ಭಾರತ, ಯುಕೆ, ಅಮೆರಿಕಾ ಸೇರಿ ಜಗತ್ತಿನ ಹಲವು ದೇಶಗಳು ಅಕ್ರಮ ವಲಸಿಗರ (Illegal Migrants) ಸಮಸ್ಯೆಯನ್ನು ಎದುರಿಸುತ್ತಿದೆ. ದಾಖಲೆ ಇಲ್ಲದೆಯೇ ದೇಶಕ್ಕೆ ನುಸುಳುವವರು ಮತ್ತು ಸಕ್ರಮವಾಗಿ ಬಂದರೂ ಕೂಡ ಅವಧಿ ಮುಗಿದ ಮೇಲೂ ಬೇರೆ ದೇಶದಲ್ಲಿ ಉಳಿದುಕೊಳ್ಳುವವರ ಅಕ್ರಮ ವಲಸಿಗರು ಸಂಖ್ಯೆ ಹೆಚ್ಚಾಗಿದೆ. ಭಾರತದಲ್ಲಿ (India) ಸಾಕಷ್ಟು ಸಂಖ್ಯೆಯಲ್ಲಿ ಬಾಂಗ್ಲಾ (Bangladesh) ಅಕ್ರಮ ವಲಸಿಗರು ಇದ್ದಾರೆ. ವಿಶ್ವದ ಇತರ ದೇಶಗಳಂತೆ ಅಮೆರಿಕವೂ ಸಹ ಇದೇ ಸಮಸ್ಯೆ ಎದುರಿಸುತ್ತಿದೆ. ಇತ್ತೀಚೆಗೆ ಈ ಸಮಸ್ಯೆಗೆ ಯುಕೆ ತುತ್ತಾಗಿದೆ.
ಯುಕೆಯಲ್ಲಿ ಮಿತಿಮೀರಿದ ಅಕ್ರಮ ವಲಸಿಗರು
ಯುಕೆಯಲ್ಲಿ 2018ರ ಈಚೆಗೆ ದೇಶಕ್ಕೆ ಸಣ್ಣ ಬೋಟ್ಗಳ ಮೂಲಕ ದೇಶಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ. ಈಗಾಗ್ಲೇ ಈ ವಲಸಿಗರನ್ನು ಹತ್ತಿಕ್ಕಲು ಪ್ರಯತ್ನ ಮಾಡಿದರೂ ಯಾವು ಇನ್ನೂ ಪರಿಣಾಮಕಾರಿಯಾಗಿಲ್ಲ. ಹೀಗಾಗಿ ರಿಷಿ ಸುನಕ್ ಈ ಬಾರಿ ಕಠಿಣ ಕ್ರಮವೊಂದನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ.
ಅಕ್ರಮ ವಲಸಿಗರ ನಿಯಂತ್ರಣಕ್ಕೆ ರಿಷಿ ಸುನಕ್ ಕಠಿಣ ಕ್ರಮ
ಸಣ್ಣ ದೋಣಿಗಳಲ್ಲಿ ಚಾನಲ್ ದಾಟಿ ಬ್ರಿಟನ್ಗೆ ಬರುವ ಅಕ್ರಮ ವಲಸಿಗರನ್ನು ನಿಭಾಯಿಸುವ ಅಂದರೆ ಬ್ರಿಟನ್ಲ್ಲಿ ಅಕ್ರಮ ವಲಸಿಗರನ್ನು ತಡೆಯಲು ಪ್ರಧಾನಿ ರಿಷಿ ಸುನಕ್ ವಿವಾದಾತ್ಮಕ ಹೊಸ ಅಕ್ರಮ ವಲಸಿಗರ ಶಾಸನವನ್ನು ಘೋಷಿಸಿದ್ದಾರೆ.
ಇದನ್ನೂ ಓದಿ: Indian Army: ಕಾಲು ಮುರಿದುಕೊಂಡು ನರಳುತ್ತಿರುವ ಆನೆ ನೆರವಿಗೆ ಬಂದ ಸೇನೆ, ಮೋತಿಯನ್ನು ನಿಲ್ಲಿಸಲು ಹರಸಾಹಸ
ಯುಎನ್ ನಿರಾಶ್ರಿತರ ಸಂಸ್ಥೆ ಮತ್ತು ಕಾನೂನು ತಜ್ಞರ ಟೀಕೆಗಳ ಮಧ್ಯೆ, ಸುನಕ್ ಕಳ್ಳಸಾಗಾಣಿಕೆದಾರರು ಮತ್ತು ನಿರೀಕ್ಷಿತ ವಲಸಿಗರ ಲಾಭವನ್ನು ಪಡೆಯುವುದನ್ನು ತಡೆಯುವ ಕ್ರಮವಾಗಿ ಮಸೂದೆಯನ್ನು ರೂಪಿಸಲು ಪ್ರಯತ್ನಿಸಿದ್ದಾರೆ.
ಅಕ್ರಮ ತಡೆಗೆ ಕಠಿಣ ಕಾಯ್ದೆ ರೂಪಿಸಲಾಗುವುದು ಎಂಬ ಯೋಜನೆ ಘೋಷಿಸಿದ ಬೆನ್ನಲ್ಲೇ ರಿಷಿ ಸುನಕ್ ಹಲವು ಟೀಕೆ-ಟಿಪ್ಪಣಿಗಳನ್ನು ಎದುರಿಸುತ್ತಿದ್ದಾರೆ, ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬ್ರಿಟನ್ಗೆ ಹಿನ್ನಡೆಯಾಗಿದೆ. ಏನದು ರಿಷಿ ಸುನಕ್ ಅಕ್ರಮ ವಲಸೆ ಕ್ರಮಕ್ಕೆ ಕೈಗೊಂಡಿರುವ ಕಠಿಣ ಕ್ರಮ? ರಿಷಿ ಸುನಕ್ ಹೇಳಿರೋದೇನು? ಯುಕೆ ಈ ರೀತಿಯ ತೀರ್ಮಾನಕ್ಕೆ ಬರಲು ಕಾರಣವೇನು ಎಂಬುದನ್ನು ವಿವರವಾಗಿ ನೋಡೋಣ.
ಹೊಸ ಮಸೂದೆ ಏನು?
ಕಡಲಿನ ಮಾರ್ಗದಲ್ಲಿ ಬ್ರಿಟನ್ ದೇಶಕ್ಕೆ ಅಕ್ರಮವಾಗಿ ವಲಸೆ ಬರುವ ಪಿಡುಗಿಗೆ ಕಡಿವಾಣ ಹಾಕಲು ಕಠಿಣ ಕಾಯ್ದೆಯನ್ನು ರೂಪಿಸಲಾಗುವುದು ಎಂದು ಬ್ರಿಟನ್ನ ಪ್ರಧಾನಿ ರಿಷಿ ಸುನಕ್ ಭಾನುವಾರ ಹೇಳಿದ್ದರು. ಅದಾದ ನಂತರ ಅಕ್ರಮ ವಲಸಿಗರು ಬ್ರಿಟನ್ ಪ್ರವೇಶಿಸುವುದನ್ನು ತಡೆಯಲು ಬುಧವಾರ ವಿವಾದಾತ್ಮಕ ನೂತನ ಯೋಜನೆಯನ್ನು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಬುಧವಾರ ಪ್ರಕಟಿಸಿದ್ದಾರೆ.
ಹೊಸ ಶಾಸನವು ಅಕ್ರಮವಾಗಿ ಬ್ರಿಟನ್ ಪ್ರವೇಶಿಸುವವರಿಗೆ ರಾಜಕೀಯ ಆಶ್ರಯ ಕೋರಲು ಅವಕಾಶ ನೀಡಲಾವುದಿಲ್ಲ ಮತ್ತು ಅವರನ್ನು ದೇಶದಿಂದ ಗಡಿಪಾರು ಮಾಡಲು ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದೆ.
ಅಕ್ರಮ ವಲಸಿಗರ ವಿರುದ್ಧ ರಿಷಿ ಸುನಕ್ ಗುಡುಗು
‘ನೀವಿಲ್ಲಿಗೆ ಬ್ರಿಟನ್ಗೆ ಅಕ್ರಮವಾಗಿ ಬಂದರೆ ನೀವು ರಾಜಕೀಯ ಆಶ್ರಯವನ್ನು ಕೋರುವಂತಿಲ್ಲ. ನಮ್ಮ ಆಧುನಿಕ ಗುಲಾಮಗಿರಿ ರಕ್ಷಣೆಗಳ ಪ್ರಯೋಜನವನ್ನು ಪಡೆದುಕೊಳ್ಳಲು ನಿಮಗೆ ಸಾಧ್ಯವಾಗುವುದಿಲ್ಲ. ನೀವು ನಕಲಿ ಮಾನವ ಹಕ್ಕುಗಳನ್ನು ಪ್ರತಿಪಾದಿಸಲು ಸಾಧ್ಯವಿಲ್ಲ ಮತ್ತು ನೀವು ಇಲ್ಲಿ ಉಳಿದುಕೊಳ್ಳುಲೂ ಸಹ ಸಾಧ್ಯವಿಲ್ಲ ’ ಎಂದು ಸುನಕ್ ಟ್ವೀಟ್ ಮೂಲಕ ಖಡಕ್ ಎಚ್ಚರಿಕೆ ನೀಡಿದ್ದಾರೆ.
28 ದಿನಗಳವರೆಗೆ ಬಂಧನ
ಅನಿಯಮಿತ ಮಾರ್ಗದ ಮೂಲಕ - ಅಂದರೆ ಚಾನಲ್ನಾದ್ಯಂತ ಅಥವಾ ಲಾರಿಯ ಹಿಂಭಾಗದಲ್ಲಿ ಸಣ್ಣ ದೋಣಿಗಳ ಮೂಲಕ ಯುಕೆಗೆ ಬರುವ ಪ್ರತಿಯೊಬ್ಬರನ್ನು 28 ದಿನಗಳವರೆಗೆ ಬಂಧಿಸಲಾಗುವುದು ಎಂದು ಹೊಸ ಕಾನೂನು ಹೇಳುತ್ತದೆ.
ಅಕ್ರಮವಾಗಿ ನುಸುಳುವವರನ್ನು ಬಂಧಿಸಿ ಗೇಟ್ಪಾಸ್ ನೀಡುತ್ತೇವೆ
‘ಇಲ್ಲಿಗೆ ಅಕ್ರಮವಾಗಿ ಬರುವವರನ್ನು ಬಂಧಿಸಲಾಗುತ್ತದೆ ಮತ್ತು ಕೆಲವೇ ದಿನಗಳಲ್ಲಿ ದೇಶದಿಂದ ಗಡಿಪಾರು ಮಾಡಲಾಗುತ್ತದೆ. ನಿಮ್ಮ ತವರು ದೇಶ ನಿಮ್ಮ ಪಾಲಿಗೆ ಸುರಕ್ಷಿತವಾಗಿದ್ದರೆ ಅಲ್ಲಿಗೆ ಅಥವಾ ರುವಾಂಡಾದಂತಹ ಸುರಕ್ಷಿತ ಮೂರನೇ ದೇಶಕ್ಕೆ ನಿಮ್ಮನ್ನು ರವಾನಿಸುತ್ತೇವೆ.
ಒಮ್ಮೆ ನಿಮ್ಮನ್ನು ಇಲ್ಲಿಂದ ಹೊರ ಹಾಕಿದ ಬಳಿಕ ಅಮೆರಿಕಾ ಮತ್ತು ಆಸ್ಟ್ರೇಲಿಯಾಗಳಲ್ಲಿ ಮಾಡುವಂತೆ ನೀವು ಈ ದೇಶವನ್ನು ಎಂದಿಗೂ ಮರುಪ್ರವೇಶಿಸದಂತೆ ನಿಷೇಧಿಸಲಾಗುವುದು ಎಂದೂ ಸುನಕ್ ಹೇಳಿದ್ದಾರೆ. ಇದಕ್ಕಾಗಿ ಕರಡು ‘ಅಕ್ರಮ ವಲಸೆ ಮಸೂದೆ ’ಯನ್ನು ರೂಪಿಸಲಾಗಿದ್ದು, ಇದರಡಿ ಸಣ್ಣ ಬೋಟ್ಗಳಲ್ಲಿ ಇಂಗ್ಲಿಷ್ ಕಾಲುವೆಯನ್ನು ದಾಟುವ ಅಕ್ರಮ ವಲಸಿಗರನ್ನು ನಿರ್ಬಂಧಿಸಲಾಗುವುದು ಎಂದು ರಿಷಿ ಸುನಕ್ ಹೇಳಿದ್ದಾರೆ.
ಸರ್ಕಾರವು ನಿರಾಶ್ರಿತರಿಗೆ ಹೊಸ "ಸುರಕ್ಷಿತ ಮತ್ತು ಕಾನೂನು ಮಾರ್ಗಗಳನ್ನು" ಭರವಸೆ ನೀಡಿದ್ದು, ಆದರೆ ಇವುಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಬ್ರಿಟನ್ನಲ್ಲಿ ನೆಲೆಗೊಳ್ಳಲು ಅರ್ಹರಾಗಿರುವ ಕಾನೂನು ನಿರಾಶ್ರಿತರಿಗೆ ಶಾಸಕರು ವಾರ್ಷಿಕ ಕೋಟಾವನ್ನು ನಿಗದಿಪಡಿಸುತ್ತಾರೆ ಎನ್ನಲಾಗಿದೆ.
ಅಕ್ರಮ ವಲಸೆ ಮಸೂದೆಯ ಹೊಣೆ ಯಾರಿಗೆ?
ಬ್ರಿಟನ್ಗೆ ಅಕ್ರಮವಾಗಿ ಬರುವ ವಲಸಿಗರನ್ನು ಹತ್ತಿಕ್ಕಲು ಕರಡು ಕಾನೂನಿನ ಅಡಿಯಲ್ಲಿ ಹೊರಡಿಸಿರುವ ಈ ಹೊಸ ಶಾಸನದ ಜವಾಬ್ದಾರಿಯನ್ನು ಆಂತರಿಕ ಸಚಿವ ಸುಯೆಲ್ಲಾ ಬ್ರೆವರ್ಮನ್ಗೆ ನೀಡಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಅವರು ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ ಕಾರ್ಯವನ್ನು ನಿರ್ವಹಿಸುತ್ತಾರೆ ಎನ್ನಲಾಗಿದೆ.
ಯುಕೆ ಈ ಕ್ರಮ ಕೈಗೊಳ್ಳುತ್ತಿರುವುದರ ಹಿಂದಿನ ಕಾರಣವೇನು?
ಕಳೆದ ವರ್ಷ ಸಣ್ಣ ಬೋಟ್ಗಳ ಮೂಲಕ 45,000ಕ್ಕೂ ಅಧಿಕ ವಲಸಿಗರು ಆಗ್ನೇಯ ಇಂಗ್ಲೆಂಡ್ ಕರಾವಳಿಗಳನ್ನು ತಲುಪಿದ್ದಾರೆ. 2018ರಿಂದ ಈ ಕಳ್ಳಮಾರ್ಗ ಹೆಚ್ಚು ಜನಪ್ರಿಯವಾಗುತ್ತಿದ್ದು, ಅಕ್ರಮ ವಲಸಿಗರ ಸಂಖ್ಯೆಯಲ್ಲಿ ವಾರ್ಷಿಕ ಶೇ.60ರಷ್ಟು ಏರಿಕೆಯಾಗಿದೆ.
ಹಾಗೆಯೇ ಈ ವರ್ಷ ಶುರುವಾಗಿ ಇನ್ನೂ ಮೂರು ತಿಂಗಳಾಗಿಲ್ಲ ಆದಾಗ್ಲೇ ಬ್ರಿಟನ್ಗೆ 3,150 ಜನರು ಅಕ್ರಮವಾಗಿ ಬಂದಿದ್ದಾರೆ ಎಂದು ಅಂಕಿಅಂಶಗಳು ಹೇಳಿವೆ. ಅನೇಕ ವಲಸಿಗರು ನಿಜವಾದ ಆಶ್ರಯ ಅಗತ್ಯತೆಗಳಿಗಿಂತ ಹೆಚ್ಚಾಗಿ ಆರ್ಥಿಕ ಕಾರಣಗಳಿಗಾಗಿ ಬರುತ್ತಿದ್ದಾರೆ ಎಂದು ಸರ್ಕಾರ ಹೇಳುತ್ತದೆ. ಇನ್ನೂ ವರ್ಷದ ಅಂತ್ಯದ ವೇಳೆಗೆ 80,000 ದಾಟಬಹುದು ಮತ್ತು ಇದರಿಂದ ಯುಕೆಯ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಬಹುದು ಎಂದು ಆಂತರಿಕ ಮಂತ್ರಿ ಸುಯೆಲ್ಲಾ ಬ್ರಾವರ್ಮನ್ ಹೇಳಿದ್ದಾರೆ.
ಅಕ್ರಮ ವಲಸಿಗರಿಂದ ದೇಶದ ಆರ್ಥಿಕತೆಗೆ ಪೆಟ್ಟು
ಈ ವರ್ಷದ ಅಂತ್ಯದ ವೇಳೆಗೆ ನಿಯಮ ಉಲ್ಲಂಘಿಸಿ ದೇಶಕ್ಕೆ ಪ್ರವೇಶಿಸುವವರ ಸಂಖ್ಯೆ 80,000 ದಾಟಬಹುದು. ಇದು ಯುಕೆಯ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ವಸಲಿಗರಿಗೆ ಆಶ್ರಯ ನೀಡುವುದು ಯುಕೆ ತೆರಿಗೆದಾರರಿಗೆ ವಾರ್ಷಿಕವಾಗಿ £ 3 ಬಿಲಿಯನ್ ($3.55 ಶತಕೋಟಿ) ವೆಚ್ಚವಾಗುತ್ತಿದೆ ಎಂದು ಆಂತರಿಕ ಮಂತ್ರಿ ಸುಯೆಲ್ಲಾ ಬ್ರಾವರ್ಮನ್ ತಿಳಿಸಿದ್ದಾರೆ.
ಯುಕೆ ಎಷ್ಟು ಅಕ್ರಮ ವಲಸಿಗರನ್ನು ರುವಾಂಡಾಕ್ಕೆ ಕಳುಹಿಸಬಹುದು?
ಯುಕೆ ಸರ್ಕಾರವು ಈ ಹಿಂದೆ 1 ಜನವರಿ 2022ರ ನಂತರ ಅಕ್ರಮವಾಗಿ ಪ್ರವೇಶಿಸಿದವರನ್ನು ಸಂಖ್ಯೆಗಳ ಮೇಲೆ ಯಾವುದೇ ಮಿತಿಯಿಲ್ಲದೆ ವಾಪಾಸು ಕಳುಹಿಸಬಹುದು ಎಂದು ಹೇಳಿದೆ. ಅಂದರೆ ಎಷ್ಟು ಜನ ಅಕ್ರಮವಾಗಿ ಬಂದಿದ್ದಾರೋ ಅವರನ್ನೆಲ್ಲಾ ಗಡಿಪಾರು ಮಾಡುವ ಯೋಜನೆ ಇಟ್ಟುಕೊಂಡಿದೆ. ಪ್ರಾಯೋಗಿಕ ಅವಧಿಯಲ್ಲಿ 1,000 ಆಶ್ರಯ ಪಡೆಯುವವರನ್ನು ಪ್ರಕ್ರಿಯೆಗೊಳಪಡಿಸಬಹುದೆಂದು ರುವಾಂಡಾ ಹೇಳಿದೆ.
ಯೋಜನೆಗೆ ತಗಲುವ ವೆಚ್ಚ
ಈ ಯೋಜನೆಗಾಗಿ ಯುಕೆ ಇದುವರೆಗೆ ರುವಾಂಡನ್ ಸರ್ಕಾರಕ್ಕೆ £140m ಪಾವತಿಸಿದೆ. ಇತರ ವೆಚ್ಚಗಳು ರುವಾಂಡಾಕ್ಕೆ ವಿಮಾನಗಳು, ಆಹಾರ, ವಸತಿ, ಭಾಷಾಂತರಕಾರರಿಗೆ ಪ್ರವೇಶ ಮತ್ತು ಕಾನೂನು ಸಲಹೆಯನ್ನು ಒಳಗೊಂಡಿರುತ್ತದೆ. ಚಾರ್ಟರ್ ಫ್ಲೈಟ್ ಮೂಲಕ ಯುಕೆಯಿಂದ ಜನರನ್ನು ಕಳುಹಿಸಲು 2020 ರಲ್ಲಿ ಪ್ರತಿ ವ್ಯಕ್ತಿಗೆ £13,000ಕ್ಕಿಂತ ಹೆಚ್ಚು ವೆಚ್ಚವಾಗಿತ್ತು. ಯುಕೆಯ ಈ ಆಶ್ರಯ ವ್ಯವಸ್ಥೆ ಯೋಜನೆಗೆ ವರ್ಷಕ್ಕೆ £1.5bn ವೆಚ್ಚವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಶಾಸನ ಕಾನೂನುಬದ್ಧವಾಗಿದೆಯೇ?
ರುವಾಂಡಾ ಆಶ್ರಯ ಪಡೆಯುವವರಿಗೆ ಸುರಕ್ಷಿತ ತಾಣವಲ್ಲ ಮತ್ತು ಈ ಯೋಜನೆಯು ಮಾನವ ಹಕ್ಕುಗಳ ಕಾನೂನುಗಳಿಗೆ ವಿರುದ್ಧವಾಗಿದೆ ಎಂಬುವುದು ಕೆಲವರ ಅಭಿಪ್ರಾಯ. ಆದರೆ ಡಿಸೆಂಬರ್ನಲ್ಲಿ ಹೈಕೋರ್ಟ್ ಈ ಯೋಜನೆ ಕಾನೂನುಬದ್ಧವಾಗಿದೆ ಎಂದು ತೀರ್ಪು ನೀಡಿತ್ತು. ಈ ಮಸೂದೆಯನ್ನು ಟೀಕಿಸಿದ ಬ್ರಿಟನ್ ಮಾನವ ಹಕ್ಕುಗಳ ಆಯೋಗ, ಯುರೋಪಿಯನ್ ಕನ್ವೆನ್ಷನ್ (ECHR) ಅಡಿಯಲ್ಲಿ ಜನರನ್ನು ಚಿತ್ರಹಿಂಸೆ ಅಥವಾ ಇತರ ರೀತಿಯ ಅಮಾನವೀಯ ವರ್ತನೆಗೆ ಗುರಿಪಡಿಸುತ್ತಿದೆ ಎಂದಿದೆ.
ಇದನ್ನೂ ಓದಿ: Expensive Schools in India: ದೇಶದ ಅತ್ಯಂತ ದುಬಾರಿ ಶಾಲೆಗಳಿವು; ಇಲ್ಲಿನ ಫೀಸ್ ಕೇಳಿದ್ರೆ ಹುಬ್ಬೇರಿಸೋದು ಪಕ್ಕಾ
ನೂತನ ಕಾನೂನಿಗೆ ಟೀಕೆ
ನೂತನ ಕಾನೂನನ್ನು ಟೀಕಿಸಿರುವ ಮಾನವ ಹಕ್ಕು ಗುಂಪುಗಳು ಮತ್ತು ವಿರೋಧ ಪಕ್ಷಗಳು, ಯೋಜನೆಯು ನಿಷ್ಪರಿಣಾಮಕಾರಿಯಾಗಲಿದೆ ಮತ್ತು ಅನ್ಯಾಯವಾಗಿ ಅಸಹಾಯಕ ನಿರಾಶ್ರಿತರನ್ನು ಬಲಿಪಶು ಮಾಡುತ್ತದೆ ಎಂದು ರಿಷಿ ಸುನಕ್ ಅವರ ಹೊಸ ಶಾಸನವನ್ನು ಟೀಕಿಸಿದ್ದಾರೆ.
ಯುಕೆ ಈಗಾಗಲೇ ಗಡೀಪಾರು ಜಾರಿಗೊಳಿಸಲು ಹಲವು ಯೋಜನೆಗಳನ್ನು ಪ್ರಯತ್ನಿಸಿದೆ, ಕಳೆದ ವರ್ಷ ಕೆಲವು ಆಶ್ರಯ ಹುಡುಕುವವರನ್ನು ರುವಾಂಡಾಕ್ಕೆ ಸ್ಥಳಾಂತರಿಸಲು ಕಾರ್ಯಕ್ರಮವನ್ನು ಪ್ರಾರಂಭಿಸಿತು.
ಆದಾಗ್ಯೂ, ಯುರೋಪಿಯನ್ ಮಾನವ ಹಕ್ಕುಗಳ ನ್ಯಾಯಾಲಯದ ಆದೇಶದ ನಂತರ ಯೋಜನೆಯು ನೆಲಸಮಗೊಂಡ ನಂತರವೂ ಯುಕೆಯಿಂದ ರುವಾಂಡಾಗೆ ಒಂದೇ ಒಂದು ನಿರಾಶ್ರಿತರ ವಿಮಾನದ ಸೌಲಭ್ಯವೂ ಲಭ್ಯವಿರಲಿಲ್ಲ ಎಂದು ಹಲವರು ಟೀಕಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ