ರಾಜ್ಯದಲ್ಲಿ ಭ್ರಷ್ಟಚಾರ (Corruption) ತಡೆಯಲು ಅಂತ ರಾಜ್ಯ ಸರ್ಕಾರದಿಂದಲೇ (State Government) ಭ್ರಷ್ಟಾಚಾರ ನಿಗ್ರಹ ದಳ (Anti Corruption Bureau) ಅಥವಾ ಎಸಿಬಿಯನ್ನು (ACB) ರಚಿಸಲಾಗಿತ್ತು. ಆದರೆ ಎಸಿಬಿ ರಚನೆಯನ್ನೇ ರದ್ದು ಮಾಡಿ ಹೈಕೋರ್ಟ್ (High Court) ನ್ಯಾಯಪೀಠ ಮಹತ್ವದ ಆದೇಶ ನೀಡಿದೆ. ಲೋಕಾಯುಕ್ತ (Lokayukta) ಪೊಲೀಸ್ ಠಾಣೆ ಸ್ಥಾನಮಾನ ರದ್ದು ವಿಚಾರಕ್ಕೆ ಸಂಬಂಧಿಸಿ ಎಸಿಬಿ ರಚನೆ ಪ್ರಶ್ನಿಸಿದ್ದ ಪಿಐಎಲ್ (PIL) ವಿಚಾರಣೆ ನಡೆಸಿದ್ದ ನ್ಯಾ. ಬಿ. ವೀರಪ್ಪ ಹಾಗೂ ನ್ಯಾ. ಕೆ.ಎಸ್. ಹೇಮಲೇಖಾ ಅವರಿದ್ದ ಪೀಠ ಈ ಮಹತ್ವದ ತೀರ್ಪು ನೀಡಿದೆ. ಜೊತೆಗೆ ಎಸಿಬಿಯನ್ನು ಲೋಕಾಯುಕ್ತದಡಿ ತರುವಂತೆ ತೀರ್ಪಿನಲ್ಲಿ ಹೇಳಿದೆ. 2016ರಲ್ಲಿ ಲೋಕಾಯುಕ್ತ ಪೊಲೀಸ್ ಠಾಣೆ ಸ್ಥಾನಮಾನ ತೆಗೆದು ಎಸಿಬಿ ರಚಿಸಿದ್ದ ಅಂದಿನ ಸಿದ್ದರಾಮಯ್ಯ (Siddaramaiah) ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಹಾಗಾದರೆ ಎಸಿಬಿ ಅಂದರೆ ಏನು? ಲೋಕಾಯುಕ್ತ ಎಂದರೆ ಏನು? ಎಸಿಬಿ ರದ್ದತಿಯಿಂದ ಲೋಕಾಯುಕ್ತಕ್ಕೆ ಹೆಚ್ಚಿನ ಬಲ ಬರುತ್ತದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಓದಿ…
ಅಂದಿನ ಕಾಂಗ್ರೆಸ್, ಇಂದಿನ ಬಿಜೆಪಿ ಸರ್ಕಾರಕ್ಕೆ ಮುಖಭಂಗ
2016ರಲ್ಲಿ ಲೋಕಾಯುಕ್ತ ಸಂಸ್ಥೆಯ ಅಧಿಕಾರ ಮೊಟಕುಗೊಳಿಸಿ ಅಂದಿನ ಸಿದ್ದರಾಮಯ್ಯ ಸರ್ಕಾರ ಎಸಿಬಿಯನ್ನು ರಚಿಸಿತ್ತು. ಇದು ಭಾರೀ ಟೀಕೆ ಹಾಗೂ ವಿರೋಧಕ್ಕೆ ಕಾರಣವಾಗಿತ್ತು. ಅಂದು ಅದನ್ನು ತೀವ್ರವಾಗಿ ವಿರೋಧಿಸಿದ್ದ ರಾಜ್ಯ ಬಿಜೆಪಿ ನಾಯಕರು, ತಾವು ಅಧಿಕಾರಕ್ಕೆ ಬಂದರೆ ಎಸಿಬಿ ರದ್ದು ಮಾಡಿ, ಲೋಕಾಯುಕ್ತವನ್ನು ಬಲಪಡಿಸುವ ಭರವಸೆ ನೀಡಿತ್ತು. ಜೆಡಿಎಸ್ ನಾಯಕೂ ಇದೇ ಮಾತನ್ನಾಡಿದ್ದರು. ಆದರೆ ನಂತರ ಬಂತ ಸಮ್ಮಿಶ್ರ ಸರ್ಕಾರ ಹಾಗೂ ಈಗಿನ ಬಿಜೆಪಿ ಸರ್ಕಾರ ಈ ಬಗ್ಗೆ ಗಮನನವನ್ನೇ ಹರಿಸಿರಲಿಲ್ಲ. ಇದೀಗ ಹೈಕೋರ್ಟ್ ಆದೇಶದಿಂದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರೂ ಪಕ್ಷಕ್ಕೆ ಮುಖಭಂಗ ಆದಂತಾಗಿದೆ.
ಲೋಕಾಯುಕ್ತ ಎಂದರೇನು?
ಕರ್ನಾಟಕ ಲೋಕಾಯುಕ್ತ ದೇಶಕಂಡ ಅತ್ಯಂತ ಸಶಕ್ತ ತನಿಖಾ ಸಂಸ್ಥೆಯಾಗಿದೆ. ಕರ್ನಾಟಕ ಸರ್ಕಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲು ಮತ್ತು ವರದಿ ಮಾಡಲು ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸಾರ್ವಜನಿಕ ಕುಂದುಕೊರತೆಗಳನ್ನು ಪರಿಹರಿಸಲು ಇದನ್ನು 1984ರಲ್ಲಿ ಸ್ಥಾಪಿಸಲಾಯಿತು. ಒಂದು ಕಾಲದಲ್ಲಿ ದೇಶದ ಅತ್ಯಂತ ಶಕ್ತಿಶಾಲಿ ಸಂಸ್ಥೆ ಎಂದು ಪರಿಗಣಿಸಲಾಗಿತ್ತು.
ಸ್ವತಂತ್ರ ತನಿಖೆಯ ಅಧಿಕಾರ ಹೊಂದಿದ್ದ ಲೋಕಾಯುಕ್ತ
ಲೋಕಾಯುಕ್ತ ಸಂಸ್ಥೆ ನ್ಯಾಯಾಲಯ ಹಾಗೂ ಚುನಾವಣಾ ಆಯೋಗದ ರೀತಿಯಲ್ಲೇ ಸ್ವಾಯತ್ತತೆ ಪಡೆದ ಸಂಸ್ಥೆಯಾಗಿದೆ. ಇದಕ್ಕೆ ಯಾರ ನಿಯಂತ್ರಣವೂ ಇಲ್ಲ. ಲೋಕಾಯುಕ್ತ ಸಂಸ್ಥೆಗೆ ಸಿಎಂ, ಸಚಿವರು, ಶಾಸಕರು ಹಾಗೂ ರಾಜ್ಯ ಸರ್ಕಾರಿ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವ ಅಧಿಕಾರವಿದೆ. ಸದ್ಯ ಲೋಕಾಯುಕ್ತ ನ್ಯಾಯಮೂರ್ತಿಗಳಾಗಿ ಭೀಮನಗೌಡ ಸಂಗನ ಗೌಡ ಪಾಟೀಲ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ಎಸಿಬಿ ಎಂದರೇನು?
ರಾಜ್ಯದಲ್ಲಿನ ಭ್ರಷ್ಟಾಚಾರವನ್ನು ತಡೆಯಲು ಸರ್ಕಾರ ರಚಿಸಿದ್ದ ಒಂದು ಸಂಸ್ಥೆ. ಇದು ಸರ್ಕಾರದ ಅಧೀನದಲ್ಲಿ ಇರುವ ಸಂಸ್ಥೆ. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆಯಾಗಿದೆ. ಎಸಿಬಿ ಸಂಸ್ಥೆಯು ತನ್ನ ತನಿಖೆಯನ್ನು ಸರಕಾರಿ ಅಧಿಕಾರಿಗಳ ಮಟ್ಟಕ್ಕೆ ಸೀಮಿತಗೊಳಿಸಿತ್ತು. ರಾಜಕಾರಣಿಗಳ ವಿರುದ್ಧದ ದೂರುಗಳ ತನಿಖೆ ಕಷ್ಟ ಕಷ್ಟ ಎನ್ನುವಂತಾಗಿತ್ತು.
ಹಲ್ಲುಕಿತ್ತ ಹಾವಿನಂತಾಗಿದ್ದ ಲೋಕಾಯುಕ್ತ!
ಎಸಿಬಿ ರಚನೆಗೂ ಮುನ್ನ ಲೋಕಾಯುಕ್ತ ಸಂಸ್ಥೆ ತನಗೆ ಬಂದ ದೂರುಗಳ ತನಿಖೆಯನ್ನು ತನ್ನದೇ ಪೊಲೀಸ್ ವಿಭಾಗದಿಂದ ಮಾಡುತ್ತಿತ್ತು. ಲೋಕಾಯುಕ್ತ ಸಂಸ್ಥೆಗೆ 1988ರ ಭ್ರಷ್ಟಾಚಾರ ತಡೆ ಕಾಯ್ದೆಯ ಪ್ರಕಾರ ಈ ಅಧಿಕಾರ ಲಭ್ಯವಾಗಿತ್ತು. ಆದ್ರೆ, 2016ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ನಿರ್ಧಾರದ ಅನ್ವಯ ಎಸಿಬಿ ರಚನೆಯಾದ ಬಳಿಕ, ಲೋಕಾಯುಕ್ತ ಸಂಸ್ಥೆಗೆ ತನಿಖೆ ನಡೆಸುವ ಅಧಿಕಾರ ಇಲ್ಲವಾಯ್ತು. ಅದು ಕೇವಲ ದೂರುಗಳನ್ನು ಮಾತ್ರ ಸ್ವೀಕರಿಸಿ ಎಸಿಬಿಗೆ ತನಿಖೆ ನಡೆಸಲು ಸೂಚಿಸಬೇಕಾಗುತ್ತಿತ್ತು.
ಎಸಿಬಿ ವಿರುದ್ಧ ನಿರಂತರ ಆರೋಪ
ಎಸಿಬಿ ವಿರುದ್ಧವೇ ಅನೇಕ ರೀತಿಯ ದೂರುಗಳು ಬಂದಿದ್ದವು. ಈ ಹಿಂದೆಯೇ ಹೈಕೋರ್ಟ್ ಕೂಡ ಎಸಿಬಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಎಸಿಬಿಯಲ್ಲಿ ದಾಖಲಾದ ದೂರುಗಳ ತನಿಖೆ ವಿಚಾರವಾಗಿಯೂ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದವು. ಪ್ರಮುಖ ಪ್ರಕರಣಗಳಲ್ಲೇ ಆರೋಪಿಗಳಿಗೆ ಅನುಕೂಲವಾಗುವಂಥಾ ಸನ್ನಿವೇಶಗಳು ನಿರ್ಮಾಣವಾಗಿದ್ದ ಆರೋಪವೂ ಕೇಳಿ ಬಂದಿತ್ತು. ಇದೀಗ ಎಸಿಬಿಯನ್ನೇ ರದ್ದು ಮಾಡಿ ನ್ಯಾಯಪೀಠ ಆದೇಶಿಸಿದೆ.
ಎಸಿಬಿಯಲ್ಲಿ ಈವರೆಗೆ 350ಕ್ಕೂ ಹೆಚ್ಚು ಎಫ್ಐಆರ್
2016 ಮಾರ್ಚ್ 19ರಂದು ಎಸಿಬಿ ಅಸ್ತಿತ್ವಕ್ಕೆ ಬಂದಿದ್ದು, ಈವರೆಗೆ 350ಕ್ಕೂ ಹೆಚ್ಚು ಎಫ್ಐಆರ್ಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಿದೆ. 105 ಪ್ರಕರಣಗಳಲ್ಲಿ ‘ಬಿ’ ವರದಿಯನ್ನೂ ಎಸಿಬಿ ಸಲ್ಲಿಸಿದೆ.
ವೆಂಕಟಾಚಲ, ಸಂತೋಷ್ ಹೆಗ್ಡೆಯವರಿಂದ ಹೆಸರು
ಕರ್ನಾಟಕ ಲೋಕಾಯುಕ್ತಕ್ಕೆ ಹೆಸರು ತಂದುಕೊಟ್ಟವರು ಪ್ರಮುಖವಾಗಿ ನ್ಯಾ. ವೆಂಕಟಾಚಲ ಮತ್ತು ನ್ಯಾ. ಸಂತೋಷ್ ಕುಮಾರ್ ಹೆಗ್ಡೆ. ನ್ಯಾಯಮೂರ್ತಿ ವೆಂಕಟಾಚಲ ಅವರು ಲೋಕಾಯುಕ್ತದ ಶಕ್ತಿಯನ್ನು ತೋರಿಸಿದ್ದರೆ, ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರು ಅದರ ಪರಾಕ್ರಮವನ್ನು ಜಗಜ್ಜಾಹೀರುಗೊಳಿಸಿದ್ದರು. ನ್ಯಾ.ಸಂತೋಷ ಹೆಗ್ಡೆ ಅವರು ಲೋಕಾಯುಕ್ತರಾಗಿದ್ದಾಗ ಬಲಿಷ್ಠ ತಂಡ ಅವರ ಜತೆಗಿತ್ತು.
ಇದನ್ನೂ ಓದಿ: Amarnath Flash Flood: ಮೇಘಸ್ಫೋಟದಿಂದ ಸಂಭವಿಸಿಲ್ಲ ಅಮರನಾಥ ದುರಂತ, ಬಯಲಾಯ್ತು ಅಸಲಿ ಕಾರಣ!
ಇದುವರೆಗೂ 5294 ಪ್ರಕರಣಗಳು
1986 ರಿಂದ ಆರಂಭವಾದ ಲೋಕಾಯುಕ್ತ ಸಂಸ್ಥೆಯು 5,294 ಪ್ರಕರಣಗಳನ್ನು ವಿಲೇವಾರಿ ಮಾಡಿದೆ. ಈ ಪೈಕಿ 1,046 ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದ್ದರೆ, 3,636 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾಗಿದ್ದಾರೆ. 240 ಪ್ರಕರಣಗಳನ್ನು ಕೈಬಿಡಲಾಗಿದ್ದು, ಆರೋಪಿಗಳು ಮೃತಪಟ್ಟ ಕಾರಣಕ್ಕೆ 266 ಪ್ರಕರಣಗಳು ಖುಲಾಸೆಯಾಗಿವೆ. 106 ಪ್ರಕರಣಗಳಲ್ಲಿ ಎಫ್ಐಆರ್ ರದ್ದಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ