ಬೆಂಗಳೂರು: ರಾಜ್ಯದಲ್ಲಿ ನೂತನ ಸಿಎಂ (CM), ಡಿಸಿಎಂ (DCM) ಹಾಗೂ 8 ಸಚಿವರ (Ministers) ಪ್ರಮಾಣ ವಚನ ಸಮಾರಂಭ ನಡೆದಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah) ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಹುತೇಕರು ದೇವರು, ಅಂಬೇಡ್ಕರ್ (Ambedkar), ಬುದ್ಧ (Buddha), ಬಸವಣ್ಣ (Basavanna) ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ ಡಿಸಿಎಂ ಡಿಕೆ ಶಿವಕುಮಾರ್ ಮಾತ್ರ ವಿಶೇಷ ಎನ್ನುವಂತೆ ಬೇರೆಯದ್ದೇ ಹೆಸರು ಹೇಳಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಂದಹಾಗೆ ಅವರು ಪ್ರಮಾಣ ವಚನ ಸ್ವೀಕರಿಸಿದ್ದು ಗಂಗಾಧರ ಅಜ್ಜಯ್ಯನ (Gangadhara Ajjayya) ಹೆಸರಲ್ಲಿ! ಹಾಗಾದರೆ ಯಾರು ಈ ಗಂಗಾಧರ ಅಜ್ಜಯ್ಯ? ಇವರಿಗೂ ಡಿಕೆಶಿಗೂ ಇರುವ ನಂಟೇನು? ಈ ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿದೆ…
ಯಾರು ಈ ಗಂಗಾಧರ ಅಜ್ಜಯ್ಯ?
ಗಂಗಾಧರ ಅಜ್ಜಯ್ಯ ಅಂದರೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅತಿಯಾಗಿ ನಂಬುವ ಸ್ವಾಮೀಜಿ. ಈ ಹಿಂದೆಯೂ ಡಿಕೆಶಿ ಕಷ್ಟ ಬಂದಾಗ, ಸುಖದಲ್ಲಿ ಇದ್ದಾಗಲೆಲ್ಲ ಈ ಗಂಗಾಧರ ಅಜ್ಜಯ್ಯರನ್ನು ಸ್ಮರಿಸಿಕೊಂಡಿದ್ದಾರೆ.
ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕು ಕೇಂದ್ರದಿಂದ 15 ಕಿ.ಮಿ ದೂರದಲ್ಲಿದೆ ನೊಣವಿಕೆರೆ ಎಂಬ ಗ್ರಾಮ. ಈ ಗ್ರಾಮದ ಕಾಡಸಿದ್ದೇಶ್ವರ ಮಠ ಎಂಬ ಪುರಾತನ ಮಠವಿದೆ. ಇದರ ಪೂರ್ಣ ಹೆಸರು ಸೋಮೆಕಟ್ಟೆ ಕಾಡಸಿದ್ದೇಶ್ವರ ಮಠ. ಇದರ ಪೀಠಾಧಿಪತಿಯೇ ಗಂಗಾಧರ ಅಜ್ಜಯ್ಯ.
ಇದನ್ನೂ ಓದಿ: DCM: ಉಪಮುಖ್ಯಮಂತ್ರಿ ಅನ್ನೋದು ಅಧಿಕಾರವಿಲ್ಲದ ಅಲಂಕಾರಿಕ ಹುದ್ದೆಯೇ? ಡಿಸಿಎಂಗೆ ಯಾವ ಪವರ್ ಇರುತ್ತದೆ?
ಕಾಡಸಿದ್ದೇಶ್ವರ ಮಠದ ಇತಿಹಾಸ
ಹಿಂದೆ ಕಾಡಸಿದ್ದೇಶ್ವರರು ನಂದಿಯ ಮೇಲೆ ಸಂಚಾರಗೈಯುತ್ತಾ ಬಂದು, ನೊಣವಿನಕೆರೆಯ ದಕ್ಷಿಣ ಭಾಗದಲ್ಲಿರುವ ಕಾಡಿನಲ್ಲಿ ನೆಲೆಸಿದರಂತೆ. ಒಮ್ಮೆ ಕಾಡಸಿದ್ದೇಶ್ವರರು ತಪ್ಪಿಸ್ಸಿಗೆ ಕುಳಿತಿದ್ದಾಗ ಮುದಿಯಪ್ಪ ನಾಯಕ ಎಂಬ ಅರಸ ಬೇಟೆಯಾಡಲು ಬಂದು, ಇವರನ್ನು ಪ್ರಾಣಿ ಎಂದು ಭಾವಿಸಿ ಬಾಣ ಬಿಟ್ಟನಂತೆ. ಆದರೆ ಅವರಿಗೆ ಬಾಣತಾಗಿದರೂ ಏನೂ ಆಗಲಿಲ್ಲವಂತೆ. ಬಳಿಕ ಕಾಡಸಿದ್ದೇಶ್ವರರನ್ನು ನೋಡಿ ತಪ್ಪಿನ ಅರಿವಾಗಿ, ಮುದಿಯಪ್ಪ ನಾಯಕ ಕಣ್ಣೀರಿಟ್ಟನಂತೆ. ಕೊನೆಗೆ ಆತನನ್ನು ಕ್ಷಮಿಸಿದ ಕಾಡಸಿದ್ದೇಶ್ವರರು, ಅನುಗ್ರಹಿಸಿದರಂತೆ.
ಮುದಿಯಪ್ಪ ನಾಯಕ ಕಟ್ಟಿಸಿದ ಮಠ
ಮುಂದೆ ಆತನೇ ಮಠ ಹಾಗೂ ಗದ್ದುಗೆ ನಿರ್ಮಿಸಿಕೊಟ್ಟನಂತೆ. ಒಂದು ಮಧ್ಯ ರಾತ್ರಿ ಕಾಡಸಿದ್ದೇಶ್ವರರು ಸುವರ್ಣ ಪಲ್ಲಕ್ಕಿಯಲ್ಲಿ ಶ್ರೀಗಳನ್ನು ಹೊತ್ತುಕೊಂಡು ಗದ್ದುಗೆಗೆ ತಂದಾಗ, ಅಲ್ಲಿಕರ್ಪೂರ ದಗ್ಗನೆ ಹತ್ತಿಕೊಂಡಿತು. ಆಗ ಶ್ರೀಗಳು ಅಲ್ಲಿಂದ ಅದೃಶ್ಯರಾದರಂತೆ. ಇದೇ ಮಠದ ಮೂಲ ಗದ್ದುಗೆ ಎನ್ನಲಾಗಿದೆ.
800 ವರ್ಷಗಳ ಇತಿಹಾಸವಿರುವ ಮಠ
ಈ ಮಠಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆಯಂತೆ. ಪುರಾತನ ಕಾಲದಿಂದಲೂ ಆಧ್ಯಾತ್ಮಿಕತೆ, ಧರ್ಮ ಪ್ರಸಾರ, ವಿದ್ಯೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಠ ಸೇವೆ ಸಲ್ಲಿಸುತ್ತಿದೆ.
ಭವಿಷ್ಯ ಹೇಳುವ ಕರಿವೃಷಭ ದೇಶಿಕೇಂದ್ರ ಸ್ವಾಮೀಜಿ
ಸದ್ಯ ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ಮಠದ ಪೀಠಾಧಿಪತಿಯಾಗಿದ್ದಾರೆ. ಕರಿವೃಷಭ ಸ್ವಾಮೀಜಿ ಭವಿಷ್ಯ ಹೇಳುವುದರಲ್ಲಿ ಸಿದ್ದಹಸ್ತರು ಅಂತ ಖ್ಯಾತಿ ಪಡೆದಿದ್ದಾರೆ.
ಘಟಾನುಘಟಿಗಳು ಮಠದ ಭಕ್ತರು
ಈ ಮಠಕ್ಕೆ ಜನಸಾಮಾನ್ಯರಷ್ಟೇ ಅಲ್ಲದೇ ಚಿತ್ರನಟರು, ಉದ್ಯಮಿಗಳು, ರಾಜಕಾರಣಿಗಳು ಸೇರಿದಂತೆ ಹಲವು ಗಣ್ಯರು ಭಕ್ತರಾಗಿದ್ದಾರೆ. ಮಾಜಿ ಸಿಎಂ ಎಸ್ಎಂ ಕೃಷ್ಣ, ಡಿಕೆ ಶಿವಕುಮಾರ್ ಸೇರಿದಂತೆ ಹಲವು ರಾಜಕಾರಣಿಗಳು ಮಠಕ್ಕೆ ಆಗಾಗ ಭೇಟಿ ನೀಡುತ್ತಾರೆ. ಈ ಹಿಂದೆ ಎಸ್.ಎಂ.ಕೃಷ್ಣ ಮಹಾರಾಷ್ಟ್ರ ಸಿಎಂ ರಾಜ್ಯಪಾಲರಾಗಿದ್ದಾಗ ಮಠಕ್ಕೆ ಭೇಟಿ ನೀಡಿದ್ದರು. ಸ್ವಾಮೀಜಿ ಅವರು ಹೇಳುವ ಭವಿಷ್ಯವನ್ನು ಎಲ್ಲರು ನಂಬುತ್ತಾರೆ.
ಡಿ.ಕೆ. ಶಿವಕುಮಾರ್ ಕೂಡ ಹಲವು ವರ್ಷಗಳಿಂದ ಈ ಮಠಕ್ಕೆ ಭೇಟಿ ನೀಡುತ್ತ ಬಂದಿದ್ದಾರೆ. ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳುವ ಮುನ್ನ ಈ ಮಠದ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಅವರ ಸಲಹೆ ಪಡೆಯುತ್ತಾರೆ.
ಇದನ್ನೂ ಓದಿ: DK Shivakumar: ಬೆದರದ ಬೆಚ್ಚದ ಕನಕಪುರ 'ಬಂಡೆ'! ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್
ಜೈಲಿಂದ ಬಂದ ಬಳಿಕ ಇಲ್ಲಿಗೆ ಬಂದಿದ್ದ ಡಿಕೆಶಿ
ಈ ಹಿಂದೆ ಐಟಿ, ಇಡಿ ದಾಳಿಗೊಳಗಾಗಿ ಬಂಧನಕ್ಕೂ ಒಳಗಾದ ಡಿ.ಕೆ. ಶಿವಕುಮಾರ್ ಇದೇ ಮಠದ ಅಜ್ಜಯ್ಯನ ನೆನೆಸಿಕೊಂಡಿದ್ದರು. ಜೈಲಿಂದ ಬಿಡುಗಡೆಯಾದ ನಂತರ ಅವರು ಆಗಮಿಸಿದ್ದು ಈ ಮಠಕ್ಕೆ. ಬಂಡೆಯಂತೆ ಕಷ್ಟಗಳು ಕರಗಿ ಮುಖ್ಯಮಂತ್ರಿಯೂ ಆಗುತ್ತೀರಿ ಎಂದು ಸ್ವಾಮೀಜಿ ಡಿಕೆಶಿಗೆ ಅಭಯ ನೀಡಿದ್ದರು. ಇದಾದ ಬಳಿಕ ಮಗಳ ಮದುವೆ ಸೇರಿದಂತೆ ಹತ್ತು ಹಲವು ಕಾರಣಕ್ಕೆ ಅವರು ಸ್ವಾಮೀಜಿಯನ್ನು ಭೇಟಿ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ