• ಹೋಂ
  • »
  • ನ್ಯೂಸ್
  • »
  • Explained
  • »
  • Padma Awards: ಪದ್ಮ ಪ್ರಶಸ್ತಿಗಳು ಏಕೆ ಶ್ರೇಷ್ಠ? ಈ ಅವಾರ್ಡ್‌ಗೆ ಸಾಧಕರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ?

Padma Awards: ಪದ್ಮ ಪ್ರಶಸ್ತಿಗಳು ಏಕೆ ಶ್ರೇಷ್ಠ? ಈ ಅವಾರ್ಡ್‌ಗೆ ಸಾಧಕರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ?

ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳು

ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳು

ಈ ಬಾರಿ ಕರ್ನಾಟಕದ 8 ಸಾಧಕರಿಗೆ ಪದ್ಮ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಹಾಗಾದರೆ ಈ ಪದ್ಮ ಪ್ರಶಸ್ತಿ ಎಂದರೇನು? ಇದರಲ್ಲಿ ಎಷ್ಟು ವಿಧಗಳಿವೆ? ಈ ಗೌರವಕ್ಕೆ ಸಾಧಕರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ? ಈ ಎಲ್ಲಾ ಪ್ರಶ್ನೆಗಳು ನಿಮ್ಮನ್ನೂ ಕಾಡುತ್ತಿರಬಹುದು. ಇದಕ್ಕೆ ಉತ್ತರ ಇಲ್ಲಿದೆ ಓದಿ…

ಮುಂದೆ ಓದಿ ...
  • Share this:

ನಿನ್ನೆ ಪದ್ಮ ಪ್ರಶಸ್ತಿಗಳ (Padma awards) ಘೋಷಣೆಯಾಗಿದೆ. ವಿವಿಧ ಕ್ಷೇತ್ರಗಳ 106 ಮಂದಿ ಸಾಧಕರಿಗೆ (achievers) ಪದ್ಮ ಸರಣಿಯ ವಿವಿಧ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ (SM Krishna) ಅವರಿಗೆ ಪದ್ಮ ವಿಭೂಷಣ (Padma Vibhushan), ಇನ್ಫೋಸಿಸ್ ಫೌಂಡೇಶನ್‌ನ ಸುಧಾಮೂರ್ತಿ (Infosys Sudha Murthy), ಖ್ಯಾತ ಸಾಹಿತಿ ಎಸ್‌ಎಲ್‌ ಭೈರಪ್ಪ (SL Bhyrappa) ಅವರಿಗೆ ಪದ್ಮಭೂಷಣ (Padma Bhushana) ಹಾಗೂ  ಕೊಡಗಿನ ಜಾನಪದ ನರ್ತಕಿ ರಾಣಿ ಮಾಚಯ್ಯ, ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಖಾದರ್ ವಲ್ಲಿ ದೂದೇಕುಲ, ಕಲೆ ವಿಭಾಗದಲ್ಲಿ ನಾಡೋಜ ಪಿಂಡಿಪಾಪನಹಳ್ಳಿ ಮುನಿ ವೆಂಕಟಪ್ಪ ಮತ್ತು ಐ ಶಾ ರಶೀದ್ ಅಹಮದ್ ಕ್ವಾದ್ರಿ, ಪುರಾತತ್ವ ಶಾಸ್ತ್ರ ವಿಭಾಗದಲ್ಲಿ ಸುಬ್ಬರಾಮನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ (Padmashree) ಲಭಿಸಿದೆ. ಒಟ್ಟು ನಾಡಿನ 8 ಸಾಧಕರಿಗೆ ಪದ್ಮ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಹಾಗಾದರೆ ಈ ಪದ್ಮ ಪ್ರಶಸ್ತಿ ಎಂದರೇನು? ಇದರಲ್ಲಿ ಎಷ್ಟು ವಿಧಗಳಿವೆ? ಈ ಗೌರವಕ್ಕೆ ಸಾಧಕರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ? ಈ ಎಲ್ಲಾ ಪ್ರಶ್ನೆಗಳು ನಿಮ್ಮನ್ನೂ ಕಾಡುತ್ತಿರಬಹುದು. ಇದಕ್ಕೆ ಉತ್ತರ ಇಲ್ಲಿದೆ ಓದಿ…


ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳು


ಪದ್ಮ ಪ್ರಶಸ್ತಿಗಳನ್ನು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಎಂದೇ ಕರೆಯಲಾಗುತ್ತದೆ. ಇದರಲ್ಲಿ ನಾಲ್ಕು ವಿಭಾಗಗಳಿವೆ. ಈ ಪೈಕಿ ಅತ್ಯುತ್ತಮ ಪ್ರಶಸ್ತಿ ಎಂದರೆ ಭಾರತ ರತ್ನ. ಅದರ ಬಳಿಕ ಪದ್ಮ ವಿಭೂಷಣ, ಪದ್ಮ ಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗಳಿವೆ.


ಪದ್ಮ ಪ್ರಶಸ್ತಿಗಳು


ಯಾವ ಸಾಧಕರಿಗೆ ಯಾವ ಪ್ರಶಸ್ತಿ?
'ಪದ್ಮ ವಿಭೂಷಣ' ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿ ನೀಡಲಾಗುತ್ತದೆ. ಉನ್ನತ ಶ್ರೇಣಿಯ ವಿಶಿಷ್ಟ ಸೇವೆಗಾಗಿ 'ಪದ್ಮಭೂಷಣ' ಮತ್ತು ಯಾವುದೇ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಗಾಗಿ 'ಪದ್ಮಶ್ರೀ' ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಪ್ರತಿ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಈ ಪ್ರಶಸ್ತಿಗಳನ್ನು ಪ್ರಕಟಿಸಲಾಗುತ್ತದೆ.


ಎಸ್ಎಂ ಕೃಷ್ಣ


ಇದನ್ನೂ ಓದಿ: Brain Mapping Test: ಬೆಂಗಳೂರಿಗೆ ಬಂತು ಬ್ರೇನ್ ಮ್ಯಾಪಿಂಗ್ ಟೆಸ್ಟ್! ಅಪರಾಧಿಗಳಿಗೆ ಸಿಂಹಸ್ವಪ್ನವೇ ಈ ಹೊಸ ತಂತ್ರಜ್ಞಾನ?


ಪ್ರಶಸ್ತಿ ಘೋಷಣೆ, ವಿತರಣೆ ಯಾವಾಗ?


ಪ್ರತಿ ವರ್ಷ ಗಣರಾಜ್ಯೋತ್ಸವದ ಮುನ್ನಾ ದಿನ ಅಂದರೆ ಜನವರಿ 25ರಂದು ಪದ್ಮ ಸರಣಿಯ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ. ಪ್ರಶಸ್ತಿಗಳನ್ನು ಭಾರತದ ರಾಷ್ಟ್ರಪತಿಗಳು ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡುತ್ತಾರೆ. ವಿಶೇಷ ಅಂದರೆ ಪ್ರಶಸ್ತಿ ಪುರಸ್ಕೃತರು ಯಾವುದೇ ನಗದು ಬಹುಮಾನವನ್ನು ಪಡೆಯುವುದಿಲ್ಲ. ಆದರೆ ಅವರು ಸಾರ್ವಜನಿಕ ಮತ್ತು ಸರ್ಕಾರಿ ಕಾರ್ಯಕ್ರಮಗಳಲ್ಲಿ ಧರಿಸಬಹುದಾದ ಪದಕವನ್ನು ಹೊರತುಪಡಿಸಿ ರಾಷ್ಟ್ರಪತಿಗಳಿಂದ ಸಹಿ ಮಾಡಿದ ಪ್ರಮಾಣಪತ್ರವನ್ನು ಪಡೆಯುತ್ತಾರೆ. ಇನ್ನು ಪ್ರಶಸ್ತಿಗಳು ಶೀರ್ಷಿಕೆಯ ಪ್ರದಾನವಲ್ಲ ಮತ್ತು ಪ್ರಶಸ್ತಿ ಪುರಸ್ಕೃತರು ಅವುಗಳನ್ನು ತಮ್ಮ ಹೆಸರುಗಳಿಗೆ ಪೂರ್ವಪ್ರತ್ಯಯ ಅಂದರೆ ಹೆಸರಿನ ಮುಂದೆ. ಅಥವಾ ಪ್ರತ್ಯಯವಾಗಿ ಅಂದರೆ ಹೆಸರಿನ ಹಿಂದೆ ಬಳಸುವುದಿಲ್ಲ ಎಂದು ನಿರೀಕ್ಷಿಸಲಾಗಿದೆ.

ಸುಧಾಮೂರ್ತಿ


ಪದ್ಮ ಪ್ರಶಸ್ತಿಯ ಇತಿಹಾಸ


ಎರಡು ಪ್ರಶಸ್ತಿಗಳಾದ ಭಾರತ ರತ್ನ ಮತ್ತು ಪದ್ಮವಿಭೂಷಣವನ್ನು ಮೊದಲ ಬಾರಿಗೆ 1954 ರಲ್ಲಿ ‘ಭಾರತದ ಅತ್ಯುನ್ನತ ನಾಗರಿಕ ಗೌರವ’ಗಳಾಗಿ ಸ್ಥಾಪಿಸಲಾಯಿತು. ಅದರ ಜೊತೆಗೆ ವರ್ಗ 1, ವರ್ಗ 2 ಹಾಗೂ ವರ್ಗ 3 ಅಂತ ಪ್ರಶಸ್ತಿ ವಿಂಗಡಿಸಲಾಯಿತು. 1955 ರಲ್ಲಿ ಇವುಗಳನ್ನು ಕ್ರಮವಾಗಿ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಎಂದು ಹೆಸರಿಸಲಾಯಿತು.


ಎಸ್.ಎಲ್. ಭೈರಪ್ಪ


ಇಲ್ಲಿಯವರೆಗೆ 45 ಮಂದಿಗೆ ಭಾರತ ರತ್ನ ಪ್ರಶಸ್ತಿ


ಉಳಿದ ಪ್ರಶಸ್ತಿಗಳನ್ನು ಪ್ರತಿ ವರ್ಷ ನೀಡಿದರೆ, ಭಾರತ ರತ್ನವನ್ನು ಪ್ರತೀ ವರ್ಷ ನೀಡಿದ ಉದಾಹರಣೆಗಳಿಲ್ಲ. ಭಾರತ ರತ್ನವನ್ನು ಅಸಾಧಾರಣ ಪ್ರಶಸ್ತಿ ಅಂತ ಪರಿಗಣಿಸಲಾಗಿದ್ದು, ಇಲ್ಲಿಯವರೆಗೆ ಕೇವಲ 45 ಸಾಧಕರಿಗೆ ಮಾತ್ರ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ. ಇನ್ನು ಪದ್ಮ ಸರಣಿ ಪ್ರಶಸ್ತಿಗಳನ್ನು ವಾರ್ಷಿಕವಾಗಿ ಅರ್ಹ ಸಾಧಕರಿಗೆ ನೀಡಲಾಗುತ್ತದೆ. 1978, 1979 ಮತ್ತು 1993 ಮತ್ತು 1997ರಲ್ಲಿ ಹೊರತುಪಡಿಸಿ,  ನಡುವಿನ ಅಡಚಣೆಗಳನ್ನು ಹೊರತುಪಡಿಸಿ, ಪ್ರತಿ ವರ್ಷ ಗಣರಾಜ್ಯೋತ್ಸವದ ಮುನ್ನಾದಿನದಂದು ಸಾಧಕರ ಹೆಸರನ್ನು ಪ್ರಕಟಿಸಲಾಗುತ್ತದೆ.


ಒಬ್ಬರಿಗೆ ಎಷ್ಟು ಬಾರಿ ಪದ್ಮ ಪ್ರಶಸ್ತಿ ನೀಡಬಹುದು?


ಆಯಾ ಶ್ರೇಣಿಯಲ್ಲಿ ಒಬ್ಬರಿಗೆ ಒಂದೇ ಬಾರಿ ಪದ್ಮ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಉನ್ನತ ಪ್ರಶಸ್ತಿಯನ್ನು ನೀಡಬಹುದಾದರೂ ಇದು ಹಿಂದಿನ ಪ್ರಶಸ್ತಿಯನ್ನು ಪ್ರದಾನ ಮಾಡಿದ ಐದು ವರ್ಷಗಳ ನಂತರ ಮಾತ್ರ ನೀಡಬೇಕಾಗುತ್ತದೆ. ಅಂದರೆ ಪದ್ಮಶ್ರೀ ಪುರಸ್ಕೃತರು ಪದ್ಮಭೂಷಣ ಅಥವಾ ವಿಭೂಷಣವನ್ನು ಪಡೆಯಬಹುದು. ಆದರೆ ಅವರು ಪದ್ಮಶ್ರೀ ಪಡೆದ 5 ವರ್ಷಗಳ ಬಳಿಕ ಮಾತ್ರ ಅವರಿಗೆ ಇನ್ನೊಂದು ಶ್ರೇಣಿಯ ಪದ್ಮ ಪ್ರಶಸ್ತಿಗಳನ್ನು ನೀಡಬೇಕು.


ಯಾವ ವಿಭಾಗದಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ?


ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಈ ಗೌರವಗಳನ್ನು ನೀಡಲಾಗುತ್ತದೆ. ಕಲೆ, ಸಮಾಜ ಕಾರ್ಯ, ಸಾರ್ವಜನಿಕ ವ್ಯವಹಾರಗಳು, ವಿಜ್ಞಾನ ಮತ್ತು ಎಂಜಿನಿಯರಿಂಗ್, ವ್ಯಾಪಾರ ಮತ್ತು ಕೈಗಾರಿಕೆ, ಔಷಧ, ಸಾಹಿತ್ಯ ಮತ್ತು ಶಿಕ್ಷಣ, ನಾಗರಿಕ ಸೇವೆ ಮತ್ತು ಕ್ರೀಡೆಗಳನ್ನು ಒಳಗೊಂಡಿರುವ ಕೆಲವು ಆಯ್ದ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಭಾರತೀಯ ಸಂಸ್ಕೃತಿಯ ಪ್ರಚಾರ, ಮಾನವ ಹಕ್ಕುಗಳ ರಕ್ಷಣೆ, ವನ್ಯಜೀವಿ ರಕ್ಷಣೆ ಮುಂತಾದವುಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ವಿದೇಶಿಯರಿಗೂ ವಿವಿಧ ಸರಣಿಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ.


ಎಲ್ಲರೂ ಪ್ರಶಸ್ತಿ ಪಡೆಯಬಹುದು, ಆದರೆ?


ಯಾವುದೇ ಧರ್ಮ, ಜನಾಂಗ, ಉದ್ಯೋಗ, ಸ್ಥಾನ ಅಥವಾ ಲಿಂಗದ ಭೇದವಿಲ್ಲದೇ ಎಲ್ಲಾ ವ್ಯಕ್ತಿಗಳು ಈ ಪ್ರಶಸ್ತಿಗಳಿಗೆ ಅರ್ಹರಾಗಿರುತ್ತಾರೆ. ಆದಾಗ್ಯೂ, ವೈದ್ಯರು ಮತ್ತು ವಿಜ್ಞಾನಿಗಳನ್ನು ಹೊರತುಪಡಿಸಿ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಪ್ರಸ್ತುತ ಕೆಲಸ ಮಾಡುವವರು ಸೇರಿದಂತೆ ಸರ್ಕಾರಿ ನೌಕರರು ಈ ಪ್ರಶಸ್ತಿಗಳಿಗೆ ಅರ್ಹರಲ್ಲ.


ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡುವುದು ಹೇಗೆ?


ಭಾರತದ ಯಾವುದೇ ನಾಗರಿಕನು ಈ ಪ್ರಶಸ್ತಿಗೆ ಯಾರು ಅರ್ಹರು ಎಂದು ತನ್ನ ದೃಷ್ಟಿಕೋನದಲ್ಲಿ ತೀರ್ಮಾನ ಮಾಡಿ,  ಸಾಧಕರು ಅನಿಸಿಕೊಂಡವರನ್ನು ನಾಮನಿರ್ದೇಶನ ಮಾಡಬಹುದು. ಒಬ್ಬನು ತನ್ನನ್ನು ತಾನೇ ನಾಮನಿರ್ದೇಶನ ಮಾಡಬಹುದು. ಎಲ್ಲಾ ನಾಮನಿರ್ದೇಶನಗಳನ್ನು ಆನ್‌ಲೈನ್‌ನಲ್ಲಿ ಮಾಡಲಾಗುತ್ತದೆ, ಅಲ್ಲಿ ನಾಮನಿರ್ದೇಶನಗೊಂಡ ವ್ಯಕ್ತಿ ಅಥವಾ ಸಂಸ್ಥೆಯ ವಿವರಗಳೊಂದಿಗೆ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಸಂಭಾವ್ಯ ಪ್ರಶಸ್ತಿ ಪುರಸ್ಕೃತರು ಮಾಡಿದ ಕೆಲಸವನ್ನು ವಿವರಿಸುವ 800 ಪದಗಳ ಪ್ರಬಂಧವನ್ನು ಪರಿಗಣಿಸಲು ನಾಮನಿರ್ದೇಶನಕ್ಕಾಗಿ ಸಲ್ಲಿಸಬೇಕು.


ನಾಮ ನಿರ್ದೇಶನ ಮಾಡುವುದು ಯಾವಾಗ?


ಸರ್ಕಾರವು ಪ್ರತಿ ವರ್ಷ ಮೇ 1 ಮತ್ತು ಸೆಪ್ಟೆಂಬರ್ 15ರ ನಡುವೆ ನಾಮನಿರ್ದೇಶನಗಳಿಗಾಗಿ ಪದ್ಮ ಪ್ರಶಸ್ತಿಗಳ ಪೋರ್ಟಲ್ ಅನ್ನು ತೆರೆಯುತ್ತದೆ. ಇದು ನಾಮನಿರ್ದೇಶನಗಳನ್ನು ಕಳುಹಿಸಲು ವಿವಿಧ ರಾಜ್ಯ ಸರ್ಕಾರಗಳು, ರಾಜ್ಯಪಾಲರು, ಕೇಂದ್ರಾಡಳಿತ ಪ್ರದೇಶಗಳು, ಕೇಂದ್ರ ಸಚಿವಾಲಯಗಳು ಮತ್ತು ವಿವಿಧ ಇಲಾಖೆಗಳಿಗೆ ಪತ್ರ ಬರೆಯುತ್ತದೆ.


ಸಾಧಕರ ನಾಮ ನಿರ್ದೇಶನ ಪರಿಶೀಲಿಸಲು ಸಮಿತಿ


ಪದ್ಮ ಪ್ರಶಸ್ತಿಗಳಿಗಾಗಿ ಸ್ವೀಕರಿಸಿದ ಎಲ್ಲಾ ನಾಮನಿರ್ದೇಶನಗಳನ್ನು ಪದ್ಮ ಪ್ರಶಸ್ತಿ ಸಮಿತಿಯ ಮುಂದೆ ಇರಿಸಲಾಗುತ್ತದೆ. ಇದನ್ನು ಪ್ರತಿ ವರ್ಷ ಪ್ರಧಾನ ಮಂತ್ರಿಯವರು ರಚಿಸುತ್ತಾರೆ. ಪದ್ಮ ಪ್ರಶಸ್ತಿಗಳ ಸಮಿತಿಯು ಕ್ಯಾಬಿನೆಟ್ ಕಾರ್ಯದರ್ಶಿಯ ನೇತೃತ್ವದಲ್ಲಿರುತ್ತದೆ ಮತ್ತು ಗೃಹ ಕಾರ್ಯದರ್ಶಿ, ರಾಷ್ಟ್ರಪತಿಗಳ ಕಾರ್ಯದರ್ಶಿ ಮತ್ತು ನಾಲ್ಕರಿಂದ ಆರು ಗಣ್ಯ ವ್ಯಕ್ತಿಗಳನ್ನು ಸದಸ್ಯರನ್ನಾಗಿ ಒಳಗೊಂಡಿದೆ. ಸಮಿತಿಯ ಶಿಫಾರಸುಗಳನ್ನು ಅನುಮೋದನೆಗಾಗಿ ಭಾರತದ ಪ್ರಧಾನಿ ಮತ್ತು ರಾಷ್ಟ್ರಪತಿಗಳಿಗೆ ಸಲ್ಲಿಸಲಾಗುತ್ತದೆ.




ನಾಮ ನಿರ್ದೇಶಿತರ ಸಾಧನೆ ಪರಿಶೀಲನೆ


ಒಮ್ಮೆ ಪ್ರಾಥಮಿಕ ಆಯ್ಕೆ ಮಾಡಿದ ನಂತರ, ಆಯ್ಕೆಯಾದ ಪ್ರಶಸ್ತಿ ಪುರಸ್ಕೃತರ ಪೂರ್ವಾಪರಗಳನ್ನು ಕೇಂದ್ರೀಯ ಏಜೆನ್ಸಿಗಳ ಸೇವೆಗಳನ್ನು ಬಳಸಿಕೊಂಡು ಪರಿಶೀಲಿಸಲಾಗುತ್ತದೆ. ಆ ವ್ಯಕ್ತಿಯ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣ ಇಲ್ಲವೇ ಎಂದು ಖಚಿತಪಡಿಸಿಕೊಳ್ಳಲಾಗುತ್ತದೆ. ನಂತರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿ ಪ್ರಕಟಿಸಲಾಗುತ್ತದೆ.


ಇದನ್ನೂ ಓದಿ: Assembly Election-2022: ಚುನಾವಣೆ ಹೊಸ್ತಿಲಲ್ಲಿ ಮತ್ತದೇ ಹಳೆ ವರಸೆ, ಮತದಾರರಿಗೆ 'ಉಚಿತ ಭಾಗ್ಯ'ಗಳ ಭರವಸೆ!


ಪದ್ಮ ಪ್ರಶಸ್ತಿಗಳನ್ನು ರದ್ದು ಮಾಡಬಹುದೇ?


ಪ್ರಶಸ್ತಿ ಸ್ವೀಕರಿಸುವ ಮುನ್ನ ಅಥವಲಾ ಪ್ರಶಸ್ತಿ ಸ್ವೀಕರಿಸಿದ ನಂತರ ಸಾಧಕರು ಶಿಕ್ಷಾರ್ಹ ಅಪರಾಧ ಮಾಡಿದರೆ ಭಾರತದ ರಾಷ್ಟ್ರಪತಿಗಳು ಪದ್ಮ ಪ್ರಶಸ್ತಿಯನ್ನು ರದ್ದುಗೊಳಿಸಬಹುದು.

Published by:Annappa Achari
First published: