• ಹೋಂ
  • »
  • ನ್ಯೂಸ್
  • »
  • Explained
  • »
  • Explained: ಬಿಸಿಲ ಝಳಕ್ಕೆ ಮುಂಬೈನಲ್ಲಿ 11 ಮಂದಿ ಸಾವು; ಹೀಟ್ ಸ್ಟ್ರೋಕ್​​ನಿಂದ ಎಚ್ಚರಿಕೆಯಿಂದಿರೋದು ಹೇಗೆ?

Explained: ಬಿಸಿಲ ಝಳಕ್ಕೆ ಮುಂಬೈನಲ್ಲಿ 11 ಮಂದಿ ಸಾವು; ಹೀಟ್ ಸ್ಟ್ರೋಕ್​​ನಿಂದ ಎಚ್ಚರಿಕೆಯಿಂದಿರೋದು ಹೇಗೆ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಮಹಾರಾಷ್ಟ್ರ ಭೂಷಣ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 600 ಜನರು ಬಿಸಿಗಾಳಿಯಿಂದ ಬಳಲಿ 11 ಮಂದಿ ಸಾವನ್ನಪ್ಪಿದ್ದಾರೆ, 50 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಆರೋಗ್ಯ ತಜ್ಞರು ಅದರ ಕಾರಣಗಳು, ಲಕ್ಷಣಗಳು, ತಡೆಗಟ್ಟುವಿಕೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ

  • Share this:

ಇತ್ತೀಚೆಗೆ ಈ ಹಿಂದೆಗಿಂತಲೂ ಬಿಸಿಲಿನ  ಪ್ರಮಾಣ ಹೆಚ್ಚಾಗಿದೆ ಅಂತಾನೇ ಹೇಳ್ಬಹುದು. ಆದರಲ್ಲು ವರ್ಷದ ಮೂರು ಋತುವು (Season) ಸಮಪ್ರಮಾಣದಲ್ಲಿರುತ್ತಿದ್ದ ಬೆಂಗಳೂರಿನಲ್ಲಿಯೇ ಪ್ರಸ್ತುತ ಬಿಸಿಲ ಬೇಗೆಗೆ ಜನ ತತ್ತರಿಸಿ ಹೋಗಿದ್ದಾರೆ. ಇನ್ನು ಬೇಸಿಗೆಯಲ್ಲಿ ತುಸು ಹೆಚ್ಚೇ ಬಿಸಿಲಿರುವ ಮುಂಬೈ (Mumbai), ಮಹಾರಾಷ್ಟ್ರದಂತಹ (Maharashtra) ನಗರಗಳಲ್ಲಿ ಬೇಸಿಗೆಯ ತಾಪಮಾನ ಎಷ್ಟಿರುತ್ತೆ ಅಂತಾ ಕೇಳೋದೆ ಬೇಡ. ಇನ್ನು ಈ ಬಿಸಿಲಿನ ಬೇಗೆಗೆ ಕೆಲವೊಂದು ಸಮಸ್ಯೆಗಳು ಉಂಟಾಗಿದ್ದು, ಹಾಗೆಯೇ ಕೆಲವು ನಗರಗಳಲ್ಲಿ ಸಾವನ್ನಪ್ಪಿದ್ದಾರೆ.


ಬಿಸಿಲ ಝಳಕ್ಕೆ 11 ಮಂದಿ ಸಾವು
ತಾಪಮಾನಕ್ಕೆ ಬಳಲಿ ಬೆಂಡಾಗುತ್ತಿರುವ ಜನರ ಸ್ಥಿತಿಗೆ ಮೊನ್ನೆ ಭಾನುವಾರ (ಏಪ್ರಿಲ್ 16) ನಡೆದ ಘಟನೆ ಸಾಕ್ಷಿಯಾಗಿದೆ. ನವಿ ಮುಂಬೈನಲ್ಲಿ ಸರ್ಕಾರದಿಂದ ಸಾಮಾಜಿಕ ಕಾರ್ಯಕರ್ತ ಅಪ್ಪಾಸಾಹೇಬ್ ಧರ್ಮಾಧಿಕಾರಿ ಅವರಿಗೆ ಮಹಾರಾಷ್ಟ್ರ ಭೂಷಣ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದಿತ್ತು.


ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹಾಗೂ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭವನ್ನು ವೀಕ್ಷಿಸಲು ಸಾವಿರಾರು ಜನ ಕೂಡ ಭಾಗಿಯಾಗಿದ್ದರು. ಅಂದು ಅಲ್ಲಿ ತಾಪಮಾನ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.


ಇದನ್ನೂ ಓದಿ: 'ಕಾಮನ್ ಮ್ಯಾನ್‌'ನಿಂದ 'ಸಿಎಂ' ಹುದ್ದೆಯವರೆಗೆ ಬಸವರಾಜ ಬೊಮ್ಮಾಯಿ ಹೆಜ್ಜೆಗುರುತು

ಕಾರ್ಯಕ್ರಮದಲ್ಲಿ ಜನರಿಗೆ ನೆರಳಿನ ಅವಕಾಶವಿಲ್ಲದ ಕಾರಣ ಈ ಬಿಸಿಲಿನ ಝಳ ತಾಳಲಾರದೇ ಕಾರ್ಯಕ್ರಮದಲ್ಲಿ ನೆರೆದಿದ್ದ 11 ಮಂದಿ ಸಾವನ್ನಪ್ಪಿದ್ದರು ಮತ್ತು 20 ಮಂದಿ ವಿವಿಧ ಆರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಲ್ಲಿ ಮೂವರು ತೀವ್ರ ಅಸ್ವಸ್ಥರಾಗಿದ್ದಾರೆ.


ಬೆಳಗ್ಗೆ 8 ರಿಂದ ಮಧ್ಯಾಹ್ನ 1 ರವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 2 ಮಿಲಿಯನ್ ಜನರು ಭಾಗವಹಿಸಿದ್ದರು ಎಂದು ಹೇಳಲಾಗಿದೆ.


ನಾನಾ ಸಮಸ್ಯೆ ತರುತ್ತದೆ ವಾತವರಣದ ತಾಪಮಾನ


ಸಾಮಾನ್ಯವಾಗಿ ಮಾರ್ಚ್‌ ತಿಂಗಳಿನಿಂದ ಮೇ ತಿಂಗಳ ಅಂತ್ಯದವರೆಗೆ ಬಿಸಿಲು ಜೋರಾಗಿರುತ್ತದೆ. ಆದರೆ ಈ ವರ್ಷ ಬಿಸಿಲಿನ ಪ್ರತಾಪ ಇನ್ನೂ ಜೋರಿದೆ. ಬೇಸಿಗೆಯ ಬಿಸಿಲು, ತಾಪಮಾನ ಇವೆಲ್ಲಾ ನಿರ್ಜಲಿಕರಣ, ತಲೆಸುತ್ತು, ತಲೆನೋವು ಹೀಗೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.



ಸಾಂಕೇತಿಕ ಚಿತ್ರ

ಬೇಸಿಗೆಯಲ್ಲಿ ಹೈಪರ್ಥರ್ಮಿಯಾ ಅಥವಾ ಶಾಖಾಘಾತ ಉಂಟಾಗುವುದು ಸಾಮಾನ್ಯ,. ಹಾಗಾದರೆ ಈ ಶಾಖದ ಹೊಡೆತ ಹೇಗೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಶಾಖದ ಹೊಡೆತದ ಸಮಯದಲ್ಲಿ ದೇಹದಲ್ಲಿ ಏನೆಲ್ಲಾ ಆಗುತ್ತದೆ ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಯಾವುವು ಎಂದು ನೋಡೋಣ.


ಏನಿದು ಶಾಖದ ಹೊಡೆತ? ದೇಹದ ಮೇಲೆ ಇದರ ಪರಿಣಾಮ ಏನು?
ಸೂರ್ಯನ ಹೊಡೆತ ಅಥವಾ ಶಾಖಾಘಾತ ಬೇಸಿಗೆಯ ಒಂದು ಆಘಾತಕಾರಿ ಆರೋಗ್ಯ ಸಮಸ್ಯೆ.ದೇಹವು ಅತಿಯಾದ ತಾಪಕ್ಕೆ ಸಿಲುಕುವುದು ಹಾಗೂ ತಕ್ಷಣಕ್ಕೆ ದೇಹತಾಪ ತಣ್ಣಗಾಗಲು ಸಾಧ್ಯವೇ ಆಗದಿದ್ದಾಗ ಈ ಸಮಸ್ಯೆ ಉಂಟಾಗುತ್ತದೆ. ಹೀಟ್ ಸ್ಟ್ರೋಕ್ ಅನ್ನು ವೈದ್ಯಕೀಯ ತುರ್ತುಸ್ಥಿತಿ ಎಂದು ಪರಿಗಣಿಸಲಾಗಿದ್ದು, ತಕ್ಷಣದ ಚಿಕಿತ್ಸೆ ಅಗತ್ಯವಿದೆ ಎನ್ನುತ್ತಾರೆ ವೈದ್ಯರು.


ದೇಹವು ಬೆವರನ್ನು ಹೊರಹಾಕಲು ವಿಫಲವಾದಾಗ ಮತ್ತು ಆವಿಯಾಗುವಿಕೆಯಿಂದ ಶಾಖವನ್ನು ಕಳೆದುಕೊಳ್ಳಲು ಸಾಧ್ಯವಾಗದಿದ್ದಾಗ, ದೇಹದಲ್ಲಿ ತಾಪಮಾನ ಹೆಚ್ಚಳವಾಗುತ್ತದೆ.ದೇಹವು ತಣ್ಣಗಾಗಲು ಸಾಧ್ಯವಾಗದೇ ಇದ್ದಾಗ, ದೇಹದ ತಾಪಮಾನವು ಕೆಲವು ನಿಮಿಷಗಳಲ್ಲಿ 106 ಡಿಗ್ರಿ ಫ್ಯಾರನ್‌ಹೀಟ್‌ಗೆ ತಲುಪಬಹುದು. ಇದು ಸಾವು ಸೇರಿದಂತೆ ಗಂಭೀರ ಆರೋಗ್ಯ ಪರಿಣಾಮಗಳನ್ನು ಉಂಟುಮಾಡುತ್ತದೆ ಎನ್ನುತ್ತಾರೆ ವೈದ್ಯರು.


ಶಾಖಾಘಾತದ ಕೆಲವು ರೋಗಲಕ್ಷಣಗಳು
ಈ ಹೀಟ್‌ ಸ್ಟ್ರೋಕ್‌ ಉಂಟಾದಲ್ಲಿ ವ್ಯಕ್ತಿಗಳು ಆಯಾಸ, ತಲೆತಿರುಗುವಿಕೆ,ಪ್ರಜ್ಞೆ ತಪ್ಪುವುದು, ತಲೆನೋವು, ವಾಕರಿಕೆ, ವಾಂತಿ, ಉಸಿರಾಟದಲ್ಲಿ ಏರಿಳಿತ ಹೈಪೊಟೆನ್ಷನ್ (ಕಡಿಮೆ ರಕ್ತದೊತ್ತಡ) ಮತ್ತು ಟಾಕಿಕಾರ್ಡಿಯಾ (ಹೃದಯದ ಬಡಿತ ಹೆಚ್ಚಳ)ದಂತಹ ಆರೋಗ್ಯದ ಏರು-ಪೇರುಗಳನ್ನು ಅನುಭವಿಸುತ್ತಾರೆ. ಈ ಸ್ಥಿತಿ ಕಂಡುಬಂದಲ್ಲಿ ಒಂಚೂರು ತಡಮಾಡದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು.


ಭಾನುವಾರ ಮುಂಬೈನಲ್ಲಿ ತಾಪಮಾನ ಎಷ್ಟಿತ್ತು?
ಶಾಖದ ಹೊಡತ ಬಗ್ಗೆ ವಿವರಿಸಿದ ಐಎಂಡಿ "ಗುಣಾತ್ಮಕವಾಗಿ, ಶಾಖದ ತರಂಗವು ಗಾಳಿಯ ಉಷ್ಣತೆಯ ಸ್ಥಿತಿಯಾಗಿದ್ದು ಇದು ಮಾನವ ದೇಹಕ್ಕೆ ಮಾರಕವಾಗುತ್ತದೆ" ಎಂದಿದೆ.


ಕರಾವಳಿ ಪ್ರದೇಶ (ಮುಂಬೈ ಸೇರಿ)ದಂತಹ ಶಾಖದ ತರಂಗಕ್ಕಾಗಿ IMD ಕೆಲ ಮಾನದಂಡಗಳನ್ನು ನೀಡಿದೆ. "ಗರಿಷ್ಠ ತಾಪಮಾನ ನಿರ್ಗಮನವು ಸಾಮಾನ್ಯಕ್ಕಿಂತ 4.5 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚು ಇದ್ದಾಗ, ನಿಜವಾದ ಗರಿಷ್ಠ ತಾಪಮಾನವು 37 ಡಿಗ್ರಿ ಸೆಲ್ಸಿಯಸ್ ಅಥವಾ ಹೆಚ್ಚಿನದಾಗಿರುತ್ತದೆ ಎಂದು ಐಎಂಡಿ ತಿಳಿಸಿದೆ.



ಸಾಂಕೇತಿಕ ಚಿತ್ರ

ಮುಂಬೈನ ಸಾಂತಾಕ್ರೂಜ್ ವೀಕ್ಷಣಾಲಯದಲ್ಲಿ ಭಾನುವಾರ ಗರಿಷ್ಠ ತಾಪಮಾನ 34.1 ಡಿಗ್ರಿ ದಾಖಲಾಗಿದ್ದರೆ, ಥಾಣೆ-ಬೇಲಾಪುರ ಇಂಡಸ್ಟ್ರೀಸ್ ಅಸೋಸಿಯೇಷನ್‌ನ ಹವಾಮಾನ ವೀಕ್ಷಣಾಲಯದಲ್ಲಿ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಖಾರ್ಘರ್‌ಗೆ ಸ್ಥಳೀಯ ಡೇಟಾವನ್ನು ನೀಡುವ ಯಾವುದೇ IMD ವೀಕ್ಷಣಾಲಯ ಅಥವಾ ಸ್ವಯಂಚಾಲಿತ ಹವಾಮಾನ ಕೇಂದ್ರ (AWS) ಪನ್ವೆಲ್ (ನವಿ ಮುಂಬೈ) ನಲ್ಲಿ ಇಲ್ಲ ಎಂದು IMD ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಕೆಲವರು “ಮಹಾರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕ ಮತ್ತು ಗುಜರಾತ್‌ನ ಕೆಲವು ಭಾಗಗಳಿಂದ ಆಗಮಿಸಿದ ಕೆಲವರು ಎರಡು ದಿನಗಳ ಕಾಲ ಮೈದಾನದಲ್ಲಿ ಇದ್ದರು. ಭಾನುವಾರ ಮಧ್ಯಾಹ್ನ, ಲಕ್ಷಾಂತರ ಜನರು ರಕ್ಷಣೆಯಿಲ್ಲದೆ ನೇರ ಸೂರ್ಯನ ಬೆಳಕಿನಲ್ಲಿ ಕುಳಿತಿದ್ದರು. ಇದರಿಂದ ಸಮಸ್ಯೆ ಉಂಟಾಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.


ಕಾರ್ಯಕ್ರಮಕ್ಕೆ ಬಂದವರು ಅಸ್ವಸ್ಥವಾಗಿದ್ದು ಏಕೆ?
ತೆರೆದ ಮೈದಾನವಾಗಿದ್ದು, ಅಲ್ಲಿ ಯಾವುದೇ ನೆರಳಿನ ವ್ಯವಸ್ಥೆ ಇರಲಿಲ್ಲ. ಶಾಖಕ್ಕೆ ದೀರ್ಘಕಾಲದವರೆಗೆ ಒಡ್ಡಿಕೊಂಡಿರುವುದರ ಪರಿಣಾಮ ಇದು ಸಂಭವಿಸಿರಬಹುದು. ಕಾರ್ಯಕ್ರಮಕ್ಕೆ ಹಾಜರಾಗಲು ನೆರೆಯ ಜಿಲ್ಲೆಗಳಾದ ಥಾಣೆ ಮತ್ತು ಪಾಲ್ಘರ್‌ಗಳಿಂದ ಅನೇಕ ಜನ ಬಂದಿದ್ದರು. ಪ್ರಯಾಣ ಮತ್ತು ಬಿಸಿಲು ಅವರ ಬಳಲಿಕೆಯನ್ನು ಹೆಚ್ಚಿಸಿದ್ದು, ಸಾವಿಗೂ ಕಾರಣಾಗಿರಬಹುದು ವೈದ್ಯರು ಹೇಳಿದ್ದಾರೆ.


ಅಷ್ಟೇ ಅಲ್ಲದೇ ಕೆಲವು ಔಷಧಿಗಳು ದೇಹದ ಉಷ್ಣತೆಯನ್ನು ನಿಯಂತ್ರಿಸುವ ಸಾಮರ್ಥ್ಯಕ್ಕೆ ಅಡ್ಡಿಪಡಿಸಬಹುದು. ಮದ್ಯಪಾನ ಸೇವನೆಯೂ ಸಾವಿಗೆ ಕಾರಣವಾಗಿರಬಹುದು ಎಂದು ವೈದ್ಯಕೀಯ ವಲಯ ಅಭಿಪ್ರಾಯ ಪಟ್ಟಿದೆ.


ಈ ಬಗ್ಗೆ ನಿಖರವಾದ ಮೌಲ್ಯಮಾಪನವನ್ನು ಮಾಡಲು ನಾವು ವ್ಯಕ್ತಿಯ ಪ್ರಯಾಣ ಮತ್ತು ವೈದ್ಯಕೀಯ ಇತಿಹಾಸವನ್ನು ಪರಿಶೀಲಿಸಬೇಕಾಗಿದೆ ಎಂದು ವೈದ್ಯರು ಹೇಳಿದರು. "ವಯಸ್ಸಾದ ರೋಗಿಗಳು, ಅಧಿಕ ಕೊಲೆಸ್ಟ್ರಾಲ್ ಹೊಂದಿರುವ ರೋಗಿಗಳು ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಶಾಖದ ಹೊಡೆತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು" ಎಂದು ವೈದ್ಯರು ಸ್ಪಷ್ಟನೆ ನೀಡಿದ್ದಾರೆ.


ತಾಪಮಾನ ಹೆಚ್ಚಾಗಿದ್ದಾಗ ಹೊರಗೆ ಹೋಗುವಾಗ ಏನೆಲ್ಲಾ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು?




  • ಹೈಡ್ರೇಟೆಡ್ ಆಗಿರಿ. ಬಾಯಾರಿಕೆ ಇಲ್ಲದಿದ್ದರೂ ಸಾಧ್ಯವಾದಷ್ಟು ಹೆಚ್ಚಾಗಿ ನೀರು ಕುಡಿಯಿರಿ.ಹೊರಗೆ ಹೋಗುವಾಗ ಮರೆಯದೇ ನೀರನ್ನು ಕೊಂಡೊಯ್ಯಿರಿ.

  • ಮೈತುಂಬಾ ಬಟ್ಟೆ ಧರಿಸಿ. ಸಾಧ್ಯವಾದಷ್ಟು ತಿಳಿ ಬಣ್ಣದ ಸಡಿಲವಾಗ ಹತ್ತಿ ಬಟ್ಟೆಗಳನ್ನು ಧರಿಸಿ.

  •  ಸನ್ ಗ್ಲಾಸ್, ಛತ್ರಿ ಮತ್ತು ಟೋಪಿಗಳಂತಹ ಮುನ್ನೆಚ್ಚರಿಕೆಗಳನ್ನು ಬಳಸಿ.

  • ನಿಮ್ಮ ಆರೋಗ್ಯದ ಸಮಸ್ಯೆ ಬಗ್ಗೆ ತಿಳಿದಿರಲಿ. ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ.

  •  ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್‌ನಂತಹ ತಂಪು ಪಾನೀಯಗಳನ್ನು ತಪ್ಪಿಸಿ. ಇವುಗಳ ಬದಲಿಗೆ ನೀರು, ಹಣ್ಣಿನ ರಸ, ಎಳನೀರನ್ನು ಕುಡಿಯಿರಿ. ಹೊರಗೆ ಹೋಗುವಾಗ ಸಹ ಓಆರ್‌ಎಸ್‌ ಮತ್ತು ನೀರನ್ನು ಒಯ್ಯಿರಿ.

  • ಅಧಿಕ ಪ್ರೊಟೀನ್ ಇರುವ ಆಹಾರವನ್ನು ತಿನ್ನಬೇಡಿ.

  • ನಿಮ್ಮ ತಲೆಯ ಮೇಲೆ ಒದ್ದೆಯಾದ ಬಟ್ಟೆಯನ್ನು ಹಾಕಿಕೊಳ್ಳಿ


ಯಾರಾದರೂ ಶಾಖಾಘಾತಕ್ಕೆ ಒಳಗಾದರೆ ಏನು ಮಾಡಬೇಕು?ಈ ಸ್ಥಿತಿ ನಿಮ್ಮ ಹತ್ತಿರ ಇದ್ದವರಲ್ಲಿ ಕಂಡುಬಂದರೆ ತಕ್ಷಣಕ್ಕೆ ಸೂಕ್ತ ಚಿಕಿತ್ಸೆ ಕೊಡಿಸುವುದು ಅವಶ್ಯ ಎನ್ನುತ್ತಾರೆ ಡಾ. ನಿಖಿಲ್‌ ವಾರ್ಗೆ. ಜೊತೆಗೆ ಕೆಲ ಮುನ್ನೆಚ್ಚರಿಕ್‌ ಕ್ರಮಗಳ ಬಗ್ಗೆಯೂ ವಿವರಿಸಿದ್ದಾರೆ ನಿಖಿಲ್.




  • ತಕ್ಷಣಕ್ಕೆ ವೈದ್ಯರ ಬಳಿ ಹೋಗುವುದು

  • ಅಸ್ವಸ್ಥರಾದ ವ್ಯಕ್ತಿಯನ್ನು ತಕ್ಷಣಕ್ಕೆ ನೆರಳು ಇರುವ ತಂಪಾದ ಜಾಗಕ್ಕೆ ಕರೆದೊಯ್ದು ವಿಶ್ರಾಂತಿ ನೀಡಬೇಕು.

  • ಆತ ಹಾಕಿರುವ ಬಟ್ಟೆ ಬಿಗಿಯಾಗಿದ್ದರೆ ತಕ್ಷಣ ಅದನ್ನು ಬದಲಾಯಿಸಬೇಕು. ಸಾಧ್ಯವಾದಷ್ಟು ಗಾಳಿ ಬರುವ ಜಾಗದಲ್ಲಿ ಕೂರಿಸಿ.

  •  ದೇಹವನ್ನು ತಣ್ಣೀರಿನಲ್ಲಿ ಒರೆಸಬೇಕು

  • ವ್ಯಕ್ತಿಯ ಎಚ್ಚರದಲ್ಲಿದ್ದರೆ ನೀರು ಕುಡಿಸಬೇಕು.

  • ವೈದ್ಯರ ಬಳಿ ಹೋಗುವವರೆಗೆ ಉಸಿರಾಟ ಹಾಗೂ ಹೃದಯ ಬಡಿತದ ಮೇಲ್ವಿಚಾರಣೆ ಮಾಡಬೇಕು.



ಬೇಸಿಗೆಯಲ್ಲಿ ಕಾಣಿಸುವ ಸಾಮಾನ್ಯ ಕಾಯಿಲೆಗಳನ್ನು ಅಸಡ್ಡೆ ಮಾಡಬಾರದು. ಇದರಿಂದ ಅಪಾಯ ಹೆಚ್ಚುವ ಸಾಧ್ಯತೆ ಇದೆ. ಬೇಸಿಗೆಯಲ್ಲಿ ಎಲ್ಲರನ್ನೂ ಬಾಧಿಸುವ ಸಮಸ್ಯೆ ಎಂದರೆ ನಿರ್ಜಲೀಕರಣ. ಹೀಗಾಗಿ ಜನ ಮನೆಯಲ್ಲಿದ್ದರೂ ಅಥವಾ ಹೊರಗೆ ಹೋದರೂ ಕೂಡ ಹೆಚ್ಚೆಚ್ಚು ನೀರು ಕುಡಿಯಬೇಕು. ಅನಾರೋಗ್ಯ ಸಮಸ್ಯೆ ಇದ್ದರೆ ಆದಷ್ಟು ಬಿಸಿಲಿನಿಂದ ರಕ್ಷಿಸಿಕೊಳ್ಳುವ ಪ್ರಯತ್ನ ಮಾಡಿ.

top videos
    First published: