ಗದಗ: ಶಾಲಾ ಮಕ್ಕಳಿಗೆ ಗುರುಕುಲ ಪದ್ದತಿಯ ಮಾದರಿ ಗಾಂಧಿ ಕುಟೀರದಲ್ಲಿ (Gandhi Kutir) ಬೋಧನೆ! ಸ್ವಾವಲಂಬನೆ ಜೀವನ ಕಟ್ಟಿಕೊಳ್ಳೋದು ಹೇಗೆಂದು ತಿಳಿಸುತ್ತಿರೋ ಶಿಕ್ಷಕರು! ಖಾಸಗಿ ಶಾಲೆಗೆ ಸೆಡ್ಡು ಹೊಡೆದು ಸರ್ಕಾರಿ ಶಾಲೆಗೆ (Government School) ಜೈ ಎಂದ ಮಕ್ಕಳು! ಯೆಸ್! ಇಂತಹದ್ದೊಂದು ಮಾದರಿ ಶಾಲೆ ಇರೋದು ಗದಗ ತಾಲೂಕಿನ (Gadag News) ಕೊಟುಮಚಗಿ ಗ್ರಾಮದಲ್ಲಿ.
ಈ ಸರ್ಕಾರಿ ಪ್ರೌಢಶಾಲೆಯಲ್ಲಿ ಗಾಂಧಿ ಚಿಂತನೆ ಅಳವಡಿಸಿಕೊಂಡು ಪ್ರತಿದಿನ 200ಕ್ಕೂ ಹೆಚ್ಚು ಮಕ್ಕಳಿಗೆ ಕಲಿಸಲಾಗುತ್ತಿದೆ. ಈ ಹೈಸ್ಕೂಲ್ನಲ್ಲಿ ವಿದ್ಯಾರ್ಥಿಗಳ ಬಿಡುವಿನ ವೇಳೆಯಲ್ಲಿ ತರಕಾರಿಗಳನ್ನು ಬೆಳೆಯುವ ತರಬೇತಿ ನೀಡಲಾಗ್ತಿದೆ. ಶಾಲೆಯನ್ನು ಪುನರುಜ್ಜೀವನಗೊಳಿಸೋಕೆ ಇಡೀ ಹಳ್ಳಿಯೇ ಟೊಂಕ ಕಟ್ಟಿ ನಿಂತಿದೆ.
ಗಾಂಧಿ ಕುಟೀರದಲ್ಲಿ ಗುರುಕುಲ ಶಿಕ್ಷಣ!
ಶಾಲೆಯ ಬಳಿಯೇ ಮರದ ಕೆಳಗೆ ಮಹಾತ್ಮ ಗಾಂಧಿ ಕುಟೀರ ನಿರ್ಮಿಸಲಾಗಿದೆ. ಆ ಗಾಂಧಿ ಕುಟೀರದಲ್ಲಿ ಕುಳಿತು ಮಕ್ಕಳು ಗುರುಕುಲ ಮಾದರಿಯಲ್ಲಿ ವಿದ್ಯಾಭ್ಯಾಸ ಮಾಡ್ತಾರೆ. ಅಷ್ಟೇ ಅಲ್ದೇ, ಶಾಲೆಯಲ್ಲಿ ಸ್ಮಾರ್ಟ್ ತರಗತಿ, ಸ್ಮಾರ್ಟ್ ಪ್ರಯೋಗಾಲಯದಲ್ಲಿ ಪ್ರಾಯೋಗಿಕ ಶಿಕ್ಷಣ ಸಹ ನೀಡಲಾಗ್ತಿದೆ.
ವಿದ್ಯಾರ್ಥಿಗಳ ಕೊರತೆಯಿತ್ತು!
ದಶಕದ ಹಿಂದೆ ವಿದ್ಯಾರ್ಥಿಗಳ ಕೊರತೆಯಿಂದ ಶಾಲೆ ಸಮೀಪದ ಕಣಗಿನಹಾಳ ಗ್ರಾಮಕ್ಕೆ ಸ್ಥಳಾಂತರಗೊಳ್ಳುವ ಹಂತದಲ್ಲಿತ್ತು. ಇದನ್ನು ಉಳಿಸಿಕೊಳ್ಳಲು ಶಿಕ್ಷಕರು, ಗ್ರಾಮಸ್ಥರು ಒಗ್ಗಟ್ಟಾಗಿ ಈ ಶಾಲೆಯನ್ನು ಸುಧಾರಿಸಲು ಪ್ರಯತ್ನಿಸಿದ್ದಾರೆ. ಅವರ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಈ ಹಿಂದೆ 132 ವಿದ್ಯಾರ್ಥಿಗಳು ಹಾಜರಿಯಿದ್ದ ಇದೇ ಶಾಲೆಯಲ್ಲಿ ಆದ್ರೆ ಈಗ 209 ವಿದ್ಯಾರ್ಥಿಗಳು ತಪ್ಪದೇ ಶಾಲೆಗೆ ಹಾಜರಾಗ್ತಾರೆ.
ಶಾಲೆಯಲ್ಲೇ ತಯಾರಾಗುತ್ತೆ ಸಾವಯವ ಗೊಬ್ಬರ!
ಇನ್ನು ಶಾಲೆಯಲ್ಲಿ ಸಾವಯವ ಗೊಬ್ಬರ ತಯಾರಿಸಲು ಎರೆಹುಳು ಘಟಕವನ್ನು ಸ್ಥಾಪಿಸಿದ್ದಾರೆ. ವಿದ್ಯಾರ್ಥಿಗಳು ಮಧ್ಯಾಹ್ನದ ಊಟದ ನಂತರ ತರಕಾರಿ ಮತ್ತು ಹಣ್ಣುಗಳ ಸಸಿಗಳನ್ನು ನೆಟ್ಟ ತೋಟದಲ್ಲಿ ತಟ್ಟೆ ತೊಳೆಯುತ್ತಾರೆ. ಎರೆಹುಳು ಘಟಕದಲ್ಲಿ ತಯಾರಿಸಿದ ಸಾವಯವ ಗೊಬ್ಬರವನ್ನು ಗಿಡಗಳಿಗೆ ಹಾಕ್ತಾರೆ.
ಶಾಲೆಯಲ್ಲೂ ಮಳೆನೀರು ಕೊಯ್ಲು
ಅಷ್ಟೇ ಅಲ್ದೇ, ಶಾಲಾ ಆವರಣದಲ್ಲಿ ಮಳೆನೀರು ಕೊಯ್ಲು ಮಾಡಿದ್ದಾರೆ. ಮಳೆನೀರು ಸಂಗ್ರಹ ಮಾಡಿ ನೀರು ಮಿತವಾಗಿ ಬಳಸುವಂತೆ ಜಾಗೃತಿ ಮೂಡಿಸ್ತಾರೆ. ಹೀಗಾಗಿ ಖಾಸಗಿ ಶಾಲೆಗೆ ಹೋಗದೆ ಮಕ್ಕಳು ಸರ್ಕಾರಿ ಶಾಲೆಗೆ ಹಾಜರಾಗುತ್ತಿದ್ದಾರೆ.
ಇದನ್ನೂ ಓದಿ: Gadag: ಹೊಲಕ್ಕಿಳಿದು ರೈತರಾಗುವ ಸ್ವಾಮೀಜಿ! ಸಮಗ್ರ ಕೃಷಿಯಲ್ಲೂ ಯಶಸ್ಸು
ಈ ಗ್ರಾಮದಲ್ಲಿ ಮದುವೆ, ಹುಟ್ಟು ಹಬ್ಬಗಳು, ಜಯಂತಿಗಳು ನಡೆದ ದಿನ ಶಾಲೆಗೆ ಬಂದು ಗಿಡಗಳನ್ನು ನೆಟ್ಟು ಹೋಗೋ ಸಂಪ್ರದಾಯ ರೂಢಿಸಲಾಗಿದೆ. ಹೀಗಾಗಿ ಶಾಲಾ ಆವರಣದಲ್ಲಿ 25 ಕ್ಕೂ ಹೆಚ್ಚು ತಳಿಯ ಗಿಡಗಳು ಅರಳಿ ನಿಂತಿವೆ. ಹೀಗಾಗಿ ಸುಂದರವಾಗಿರುವ ಸರ್ಕಾರಿ ಶಾಲೆಗೆ ಬರುತ್ತಿರೋದು ತುಂಬಾನೆ ಖುಷಿ ತಂದಿದೆ ಅಂತಿದ್ದಾರೆ ವಿದ್ಯಾರ್ಥಿನಿಯರು.
ಇದನ್ನೂ ಓದಿ: Lakkundi: ನೂರಕ್ಕೂ ಹೆಚ್ಚು ದೇಗುಲ, ಬಾವಿ! ತಿಳಿದಷ್ಟೂ ಕುತೂಹಲ ಹೆಚ್ಚಿಸುತ್ತೆ ಲಕ್ಕುಂಡಿಯ ಇತಿಹಾಸ
ಗ್ರಾಮಸ್ಥರು, ಶಿಕ್ಷಕರು ಮನಸ್ಸು ಮಾಡಿದರೆ ಯಾವುದೇ ಸರ್ಕಾರಿ ಶಾಲೆಗಳು ಬಂದ್ ಆಗಲ್ಲ. ಮಾದರಿ ಶಾಲೆಗಳಾಗಿ ಹೊರಹೊಮ್ಮುತ್ತವೆ ಅನ್ನೋಕೆ ಈ ಸರ್ಕಾರಿ ಶಾಲೆ ಸಾಕ್ಷಿಯಾಗಿದೆ.
ವರದಿ: ಸಂತೋಷ ಕೊಣ್ಣೂರ, ನ್ಯೂಸ್ 18 ಕನ್ನಡ ಗದಗ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ