‘ರೆಬೆಲ್ ಸ್ಟಾರ್ ಅಂಬರೀಶ್’ (Rebel Star Ambareesh) ಅಂದ್ರೆ ಯಾರಿಗೆ ಗೊತ್ತಾಗಲ್ಲ ಹೇಳಿ? ಕನ್ನಡ ಕಲಾ ರಸಿಕರ ನಾಲಿಗೆ ತುದಿ ಮೇಲೆ ನಲಿದಾಡುವ ಹೆಸರು ‘ಅಂಬರೀಶ್’. ಮಂಡ್ಯದ ಗಂಡಿನ ಖದರ್, ರೆಬೆಲ್ ಸ್ಟಾರ್ ಪವರ್, ಜಲೀಲನ ಡೈಲಾಗ್ ಡೆಲಿವರಿಗೆ ಮನಸೋಲದವರಿಲ್ಲ. ನಟನಾಗಿ (Actor), ರಾಜಕಾರಣಿಯಾಗಿ (Politician) ಹೆಸರು ಮಾಡಿದ ರೆಬೆಲ್ ಸ್ಟಾರ್ ಅಂಬರೀಶ್ ನವೆಂಬರ್ 24, 2018ರಂದು ದೈಹಿಕವಾಗಿ ನಮ್ಮನ್ನೆಲ್ಲ ಅಗಲಿದರು. ಆದರೆ ಅವರ ನೆನಪುಗಳಿಗೆ ಎಂದೂ ಕೊನೆಯಿಲ್ಲ. ಇದೀಗ ಅವರ ನೆನಪನ್ನು ಹಸಿರಾಗಿಸಲು ಕರ್ನಾಟಕ ಸರ್ಕಾರ (Karnataka Government) ಮುಂದಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನ (Bengaluru) ರೇಸ್ ಕೋರ್ಸ್ ರಸ್ತೆಗೆ (Race Course Road) ಡಾ. ಎಂ.ಎಚ್. ಅಂಬರೀಶ್ ರಸ್ತೆ (Dr. M.H. Ambareesh Road) ಅಂತ ನಾಮಕರಣ ಮಾಡಲಾಗಿದೆ. ಜೊತೆಗೆ ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಸ್ಮಾರಕ ಲೋಕಾರ್ಪಣೆ ಮಾಡಲಾಗಿದೆ. ಹಾಗಾದರೆ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರು ಇಟ್ಟಿದ್ದು ಯಾಕೆ? ಅಂಬಿಗೂ, ರೇಸ್ ಕೋರ್ಸ್ಗೂ ಇರುವ ನಂಟಾದರೂ ಏನು? ಈ ಬಗ್ಗೆ ಇಲ್ಲಿದೆ ಓದಿ ಇಂಟ್ರೆಸ್ಟಿಂಗ್ ಮಾಹಿತಿ…
ರೇಸ್ ಕೋರ್ಸ್ ಇನ್ನು ಮುಂದೆ ಡಾ. ಎಂಎಚ್ ಅಂಬರೀಶ್ ರಸ್ತೆ!
ರಾಜ್ಯ ರಾಜಧಾನಿ ಬೆಂಗಳೂರಿನ ಅತ್ಯಂತ ಪ್ರಮುಖ ಸ್ಥಳವಾದ ರೇಸ್ ಕೋರ್ಸ್ ಮುಂಭಾಗದ ರಸ್ತೆಗೆ ಈ ಹಿಂದೆ ರೇಸ್ ಕೋರ್ಸ್ ರೋಡ್ ಎನ್ನಲಾಗುತ್ತಿತ್ತು. ಆದರೆ ಇದೀಗ ರಸ್ತೆ ಹೆಸರು ಬದಲಾಗಿದೆ. ಇನ್ನು ಮುಂದೆ ಅದು ರೇಸ್ ಕೋರ್ಸ್ ರಸ್ತೆ ಅಲ್ಲ, ಡಾ.ಎಂ.ಎಚ್ ಅಂಬರೀಶ್ ರಸ್ತೆ ಅಂತ ನಾಮಕರಣಗೊಂಡಿದೆ.
ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರು ಇಟ್ಟಿದ್ದು ಯಾಕೆ?
ಅಂಬರೀಶ್ ಬಗ್ಗೆ ಕನ್ನಡಿಗರಿಗೆ ಗೊತ್ತಿಲ್ಲದ ವಿಚಾರವೇ ಇಲ್ಲ ಎಂದರೆ ತಪ್ಪಾಗಲ್ಲ. ಅವರದ್ದು ನೇರ ನಡೆ ನುಡಿಯ ವ್ಯಕ್ತಿತ್ವ. ರಾಜಕಾರಣ, ನಟನೆ ಜೊತೆ ಹಲವು ಬಗೆಯ ವಿಚಾರಗಳಲ್ಲಿ ಅಂಬರೀಶ್ ಆಸಕ್ತಿ ಹೊಂದಿದ್ದರು. ಈ ಪೈಕಿ ಕುದುರೆ ರೇಸ್ ಕೂಡ ಅವರ ಆಸಕ್ತಿದಾಯಕ ಕ್ಷೇತ್ರವಾಗಿತ್ತು. ಹಲವು ಕಾಲ ಬೆಂಗಳೂರಿನ ರೇಸ್ ಕೋರ್ಸ್ನಲ್ಲಿ ಅವರು ಸಮಯ ಕಳೆದಿದ್ದರು ಎನ್ನಲಾಗಿದೆ. ಹೀಗಾಗಿ ಆ ರಸ್ತೆಗೆ ಅವರ ಹೆಸರು ಸೂಕ್ತ ಎಂಬ ಮಾತೂ ಕೇಳಿ ಬಂದಿದೆ.
ಅಂಬರೀಶ್ ಬಗ್ಗೆ ಜೋಕ್ ಮಾಡಿದ್ದ ಸಿಎಂ ಬೊಮ್ಮಾಯಿ!
ಇತ್ತೀಚಿಗೆ ಬೆಂಗಳೂರಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾಗಿದ್ದ ಸಿಎಂ ಬಸವರಾಜ ಬೊಮ್ಮಾಯಿ, ತಮ್ಮ ಗೆಳೆಯ ಅಂಬರೀಶ್ ಬಗ್ಗೆ ಜೋಕ್ ಮಾಡಿದ್ದರು. "ಅಂಬರೀಶ್ಗೆ ರೇಸ್ ಕೋರ್ಸ್ ರಸ್ತೆ ಅಂದರೆ ಬಹಳ ಇಷ್ಟ. ಸದಾ ಪ್ರತಿಷ್ಠಿತ ಹೋಟೆಲ್ನಲ್ಲಿ ವಾಸ್ತವ್ಯ ಹೂಡುತ್ತಿದ್ದ ಅಂಬಿ ರೇಸ್ ಕೋರ್ಸ್ಗೆ ಬರುತ್ತಿದ್ದರು. ಅವರಿಗೆ ಗೆಳೆಯರ ಹೆಸರು ಗೊತ್ತಿರುತ್ತಿತ್ತೋ ಇಲ್ಲವೋ, ಕುದುರೆ ಹೆಸರು ಮಾತ್ರ ಗೊತ್ತಿರುತ್ತಿತ್ತು" ಎಂದು ಸಿಎಂ ತಮಾಷೆ ಮಾಡಿದ್ದರು!
ಗೆಳೆಯನನ್ನು ನೆನೆಸಿಕೊಂಡ ಸಿಎಂ ಬೊಮ್ಮಾಯಿ
ಇಂದು ಸ್ಮಾರಕ ಉದ್ಘಾಟನೆ ವೇಳೆ ಗೆಳೆಯ ಅಂಬರೀಶ್ರನ್ನು ಸಿಎಂ ಬಸವರಾಜ ಬೊಮ್ಮಾಯಿ ನೆನೆಸಿಕೊಂಡ್ರು. ಅಂಬರೀಶ್ ಅಂದ್ರೆ ಒಂದು ರೀತಿ ಎನರ್ಜಿ ಬರುತ್ತೆ. ಎಲ್ಲಿ ಅಂಬರೀಶ್ ಇರ್ತಾನೋ ಅಲ್ಲಿ ಸಂತೋಷ ಉಂಟು ಮಾಡ್ತಿದ್ದ. ಯಾವುದೇ ಗಂಭೀರ ವಿಚಾರ ಇದ್ರೆ ಅಂಬರೀಶ್ ಬಂದ್ರೆ ಪರಿಹಾರ ಸಿಗುತ್ತೆ ಅಂತ ನಿರಾಳ ಆಗ್ತಿತ್ತು. ಈಗಲೂ ಫಿಲ್ಮ್ ಚೇಂಬರ್ ಅವರು ಬಂದ್ರೆ ಅಂಬರೀಶ್ ನೆನಪಾಗ್ತಾನೆ ಅಂತ ನೆನಪಿಸಿಕೊಂಡ್ರು.
ಅಂಬರೀಶ್ ಆತ್ಮಸಾಕ್ಷಿಗೆ ತಕ್ಕಂತೆ ಬದುಕಿದ್ದ
ಇನ್ನು ನಾವೆಲ್ಲ ಆತ್ಮಸಾಕ್ಷಿ ಬದಿಗಿಟ್ಟು ಬರ್ತೀವಿ. ಆದ್ರೆ ಅಂಬರೀಶ್ ಆತ್ಮ ಸಾಕ್ಷಿಗೆ ತಕ್ಕಂತೆ ಬದುಕಿದ್ದ ಅಂತ ಸ್ಮರಿಸಿಕೊಂಡ್ರು. ಅಂಬಿ ಸ್ಮಾರಕ, ಪುತ್ಥಳಿ ರೆಡಿಯಾಗಿತ್ತು ಅದನ್ನ ಉದ್ಘಾಟನೆ ಮಾಡಿದೆ. ಮುಂದೆ ಆಡಿಟೋರಿಯಂ ಕಂಪ್ಲೀಟ್ ಆದಮೇಲೆ ನಾನೇ ಉದ್ಘಾಟನೆ ಮಾಡ್ತೇನೆ ಅಂತ ಹೇಳಿದ್ರು.
ಅಂಬಿ ಸ್ಮಾರಕ ಉದ್ಘಾಟನೆ
ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಸ್ಮಾರಕವನ್ನು ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. 2 ಎಕರೆ ಜಾಗದಲ್ಲಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಮಾರಕ ನಿರ್ಮಿಸಲಾಗಿದ್ದು, 16 ಅಡಿ ಎತ್ತರದ ರೆಬೆಲ್ ಸ್ಟಾರ್ ಪ್ರತಿಮೆ ಅಭಿಮಾನಿಗಳನ್ನು ಕೈಬೀಸಿ ಕರೆಯುತ್ತಿದೆ.
ಇದನ್ನೂ ಓದಿ: Bad Manners Song Release: ಕಿಕ್ ಕೊಡುತ್ತೆ ಬ್ಯಾಡ್ ಮ್ಯಾನರ್ಸ್ ಟೈಟಲ್ ಟ್ರ್ಯಾಕ್! ಅಭಿಷೇಕ್ ಅಂಬರೀಶ್ ಲುಕ್ ನೋಡಿದ್ರಾ?
ಸಿನಿಮಾ, ರಾಜಕೀಯದಲ್ಲಿ ಅಂಬಿ ಸಾಧನೆ
ಅಂಬರೀಶ್ 208 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ರಾಜಕೀಯದಲ್ಲಿಯೂ ಸಕ್ರಿಯರಾಗಿದ್ದರು. ಅವರು 1996 ರಿಂದ 1999 ರವರೆಗೆ ಜೆಡಿಎಸ್ನಲ್ಲಿ ಮತ್ತು 1994 ರಿಂದ 1996 ರವರೆಗೆ ಕಾಂಗ್ರೆಸ್ನಲ್ಲಿದ್ದರು ಮತ್ತು ನಂತರ ಮತ್ತೆ 1999 ರಿಂದ 2018 ರವರೆಗೆ ಅವರು ಮೂರು ಬಾರಿ ಲೋಕಸಭೆಯ ಸದಸ್ಯರಾಗಿದ್ದರು ಮತ್ತು 2013-16 ರ ಕಾಂಗ್ರೆಸ್ ಸರ್ಕಾರದಲ್ಲಿ ರಾಜ್ಯ ವಸತಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ