್ತಾರೆ.


    ಅಘೋಷಿತ ಬಂದ್!
    ಎಲ್ಲಿ ನೋಡಿದರೂ ಬಾಗಿಲಿಗೆ ಬೀಗ ಹಾಕಿರುವ ಮನೆಗಳು. ಊರಿಗೆ ಊರೇ ಖಾಲಿ ಖಾಲಿ. ಅಂಗಡಿ ಮುಂಗಟ್ಟುಗಳು ಮುಚ್ಚಿ ಒಂದರ್ಥದಲ್ಲಿ ಅಘೋಷಿತ ಬಂದ್ ವಾತಾವರಣ. ಈ ದೃಶ್ಯಗಳು ಕಂಡುಬಂದಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ಮತ್ತು ಸುತ್ತಲಿನ ಹಳ್ಳಿಗಳಲ್ಲಿ. ಜನರು ಹೀಗೆ ಮನೆ ಬಿಟ್ಟು ಹೋಗುತ್ತಿರುವುದು ಜಾತ್ರೆಯ ಆಚರಣೆಯ ಭಾಗವಾಗಿ.


    ಮಾರ್ಚ್ 1 ರಿಂದ 9 ರವರೆಗೆ ಕಲಘಟಗಿ ಜಾತ್ರೆ
    ಕಲಘಟಗಿಯ ಗ್ರಾಮದೇವಿ ಜಾತ್ರೆ ಉತ್ತರ ಕರ್ನಾಟಕದ ಅತಿದೊಡ್ಡ ಜಾತ್ರೆಗಳಲ್ಲಿ ಒಂದು. ರಾಜ್ಯ ಮತ್ತು ಹೊರರಾಜ್ಯಗಳಿಂದ ಲಕ್ಷಾಂತರ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಜಾತ್ರೆಯ ವೈಭವಕ್ಕೆ ಸಾಕ್ಷಿಯಾಗುತ್ತಾರೆ. ಮೂರು ವರ್ಷಗಳಿಗೊಮ್ಮೆ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಗ್ರಾಮದೇವಿಯ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತೆ. ಈ ಬಾರಿ ಮಾರ್ಚ್ 1 ರಿಂದ 9 ರವರೆಗೆ ಗ್ರಾಮದೇವಿ ಜಾತ್ರೆ ನಡೆಯಲಿದೆ. ಜಾತ್ರೆಗಾಗಿ ಕಲಘಟಗಿ ಸೇರಿದಂತೆ ಸುತ್ತಲಿನ ಐದು ಹಳ್ಳಿಗಳ ಜನರು ವಿಶಿಷ್ಟವಾದ ಪದ್ಧತಿಯನ್ನು ಆಚರಿಸುತ್ತಾರೆ.


    ಯಾವುದೇ ಶುಭಕಾರ್ಯ ನಡೆಯಲ್ಲ
    ಸಾವಿರಾರು ಜನರು ಕುಟುಂಬ ಸಮೇತ ತಮ್ಮ ಮನೆಗಳಿಗೆ ಬೀಗ ಹಾಕಿ ಪಟ್ಟಣದಿಂದ ಹೊರ ಹೋಗುತ್ತಾರೆ. ಕಲಘಟಗಿ, ದಾಸ್ತಿಕೊಪ್ಪ ಕಲಕುಂಡಿ, ಬೆಂಡಿಗೇರಿ, ಮಾಚಾಪುರ ಗ್ರಾಮಗಳಲ್ಲಿ ಹೊರವಾರ ಪದ್ಧತಿಯನ್ನು ಆಚರಿಸುತ್ತಾರೆ. ಈ ಐದು ಹಳ್ಳಿಗಳಲ್ಲಿ ಬರುವ ಯುಗಾದಿಯವರೆಗೆ ಮದುವೆ, ನಿಶ್ಚಿತಾರ್ಥ, ನಾಮಕರಣ ಸೇರಿದಂತೆ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ.


    ಸರ್ವಧರ್ಮೀಯರಿಂದಲೂ ಆಚರಣೆ
    ಈ ವರ್ಷದ ಹೋಳಿ ಹುಣ್ಣಿಮೆಯಂದು ಬಣ್ಣದೋಕುಳಿಯನ್ನು ಸಹ ಆಚರಿಸುವುದಿಲ್ಲ. ಜನರು ಐದು ದಿನಗಳ ಕಾಲ ಮನೆಗಳನ್ನು ಖಾಲಿ ಮಾಡುತ್ತಾರೆ. ಜಾತಿ, ಮತ ಮತ್ತು ಧರ್ಮವನ್ನು ಲೆಕ್ಕಿಸದೆ ಎಲ್ಲರೂ ಈ ಸಂಪ್ರದಾಯ ಪಾಲಿಸುತ್ತಾರೆ. ಸರ್ವ ಧರ್ಮೀಯರು ಮನೆ ತೊರೆದು ಗ್ರಾಮ ದೇವತೆ ಜಾತ್ರೆಯ ನಿಯಮ ಪಾಲಿಸುತ್ತಾರೆ.


    ಮನೆಯಿಂದ ಹೊರಗೇ ಇಡೀ ದಿನ!
    ಬೆಳಗ್ಗೆ 10 ರಿಂದ ಸಂಜೆ 4:30 ರವರೆಗೆ ಮನೆಯಿಂದ ದೂರವಿರುತ್ತಾರೆ. ಜಾತ್ರೆಗೆ ಮೊದಲು ಐದು ವಾರಗಳ ಆಚರಣೆ ನಡೆಯುತ್ತೆ. ಮೂರು ಮಂಗಳವಾರ ಮತ್ತು ಶುಕ್ರವಾರಗಳನ್ನು ಹೊರವಾರವೆಂದು ಆಚರಿಸುವುದು ಸಂಪ್ರದಾಯ. ಜನರು ಉದ್ಯಾನಗಳಲ್ಲಿ, ಗದ್ದೆಗಳಲ್ಲಿ  ಮತ್ತು ಪಟ್ಟಣದ ಹೊರಗಿನ ಮರಗಳ ಕೆಳಗೆ ದಿನ ಕಳೆಯುತ್ತಾರೆ. ಬುತ್ತಿಗಳನ್ನು ಕಟ್ಟಿಕೊಂಡು ಹೋಗಿ ಒಟ್ಟಾಗಿ ಊಟ ಮಾಡುತ್ತಾರೆ.


    ಮಹಾಮಾರಿಯಿಂದ ದೂರವಿರೋಕೆ ವಿಶಿಷ್ಟ ಆಚರಣೆ
    ಈ ಐದು ದಿನ ಅಂಗಡಿ ಮುಂಗಟ್ಟು ಮುಚ್ಚಿರುತ್ತೆ. ವ್ಯಾಪಾರ ವಹಿವಾಟುಗಳು ಸ್ಥಗಿತವಾಗುತ್ತವೆ. ಈ ದಿನಗಳಲ್ಲಿ ಪಟ್ಟಣ ಸಂಪೂರ್ಣ ಖಾಲಿ ಖಾಲಿಯಾಗಿರುತ್ತೆ‌. ಗ್ರಾಮದೇವಿ ಈ ಸಂದರ್ಭದಲ್ಲಿ ಊರಲ್ಲಿ ಸಂಚರಿಸುತ್ತಾಳೆ ಎಂದು ನಂಬಲಾಗಿದೆ. ದೇವಿ ದುಷ್ಟ ಶಕ್ತಿಗಳನ್ನು ಕೊಲ್ಲುತ್ತಾಳೆ ಎಂದು ಜನ ನಂಬುತ್ತಾರೆ. ಹಲವು ವರ್ಷಗಳ ಹಿಂದೆ ಪ್ಲೇಗ್ ಇತ್ಯಾದಿ ಮಹಾಮಾರಿಗಳು ವಕ್ಕರಿಸಿ ಜನ ಸಂಕಷ್ಟಕ್ಕೆ ಗುರಿಯಾಗಿದ್ದರು. ಆ ವೇಳೆಯಿಂದ ಗ್ರಾಮ ಮತ್ತು ಜನರ ಉಳಿವುಗಾಗಿ ಈ ಆಚರಣೆ ರೂಢಿಗೆ ತರಲಾಗಿದೆ ಎನ್ನುತ್ತಾರೆ ಕಲಘಟಗಿ ನಿವಾಸಿ ವಿನಯ್ ಗೌಳಿ.


    ಜಾತ್ರೆಗೆ ಮುಂಚಿನ ಮಂಗಳವಾರ, ಶುಕ್ರವಾರ ಜನ ಮನೆಗಳನ್ನು ತೊರೆದು ಊರ ಹೊರಗೆ ಹೋಗುತ್ತಾರೆ. ಇದನ್ನೇ ಹೊರವಾರ ಎಂದು ಕರೆಯುತ್ತಾರೆ. ಕಲಘಟಗಿ ಪಟ್ಟಣದ ಗ್ರಾಮದೇವಿ ದೇವಾಲಯದಲ್ಲಿ ದ್ಯಾಮವ್ವ, ದುರ್ಗವ್ವ, ಮೂರು ಮುಖದವ್ವ ಎನ್ನುವ ಶಕ್ತಿ ದೇವತೆಗಳಿದ್ದಾರೆ. ಈ ಮೂವರು ಸಹೋದರಿಯರು ಅನಾದಿಕಾಲದಿಂದಲೂ ಊರಿನ ಜನರನ್ನು ರಕ್ಷಿಸುತ್ತಿದ್ದಾರೆ ಅನ್ನೋ ನಂಬಿಕೆಯಿದೆ.




    ದ್ಯಾಮವ್ವ ದೇವಿಯನ್ನು ಕೆಂಪು ಬಣ್ಣದಿಂದ, ದುರ್ಗವ್ವ ದೇವಿಯನ್ನು ಹಸಿರು ಬಣ್ಣದಲ್ಲಿ ಮೂರು ಮುಖದವ್ವಳಿಗೆ ಕೆಂಪು, ಹಸಿರು ಮತ್ತು ಹಳದಿ ಬಣ್ಣದಲ್ಲಿ ಚಿತ್ರಿಸುವ ವಾಡಿಕೆಯಿದೆ. ಹೊರಾವರ ಆಚರಣೆಯ ನಂತರ ದೇವತೆಗಳಿಗೆ ಹೊಸ ಬಣ್ಣದ ಲೇಪನವನ್ನು ಮಾಡಲಾಗುತ್ತೆ.


    ಒಂಭತ್ತು ದಿನಗಳ ಕಾಲ ಸಂಗೀತ, ಭಜನೆ, ಕೀರ್ತನೆ
    ಮಾರ್ಚ್ 1 ರಂದು ದ್ಯಾಮವ್ವ ಮತ್ತು ದುರ್ಗವ್ವ ದೇವಿಯ ಮೂರ್ತಿಗಳನ್ನು ಅಕ್ಕಿ ಓಣಿಯ ಚೌತಮನೆ ಕಟ್ಟೆಗೆ ತಂದು ಪ್ರತಿಷ್ಠಾಪಿಸಲಾಗುತ್ತೆ. ಒಂಭತ್ತು ದಿನಗಳ ಕಾಲ ಸಂಗೀತ, ಭಜನೆ, ಕೀರ್ತನೆಗಳು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತೆ. ರಾಣಿಗ ಸಮಾಜದವರು ದೇವತೆಗಳ ಮುಂದೆ ಅಕ್ಕಿಯ ರಾಶಿಯನ್ನು ಇರಿಸಿ ಹಗಲಿರುಳು ದೀಪ ಬೆಳಗಿಸತ್ತಾರೆ. ಒಂಭತ್ತನೇ ದಿನ, ದೇವತೆಗಳ ಮುಂದೆ ಹುಲ್ಲಿನ ಗುಡಿಸಲು ಮಾಡಿ ಅದರಲ್ಲಿ ಹಿಟ್ಟಿನಿಂದ ಮಾಡಿದ ಕೋಣವನ್ನು ಇಟ್ಟು ಸುಡಲಾಗುತ್ತೆ.


    ಇದನ್ನೂ ಓದಿ: Hubballi Airport: ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಸವೇಶ್ವರರ ಹೆಸರು?


    ದುಷ್ಟ ಸಂಹಾರ ಮಾಡುವ ಸಮಯ
    ದುಷ್ಟತನವನ್ನು ನಿಗ್ರಹಿಸಿ ಸಜ್ಜನರನ್ನು ರಕ್ಷಿಸಲು ಭಕ್ತರು ದೇವತೆಗಳನ್ನು ಪ್ರಾರ್ಥಿಸುತ್ತಾರೆ. ಗ್ರಾಮ ದೇವಿ ತನ್ನ ಶಕ್ತಿಯ ಮೂಲಕ ಇಡೀ ಗ್ರಾಮ ಕಾಪಾಡುತ್ತಾಳೆ. ದುಷ್ಟ ಸಂಹಾರದ ಸಮಯದಲ್ಲಿ ದೇವಿ ಗ್ರಾಮದಲ್ಲಿ ಅಡ್ಡಾಟ ನಡೆಯುವುದರಿಂದ ಐದು ದಿನಗಳ ಕಾಲ ಗ್ರಾಮದಲ್ಲಿ ಯಾರೂ ಇರಲ್ಲ ಅಂತಾರೆ ಕಲಘಟಗಿಯ ಅಮೃತಾ ಮತ್ತು ವಿಜಯಲಕ್ಷ್ಮಿ.


    ಮಧ್ಯರಾತ್ರಿಯವರೆಗೆ ದೇವತೆಗಳ ಪೂಜೆ
    ಕೊನೆಯ ದಿನ ದೇವತೆಗಳ ವಿಗ್ರಹಗಳನ್ನು ತಂದು ಬೆಂಡಿಗೇರಿ ಸರಹದ್ದಿನ ಪಾದಗಟ್ಟಿಯ ಮೇಲೆ ಇರಿಸುತ್ತಾರೆ‌. ಮಧ್ಯರಾತ್ರಿಯವರೆಗೆ ದೇವತೆಗಳನ್ನು ಪೂಜಿಸಿ ನಂತರ ವಿಗ್ರಹಗಳನ್ನು ವಿಸರ್ಜಿಸುತ್ತಾರೆ. ಜಾತ್ರೆಯ ನಂತರ ದ್ಯಾಮವ್ವ ಮತ್ತು ದುರ್ಗವ್ವ ದೇವತೆಗಳು ಭೂಮಿಯನ್ನು ತೊರೆಯುತ್ತಾರೆ. ನಂತರ ಮತ್ತೆ ಯುಗಾದಿಯಂದು ಜನಿಸುತ್ತಾರೆ ಎನ್ನುವ ಪ್ರತೀತಿಯಿದೆ‌.


    ಇದನ್ನೂ ಓದಿ:Hubballi News: ಉತ್ತರ ಕರ್ನಾಟಕದ ನಾಗರಿಕರಿಗೆ ಖುಷಿ ಸುದ್ದಿ ನೀಡಿದ BSNL


    ಯುಗಾದಿಯವರೆಗೆ ಸೂತಕ!
    ಹೀಗಾಗಿ ಯುಗಾದಿಯವರೆಗಿನ ಅವಧಿಯನ್ನು ಕಲಘಟಗಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಸೂತಕ ಎಂದು ಆಚರಿಸಲಾಗುತ್ತದೆ. ಈ ಅವಧಿಯಲ್ಲಿ ಜನರು ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಯುಗಾದಿ ದಿನ ದೇವತೆಗಳನ್ನು ಪುನಃ ಪ್ರತಿಷ್ಠಾಪಿಸಿ ಉಡಿ ತುಂಬಲಾಗುತ್ತೆ. ನಂತರ ಎಲ್ಲಾ ಶುಭವಕಾರ್ಯಗಳಿಗೆ ಚಾಲನೆ ಸಿಗುತ್ತೆ. ಒಟ್ಟಾರೆ ಅನಾದಿ ಕಾಲದಿಂದ ನಡೆದುಕೊಂಡು ಬಂದಿರುವ ಕಲಘಟಗಿ ಗ್ರಾಮದೇವಿ ಜಾತ್ರೆ ತನ್ನ ವಿಶೇಷ ಆಚರಣೆಗಳಿಂದ ರಾಜ್ಯದ ಜನರ ಗಮನ ಸೆಳೆಯುತ್ತೆ.


    ವರದಿ: ಶಿವರಾಮ ಅಸುಂಡಿ, ನ್ಯೂಸ್ 18 ಹುಬ್ಬಳ್ಳಿ

    Published by:ಗುರುಗಣೇಶ ಡಬ್ಗುಳಿ
    First published: