ಶ್ರಾವಣ (Shravan) ಮಾಸ ಅಂದ್ರೆನೇ ಹಬ್ಬಗಳ ಮಾಸ ಎನ್ನುವಂತೆ ಇರುತ್ತೆ. ಒಂದು ತಿಂಗಳುಗಳ ಕಾಲ ಪೂಜೆ, ಪುನಸ್ಕಾರ, ವ್ರತಗಳು ನಡೆಯುತ್ತಲೇ ಇರುತ್ತವೆ. ಶ್ರಾವಣ ಮಾಸದಲ್ಲಿ ಎಲ್ಲಾ ದಿನಗಳು ಒಳ್ಳೆಯ ದಿನಗಳೇ (Good Days) ಆಗಿರುತ್ತವಂತೆ, ಈ ಮಾಸದಲ್ಲಿ ಶಿವನ (Lord Shiva) ಕೃಪೆ ಪ್ರತಿ ದಿನದ ಮೇಲೆ ಇರುತ್ತಂತೆ. ಒಂದೊಂದು ದಿನವೂ ಒಂದೊಂದು ದೇವರ ಆರಾಧನೆ ಮಾಡ್ತಾರೆ. ಅದರಲ್ಲೂ ಶ್ರಾವಣ ಸೋಮವಾರ (Monday) ಶುಭ ದಿನ. ಈ ದಿನ ಶಿವನಿಗೆ ವಿಶೇಷ (Special) ಪೂಜೆ, ಆರಾಧಿಸಿದ್ರೆ ಒಳ್ಳೆಯದಾಗುತ್ತೆ. ಇನ್ನು ಕೆಲವರು ಉಪವಾಸದ ವ್ರತ ಮಾಡುತ್ತಾರೆ. ಇದರಿಂದ ಕುಟುಂಬದವರಿಗೆ ಒಳ್ಳೆಯದಾಗುತ್ತೆ. ಶಂಕರ ದೇವರನ್ನು ಪೂಜಿಸಲು ಶ್ರಾವಣ ತಿಂಗಳು ಅತ್ಯುತ್ತಮವಾದುದು ಎನ್ನುವ ನಂಬಿಕೆಯಿದೆ.
ಲೋಕವನ್ನು ಕಾಯುತ್ತಾನೆ ಶಿವ
ಶ್ರಾವಣ ಮಾಸ ಅತ್ಯಂತ ಮಂಗಳಕರ ಮಾಸ ಎಂದು ಕರೆಯಲಾಗುವುದು. ಈ ಮಾಸವೂ ಶಿವನಿಗೆ ಸಮರ್ಪಣೆಯಾಗಿದ್ದು, ಸೋಮವಾರವೂ ಆರಾಧನೆಗೆ ವಿಶೇಷ ದಿನವಾಗಿದೆ. ಶ್ರಾವಣ ಸೋಮವಾರಕ್ಕೆ ವಿಶೇಷ ಮಾನ್ಯತೆ ಇದೆ.
ಈ ದಿನ ಶಿವನನ್ನು ಪೂಜಿಸುವುದರಿಂದ ವಿಶೇಷ ಫಲ ತೊರೆಯುತ್ತದೆ ಎಂಬ ನಂಬಿಕೆ ಇದೆ. ದೇವಶಯನಿ ಏಕಾದಶಿಯಂದು ವಿಷ್ಣು ನಿದ್ರೆಗೆ ಜಾರಿದ ಹಿನ್ನೆಲೆ ಈ ಮಾಸದಲ್ಲಿ ಶಿವ ಲೋಕವನ್ನು ಕಾಯುತ್ತಾನೆ. ಈ ಸಮಯದಲ್ಲಿ ಶಿವನ ಭಜಿಸಿದ್ರೆ ಅದು ಶೀಘ್ರವಾಗಿ ಈಡೇರುತ್ತದೆ ಎಂಬ ನಂಬಿಕೆ ಇದೆ.
ಸೋಮವಾರ ಶಿವನನ್ನು ಹೇಗೆ ಆರಾಧಿಸಬೇಕು
ಶ್ರಾವಣ ಸೋಮವಾರ ಶಿವನ ವಾರ ಎಂದೇ ಕರೆಯಲಾಗುತ್ತೆ. ಆದ ಕಾರಣ ಶಿವ ಭಕ್ತರು ಪ್ರತಿ ಸೋಮವಾರವು 'ಓಂ ನಮಃ ಶಿವಾಯ' ಎಂದು 108 ಬಾರಿ ಮಂತ್ರ ಪಠಿಸಿದ್ರೆ ಶುಭ ಪಲ ಸಿಗಲಿದೆ. ತಪ್ಪದೇ ಶಿವನ ಧ್ಯಾನ ಮಾಡಿದ್ರೆ ಒಳ್ಳೆಯದಾಗುತ್ತೆ.
ಸೋಮವಾರ ಹೇಗೆ ವ್ರತ ಮಾಡಬೇಕು?
ಸೋಮವಾರ ವ್ರತದ ದಿನ ಬೆಳಗ್ಗೆ ಬೇಗ ಎದ್ದು ಮಡಿಯಾಗಬೇಕು. ಶಿವನ ಅಭಿಷೇಕ ನೀರು ಹಾಗೂ ಗಂಗಾಜಲದಲ್ಲಾಗುತ್ತದೆ, ವಿಶೇಷ ಫಲ ಪ್ರಾಪ್ತಿಗಾಗಿ ಹಾಲು, ತುಪ್ಪ, ಮೊಸರು, ಜೇನು, ಸಾಸಿವೆ, ಕಪ್ಪು ಎಳ್ಳಿನಿಂದ ಮಾಡುತ್ತಾರೆ. ದೇವರಿಗೆ ಬಿಳಿ ಹೂವು, ಬಿಳಿ ಅಕ್ಕಿ, ಪಂಚಾಮೃತ, ಅಡಿಕೆ, ಹಣ್ಣು ಹಾಗೂ ಗಂಗಾಜಲ ಅಥವಾ ಶುದ್ಧ ನೀರಿನಿಂದ ದೇವರ ಪೂಜೆ ಮಾಡಬೇಕು.
ಇದನ್ನೂ ಓದಿ: Shravan Shukravara: ಶ್ರಾವಣ ಶುಕ್ರವಾರ ಮುತ್ತೈದೆ ಮಹಿಳೆಯರಿಗೆ ಎಷ್ಟು ಮುಖ್ಯ? ಪೂಜೆ ಹೇಗಿರುತ್ತೆ ಗೊತ್ತಾ?
ಸೋಮವಾರದ ರಥ ಕಥೆ ಏನು?
ಒಬ್ಬ ಸಾಹುಕಾರನಿದ್ದನು ಹಾಗೂ ಹಣದ ಮೋಹವನ್ನು ಹೊಂದಿದವನಾಗಿದ್ದನು. ಆತ ಪರಶಿವನ ಪರಮ ಭಕ್ತನಾಗಿದ್ದನು. ಆತನಿಗೆ ಯಾವ ಸಂಪತ್ತು ಕಡಿಮೆಯಿರಲಿಲ್ಲ. ಆದರೆ ಅವನಿಗಿದ್ದ ಒಂದೇ ಒಂದು ಕೊರತೆಯೆಂದರೆ ಆತನಿಗೆ ಮಗನಿರಲಿಲ್ಲ. ಆದ್ದರಿಂದ ಆತನು ಪ್ರತಿನಿತ್ಯ ಶಿವನ ದೇವಾಲಯಕ್ಕೆ ಹೋಗಿ ದೀಪವನ್ನು ಬೆಳಗುತ್ತಿದ್ದನು.
ಆತನ ಭಕ್ತಿಯನ್ನು ಕಂಡು ಪಾರ್ವತಿಯು ಶಿವನಲ್ಲಿ ಪ್ರಭು ಈ ಸಾಹುಕಾರ ನಿಮ್ಮ ಅನನ್ಯ ಭಕ್ತನಾಗಿದ್ದಾನೆ ಆತನು ಬೇಡಿದ ವರವನ್ನು ನೀಡಿ ಆತನನ್ನು ಸಂತೋಷಗೊಳಿಸಬಹುದಲ್ಲವೇ ಎಂದು ಕೇಳುತ್ತಾಳೆ.
ಪುತ್ರ ವರವನ್ನು ನೀಡಿ ಎಂದು ಶಿವನ ಬಳಿ ಕೇಳಿದ ಪಾರ್ವತಿ
ಪಾರ್ವತಿ ದೇವಿಯು ಆತನ ಭಕ್ತಿಯನ್ನು ಕಂಡು ಪರಮೇಶ್ವರನಲ್ಲಿ ಆತನಿಗೆ ಪುತ್ರ ವರವನ್ನು ನೀಡಿ ಎಂದು ಕೇಳುತ್ತಾಳೆ. ಆಗ ಶಿವನು ಆತ ಹಣದ ದುರಾಸೆಯನ್ನು ಹೊಂದಿದವನು ಆತನಿಗೆ ಪುತ್ರ ಪ್ರಾಪ್ತಿಯನ್ನು ನೀಡಲಾಗುವುದಿಲ್ಲ ಒಂದು ವೇಳೆ ಪುತ್ರ ಪ್ರಾಪ್ತಿ ವರವನ್ನು ನೀಡಿದರೂ ಆತ ಹೆಚ್ಚು ಸಮಯಗಳವರೆಗೆ ಬದುಕಲಾರನು ಕೇವಲ 12 ವರ್ಷಗಳವರೆಗೆ ಮಾತ್ರ ಬದುಕುತ್ತಾನೆಂದು ಹೇಳಿದನು.
ಶಿವನು ಪಾರ್ವತಿ ದೇವಿಯ ಒತ್ತಾಯದ ಮೇರೆಗೆ ಹಣದ ದುರಾಸೆಯುಳ್ಳ ಸಾಹುಕಾರನಿಗೆ ಪುತ್ರ ಪಾಪ್ತಿ ವರವನ್ನು ನೀಡುತ್ತಾನೆ. ಆದರೆ ಆ ಪುತ್ರನು ಕೇವಲ 12 ವರ್ಷಗಳವರೆಗೆ ಮಾತ್ರ ಬದುಕುತ್ತಾನೆ.
ಸುಂದರ ಮಗ ಜನನ
ಇನ್ನು ಶಿವ-ಪಾರ್ವತಿ ಮಾತನಾಡುತ್ತಿರುವುದನ್ನು ಸಾಹುಕಾರ ಕೇಳಿಸಿಕೊಳ್ಳುತ್ತಾನೆ. ಇದರಿಂದ ಜಿಪುಣ ಸಾಹುಕಾರ ಸಂತೋಷವನ್ನು ಹೊಂದಲಿಲ್ಲ, ದುಃಖವನ್ನು ಹೊಂದಲಿಲ್ಲ. ಮೊದಲು ಹೇಗಿದ್ದನೋ ಹಾಗೇ ಇರುತ್ತಾನೆ. ಆತ ಮೊದಲಿನಂತೆ ಶಿವನನ್ನು ಪೂಜಿಸುತ್ತಿರುತ್ತಾನೆ.
ಇತ್ತ ಸಾಹುಕಾರನ ಪತ್ನಿಯು ಗರ್ಭಿಣಿಯಾಗುತ್ತಾಳೆ ಹಾಗೂ 9 ತಿಂಗಳುಗಳ ಬಳಿಕ ಸುಂದರ ಮಗನನ್ನು ಪಡೆಯುತ್ತಾಳೆ. ಕುಟುಂಬದಲ್ಲಿ ಗಂಡು ಮಗು ಜನಿಸಿದಾಕ್ಷಣ ಎಲ್ಲರೂ ಸಂತೋಷ ಪಡುತ್ತಾರೆ. ಆದರೆ ಜಿಪುಣ ಸಾಹುಕಾರ ಯಾರಲ್ಲಿಯೂ ಆ ಮಗು 12 ವರ್ಷಗಳ ಕಾಲ ಮಾತ್ರ ಬದುಕುತ್ತದೆ ಎನ್ನುವುದನ್ನು ಬಹಿರಂಗಪಡಿಸುವುದಿಲ್ಲ.
ಮಗನನ್ನು ಕಾಶಿಹೆ ಕಳಿಸಿದ ಸಾಹುಕಾರ
ಜಿಪುಣ ಸಾಹುಕಾರನ ಮಗನು 11 ನೇ ವರ್ಷವನ್ನು ತಲುಪಿದಾಗ ಆತನ ಹೆಂಡತಿಯು ಮಗನಿಗೆ ವಿವಾಹ ಮಾಡುವಂತೆ ಹೇಳುತ್ತಾಳೆ. ಆದರೆ ಸಾಹುಕಾರನು ತನ್ನ ಮಗ ಓದಬೇಕೆಂದು ಹೇಳಿ ಕಾಶಿಗೆ ಕಳುಹಿಸಲು ನಿರ್ಧರಿಸುತ್ತಾನೆ.
ಆಗ ಮಾವನನ್ನು ಕರೆದು ಮಗನನ್ನು ಕಾಶಿಗೆ ಕರೆದುಕೊಂಡು ಹೋಗಲು ಹೇಳುತ್ತಾನೆ. ಹಾಗೂ ದಾರಿಯ ಮಧ್ಯೆ ಯಾವುದಾದರೂ ಶುಭ ಸಮಾರಂಭವಾಗುತ್ತಿದ್ದರೆ ಬ್ರಾಹ್ಮಣರಿಗೆ ಭೋಜನವನ್ನು ನೀಡಿ ಎಂದು ಹೇಳಿ ಕಳುಹಿಸುತ್ತಾನೆ.
ಇದನ್ನೂ ಓದಿ: Shani Worship in Shravan: ಶ್ರಾವಣ ಶನಿವಾರದಂದು ಶನಿ ಪೂಜೆ ಮಾಡುವುದರಿಂದ ಕಷ್ಟಗಳು ನಿವಾರಣೆ
ಎಲ್ಲಾ ಸಮಾರಂಭಗಳಲ್ಲೂ ಬ್ರಾಹ್ಮಣರಿಗೆ ಭೋಜನ
ಸಾಹುಕಾರನ ಆದೇಶದ ಮೇರೆಗೆ ರಸ್ತೆ ಮಧ್ಯೆ ಆಚರಿಸುತ್ತಿದ್ದ ಎಲ್ಲಾ ಸಮಾರಂಭಗಳಲ್ಲೂ ಬ್ರಾಹ್ಮಣರಿಗೆ ಭೋಜನವನ್ನು ನೀಡುತ್ತಾರೆ. ರಸ್ತೆಯ ಮಧ್ಯೆ ಒಂದು ರಾಜಕುಮಾರಿಗೆ ವಿವಾಹವಾಗುತ್ತಿರುತ್ತದೆ. ಆದರೆ ರಾಜಕುಮಾರಿಯನ್ನು ವಿವಾಹವಾಗುತ್ತಿದ್ದ ವರನಿಗೆ ಕೇವಲ ಒಂದು ಕಣ್ಣು ಮಾತ್ರ ಇರುತ್ತದೆ.
ಆಗ ರಾಜಕುಮಾರಿಯ ತಂದೆ ಸಾಹುಕಾರನ ಮಗನ ಬಳಿ ಬಂದು ಮದುವೆಯ ಕಾರ್ಯವನ್ನು ಸಂಪೂರ್ಣಗೊಳಿಸುವಂತೆ ಹೇಳುತ್ತಾನೆ. ಆಗ ಸಾಹುಕಾರನ ಮಗನು ತನ್ನ ಮಾವನ ಮಾತಿನ ಮೇರೆಗೆ ವಿವಾಹವನ್ನು ಸಂಪೂರ್ಣಗೊಳಿಸಲು ಮುಂದಾಗುತ್ತಾನೆ.
ಜಿಪುಣ ಸಾಹುಕಾರನ ಮಗನ ಮದುವೆ
ಮಾವನ ಮಾತಿನಂತೆ ಸಾಹುಕಾರನ ಮಗನು ಹಸೆಮಣೆಯೇರಿದ್ದ ರಾಜಕುಮಾರಿಯ ಪಕ್ಕದಲ್ಲಿ ಹೋಗಿ ಕುಳಿತುಕೊಳ್ಳುತ್ತಾನೆ. ಹಾಗೂ ಮದುವೆಯು ಮುಗಿದು ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಸಾಹುಕಾರನ ಮಗನು ಆಕೆಯ ಕೈ ಮೇಲೆ ನೀನು ಮದುವೆಯಾಗಿರುವುದು ನನ್ನನ್ನು ಆದರೆ ನಿನಗೆ ನಿಶ್ಚಯಿಸಿದ ವರನಿಗೆ ಒಂದು ಕಣ್ಣಿಲ್ಲವೆಂದು ಬರೆದಿಟ್ಟು ಅಲ್ಲಿಂದ ನೇರವಾಗಿ ಕಾಶಿಗೆ ಮಾವನೊಂದಿಗೆ ಹೊರಡುತ್ತಾನೆ. ಇತ್ತ ರಾಜಕುಮಾರಿಯು ತನ್ನ ಕೈಮೇಲೆ ಬರೆದ ಅಕ್ಷರವನ್ನು ಓದುತ್ತಾಳೆ ಹಾಗೂ ಮದುವೆ ನಿಶ್ಚಯಿಸಿದ್ದ ರಾಜನೊಂದಿಗೆ ಹೋಗಲು ನಿರಾಕರಿಸುತ್ತಾಳೆ.
12 ವರ್ಷವಾದ ಮೇಲೆ ಸಾವಿನ ಸಮಯ
ಒಂದು ದಿನ ಸಾಹುಕಾರನ ಮಗನ ಮಾವ ಯಜ್ಞವನ್ನು ಕೈಗೊಳ್ಳುತ್ತಾನೆ. ಯಜ್ಞ ಆರಂಭವಾದರೂ ಕೂಡ ಸಾಹುಕಾರನ ಮಗ ಕೋಣೆಯಿಂದ ಹೊರಗೆ ಬರುವುದಿಲ್ಲ. ಇದನ್ನು ಗಮನಿಸಿದ ಮಾವನು ತನ್ನ ಅಳಿಯನನ್ನು ಕರೆಯಲೆಂದು ಕೋಣೆಗೆ ಹೋಗುತ್ತಾನೆ. ಅಷ್ಟರಲ್ಲಿ ಸಾಹುಕಾರನ ಮಗ ಅಲ್ಪಾಯುಷಿ ಮರಣ ಹೊಂದಿರುತ್ತಾನೆ.
ಅಳಿಯನ ಸಾವನ್ನು ಕಂಡು ದುಃಖಕ್ಕೆ ಒಳಗಾಗುತ್ತಾನೆ. ಆದರೆ ಯಜ್ಞ ನಡೆಯುತ್ತಿರುವುದರಿಂದ ಅಳಿಯನ ಸಾವಿನ ಸುದ್ಧಿಯನ್ನು ಹೊರಹಾಕುವುದಿಲ್ಲ. ಯಜ್ಞದ ಬಳಿಕ ಮಾವನು ಜೋರಾಗಿ ಅಳಲು ಪ್ರಾರಂಭಿಸುತ್ತಾನೆ.
ಬಾಲಕನ ಪ್ರಾಣ ಉಳಿಸುವಂತೆ ಪಾರ್ವತಿ ಒತ್ತಾಯ
ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಸಾವನ್ನಪ್ಪಿದ ಸಾಹುಕಾರನ ಮಗನ ಮೃತ ದೇಹವನ್ನು ಕಂಡು ಪಾರ್ವತಿಯು ಪರಶಿವನ ಬಳಿ ಪ್ರಭು ದಯವಿಟ್ಟು ಆ ಮಗುವಿನ ಪ್ರಾಣವನ್ನು ಉಳಿಸಿ ಇಲ್ಲವಾದರೆ ಆ ಮಗುವಿನ ತಂದೆ ತಾಯಿಯರು ಕೂಡ ಸಾವನ್ನಪ್ಪುತ್ತಾರೆ ಎಂದು ಹೇಳುತ್ತಾಳೆ.
ಆಗ ಶಿವನು ತಂದೆಯ ಜಿಪುಣತನವನ್ನು ವಿವರಿಸುತ್ತಾನೆ ಆದರು ಕೂಡ ಪಾರ್ವತಿ ಕೇಳದೆ ತನ್ನ ಪತಿಯ ಬಳಿ ಮಗುವನ್ನು ಉಳಿಸಲು ಬೇಡಿಕೊಳ್ಳುತ್ತಾಳೆ. ಆಗ ಶಿವನು ಪಾರ್ವತಿಯ ಒತ್ತಾಯದ ಮೇರೆಗೆ ಸಾಹುಕಾರನ ಮಗನಿಗೆ ಪ್ರಾಣವನ್ನು ಪುನಃ ನೀಡುತ್ತಾನೆ.
ಆಗ ಸಾಹುಕಾರನ ಮಗನು ಎದ್ದು, ಓಂ ನಮಃ ಶಿವಾಯ ಎಂದು ಶಿವ ಪಾರ್ವತಿಗೆ ನಮಸ್ಕಾರವನ್ನು ಸಲ್ಲಿಸುತ್ತಾರೆ. ಆಗ ಶಿವ ಮತ್ತು ಪಾರ್ವತಿಯು ಆ ಮಗುವಿಗೆ ಆಶೀರ್ವದಿಸಿ ಅಲ್ಲಿಂದ ಹೊರಡುತ್ತಾರೆ. ಸಾಹುಕಾರನ ಮಗ ತನ್ನ ಮಾವನೊಂದಿಗೆ ತಂದೆಯಿದ್ದಲ್ಲಿಗೆ ಹೊರಡುತ್ತಾರೆ.
ಮತ್ತೆ ಅದೇ ಸಾಹುಕಾರನು ವಿವಾಹವಾದ ಪ್ರದೇಶ ಸಿಗುತ್ತದೆ. ಆಗ ರಾಜಕುಮಾರಿ ಅಂದರೆ ಸಾಹುಕಾರನ ಮಗನ ಪತ್ನಿ ತನ್ನ ಪತಿಯನ್ನು ಗುರುತಿಸುತ್ತಾಳೆ. ರಾಜಕುಮಾರಿಯ ತಂದೆಯು ಸಾಕಷ್ಟು ಧನ , ಧಾನ್ಯವನ್ನು ನೀಡಿ ಸಾಹುಕಾರನ ಮಗನೊಂದಿಗೆ ಕಳುಹಿಸಿಕೊಡುತ್ತಾನೆ.
ಮಗ ಬದುಕಿದ್ದಕ್ಕೆ ಸಾಹುಕಾರ ಸಂತೋಷ
ಸಾಹುಕಾರನ ಮಗ ಮರಳಿ ಬರುವಾಗ ಸಾಹುಕಾರ ಮತ್ತು ಆತನ ಪತ್ನಿ ಕುಳಿತು ಮಾತನಾಡುತ್ತಿರುತ್ತಾರೆ. ಆಗ ಮಗನು ಜೀವಂತವಾಗಿ ಹಿಂದಿರುಗಿದ್ದನ್ನು ನೋಡಿ ಸಂತೋಷಗೊಂಡರು. ಸಾಹುಕಾರನ ಮಗನ ಮಾವ ನಡೆದೆಲ್ಲಾ ವಿಷಯವನ್ನು ಸಾಹುಕಾರನಿಗೆ ತಿಳಿಸುತ್ತಾನೆ.
ಆಗ ಸಾಹುಕಾರ ಮತ್ತು ಆತನ ಪತ್ನಿ ಸೊಸೆಯನ್ನು ಆದರದಿಂದ ಬರಮಾಡಿಕೊಳ್ಳುತ್ತಾರೆ. ಅದೇ ದಿನ ರಾತ್ರಿ ಸಾಹುಕಾರನ ಕನಸಿನಲ್ಲಿ ಪರಶಿವನು ಕಾಣಿಸಿಕೊಂಡು ನಿನ್ನ ಭಕ್ತಿದಾಯಕ ಪೂಜೆಯಿಂದ ನಾನು ಸಂತೋಷಗೊಂಡಿದ್ದೇನೆ ಎಂದು ಹೇಳುತ್ತಾನೆ.
ಅದೇ ರೀತಿ ಈ ಕಥೆಯನ್ನು ಯಾರು ಓದುತ್ತಾರೋ, ಯಾರು ಕೇಳುತ್ತಾರೋ ಅವರೆಲ್ಲಾ ದುಃಖಗಳು, ಕಷ್ಟಗಳು ನಿವಾರಣೆಯಾಗುವುದು, ಅವರ ಬಯಕೆಗಳು ಈಡೇರುವುದೆಂದು ಹೇಳುತ್ತಾನೆ. ಆದ್ದರಿಂದ ಶ್ರಾವಣ ಸೋಮವಾರದ ವ್ರತದಲ್ಲಿ ಈ ಕಥೆಯನ್ನು ಓದಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ