ಹಾವೇರಿ: ಸದಾ ಭಕ್ತರಿಂದ ಗಿಜಿಗುಡುವ ಕ್ಷೇತ್ರ. ದೇವಸ್ಥಾನ ತುಂಬಾ ದೇಗುಲ ಗಂಟೆಯ ನಿನಾದ. “ಆಹಾ ರುದ್ರ, ಆಹಾ ವೀರ” ಅನ್ನೋ ಸಾಲಿನ ಪ್ರತಿಧ್ವನಿಯಂತಿದೆ ದೇಗುಲ.. ಯೆಸ್, ಇದುವೇ ಹಾವೇರಿಯ ಕಾರಡಗಿಯ (Veerabhadreshwara Temple) ವೀರಭದ್ರೇಶ್ವರ ದೇವಸ್ಥಾನ.
ಅಂದಹಾಗೆ ವೀರಭದ್ರ, ಭದ್ರಕಾಳಿ, ನಂದಿಕೇಶ್ವರ ಮೂರು ಶಿವಗಣದ ದೇಗುಲವಾದ ಈ ಸನ್ನಿಧಿ ಉತ್ತರ ಕರ್ನಾಟಕದ ಪ್ರಸಿದ್ಧ ಶಕ್ತಿಪೀಠ. ಇದೊಂದು ಜಾಗೃತ ಸನ್ನಿಧಾನವಾಗಿದ್ದು, ಇಲ್ಲಿ ಹರಕೆ ಹೇಳಿಕೊಂಡರೆ ಇಷ್ಟಾರ್ಥಗಳು ಈಡೇರುತ್ತವೆ ಅನ್ನೋ ನಂಬಿಕೆಯಿದೆ. ಹೀಗಾಗಿ ಇಲ್ಲಿ ಸದಾ ಕಾಲ ಭಕ್ತರ ದಂಡು ಇರುತ್ತವೆ.
ಗುಗ್ಗುಳ ಇಲ್ಲಿ ಪ್ರತಿದಿನ
ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾದ ಈ ದೇಗುಲದಲ್ಲಿ ಮೂಲ ಮೂರ್ತಿಯು ಉಗ್ರ ಸ್ವರೂಪದಲ್ಲಿದ್ದು ನೋಡಲು ಒಮ್ಮೆಲೇ ಭಯ ಭಕ್ತಿಯನ್ನು ತಂದುಕೊಡುವ ಸ್ವರೂಪದಲ್ಲಿದೆ. ಲಿಂಗವಂತರ ಮನೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ವಿಶೇಷವಾಗಿ ಕಾಣಸಿಗುವ ಗುಗ್ಗುಳ ಇಲ್ಲಿ ಪ್ರತೀ ದಿನವೂ ನಡೆಯುತ್ತದೆ. ಪ್ರತಿ ಅಮವಾಸ್ಯೆಗೆ ಇಲ್ಲಿ 10 ರಿಂದ 15 ಸಾವಿರ ಜನ ಸೇರುತ್ತಾರೆ ಅಷ್ಟೂ ಜನರಿಗೂ ದಾಸೋಹ ವ್ಯವಸ್ಥೆ ಇರುತ್ತದೆ.
ಇದನ್ನೂ ಓದಿ: Mailaralinga Daiva: ಸಿದ್ದರಾಮಯ್ಯ ಮುಂದಿನ ಸಿಎಂ ಎಂದಿದ್ದ ಮೈಲಾರಲಿಂಗ ದೈವದ ಮಹಿಮೆ!
ಭದ್ರಕಾಳಿ ಸನ್ನಿಧಾನ
ಕಾರಡಗಿಯ ವೀರಭದ್ರೇಶ್ವರ ದೇವಾಲಯದ ಮುಂದೆ ವಿಶಾಲವಾದ ನಂದಿಯ ವಿಗ್ರಹವಿದೆ. ಪಕ್ಕದಲ್ಲಿ ಭದ್ರಕಾಳಿ ಸನ್ನಿಧಾನವಿದೆ. ಮಹಾನವಮಿಯಂದು ಇಲ್ಲಿ ನಡೆಯುವ ಪೂಜೆಗೆ ರಾಜ್ಯ, ಹೊರ ರಾಜ್ಯದಿಂದ ಮಾನಸಿಕ ವ್ಯಾಧಿ ಇರುವವರು, ಪ್ರೇತಬಾಧೆ ಇರುವವರು ನಿವಾರಣೆಗಾಗಿ ಬರುತ್ತಾರೆ. ಮಾರನೆಯ ದಿನ ಕಾರ್ಣಿಕವೂ ನಡೆಯುತ್ತದೆ.
ಇದನ್ನೂ ಓದಿ: Haveri: ಗುರು ಶಿಷ್ಯರ ಸಂಬಂಧ ಸಾರುತ್ತೆ ಹಿಂದೂ ಮುಸ್ಲಿಂ ಸೌಹಾರ್ದತೆಯ ಈ ಅಪರೂಪದ ತಾಣ
ಹೀಗೆ ಬನ್ನಿ
ಕಾರಡಗಿ ವೀರಭದ್ರೇಶ್ವರ ದೇಗುಲವು ಸವಣೂರಿನಿಂದ ಎಂಟು ಕಿಲೋಮೀಟರ್ ದೂರದಲ್ಲಿದ್ದು, ಅಲ್ಲಿಂದ ಟೆಂಪೋ ಹಾಗೂ ಬಾಡಿಗೆ ಗಾಡಿಗಳು ಕಾರಡಗಿಗೆ ಹೋಗಲು ತಯಾರಿರುತ್ತವೆ. ಅಮಾವಾಸ್ಯೆಯ ದಿನ ಕಾರಡಗಿಗೆ ಹೋದರೆ ಹಬ್ಬ ನೋಡಿದಷ್ಟು ಸಂತೋಷವಾಗುತ್ತದೆ. ಒಟ್ಟಿನಲ್ಲಿ ವೀರಭದ್ರೇಶ್ವರ ದೇವಸ್ಥಾನವು ಭಕ್ತರ ನೆಚ್ಚಿನ ಶಕ್ತಿ ಕೇಂದ್ರವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ