ಶಿವಸೇನೆ ಎಂದರೆ ಅಕ್ಷರಶಃ 'ಸಾಕ್ಷಾತ್ ಶಿವನ ಸೈನಿಕರು' ಎಂದು ಉಲ್ಲೇಖಿಸಬಹುದು. ಇದನ್ನು 1966 ರಲ್ಲಿ ಬಾಳ್ ಠಾಕ್ರೆ (Bal Thackeray) ಸ್ಥಾಪಿಸಿದರು. ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಒಂದು ವಿಷಯವನ್ನು ತುಂಬಾ ಕೂಲಂಕುಶವಾಗಿ ಸ್ಪಷ್ಟಪಡಿಸಿದೆ: ಅದೇನೆಂದರೆ ಈ ರಾಜಕೀಯ ಕ್ಷೇತ್ರದಲ್ಲಿ ಅಧಿಕಾರದ ಮೇಲಿನ ಹಿಡಿತ ಯಾವಾಗ ಬೇಕಾದರೂ ಸಡಿಲಗೊಳ್ಳಬಹುದು ಎಂಬ ವಿಷಯ ಮತ್ತೆ ಇಂದು ಮುನ್ನೆಲೆಗೆ ಬಂದಿರುವುದು ಆಶ್ಚರ್ಯವೇನಲ್ಲ. ರಾಷ್ಟ್ರಮಟ್ಟದಲ್ಲಿ ಅಷ್ಟಾಗಿ ಹೆಸರುವಾಸಿಯಾಗಿರದ ರಾಜಕಾರಣಿ ಏಕನಾಥ್ ಶಿಂಧೆ (Eknath Shindhe) ಅವರು ಶಿವಸೇನೆ ನೇತೃತ್ವದ ಪ್ರಸ್ತುತ ಮಹಾ ವಿಕಾಸ್ ಅಘಾಡಿ ಸರ್ಕಾರಕ್ಕೆ ತೀವ್ರವಾದ ಹೊಡೆತ ನೀಡಿದ್ದಾರೆ. ಉದ್ಧವ್ ಠಾಕ್ರೆಗೆ ಪೆಟ್ಟು ನೀಡಿ ಬಿಜೆಪಿ ಜೊತೆ ಸೇರಿ ಹೊಸ ಸರ್ಕಾರ ರಚಿಸಿದ್ದಾರೆ. ಹಾಗಾದರೆ ಶಿವಸೇನೆಯ ಇತಿಹಾಸವೇನು? ಇಲ್ಲಿದೆ ಓದಿ.
ಶಿವಸೇನೆಯು ಬಲಪಂಥಿ ಪಕ್ಷ ಎಂದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಈ ಶಿವಸೇನೆಯು ಈಗಾಗಲೇ ಅನೇಕ ಬಂಡಾಯಗಳನ್ನು ಕಂಡಿದೆ. ಶಿವಸೇನೆಗೆ ಶಿಂಧೆಯವರ ಬಂಡಾಯವೇನೂ ಮೊದಲ ಬಂಡಾಯವಾಗಿಲ್ಲ. ಈಗಾಗಲೇ ಈ ಪಕ್ಷವು ಮೂರು ಬಂಡಾಯಗಳನ್ನು ಕಂಡಿತ್ತು. ಶಿವಸೇನೆಯು ಈ ಹಿಂದೆ ಬಿಜೆಪಿ ಜೊತೆ ಉತ್ತಮ ಸಂಬಂಧವನ್ನು ಹೊಂದಿತ್ತು. ಆದರೆ ಈಗ ಈ ಪಕ್ಷವು ತನ್ನನ್ನು ತಾನು ರಕ್ಷಿಸಿಕೊಳ್ಳಲು ಅನೇಕ ರೀತಿಯಲ್ಲಿ ಪ್ರಯತ್ನ ಪಡುತ್ತಿರುವುದು ಎಲ್ಲರಿಗೂ ಕಂಡು ಬರುತ್ತಿದೆ.
ಶಿವಸೇನೆ ಪಕ್ಷದ ಇತಿಹಾಸದ ಪಕ್ಷಿನೋಟ
ಶಿವಸೇನೆ ಎಂದರೆ ಅಕ್ಷರಶಃ 'ಸಾಕ್ಷಾತ್ ಶಿವನ ಸೈನಿಕರು' ಎಂದರ್ಥ. ಈ ಪಕ್ಷವನ್ನು ಜೂನ್ 1966 ರಲ್ಲಿ ಬಾಳ್ ಠಾಕ್ರೆ ಸ್ಥಾಪಿಸಿದ್ದಾರೆ. ಈ ಪಕ್ಷವು ಬಾಳ್ ಠಾಕ್ರೆ ಅವರ ತಂದೆಯಾದ ಕೇಶವ್ ಸೀತಾರಾಮ್ ಠಾಕ್ರೆಯ ಕನಸಿನ ಕುಡಿಯಾಗಿತ್ತು ಎಂದರೆ ತಪ್ಪಾಗಲಾರದು. ಸ್ವಾತಂತ್ರ್ಯ ನಂತರದಲ್ಲಿ ನಡೆದ ಭಾಷಾವಾರು ಮರುಸಂಘಟನೆಯ ಸಮಯದಲ್ಲಿ ಇವರು ಅಖಂಡ ಮಹಾರಾಷ್ಟ್ರ (ಸಂಯುಕ್ತ ಮಹಾರಾಷ್ಟ್ರ ಚಳುವಳಿ) ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಉದಾತ್ತ ಸಿದ್ಧಾಂತವನ್ನು ಹೊಂದಿದ ಶಿವಸೇನೆ ಪಕ್ಷ
ಮೊದಲಿನಿಂದಲೂ ಶಿವಸೇನೆ ಪಕ್ಷವು ಒಂದು ಉದಾತ್ತ ಸಿದ್ಧಾಂತವನ್ನು ಹೊಂದಿದೆ. ಮರಾಠ ರಾಷ್ಟ್ರೀಯತೆಯ ಮೇಲೆ ನಿರ್ದಿಷ್ಟವಾದ ಗಮನವನ್ನು ಹೊಂದಿರುವ ದೃಢ ಹಿಂದುತ್ವದ ಪಕ್ಷ ಆಗಿದೆ. ಈ ಪಕ್ಷವು ಮರಾಠರ ಪ್ರಾದೇಶಿಕ ಪ್ರತ್ಯೇಕತೆಯ ಕಡೆಗೂ ಹೋಯಿತು. ಇದು ರಾಜ್ಯಕ್ಕೆ ಬರುವ ವಲಸೆಗಾರರ ವಿರುದ್ಧವಾಗಿತ್ತು. ಆದರೆ ಇಂದು ಈ ಪಕ್ಷವು ಮರಾಠರು ಮತ್ತು ಮರಾಠರ ಸಂಸ್ಕೃತಿ ಮೇಲಿನ ಶ್ರೇಷ್ಠತೆಯ ನಂಬಿಕೆಯನ್ನು ಎತ್ತಿ ಹಿಡಿಯುತ್ತಿದೆ.
ಸ್ಥಳೀಯ ಸಮುದಾಯದ ರಕ್ಷಣೆ
ಬೇರೆ- ಬೇರೆ ರಾಜ್ಯಗಳಿಂದ ವಲಸೆ ಬಂದ ಜನರು ಅನೇಕ ರೀತಿಯ ಭಿನ್ನಾಭಿಪ್ರಾಯಗಳನ್ನು ಒಂದರ ಮೇಲೊಂದು ಸೃಷ್ಟಿಸುತ್ತಲೇ ಇದ್ದಾರೆ. ಇದರಿಂದ ಸ್ಥಳೀಯ ಸಮುದಾಯಗಳು ಮತ್ತು ಅವುಗಳ ಸಂಸ್ಕೃತಿಯನ್ನು ಅಗೌರವಗೊಳಿಸುತ್ತಿದ್ದಾರೆ. ಆದ್ದರಿಂದ ರಾಜ್ಯದ ಎಲ್ಲೆಂದರಲ್ಲಿ ಕಾನೂನುಬಾಹಿರ ಚಟುವಟಿಕೆಯ ವಾತಾವರಣವನ್ನು ಸೃಷ್ಟಿಸಿದ್ದಾರೆ. ಈ ಎಲ್ಲ ವಿಚಾರಗಳು ಬಾಳ್ ಠಾಕ್ರೆ ಅವರು 'ಮಾರ್ಮಿಕ್ ' ಎಂಬ ರಾಜಕೀಯ ವಾರ ಪತ್ರಿಕೆ ಆರಂಭಿಸಲು ಅವಕಾಶ ಮಾಡಿಕೊಟ್ಟವು. ಪ್ರತಿ ವಾರ ಹೊರಡಿಸಲಾಗುತ್ತಿದ್ದ ಆ ವಾರ ಪತ್ರಿಕೆಯಲ್ಲಿ ರಾಜಕೀಯವಾಗಿ ಜನರಿಗೆ ಆಗುವ ಅನ್ಯಾಯಗಳ ಕುರಿತು ಕಾರ್ಟೂನ್ ಮತ್ತು ರೇಖಾಚಿತ್ರಗಳ ಮೂಲಕ ವಿಷಯ ವಿವರಣೆ ಮಾಡಲಾಗುತ್ತಿತ್ತು.
ಇದನ್ನೂ ಓದಿ: Presidential Election 2022: ರಾಷ್ಟ್ರಪತಿ ಆಗಲು 98 ಮಂದಿಯಿಂದ ನಾಮಪತ್ರ, ಮಾನ್ಯವಾಗಿದ್ದು ಇಬ್ಬರು ಮಾತ್ರ; ಏಕೆ?
ಈ ಚಿಂತನೆಗಳು ಇಲ್ಲಿಗೆ ನಿಲ್ಲಲಿಲ್ಲ. ಈ ಅಸಮಾನತೆಯ ವಿರುದ್ಧ ಕೇಳಿ ಬರುತ್ತಿರುವ ಆಕ್ರೋಶದ ಕುರಿತು ಯುವಜನರ ಅಭಿಪ್ರಾಯವನ್ನು ಪತ್ರಿಕೆಯಲ್ಲಿ ಕೇಳಲಾಗುತ್ತಿತ್ತು. ಅದಕ್ಕೆ ಜನರಿಂದ ಅದ್ಭುತ ಸ್ಪಂದನೆ ಸಿಕ್ಕಿತು. ಈ ಸಾಪ್ತಾಹಿಕ ಸಂಚಿಕೆಯಲ್ಲಿ ಯುವಜನರ ಪ್ರತಿಕ್ರಿಯೆ ನೋಡಿ ಅವರನ್ನು ಒಟ್ಟುಗೂಡಿಸಬೇಕೆಂದು ಬಾಳ್ ಠಾಕ್ರೆ ಅವರು ಜೂನ್ 1966 ರಲ್ಲಿ ಈ ಶಿವಸೇನೆ ಪಕ್ಷವನ್ನು ಮರಾಠರ ಮೇಲೆ ದಬ್ಬಾಳಿಕೆ ನಡೆಸುವವರ ವಿರುದ್ಧ ಹೋರಾಡಲು ಅಸ್ತ್ರವೆಂಬಂತೆ ಸ್ಥಾಪಿಸಿದ್ದರು.
ಇದನ್ನೂ ಓದಿ: Maharashtra Politics: ಕೊಟ್ಟ ಮಾತಿಗೆ ತಪ್ಪಿದ ಅಮಿತ್ ಶಾ; ಉದ್ಧವ್ ಠಾಕ್ರೆ ಆರೋಪ
ಹೀಗೆ ಶಿವಸೇನೆ ಸ್ಥಾಪನೆಯಾಗಿದ್ದು. ಒಂದು ಪಕ್ಷ ಅಥವಾ ಸಂಸ್ಥೆ ಸುಖಾಸುಮ್ಮನೆ ಸ್ಥಾಪನೆಯಾಗುವುದಿಲ್ಲ. ಮುಂದೆ ರಾಜಕೀಯವಾಗಿ ಏನೇ ತಿರುವುಗಳು ಘಟಿಸಲಿ, ಶಿವಸೇನೆ ಹುಟ್ಟಿದ ಇತಿಹಾಸವಂತೂ ರೋಚಕವಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ