ಮಹಾನಗರಿ ಮುಂಬೈ (Metropolis Mumbai), ಕಣ್ಣುಕೋರೈಸುವ ನಗರದ (City) ಚಿತ್ರಣವನ್ನು ಮುಂದಿಡುವುದರ ಜೊತೆಗೆ ಧಾರಾವಿಯಂತಹ ಕೊಳಗೇರಿಯ (Dharavi slum) ಅನುಭವವನ್ನು ಮಾಡಿಸುತ್ತದೆ. ಒಂದೆಡೆ ಆಧುನಿಕತೆಯಾದರೆ (modernity), ಇನ್ನೊಂದೆಡೆ ಕಿತ್ತು ತಿನ್ನುವ ಬಡತನದ (Pooverty) ನಡುವೆ ಬದುಕುತ್ತಿರುವ ಜನರು! ಹೀಗೆ ಒಂದೇ ನಾಣ್ಯದ ಎರಡು ಮುಖದಂತೆ ಮುಂಬೈ ಪ್ರತಿಯೊಬ್ಬರಿಗೂ ಆಶ್ರಯ ತಾಣವಾಗಿದೆ. ಏಷ್ಯಾದಲ್ಲಿಯೇ ಅತಿದೊಡ್ಡ ಕೊಳಗೇರಿ (largest slum in Asia) ಎಂಬ ಕುಖ್ಯಾತಿ ಪಡೆದಿರುವ ಧಾರಾವಿಯಲ್ಲಿ ಸಣ್ಣ ಸಣ್ಣ ವ್ಯಾಪಾರಗಳು ಇದ್ದು 600 ಎಕರೆಗಳಿಗಿಂತ ಹೆಚ್ಚಿನ ಸ್ಥಳವನ್ನು ಹೊಂದಿದೆ. ಕಿಷ್ಕಿಂದೆಯಂತ ಈ ಪ್ರದೇಶದಲ್ಲಿ ಲಕ್ಷಾಂತರ ಜನರು ವಾಸಿಸುತ್ತಿದ್ದಾರೆ. ಧಾರಾವಿಯ ಸಂಪೂರ್ಣ ಚಿತ್ರಣವನ್ನು ಬದಲಿಸಿ ಸಂಪೂರ್ಣ ಕೊಳಗೇರಿಯನ್ನೇ ಮರುನಿರ್ಮಿಸಲು ಮಹಾರಾಷ್ಟ್ರ ಸರಕಾರ ದಶಕಗಳಿಂದ ಪ್ರಯತ್ನಿಸುತ್ತಿದೆ. ಈ ಯೋಜನೆಗೆ ಇದೀಗ ಮರುಜೀವ ಬಂದಿದೆ.
ಧಾರಾವಿ ಪುನರ್ನಿರ್ಮಾಣಕ್ಕೆ ಮಹಾರಾಷ್ಟ್ರ ಸರಕಾರದ ಪ್ರಯತ್ನ
ಮನೆ, ಕಚೇರಿ ಹಾಗೂ ಸಣ್ಣ ಕೈಗಾರಿಕೆಗಳನ್ನು ಇಲ್ಲಿ ಸ್ಥಾಪಿಸುವ ಮೂಲಕ ಮುಂಬೈಗೆ ಕಪ್ಪುಚುಕ್ಕೆಯಂತಿರುವ ಕೊಳಗೇರಿಯನ್ನು ಆಧುನಿಕಗೊಳಿಸಲು ಹರಸಾಹಸ ಪಡುತ್ತಿದೆ. ಇದೀಗ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಮತ್ತು ಮುಂಬೈ ವಿಮಾನ ನಿಲ್ದಾಣದ ವ್ಯಾಪಾರ ಕೇಂದ್ರದ ಪಕ್ಕದಲ್ಲಿರುವ ಬೃಹತ್ ಕೊಳೆಗೇರಿಯನ್ನು ಪುನರಾಭಿವೃದ್ಧಿ ಮಾಡಲು ಜಾಗತಿಕ ಪ್ರಮುಖ ಹರಾಜುದಾರನಾಗಿ ಅದಾನಿ ಸಮೂಹ ಪಣತೊಟ್ಟಿದೆ. ಚೀನಾವು ಶಾಂಘೈನ ಲುಜಿಯಾಜುಯಿಯನ್ನು ಹೇಗೆ ಪುನರ್ನಿರ್ಮಿಸಿದೆಯೋ ಅದೇ ರೀತಿ ಧಾರಾವಿಯನ್ನು ಮರು ಅಭಿವೃದ್ಧಿಪಡಿಸುವ ಇರಾದೆಯನ್ನು ಹೊಂದಿದೆ. ಅದಾನಿ ಗ್ರೂಪ್ಗೆ ತಮ್ಮ ಸಾಮರ್ಥ್ಯವನ್ನು ವಿಶ್ವಕ್ಕೆ ತೋರಿಸಲು ಇದೊಂದು ಸುವರ್ಣವಕಾಶವಾಗಿದೆ.
ಧಾರಾವಿ ಮತ್ತೊಂದು ವಾಣಿಜ್ಯ ಕೇಂದ್ರವಾಗಲಿದೆಯೇ?
ಇಂಧನ ಹಾಗೂ ಮೂಲಸೌಕರ್ಯ ದೈತ್ಯನಾಗಿರುವ ಅದಾನಿ ಗ್ರೂಪ್ ಹರಾಜಿನಲ್ಲಿ ಅಗ್ರಸ್ಥಾನದಲ್ಲಿದ್ದು, ರೈಲ್ವೆ ಭೂಮಿಯಲ್ಲಿರುವ ಕೊಳಗೇರಿ ನಿವಾಸಿಗಳಿಗೆ ಪುನರ್ವಸತಿಯನ್ನು ಕಲ್ಪಿಸಲಿದೆ ಎಂಬ ಆಶಾಭಾವನೆಯನ್ನು ನಗರವಾಸಿಗಳು ಹೊಂದಿದ್ದಾರೆ. ಹೊಸ ವಾಣಿಜ್ಯ ಸಂಕೀರ್ಣಗಳ ನಿರ್ಮಾಣ, ಮುಂಬೈನ ನಾರಿಮನ್ ಪಾಯಿಂಟ್ನ ಆಚೆಗೆ ಮತ್ತು ಉಪನಗರಗಳಲ್ಲಿ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (BKC) ವಿಸ್ತರಿಸುವ ಮೂಲಕ ಮುಂಬೈನಲ್ಲಿಯೇ ಇದೊಂದು ಮೂರನೇ ವ್ಯಾಪಾರ ಭಾಗವಾಗಿ ರೂಪುಗೊಳ್ಳಬಹುದು ಎಂದು ಆಶಿಸಲಾಗಿದೆ.
5,069 ಬಿಡ್ ಮಾಡಿದ ಅದಾನಿ ಗ್ರೂಪ್
ಧಾರಾವಿಯಲ್ಲಿ ಈಗಾಗಲೇ ಸ್ಥಾಪನೆಗೊಂಡಿರುವ ಸಣ್ಣ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸುವುದು, ವಿಶ್ವಕ್ಕೆ ಹಣಕಾಸು ಪೂರೈಕೆಯ ಬೃಹತ್ ತಾಣವಾಗಿ ಮುಂಬೈ ಹಾಗೂ ಸಂಪೂರ್ಣ ಭಾರತಕ್ಕೆ ಸಾಧ್ಯತೆಗಳ ಲೋಕವನ್ನೇ ನಿರ್ಮಿಸಲಿದೆ, ಅಂತೆಯೇ ರೂ 23,000 ಕೋಟಿ ಧಾರಾವಿ ಪುನರಾಭಿವೃದ್ಧಿ ಯೋಜನೆಗೆ ಅದಾನಿ ರೂ 5,069 ಕೋಟಿ ಬಿಡ್ ಮಾಡಿದೆ.
ಇದನ್ನೂ ಓದಿ: Explained: 'ಕಾಮಾಟಿಪುರ'ದ ಇತಿಹಾಸ ಗೊತ್ತಾ? ಇಲ್ಲಿದೆ 'ಕೆಂಪು ದೀಪ'ದ ಕೆಳಗಿನ ಕರಾಳ ಕಥೆ!
ಪುನರ್ವಸತಿಗೆ ಏಳು ವರ್ಷಗಳ ಕಾಲಾವಧಿ
ಈ ಯೋಜನೆಗೆ ಸಮಿತಿಯು ಔಪಚಾರಿಕ ಚಾಲನೆ ನೀಡುವ ನಿರೀಕ್ಷೆ ಇದ್ದು ಅದಾನಿ ಹೊಂದಿರುವ ಪ್ರಮುಖ ಷೇರುಗಳ ಮೂಲಕ ಮೂಲ ಉದ್ದೇಶವನ್ನು ಈಡೇರಿಸಲಾಗುತ್ತದೆ. ಪುನರ್ವಸತಿ ಪ್ರಕ್ರಿಯೆಯು ಏಳು ವರ್ಷಗಳಲ್ಲಿ ಕೊನೆಗೊಳ್ಳಬೇಕು ಮತ್ತು ಯೋಜನೆಯು 17 ವರ್ಷಗಳಲ್ಲಿ ಪೂರ್ಣಗೊಳ್ಳಬೇಕು ಎಂಬ ಲೆಕ್ಕಾಚಾರ ಹಾಕಲಾಗಿದೆ. 2.5 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿರುವ 6.5 ಲಕ್ಷ ಕೊಳೆಗೇರಿ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಯೋಜನೆಗೆ ಒಟ್ಟು ಏಳು ವರ್ಷಗಳ ಕಾಲಾವಧಿ ಇದೆ ಎಂದು ಅವರು ತಿಳಿಸಿದ್ದಾರೆ.
ಸ್ಲಮ್ ರಹಿತ ಮುಂಬೈ ನಿರ್ಮಾಣ ಸಾಧ್ಯವೇ?
ಧಾರಾವಿಯ ಪುನರಾಭಿವೃದ್ಧಿಯ ಮುಖ್ಯ ಉದ್ದೇಶ ಮುಂಬೈಯನ್ನು ಕೊಳಗೇರಿ ಮುಕ್ತವನ್ನಾಗಿಸುವ ಗುರಿಯ ಒಂದು ಭಾಗವಾಗಿದೆ. ವಿಶ್ವಬ್ಯಾಂಕ್ ಪ್ರಕಾರ, ನಗರದ ಜನಸಂಖ್ಯೆಯ ಅರ್ಧದಷ್ಟು ಜನರು ಜನನಿಬಿಡ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ.
ಕೊಳಗೇರಿಗಳ ವಾಸ್ತವ್ಯವು ರೈಲ್ವೆ ಹಳಿ ಹಾಗೂ ಪಾದಾಚಾರಿ ಮಾರ್ಗಗಳ ಉದ್ದಕ್ಕೂ ನೆಲಗೊಂಡಿದೆ. ಉಚಿತ ಹಾಗೂ ಕೈಗೆಟಕುವ ದರದಲ್ಲಿ ವಸತಿ ಕಲ್ಪಿಸುವುದು ಸವಾಲಿನ ಕೆಲಸವಾಗಿದೆ. ಅದಾಗ್ಯೂ ಧಾರಾವಿಯನ್ನು ಮಿನಿ ಮುಂಬೈಯನ್ನಾಗಿ ರೂಪಿಸುವ ಇರಾದೆಯನ್ನು ಸರಕಾರ ಹೊಂದಿದೆ.
ಕೊಳಗೇರಿಯನ್ನು ಪುನರ್ ಅಭಿವೃದ್ಧಿಪಡಿಸಲು ಅಧಿಕಾರಿಗಳು ಶ್ರಮಿಸಿದ್ದು ಮನೆಗಳ ಪುನರ್ ನಿರ್ಮಾಣ, ಕೊಳಗೇರಿ ವಾಸಿಗಳನ್ನು ದೂರದ ಉಪನಗರಗಳಿಗೆ ಸ್ಥಳಾಂತರಿಸುವುದು, ಕೊಳೆಗೇರಿ ಪ್ರದೇಶಗಳಲ್ಲಿ ಮಾರುಕಟ್ಟೆ ದರದ ವಸತಿಗಳನ್ನು ನಿರ್ಮಿಸುವುದು ಹೀಗೆ ಅನೇಕ ಯೋಜನೆಗಳನ್ನು ಜಾರಿಗೆ ತರುವ ಪ್ರಯತ್ನ ಮಾಡಿದ್ದಾರೆ. ಅದಾಗ್ಯೂ ಪ್ರಗತಿಯು ನಿಧಾನವಾಗಿದ್ದು ಸಂಪೂರ್ಣ ವ್ಯವಸ್ಥೆಯನ್ನು ಯೋಜಿತ ರೀತಿಯಲ್ಲಿ ಮುಂದುವರಿಸಲು ಅಡ್ಡಿಯನ್ನುಂಟು ಮಾಡಿವೆ.
ಧಾರಾವಿಯ ಸಣ್ಣ ಉದ್ಯಮಗಳ ಪರಿಸ್ಥಿತಿ ಏನು?
ಧಾರಾವಿಯು ಅನೌಪಚಾರಿಕವಾದ ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ನೆಲೆಯಾಗಿದ್ದು ಇಲ್ಲಿ ಔಷಧದ ಅಂಗಡಿಗಳು, ಪಾದರಕ್ಷೆ, ಬಟ್ಟೆಯಂಗಡಿಗಳು, ಚರ್ಮದ ಉತ್ಪನ್ನಗಳ ಅಂಗಡಿಗಳು ನಿರ್ಮಾಣಗೊಂಡಿವೆ.
ಎಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಘಟಕಗಳು ಮರುಅಭಿವೃದ್ಧಿಗೊಂಡ ಧಾರಾವಿಯಲ್ಲಿ ಜಾಗವನ್ನು ಕಂಡುಕೊಳ್ಳುತ್ತವೆ. ಹೀಗೆ ವರ್ಷಗಳು ಕಳೆದಂತೆ ಮುಂಬೈನ ಕೊಳಗೇರಿ ನಿವಾಸಿಗಳ ಜೀವನ ಮಟ್ಟವು ಕೊಂಚ ಸುಧಾರಣೆಗೊಳ್ಳಬಹುದು.
ಭಾರತದ ಬಡತನ ಸೂಚ್ಯಾಂಕ
ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ (UNDP) ಬಡತನ ಸೂಚ್ಯಾಂಕವು ತನ್ನ ಇತ್ತೀಚಿನ ವರದಿಯಲ್ಲಿ ಭಾರತದ ನಗರ ಬಡತನದ ಮಟ್ಟವನ್ನು 5.5% ಎಂದು ಗುರುತಿಸಿದೆ. 2018 ರಲ್ಲಿ ವಿಶ್ವ ಬ್ಯಾಂಕ್ ಭಾರತದ ನಗರ ಜನಸಂಖ್ಯೆಯ 35% ರಷ್ಟು ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಅಂದಾಜಿಸಿದೆ.
ಧಾರಾವಿ ಅನುಭವ ಕಲಿಸುವ ಪಾಠಗಳು
ನಗರದಲ್ಲಿ ನಾಯಿಕೊಡೆಗಳಂತೆ ತಲೆಎತ್ತಿರುವ ಕೊಳಗೇರಿಗಳ ನಿರ್ಮಾಣವನ್ನು ತಡೆಗಟ್ಟಲು ನಗರ ಯೋಜನೆಯು ಕೆಲವೊಂದು ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಎತ್ತಿತೋರಿಸಿದೆ.
ಭಾರತೀಯ ನಗರಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿವೆ ಹಾಗೂ ಆರ್ಥಿಕ ಬೆಳವಣಿಗೆಯ ಹರಿಕಾರರಾಗಿ ರೂಪುಗೊಳ್ಳುತ್ತಿವೆ ಅದಾಗ್ಯೂ ಭಾರತದ ಹೆಚ್ಚಿನ ಭಾಗಗಳಲ್ಲಿ ನಗರ ಯೋಜನೆಯ ಸಂಪೂರ್ಣ ಅನುಪಸ್ಥಿತಿ ಎದ್ದುಗಾಣುತ್ತದೆ.
ನಗರ ಯೋಜನೆಗಳು ಏಕೆ ಮುಖ್ಯವಾಗಿವೆ?
ಇತ್ತೀಚಿನ ನೀತಿ ಆಯೋಗದ ವರದಿಯಂತೆ ಅನೇಕ ನಗರ ಯೋಜನೆಗಳು ಗ್ರಾಮೀಣ ಘಟಕಗಳಾಗಿ ಆಡಳಿತಕ್ಕೊಳಪಡುತ್ತಿವೆ ಎಂಬ ಅಂಶವನ್ನು ಬಹಿರಂಗಪಡಿಸಿದೆ.
ಚೀನಾದ ನಗರ ಯೋಜನೆಯಲ್ಲಿರುವ ಮಹತ್ವದ ಅಂಶವೆಂದರೆ ಕೊಳಗೇರಿಗಳನ್ನು ದೇಶವು ಹೊಂದಿಲ್ಲದಿರುವುದಾಗಿದೆ. ನಗರೀಕರಣ ಪ್ರಕ್ರಿಯೆಯಲ್ಲಿ ನಗರ ಕೇಂದ್ರಗಳ ಸಂಘಟಿತ ವಿಸ್ತರಣೆಗೆ ವಿಲೀನಗೊಳಿಸಿದೆ.
ಧಾರಾವಿ: ಗೌತಮ್ ಅದಾನಿಗೆ ಅಗ್ನಿಪರೀಕ್ಷೆ ಒಡ್ಡಲಿದೆಯೇ?
150 ಶತಕೋಟಿಗೂ ಹೆಚ್ಚು ನಿವ್ವಳ ಮೌಲ್ಯದೊಂದಿಗೆ, ಗೌತಮ್ ಅದಾನಿ ಈಗ ಎಲೋನ್ ಮಸ್ಕ್ ಮತ್ತು ಫ್ರೆಂಚ್ ಫ್ಯಾಷನ್ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ ನಂತರ ವಿಶ್ವದ ಮೂರನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಅದಾನಿ ಗ್ರೂಪ್ ವಿಮಾನ ನಿಲ್ದಾಣ ಹಾಗೂ ರಸ್ತೆಗಳ ನವೀಕರಣಗಳ ಯೋಜನೆ ಸೇರಿದಂತೆ ಹಲವಾರು ವ್ಯವಹಾರಗಳಲ್ಲಿ ತನ್ನ ಕಾರ್ಯಬಾಹುಳ್ಯವನ್ನು ವಿಸ್ತರಿಸಿಕೊಂಡಿದೆ. ಅದಾನಿ ಗ್ರೂಪ್ಗೆ ರಿಯಲ್ ಎಸ್ಟೇಟ್ ವ್ಯವಹಾರ ಲಾಭದಾಯಕವಾಗಿದ್ದು, ಜಗತ್ತಿಗೆ ಮತ್ತು ಷೇರು ಮಾರುಕಟ್ಟೆಗಳಿಗೆ ಸಾಮರ್ಥ್ಯದ ಶಕ್ತಿಯ ಅರಿವು ಮೂಡಿಸಲು ಅವಕಾಶ ಎಂದೆನಿಸಿದೆ.
ಅದಾಗ್ಯೂ ಕೊಳಗೇರಿ ಪುನರ್ ಅಭಿವೃದ್ಧಿ ಸಮೂಹಕ್ಕೆ ಹೆಚ್ಚಿನ ಸವಾಲೊಡ್ಡನ್ನಲಿದ್ದು, ಯೋಜನೆಯನ್ನು ಅವಧಿಯೊಳಗೆ ಪೂರ್ಣಗೊಳಿಸುವುದು ಹಾಗೂ ವೆಚ್ಚ ಮಿತಿಮೀರದಂತೆ ಯೋಜನೆಗಳನ್ನು ರೂಪಿಸುವುದು ಹೆಚ್ಚಿನ ಆದ್ಯತೆಯಾಗಿದೆ.
1995 ರಲ್ಲಿ ಮಹಾರಾಷ್ಟ್ರ ಸರ್ಕಾರವು ಸ್ಥಾಪಿಸಿದ ಕೊಳೆಗೇರಿ ಪುನರ್ವಸತಿ ಪ್ರಾಧಿಕಾರವು ಇಲ್ಲಿಯವರೆಗೆ ಗಮನಾರ್ಹವಾದ ದಾಖಲೆಯನ್ನು ಹೊಂದಿದ್ದು ಅನುಷ್ಠಾನಗೊಳಿಸಿದ 2,000 ಕ್ಕಿಂತ ಹೆಚ್ಚಿನ ಯೋಜನೆಗಳಲ್ಲಿ ಕೇವಲ 200,000 ಕುಟುಂಬಗಳನ್ನು ಪುನರ್ವಸತಿ ಮಾಡಿದೆ.
ಧಾರಾವಿ ಪುನರ್ನಿರ್ಮಾಣ ಸವಾಲುಗಳಿಂದ ಕೂಡಿದೆ ಏಕೆ?
ಧಾರಾವಿ ಯೋಜನೆಯು ಅದಾನಿ ಗ್ರೂಪ್ಗೆ ಕೂಡ ಅಗ್ನಿಪರೀಕ್ಷೆಯನ್ನು ಒಡ್ಡಬಹುದು. ಧಾರಾವಿಯ ಪುನರ್ನಿರ್ಮಾಣ ಅಂದುಕೊಂಡಷ್ಟು ಸುಲಭವಲ್ಲದ ಕೆಲಸವಾಗಿದ್ದರೂ ಅದಾನಿ ಗ್ರೂಪ್ ಇದನ್ನು ನಿರ್ವಹಿಸಬಲ್ಲುದು ಎಂಬ ಅಂಶ ಇಲ್ಲಿ ಮುಖ್ಯವಾಗಿದೆ.
ಅದಾನಿ ಗ್ರೂಪ್ ಅಂತಹ ಶಕ್ತಿ ಸಾಮರ್ಥ್ಯಗಳನ್ನು ಹೊಂದಿದೆ ಎಂಬುದು ಉದ್ಯಮ ವಲಯದಲ್ಲಿ ಕೇಳಿಬರುತ್ತಿರುವ ಮಾತಾಗಿದೆ. ಧಾರಾವಿ ಯೋಜನೆಯ ಒಳಹೊರಗಳು, ಅಪ್ಡೇಟ್ಗಳನ್ನು ವಿಶ್ವವು ನಿಕಟವಾಗಿ ಅನುಸರಿಸುತ್ತದೆ ಎಂಬುದು ಇಲ್ಲಿ ಗಮನಾರ್ಹವಾದ ಅಂಶವಾಗಿದೆ. ಗೌತಮ್ ಅದಾನಿ ಅವರ ಸಮೂಹಕ್ಕೆ ಈಗ ವೃತ್ತಿಪರತೆ ಮತ್ತು ಪರಾಕ್ರಮದ ಬಗ್ಗೆ ದೃಢವಾದ ಹೇಳಿಕೆ ನೀಡಲು ಇದೊಂದು ಅವಕಾಶವಾಗಿದೆ.
ಇದನ್ನೂ ಓದಿ: Explained: 'ದಿ ಕಾಶ್ಮೀರ್ ಫೈಲ್ಸ್' ಅಸಭ್ಯ ಸಿನಿಮಾ ಎಂದ ನಾದವ್ ಲ್ಯಾಪಿಡ್ ಯಾರು?
ಮುಂಬೈನ ಹೃದಯ ಭಾಗದಲ್ಲಿ ಲಕ್ಷಾಂತರ ಚದರ ಅಡಿ ವಸತಿ ಮತ್ತು ವಾಣಿಜ್ಯ ಜಾಗವನ್ನು ಮಾರಾಟ ಮಾಡುವ ಮೂಲಕ ವಿಜೇತ ಬಿಡ್ದಾರರಿಗೆ ಹೆಚ್ಚಿನ ಆದಾಯವನ್ನು ಕಾಯ್ದಿರಿಸಲು ಸಹಾಯ ಮಾಡುವ ಯೋಜನೆಯು ಕೆಲವೊಂದು ಸಂಕೀರ್ಣತೆ ಹಾಗೂ ಸವಾಲುಗಳಿಂದ ಮುಂದುವರಿಯದೆಯೇ ಹಲವು ವರ್ಷಗಳಿಂದ ನಿಶ್ಚಲವಾಗಿದೆ. ಅದಾನಿ ಗ್ರೂಪ್ ಈ ಅಗ್ನಿಪರೀಕ್ಷೆಯನ್ನು ಹೇಗೆ ಎದುರಿಸಲಿದ್ದಾರೆ ಎಂಬುದರ ಮೇಲೆ ವಿಶ್ವದ ಚಿತ್ತ ನೆಟ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ